ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಪ್ರಾದೇಶಿಕ ಅರಣ್ಯ ಉಪವಿಭಾಗದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ…
1 min read
ಮೂಡಿಗೆರೆ: ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಪ್ರಾದೇಶಿಕ ಅರಣ್ಯ ಉಪವಿಭಾಗದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಬಂಧಿತರಿಂದ ಮೂರು ಪುನುಗು ಬೆಕ್ಕುಗಳ ಶವ ಹಾಗೂ ಬೇಟೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
22-04-2026ರಂದು ಜನ್ನಾಪುರದಿಂದ ಮೂಡಿಗೆರೆ ಕಡೆಗೆ ಬೊಲೆರೋ ಪಿಕ್ಅಪ್ ವಾಹನದಲ್ಲಿ ಕಾಡುಪ್ರಾಣಿಗಳ ಮಾಂಸ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗೋಣಬೀಡು ಶಾಖೆಯ ಅರಣ್ಯ ಸಿಬ್ಬಂದಿ ಹಾಲೂರು ಜೋಗಣ್ಣನಕೆರೆ ಬಸ್ಸ್ಟಾಂಡ್ ಬಳಿ ಹೊಂಚು ಹಾಕಿದ್ದರು.
ಶಂಕಾಸ್ಪದವಾಗಿ ಬಂದ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ (KA-46-6330) ಅನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ಆರೋಪಿಗಳು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಾಹನವನ್ನು ಬೆನ್ನಟ್ಟಿ ತಡೆಹಿಡಿದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು: ಎ.ಜೆ.ನಂದನ್ (38), ಅಬಚೂರು ಗ್ರಾಮ ಮತ್ತು ಹೆಚ್.ಜಿ.ಆದರ್ಶ (33), ಹಾಲೂರು ಗ್ರಾಮ.
ವಶಪಡಿಸಿಕೊಂಡ ಸೊತ್ತು: 03 ಸತ್ತ ಪುನುಗು ಬೆಕ್ಕುಗಳು, 02 ಒಂಟಿನಳಿಕೆ ಬಂದೂಕುಗಳು, 04 ಜೀವಂತ ಗುಂಡುಗಳು, 01 ಸರ್ಚ್ ಲೈಟ್, 02 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ.
ವಿಚಾರಣೆ ವೇಳೆ, ಆರೋಪಿಗಳು ಕಳಸಾಪುರ ಮತ್ತು ಮರ್ಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಸರ್ಚ್ ಲೈಟ್ ಬಳಸಿ ಈ ಪ್ರಾಣಿಗಳನ್ನು ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾಂಸದ ಉದ್ದೇಶಕ್ಕಾಗಿ ಈ ಬೇಟೆ ನಡೆದಿರುವುದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಮ್, ಚಿದಾನಂದ, ಕೃಷ್ಣಪ್ಪ ಹಾಗೂ ಬೇಟೆಗೆ ಬಂದೂಕು ನೀಡಿ ಸಹಕರಿಸಿದ ಹೆಚ್.ಜಿ.ಕರುಣಾಕರಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗಾಗಿ ಶೋಧ ಮುಂದುವರಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ಅವಿನ್ ಟಿವಿ.
🎙️ವರದಿ.🎙️

