*ಬನ್ನಿಸ್ ತರಭೇತಿ*
1 min read
*ಬನ್ನಿಸ್ ತರಭೇತಿ*
ಚಿಕ್ಕಮಗಳೂರು:
ಬಾಹ್ಯ ಚಟುವಟಿಕೆ ಮೂಲಕ ಮಗುವಿನ ಬೌದ್ಧಿಕ ಮಟ್ಟ ಹಾಗೂ ನಿರಂತರ ಕಲಿಕೆ ವಿಧಾನವನ್ನು ಶಕ್ತಿಗೊಳಿಸುವ ನಿಟ್ಟಿನಲ್ಲಿ ಬನ್ನಿಸ್ ತರಬೇತಿ ಶಿಬಿರ ಅತ್ಯಂತ ಮಹತ್ವಪೂರ್ಣವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬನ್ನಿಸ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗುವನ್ನು ಕಲಿಕೆಯನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ದಿನಗಳ ಕಾಲ ಬನ್ನಿಸ್ ತರಬೇತಿ ಶಿಬಿರ ಆಯೋಜಿಸಿದ್ದು ಇದರ ಸದುಪಯೋಗಪಡೆದುಕೊಳ್ಳುಬೇಕು, ಮಗುವಿನ ಬೌದ್ಧಿಕ ವಿಕಾಸ ಮಟ್ಟ ಹಾಗೂ ಕಲಿಕೆ ವಿಧಾನವನ್ನು ಶಕ್ತಿಗೊಳಿಸಲು ಉತ್ತಮ ವಿಧಾನವಾಗಿದೆ ಎಂದರು.
೧೧೪ ವರ್ಷ ಇತಿಹಾಸವುಳ್ಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಸುಮಾರು ೭.೫೦ ಲಕ್ಷ ಮಕ್ಕಳು ಸಂಸ್ಥೆಯ ಅಡಿಯಲ್ಲಿ ಸಕ್ರಿಯರಾಗಿದ್ದಾರೆ, ರೋವರ್ಸ್, ರೇಂಜರ್ಸ್, ಸ್ಕೌಟ್ ಅಂಡ್, ಗೈಡ್ಸ್ ಮೂಲಕ ಮಕ್ಕಳಲ್ಲಿ ಕಲಿಕೆ, ಸ್ವಯಂ ಶಿಸ್ತು, ಸಂಯಮದೊಂದಿಗೆ ಸಾಮಾಜಿಕ ಸೇವೆಯನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಿಕೆ ಎಂಬುದು ನಿಂತ ನೀರಲ್ಲ, ಅದು ನಿರಂತರವಾದುದು, ಶಿಕ್ಷಕರು ಹೆಚ್ಚುವರಿ ಜ್ಞಾನವನ್ನು ಪಡೆದು ಮಕ್ಕಳನ್ನು ಮತ್ತಷ್ಟು ಕ್ರಿಯಾಶೀಲರಾಗಿಸಲು ಬನ್ನಿಸ್ ತರಬೇತಿ ಅನುಕೂಲವಾಗಲಿದೆ. ಈ ಮೂಲಕ ವಿವಿಧ ಬಾಹ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಉತ್ಸಾಹಯುತ ಕಲಿಕೆಗೆ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕಳೆದ ೫ ವರ್ಷಗಳಿಂದ ತಾಂತ್ರಿಕ ಕಾರಣದಿಂದಾಗಿ ತರಬೇತಿ ಸ್ಥಗಿತಗೊಂಡಿದ್ದು ಇದೀಗ ಆರಂಭಗೊಂಡಿರುವುದು ಸಂತಸ ತಂದಿದೆ ಅಂಗನವಾಡಿ ಕಾರ್ಯಕರ್ತೆಯರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೧೮೨೫ ಅಂಗನವಾಡಿ ಕೇಂದ್ರಗಳಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸುಸ್ಸಜ್ಜಿತವಾದ ಕೊಠಡಿ, ಅಡುಗೆಮನೆ, ಉಗ್ರಾಣ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ಕೈತೋಟ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮಹತ್ತರವಾದ ಸಂಕಲ್ಪ ಹೊಂದಲಾಗಿದ್ದು ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಕಾರಿಸಬೇಕು. ಈಗಾಗಲೇ ಜಿಲ್ಲೆಯ ಸುಮಾರು ೭೦೦ ಅಂಗನವಾಡಿ ಕೇಂದ್ರದಲ್ಲಿ ವಿವಿಧ ಯೋಜನೆ ಅಡಿ ಕಾಮಗಾರಿಗಳು ನಡೆಯುತ್ತಿದೆ, ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ ೨ ರಿಂದ ಪ್ರತಿ ಗ್ರಾಮಪಂಚಾಯಿತಿಗಳಲ್ಲಿ ಮನೆ ಮನೆ ಕಸ ಸಂಗ್ರಹಣೆ ಮೂಲಕ ಸ್ವಚ್ಚತೆ ಕುರಿತು ಅಭಿಯಾನ ನಡೆಯಲಿದೆ. ಮುಖ್ಯವಾಗಿ ನೈರ್ಮಲ್ಯ, ಶೌಚಾಲಯ, ಘನತ್ಯಾಜ್ಯ ನಿರ್ವಹಣೆ ಸಂಬಂದಿಸಿದಂತೆ ಜಾಗೃತಿ ಅಭಿಯಾನ ನಡೆಯಲಿದೆ, ಇದಕ್ಕಾಗಿ ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿ ಗ್ರಾಮಪಂಚಾಯಿತಿಗಳು ವರ್ಷಕ್ಕೆ ೨ ಬಾರಿ ಪ್ರತಿ ಗ್ರಾಮಗಳಲ್ಲಿ ಸ್ವಚ್ಚತಾಕಾರ್ಯದ ಅಭಿಯಾನ ಕೈಗೊಳ್ಳಬೇಕು, ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಮೂಲಕ ಜನರಲ್ಲಿ ಪರಿಸರ ನೈರ್ಮಲ್ಯದ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಆಯುಕ್ತ ಎ.ಎನ್.ಮಹೇಶ್ ಮಾತನಾಡಿ ಖಾಸಗಿ ಸಂಸ್ಥೆಗಳಂತೆ ಅಂಗನವಾಡಿ ಕೇಂದ್ರಗಳಲ್ಲಿ ಮಗುವಿಗೆ ಔಪಚಾರಿಕ ಶಿಕ್ಷಣವನ್ನು ಚಟುವಟಿಕೆ ಆಧಾರಿತವಾಗಿ ನೀಡುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಅಂಗನವಾಗಿ ಕಾರ್ಯಕರ್ತೆಯರಿಗೆ ೩ ದಿನಗಳ ಕಾಲ ಬನ್ನಿಸ್ ತರಬೇತಿ ಶಿಬಿರ ಆಯೋಜಿಸಲಾಗಿದೆ, ಚಟುವಟಿಕೆ ಆಧಾರಿತ ಶಿಕ್ಷಣ ಇದಾಗಿದ್ದು ಮಕ್ಕಳನ್ನು ಮೊಲಗಳ ಮಾದರಿಯಲ್ಲಿ ಅವರನ್ನು ಕಲಿಕೆಯಲ್ಲಿ ಉತ್ಸಾಹದ ಚಿಲುಮೆಗಳಾಗುವಂತೆ ಮಾಡುವುದಾಗಿದೆ ಎಂದು ಹೇಳಿದರು.
ಜಿಲ್ಲೆಯ ೧೮೨೫ ಅಂಗನವಾಡಿ ಕೇಂದ್ರದಲ್ಲಿ ಬನ್ನಿಸ್ ತಂಡ ಇರಬೇಕು ಎಂಬ ಉದ್ದೇಶ ಹೊಂದಿದ್ದು ಮಗುವಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಕ್ರಿಯಾಶೀಲತೆ, ಸೃಜನಶೀಲತೆ ವೃದ್ಧಿಸುವ ಹೊಣೆಗಾರಿಕೆ ಅಂಗನವಾಡಿ ಕಾರ್ಯಕರ್ತೆಯರದ್ದು ಆ ನಿಟ್ಟನಲ್ಲಿ ತರಬೇತಿ ಪಡೆದು ಅದನ್ನು ಸಾಕಾರಗೊಳಸಬೇಕು ಎಂದು ಕಿವಿಮಾತು ಹೇಳಿದರು.
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಆರಂಭಿಕ ಹಂತದ ಶಿಕ್ಷಣವು ಅತ್ಯಂತ ಗುಣಮಟ್ಟದ್ದಾಗಿದ್ದು ಮುಂದಿನ ದಿನಗಳಲ್ಲಿ ಕಲಿಕೆ ಮತ್ತಷ್ಟು ಉತ್ಸಾಹ ನೀಡಲು ಬನ್ನಿಸ್ ತರಬೇತಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಷಡಕ್ಷರಿ ಮಾತನಾಡಿ ಗುಣಾತ್ಮಕ ಚಟುವಟಿಕೆ ಆಧಾರಿತ ಶಿಕ್ಷಣದ ಮೂಲಕ ಭವಿಷ್ಯದ ಮಕ್ಕಳನ್ನು ರೂಪಿಸುವ ಮಹತ್ತರ ಹೊಣೆಗಾರಿಕೆ ಅಂಗನವಾಡಿ ಶಾಲಾ ಶಿಕ್ಷಕಿಯರದ್ದು. ಆ ನಿಟ್ಟಿನಲ್ಲಿ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬನ್ನಿಸ್ ಎಂದರೆ ಮೊಲ ಎಂದರ್ಥ ಮಕ್ಕಳಿಗೆ ಆರಂಭದ ದಿನಗಳಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣವನ್ನು ನೀಡಿದ್ದಲ್ಲಿ ಕಲಿಕೆ ಎಂಬುದು ಮಕ್ಕಳಿಗೆ ಹೆಚ್ಚು ಹೊರೆಯಾಗುವುದಿಲ್ಲ, ಕಲಿಕೆಯಲ್ಲಿ ಮತ್ತಷ್ಟು ಉತ್ಸಾಹ ತೋರಲಿದ್ದಾರೆ. ಉತ್ತಮ ಶಿಕ್ಷಣವಂತರಾಗಿ ರೂಪಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತರಬೇತಿ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಹಂತದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಇದಕ್ಕಾಗಿ ಜಿಲ್ಲಾಪಂಚಾಯಿತಿ ಇಲಾಖೆಗಳು ಸಹಕಾರ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಈ ವೇಳೆ ಬನ್ನಿಸ್ ತರಬೇತುದಾರರಾಗಿ ಬೆಂಗಳೂರಿನ ಡಾ.ಕೃಪಾ ವಿಜಯ್ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಣದ ಹೊಸ ವಿಧಾನಗಳ ಕುರಿತು ಚಟುವಟಿಕೆ ಮೂಲಕ ಪ್ರಾತ್ಯಕ್ಷಿಕೆ ತೋರಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ನೀಲಕಂಠಚಾರ್, ಗೈಡ್ಸ್ನ ಜಿಲ್ಲಾ ಆಯುಕ್ತರಾದ ಡಿ.ಎಸ್.ಮಮತಾ, ಕೇಂದ್ರ ಸ್ಥಾನಿಕ ಆಯುಕ್ತ ಸಿದ್ದೇಗೌಡ, ಕಿರಣ್ಕುಮಾರ್, ನವೀನ್, ವಾಸಂತಿ, ಪ್ರತಿಮಾ, ಭಾಗ್ಯ ಸೇರಿದಂತೆ ಮತ್ತಿತರರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.