ಆಗ ಎದುರಾದವನೇ ನಾನು…..
1 min read
ಅವಿನ್ ಟಿವಿ ಸುದ್ದಿಜಾಲ ✒️:
ತನ್ನೊಳಗೆ ಒಡಮೂಡಿದ ಆ ಪ್ರೇಮಾಂಕುರಗಳನೆಲ್ಲ ಒಂದು ಜತನದೊಂದಿಗೆ ಜೋಪಾನಮಾಡಿಕೊಂಡು,ನೊಂದ ಮನಕ್ಕೊಂದು ಬದುಕು ಕಟ್ಟಿಕೊಟ್ಟು, ತನ್ನದಲ್ಲದ ಮಗನಿಗೆ ತಾನು ಅಪ್ಪನ ಸ್ಥಾನಮಾನವನ್ನು ಇಡಿಯಾಗಿ ನೀಡಿ ಇನ್ನೂ ಮುಂದೆ ನಾನೇ ನಿನ್ನ ಅಪ್ಪ ಎಂಬ ಪ್ರೇಮ ಕಥಾನಕವೊಂದು ಇಲ್ಲಿ ಘೋಷಣೆಯಾಗಿದೆ, ಹೀಗೆ ಮೂರು ಜೀವಗಳ ಸುತ್ತ ಹೆಣದ ಪ್ರೇಮಪತ್ರವೊಂದು ಇಲ್ಲಿ ಸಾರ್ವಜನಿಕವಾಗಿ ಕಾಳಿದಾಸನ ಮೇಘ ಸಂದೇಶದಂತೆ ಅತ್ಯಂತ ಒಲುಮೆಯಿಂದ ಅನಾವರಣಗೊಂಡಿದೆ.
ಹಾಲುಗಲ್ಲದ ಏಳು ವರ್ಷದ ಮುದ್ದು ಮಗನೊಬ್ಬ ತನ್ನ ಅಮ್ಮನ ಮದುವೆಗೆ ತಾನೇ ಮುಂದೆ ನಿಂತು ಹಾರೈಸಿ ಮುತ್ತಿಟ್ಟ ಪ್ರೇಮ ಕಹಾನಿ ಇದು.
ನೆನ್ನೆಯಲ್ಲ, ಮೊನ್ನೆಯಷ್ಟೇ ಅಂದರೆ ಇದೇ 2025ರ ಜೂನ್ 20ರಂದು ಕೊಡಗಿನ ಮಡಿಕೇರಿಯಲ್ಲಿ ನೆಡೆದ ಆದರ್ಶದ ಮದುವೆಯೊಂದರ ಕುರಿತು ಬರೆದ ಜೀವಂತ ಬರಹ ಅಂತ ಅನಿಸಿದ ಕಾರಣ ಇದನ್ನು ತಮಗಾಗಿ ಸುದ್ದಿಜಾಲ ಈ ಮೂಲಕ ಕೊಡ ಮಾಡಿದೆ.
•••••••••••••••••••••••••• ಸಾಕಷ್ಟು ಸಲ ನಾನು ಎಡವಿದ್ದೇನೆ, ಸೋತಿದ್ದೇನೆ, ಹತಾಶನಾಗಿದ್ದೇನೆ. ನಾನು ಈವರೆಗೆ ಕಳೆದುಕೊಂಡಿದ್ದು ಹೆಚ್ಚು, ಗೆದ್ದದ್ದು ವಿರಳ. ಪ್ರತಿ ಸೋಲು ನನ್ನನ್ನು ಸಾಕಷ್ಟು ಮಾಗಿಸಿದೆ, ಗಟ್ಟಿ ಯಾಗಿಸಿದೆ, ಸದೃಢಗೊಳಿಸಿದೆ,
ಕಳೆದ ವರ್ಷ ನನ್ನ ಪ್ರೀತಿಯ ಬಾಬಣ್ಣನನ್ನು ಕ್ಯಾನ್ಸರ್ ನುಂಗಿಕೊಂಡಾಗ ನಾನು ಅಕ್ಷರಶಃ ಕುಸಿದು ಹೋಗಿದ್ದೆ. ಬಾಬಣ್ಣ ನನಗೆ ಎಲ್ಲವೂ ಆಗಿದ್ದರು.
ನಾನು ಕಳೆದುಕೊಂಡ ಎಲ್ಲವನ್ನೂ ಹಠ ಹಿಡಿದು ಪಡೆದುಕೊಳ್ಳುವವನು. ಬಾಬಣ್ಣ ಮತ್ತೆಂದೂ ಮರಳುವುದಿಲ್ಲ ಅನ್ನುವ ಕಹಿನೆನಪು ಮಾತ್ರ ನನ್ನನ್ನು ಚೇಳಿನಂತೆ ಸದಾ ಕುಟುಕುತ್ತಿರುತ್ತದೆ.
ಅಂದಹಾಗೆ ನನ್ನ ಬಾಲ್ಯದ ಗೆಳತಿ, ಸಹಪಾಠಿ ಆಶಿಕಳನ್ನು ನಾನು ಮದುವೆ ಆಗುತ್ತಿದ್ದೇನೆ. ಎರಡೂ ಕುಟುಂಬದವರೂ ನಮಗೆ ಸಕ್ಕತ್ ಸಾಥ್ ನೀಡುತ್ತಿದ್ದಾರೆ.
ವಿಶೇಷವೆಂದರೆ ನಮ್ಮಿಬ್ಬರ ಮದುವೆಗೆ ನಮ್ಮ ಮಗ ಸಾಕ್ಷಿಯಾಗಲಿದ್ದಾನೆ. ಮೂರುವರೆ ವರ್ಷಗಳ ಹಿಂದೆ ನಾಲ್ಕೂ ಕಾಲು ವರ್ಷದ ಹಾಲು ಗೆನ್ನೆಯ ಈ ಕಂದಮ್ಮ ನನ್ನ ತೆಕ್ಕೆಗೆ ಬಿದ್ದ, ಅಲ್ಲಿಂದೀಚೆಗೆ ಅವನಿಗೆ ನಾವೇ ಎಲ್ಲಾ.
ಸಣ್ಣ ಪ್ರಾಯದಲ್ಲೇ ತಿಳುವಳಿಕೆಯಿಲ್ಲದ ಕಾಲಮಾನದಲ್ಲೇ ಮದುವೆಯ ಬಂಧನಕ್ಕೆ ಸಿಲುಕಿದ ಆಶಿಕ ನರಕ ನೋಡಿದ್ದಾಳೆ. ಸಾಯಲು ಹೊರಟವಳನ್ನು ಸಾಯದಂತೆ ಪ್ರೇರೆಪಿಸಿದ್ದೂ ಎರಡು ವರ್ಷದ ಹಾಲುಗೆನ್ನೆಯ ನಮ್ಮ ಮಗ.
ಬದುಕಲು ತೀರ್ಮಾನಿಸಿದವಳು ಉಟ್ಟ ಬಟ್ಟೆಯಲ್ಲಿ ತವರು ಮನೆ ಸೇರುತ್ತಾಳೆ. ಟೈಲರಿಂಗ್ ಕಲಿಯುತ್ತಾಳೆ ಮಗನ ಜವಾಬ್ದಾರಿ ನಿಭಾಯಿಸುತ್ತಾಳೆ. ಇಂಗ್ಲೀಷ್ ಮೀಡಿಯಂ ಶಾಲೆಗೂ ಸೇರಿಸುತ್ತಾಳೆ. ವಾರ ಪತ್ರಿಕೆಯೊಂದರಲ್ಲಿ ಆಫಿಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಾ ಹೇಗೋ ದಿನ ದೂಡುತ್ತಿರುತ್ತಾಳೆ.
ಆಗ ಎದುರಾದವನೇ ನಾನು..
ಉಢಾಫೆಯಾಗಿ, ಬದುಕಿನ ಕುರಿತು ಯಾವುದೇ ಗುರಿ ಉದ್ದೇಶಗಳಿಲ್ಲದೆ ಅಲೆಯುತ್ತಿದ್ದ ನನ್ನ ಕಣ್ಣಿಗೆ ಇವರಿಬ್ಬರು ಬಿದ್ದ ನಂತರ ಇವರಿಬ್ಬರೇ ನನ್ನ ಬದುಕಿನ ಗುರಿಯಾಗುತ್ತಾರೆ ಎಂದು ನಾನು ಊಹಿಸಿರಲಿಲ್ಲ.
ಇವರು ಸಿಕ್ಕ ನಂತರ, ಇವರಿಬ್ಬರೂ ನನ್ನನ್ನು ನಂಬಲು ಶುರುಮಾಡಿದ ನಂತರ ನನ್ನ ಬದುಕು ತೀವ್ರ ಸ್ವರೂಪದಲ್ಲಿ ಬದಲಾಗಿದೆ.
ಇವರನ್ನು ಬಿಟ್ಟು ಕೊಡುವ ಮಾತೆ ಇಲ್ಲ ಎಂದು ಹಠಕ್ಕೆ ಬಿದ್ದ ನಾನು ಇವರಿಬ್ಬರ ಖುಷಿಯನ್ನು ಸಂಭ್ರಮಿಸಿದ್ದೇನೆ, ದುಃಖದಲ್ಲಿ ಭಾಗಿಯಾಗಿದ್ದೇನೆ, ಕಷ್ಟಕ್ಕೆ ಪಾಲುದಾರನಾಗಿದ್ದೇನೆ, ಮೂರು ವರ್ಷಗಳ ಹೋರಾಟದಲ್ಲಿ ಕೊನೆಗೂ ಸತ್ಯಗೆದ್ದು ಇವರಿಬ್ಬರು ಸ್ವತಂತ್ರರಾಗಿದ್ದಾರೆ. ಈಗ ನನ್ನ ಪ್ರೀತಿಯ ಬಂಧನಕ್ಕೆ ಸೋತು ಶರಣಾಗಿದ್ದಾರೆ.
ಮಗನಿಗೀಗ ಏಳು ವರುಷ ಎರಡನೇ ತರಗತಿಯಿಂದ ಮೂರಕ್ಕೆ ಜಂಪ್ ಆಗಿದ್ದಾನೆ. ಒಂದನೇ ತರಗತಿಯ ಪರೀಕ್ಷೆಯಲ್ಲಿ ನಿನ್ನ ಅಪ್ಪನ ಹೆಸರೇನು ಎನ್ನುವ ಪ್ರಶ್ನೆಗೆ ರಂಜಿತ್ ಎಂದು ಬರೆದಿಟ್ಟು ಬಂದಿದ್ದ. ನನ್ನದೊಂದು ಪಾಸ್ ಪೊರ್ಟ್ ಸೈಝ್ ಫೋಟೋವನ್ನೂ ಅವನ ಪಠ್ಯದ ಫ್ಯಾಮಿಲಿ ಟ್ರೀಗೆ ಕಿತ್ತುಬಾರದಂತೆ ಅಂಟಿಸಿಟ್ಟು ನಮ್ಮನ್ನು ಕಂಗಾಲು ಮಾಡಿದ್ದ.
ಅವನಿಗೆ ನಾನು ಎಂದೋ ಸ್ವಯಂಘೋಷಿತ ಪಪ್ಪ. ಈಗ ನಾನು ನನ್ನ ಮೂವತ್ತೊಂದನೆ ವರ್ಷದ ಹುಟ್ಟುಹಬ್ಬದ ಈ ದಿನ ಘೋಷಿಸುತ್ತಿದ್ದೇನೆ. ಭವಿಷ್ ನನ್ನ ಮಗ. ಜೂನ್ ಇಪ್ಪತ್ತರಂದು ಭವಿಷ್ ಸಮ್ಮುಖದಲ್ಲಿ ನಾನು ಅವನ ಅಮ್ಮನನ್ನು ಮದುವೆ ಆಗುತ್ತಿದ್ದೇನೆ.
ಇದನ್ನು ಓದುತ್ತಿರುವ ಕೆಲವರೂ ಅಂದು ನಮ್ಮ ಮದುವೆಗೆ ಸಾಕ್ಷಿಯಾಗಲಿದ್ದೀರಿ.
ಅಲ್ಲಿ ಇವನನ್ನು ರಂಜಿತ್ ಮಗ ಇವನೇ ಎಂದು ನೀವು ಗುರುತಿಸಿದರೆ ಸಂತೋಷ.
ಅಂದಹಾಗೆ ಗೆದ್ದ ಮಾಲನ್ನು ಬಚ್ಚಿಡಲೇಕೆ? ಅಪರೂಪಕ್ಕೆ ನಾನೂ ಹೀಗೆ ಗೆದ್ದಿದ್ದೇನೆ.
ನಿಮ್ಮೆಲ್ಲರ ಹಾರೈಕೆಯು ಈ ಮೂರು ಜೀವಗಳ ಮೇಲೆ ಇರಲಿ…
ಕೃಪೆ:ರಂಜಿತ್ ಕವಲಪಾರ.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು