“ಎನ್.ಪಿ.ಎ ಸಾಲಗಾರರಿಗೆ ಒನ್ಟೈಮ್ ಸೆಟಲ್ಮೆಂಟ್ ಸೌಲಭ್ಯ ವಿಸ್ತರಿಸಿ : ಕೆನರಾ ಬ್ಯಾಂಕ್ಗೆ ರೈತ ಹಿತರಕ್ಷಣಾ ವೇದಿಕೆ ಮನವಿ.”
1 min read
ಮೂಡಿಗೆರೆ:ತಾಲ್ಲೂಕಿನ ಸಣ್ಣ ರೈತರು ವಿವಿಧ ಕಾರಣಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ ಎನ್ಪಿಎ (ನಿಷ್ಕ್ರಿಯ ಸಾಲ) ಪಟ್ಟಿಗೆ ಸೇರಿರುವ ಹಿನ್ನೆಲೆಯಲ್ಲಿ,ಅವರಿಗೆ ವಿಶೇಷ ಪರಿಹಾರ ಕಲ್ಪಿಸಿ ಒನ್ಟೈಮ್ ಸೆಟಲ್ಮೆಂಟ್ (ಒಟಿಎಸ್) ಸೌಲಭ್ಯವನ್ನು ಪರಿಣಾಮಕಾರಿಯಾಗಿ ವಿಸ್ತರಿಸಬೇಕೆಂದು ಆಗ್ರಹಿಸಿ ರೈತ ಹಿತರಕ್ಷಣಾ ವೇದಿಕೆ ವತಿಯಿಂದ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನದಂತೆ ಬ್ಯಾಂಕುಗಳು ಜಾರಿಗೊಳಿಸಿರುವ ಒನ್ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯನ್ನು ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಅತಿವೃಷ್ಟಿ,ಅನಾವೃಷ್ಟಿ,ಬೆಳೆ ನಷ್ಟ,ಕೃಷಿ ಉತ್ಪನ್ನಗಳ ಬೆಲೆ ಕುಸಿತ ಹಾಗೂ ಕೋವಿಡ್ ನಂತರದ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಅನೇಕ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದೆ ಎನ್ಪಿಎ ಪಟ್ಟಿಗೆ ಸೇರಿದ್ದಾರೆ. ಪರಿಣಾಮವಾಗಿ ಅವರು ಬ್ಯಾಂಕುಗಳ ಕಾನೂನು ಕ್ರಮ ಹಾಗೂ ಜಪ್ತಿ ಪ್ರಕ್ರಿಯೆಗಳನ್ನು ಎದುರಿಸುವಂತಾಗಿದೆ. ಇಂತಹ ಸಾಲಗಾರರಿಗೆ ಬಡ್ಡಿ ಹಾಗೂ ದಂಡ ಬಡ್ಡಿಯಲ್ಲಿ ಸೂಕ್ತ ರಿಯಾಯಿತಿ ನೀಡಿ ಸಾಲ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ ವತಿಯಿಂದ ಆಯೋಜಿಸಲಾಗುತ್ತಿರುವ ‘ಮೆಗಾ ಮಾನ್ಸೂನ್ ರಿಕವರಿ ಮೇಳ’ ಮಾದರಿಯಲ್ಲೇ ಕೆನರಾ ಬ್ಯಾಂಕ್ ಕೂಡ ವಿಶೇಷ ಸಾಲ ಮರುಪಾವತಿ ಶಿಬಿರಗಳನ್ನು ಆಯೋಜಿಸಿ, ಎನ್ಪಿಎ ಸಾಲಗಾರರಿಗೆ ಒಂದೇ ಬಾರಿಯ ಇತ್ಯರ್ಥ (ಒಟಿಎಸ್) ಸೌಲಭ್ಯವನ್ನು ಸುಲಭವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂಬಂಧ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್,ಪ್ರಧಾನ ಕಾರ್ಯದರ್ಶಿಸುರೇಂದ್ರ,ದ್ವಾರಕನಾಥ್,ಮನಮೋಹನ್ ಹಾಗೂ ಅನೇಕ ರೈತರು ಸೇರಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು,ಚಿಕ್ಕಮಗಳೂರು ಹಾಗೂ ಪ್ರಧಾನ ವ್ಯವಸ್ಥಾಪಕರು,ಕೆನರಾ ಬ್ಯಾಂಕ್ ವೃತ್ತ ಕಚೇರಿ,ಬೆಂಗಳೂರು ಅವರಿಗೆ ಮನವಿ ಸಲ್ಲಿಸಿದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

