ಸುಧೀರ್ಘವಾದ ಕಾನೂನು ಹೋರಾಟಗಳ ನಂತರ ಸತ್ಯಕ್ಕೆ ಜಯ ಸಿಕ್ಕಿದೆ:
1 min read

ಅವಿನ್ ಟಿವಿ ಸುದ್ದಿಜಾಲ ✍️: ಸುಧೀರ್ಘವಾದ ಕಾನೂನು ಹೋರಾಟಗಳ ನಂತರ ಸತ್ಯಕ್ಕೆ ಜಯ ಸಿಕ್ಕಿದೆ:
ವಿಧಾನಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡ ಹರ್ಷೋದ್ಗಾರ.
ಚಿಕ್ಕಮಗಳೂರು ಜು 31: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಸುದೀರ್ಘ ಕಾನೂನು ಹೋರಾಟದ ಬಳಿಕ ಗಾಯತ್ರಿ ಶಾಂತೇಗೌಡ ಅವರಿಗೆ ಅಂತಿಮವಾಗಿ ನ್ಯಾಯಾಲಯದಲ್ಲಿ ಗೆಲುವು ಲಭಿಸಿದೆ.
ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಜಾಗೊಂಡ ನಂತರ ಪ್ರಕರಣ ಹೈಕೋರ್ಟ್ಗೆ ಮರಳಿತ್ತು.
ಹೈಕೋರ್ಟ್ ನಿರ್ದೇಶನದಂತೆ ಮುಚ್ಚಿದ ಲಕೋಟೆಯಲ್ಲಿದ್ದ ಮತಗಳ ಮರು ಎಣಿಕೆ (ರೀ ಕೌಂಟಿಂಗ್) ಪ್ರಕ್ರಿಯೆ ನಡೆಯಿತು. ಲಕೋಟೆಯನ್ನು ತೆರೆದು ಎಣಿಕೆ ಮಾಡಿದಾಗ ಗಾಯತ್ರಿ ಶಾಂತೇಗೌಡ ಅವರಿಗೆ ಹೆಚ್ಚುವರಿಯಾಗಿ 9 ಮತಗಳು ಲಭಿಸಿದ್ದು, ಅವರು ಅಧಿಕೃತವಾಗಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಇದರಿಂದಾಗಿ ವಿಧಾನಪರಿಷತ್ತು ಉಪ ಸಭಾಪತಿ ಪ್ರಾಣೇಶ್ ಅವರಿಗೆ ಹಿನ್ನಡೆಯಾಗಿದೆ.
ಈ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಗಾಯತ್ರಿ ಶಾಂತೇಗೌಡ ಅವರು, “ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ. ಕೋರ್ಟ್ನಲ್ಲಿ ನನಗೆ ನ್ಯಾಯ ಸಿಕ್ಕಿರುವುದಕ್ಕೆ ಅತ್ಯಂತ ಸಂತೋಷವಾಗಿದೆ. ನನ್ನ ಪರವಾಗಿ ಶ್ರಮಿಸಿದ ವಕೀಲರಾದ ನಿಶಾಂತ್, ಕಾಂತರಾಜ್, ರವಿಕುಮಾರ್, ರೋಹನ್ ಅವರಿಗೆ ಹಾಗೂ ನನ್ನ ಬೆಂಬಲಕ್ಕೆ ನಿಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇನ್ನೂ ಒಂದೂವರೆ ವರ್ಷಗಳ ಕಾಲಾವಧಿ ಉಳಿದಿದ್ದು, ಹೈಕೋರ್ಟ್ ನೀಡಿರುವ ನಿರ್ದೇಶನದ ಪ್ರತಿಯನ್ನು ಸಭಾಪತಿಗಳಿಗೆ ತಲುಪಿಸಲಾಗುತ್ತದೆ. ಇದೀಗ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮುಂದಿನ ಪ್ರಮಾಣ ವಚನ ಸ್ವೀಕಾರದ ದಿನಾಂಕ ಹಾಗೂ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ಬೆಂಗಳೂರಿನಲ್ಲಿ ಗಾಯತ್ರಿಶಾಂತೇಗೌಡರನ್ನು ಅಭಿನಂದಿಸಿದ್ದಾರೆ, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಜೊತೆಗಿದ್ದರು.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

