ನಮ್ಮ ನಡಿಗೆ ಸರ್ವೋದಯದೆಡೆಗೆ ಪಾದಯಾತ್ರೆಗೆ ಚಾಲನೆ
1 min readಅಜ್ಜಂಪುರ: *ನಮ್ಮ ನಡಿಗೆ ಸರ್ವೋದಯದೆಡೆಗೆ ಪಾದಯಾತ್ರೆ*
*ಕರ್ನಾಟಕದ ಜನಪರ ಚಳುವಳಿಗೆ ಹೊಸ ಮುನ್ನುಡಿ ಬರೆಯಬಹುದಾ ???*
ನಮ್ಮ ನಡಿಗೆ ಸರ್ವೋದಯದೆಡೆಗೆ ಪಾದಯಾತ್ರೆಗೆ ಚಾಲನೆ.
ಸಾಣೇಹಳ್ಳಿಯಿಂದ ಸಂತೆಬೆನ್ನೂರಿನವರೆಗೆ ನಾಲ್ಕು ದಿನಗಳ ಕಾಲ ನೂರಾರು ಹಳ್ಳಿಗಳನ್ನು ಹಾದು ಹೋಗಲಿದೆ ಈ ಕಾಲ್ನಡಿಗೆ ಜಾಥಾ…
ಸ್ವತಂತ್ರ ಭಾರತದ ನಂತರ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಉತ್ತಮರು ಸೃಷ್ಟಿಯಾಗುತ್ತಿದ್ದಾರೆಯೇ? ಇರುವ ಬೆರಳೆಣಿಕೆಯಷ್ಟು ಸಾತ್ವಿಕರು,ಸಜ್ಜನರು ರಾಜಕಾರಣದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿದೆಯೇ ? ಪ್ರಾಮಾಣಿಕರಿಗೆ,ದಕ್ಷರಿಗೆ, ನಿಸ್ವಾರ್ಥ ಮನಸ್ಸಿನವರಿಗೆ ಇಂದಿನ ವರ್ತಮಾನದ ರಾಜಕೀಯ ವ್ಯವಸ್ಥೆಯೊಳಗೆ ಪಾಲ್ಗೊಳ್ಳಲು ಸಾಧ್ಯವೇ? ಈ ರೀತಿಯ ಪ್ರಶ್ನಾರ್ಥಕವಾದ ಮುಖ್ಯ ಚರ್ಚೆಯೊಂದಿಗೆ *ನಮ್ಮ ನಡಿಗೆ ಸರ್ವೋದಯದೆಡೆಗೆ* ಪಾದಯಾತ್ರೆಯು ಜಿಡ್ಡು ಕಟ್ಟಿದ ಸ್ವಾರ್ಥ ಸಮಾಜಕ್ಕೆ ಚಾಟಿ ಏಟನ್ನು ಬೀಸುತ್ತಾ, ಕೃಷಿ, ಶಿಕ್ಷಣ,ಧರ್ಮ, ಸಂಸ್ಕೃತಿ ರಾಜಕಾರಣವನ್ನು ಒಳಗೊಂಡಂತಹ ವಿಷಯಗಳ ಆತ್ಮವಲೋಕನದೊಂದಿಗೆ ಸಾಗುತ್ತಿದೆ ಈ ನಡಿಗೆ.
ಸಾಂಸ್ಕೃತಿಕ ಕ್ಷೇತ್ರ ಸಾಣೆಹಳ್ಳಿಯಿಂದ ಐತಿಹಾಸಿಕ ಕ್ಷೇತ್ರ ಸಂತೆಬೆನ್ನೂರಿನವರೆಗೆ ಸಾಗಲಿರುವ ಈ ಪಾದಯಾತ್ರೆಯು ಸಾಣೆಹಳ್ಳಿ ಮತ್ತು ಪಾಂಡುಮಟ್ಟಿಯ ಉಭಯ ಶ್ರೀಗಳ ನೇತೃತ್ವದಲ್ಲಿ ನೆನ್ನೆ ಆರಂಭಗೊಂಡಿದೆ. ವಿವಿಧ ಮಹನೀಯರ ಸ್ತಬ್ಧಚಿತ್ರ, ಮಹಿಳಾ ವೀರಗಾಸೆ , ಬೀದಿ ನಾಟಕ, ವಿಷಯ ಸಾಧಕರಿಂದ ಈ ನೆಲ ಜಲ, ಬದುಕು ಬವಣೆ ಕುರಿತು ಉಪನ್ಯಾಸ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ದೊಡ್ಡ ಸದ್ದು ಮಾಡುತ್ತಾ ಸಾಗುತ್ತಿದೆ ಈ ಕಾಲ್ನಡಿಗೆ.
ಸಮಾಜದ ಬಹುತೇಕ ಎಲ್ಲಾ ಕ್ಷೇತ್ರಗಳು ಇಂದು ಕಲುಷಿತಗೊಂಡಿವೆ. ರಾಜಕೀಯ ವ್ಯವಸ್ಥೆ ಎನ್ನುವುದು ಅತ್ಯಂತ ಕೆಟ್ಟ ಹೀನಾಯ ಸ್ಥಿತಿಗೆ ಬಂದು ನಿಂತಿದೆ, ಈ ರಾಜಕೀಯ ವ್ಯವಸ್ಥೆಯೇ ಇಡೀ ಸಮಾಜವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ,ರಾಜಕೀಯ ಕ್ಷೇತ್ರದಲ್ಲಿ ಸಜ್ಜನರು,ಪ್ರಾಮಾಣಿಕರು ಭಾಗವಹಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಈ ರಾಜಕಾರಣ ಬಂದು ನಿಂತಿದೆ. ಈ ರೀತಿಯ ಬೆಳವಣಿಗೆಗಳು ಬಹಳ ಗಂಭೀರವಾದದ್ದು ಮತ್ತು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥಹ ವಿಷಾದ ವಿಚಾರವಾಗಿದೆ.
ಈ ಕಾರಣಕ್ಕಾಗಿ ಈ ನಾಡು ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತಿದೆ. ಸಮಾಜದ ಎಲ್ಲ ಕ್ಷೇತ್ರಗಳನ್ನು ರಾಜಕೀಯ ಕ್ಷೇತ್ರವೇ ನಿಭಾಯಿಸುತ್ತಿರುವದರಿಂದ, ಎಲ್ಲಿಯವರೆಗೆ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ಕೊಳ್ಳುವುದಿಲ್ಲವೋ ಅಲ್ಲಿಯವರಿಗೆ ಸಮಾಜದ ಎಲ್ಲ ಕ್ಷೇತ್ರಗಳು ಬದಲಾವಣೆ ಆಗಲು ಸಾಧ್ಯವಿಲ್ಲ. ಈ ಮಹತ್ವದ ಕಾರಣಕ್ಕಾಗಿ ರಾಜಕೀಯ ಕ್ಷೇತ್ರ ಸುಧಾರಣೆಗೊಳ್ಳಬೇಕಿದೆ,
ಪ್ರಾಮಾಣಿಕರು ಸಜ್ಜನರು ಸಾತ್ವಿಕರು ರಾಜಕೀಯ ಕ್ಷೇತ್ರದೊಳಗೆ ಪ್ರವೇಶ ಮಾಡಿ, ಭ್ರಷ್ಟ,ಸ್ವಾರ್ಥ ಮತ್ತು ಕಳಪೆ ವ್ಯಕ್ತಿತ್ವದ ಕೇವಲ ಅಧಿಕಾರದ ಹಪಾಹಪಿಯಿಂದ ನರಳುತ್ತಿರುವ ರಾಜಕಾರಣಿಗಳನ್ನು ದೂರವಿಟ್ಟು ರಾಜಕೀಯ ಕ್ಷೇತ್ರಕ್ಕೆ ಹೊಸ ಮನ್ವಂತರವನ್ನು ಬರೆಯಬೇಕಾಗಿದೆ .
ನಮ್ಮ ದೇಹದ ರಕ್ತ ಕೆಟ್ಟು ಹೋದರೆ, ಶರೀರದ ಸಂದು ಗೊಂದಲಲ್ಲಿ ಕಾಣಿಸಿಕೊಳ್ಳುವj ಕುರದ ರೋಗದ ಚಿಹ್ನೆಯಂತೆ ನಮ್ಮ ರಾಜಕೀಯ ವ್ಯವಸ್ಥೆಯು ನರಳುತ್ತಿದೆ. ರಾಜಕೀಯ ಕ್ಷೇತ್ರವನ್ನು ಸಚ್ಚಾರಿತ್ರ ಕ್ಷೇತ್ರನ್ನಾಗಿ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಇಡೀ ಸಮಾಜದಲ್ಲಿ ಹೇಳ ತೀರದಷ್ಟು ಪಾಪದ ಫಲಗಳು ತುಂಬಿ ತುಳುಕ ಬಹುದು. ಈ ಹಿನ್ನೆಲೆಯಲ್ಲಿ ಇಡೀ ಮನುಕುಲದ ಬದುಕುನ್ನು ಮರುರೂಪಿಸುವ ದೃಷ್ಟಿಯಿಂದ ನಾವೆಲ್ಲ ಮತ್ತೊಮ್ಮೆ ಸರ್ವೋದಯದೆಡೆಗೆ ಪಯಣಿಸಬೇಕಾಗಿದೆ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕುವೆಂಪು ರವರಂತಹ ಮಹನೀಯರ ವಿಚಾರಧಾರೆಗಳ ಬುತ್ತಿಯನ್ನು ಬಿಚ್ಚಿಡುತ್ತಾ , ಪಾದಯಾತ್ರೆಯಲ್ಲಿ ಪಾಲ್ಗೊಂಡ ಸ್ವಾಮೀಜಿಗಳು, ಚಿಂತಕರು, ಸಾಹಿತಿಗಳು, ಸಾಂಸ್ಕೃತಿಕ ಕ್ಷೇತ್ರದ ಅನುಭವಿಗಳು ಪಾದಯಾತ್ರೆ ಉದ್ದಕ್ಕೂ ಮಾತನಾಡುತ್ತಾ, ಸ್ವಯಂ ಅವಲೋಕನದೊಂದಿಗೆ ಜನರೊಡನೆ ಸಂವಾದಿಸುತ್ತಾ ಸಾಗುತ್ತಿರುವುದು ಕಂಡುಬಂತು.
ಈ ಐತಿಹಾಸಿಕ ಪಾದಯಾತ್ರೆಯಲ್ಲಿ , ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ. ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ. ಮಾಡಳಿನ ಶ್ರೀ ರುದ್ರಮುನಿ ಸ್ವಾಮೀಜಿ. ಮಂಡ್ಯದ ಶ್ರೀ ಓಂಕಾರೇಶ್ವರ ಸ್ವಾಮೀಜಿ ಹಾಗೂ ಚಲನಚಿತ್ರ ನಟಿ ಪೂಜಾ ಗಾಂಧಿ, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ. ಹಳಗವಾಡಿ ರುದ್ರಪ್ಪ. ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ್. ರಾಜಕಾರಣಿಗಳಾದ ಮಹಿಮಾ ಪಟೇಲ್. ಮಾಜಿ ಶಾಸಕರಾದ ವೈ ಎಸ್ ವಿ ದತ್ತ. ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಸುರೇಶ್. ಸಾವಯುವ ಕೃಷಿಕ ಚಂದ್ರಶೇಖರ್ ನಾರಣಪುರ . ರಾಜ್ಯ ಕಾಂಗ್ರೆಸ್ ವಕ್ತಾರ ರವೀಶ್ ಖ್ಯಾತನಬೀಡು. ರಾಜ್ಯ ರೈತ ಸಂಘದ ಮುಖಂಡ ಮುಗುಳುವಳ್ಳಿ ಗುರುಶಾಂತಪ್ಪ. ನೀರಾವರಿ ಹೋರಾಟಗಾರ ನಟರಾಜ್ ಎಸ್.ಕೊಪ್ಪಲು. ಅಜ್ಜಂಪುರದ ಶಿವಾನಂದ್ ಸೇರಿದಂತೆ ಹತ್ತು ಹಲವು ಸಂಘಟನೆಯ ಪ್ರಮುಖರು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದಾರಿ ಉದ್ದಕ್ಕೂ , ತಳಿರು ತೋರಣಗಳನ್ನು ಶೃಂಗಾರದಿಂದ ಕಟ್ಟಿ, ವಿವಿಧ ಮಂಗಳವಾದ್ಯಗಳೊಂದಿಗೆ ಆರತಿ ಮಾಡಿ, ಪಾದಯಾತ್ರಿಗಳಿಗೆ ಸ್ವಾಗತ ನೀಡಿ, ಅಲ್ಲಲ್ಲಿ ಅತ್ಯಂತ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಿ ಕುಡಿಯಲು ಮಜ್ಜಿಗೆ, ಹಣ್ಣಿನ ರಸ ಸೇರಿದಂತೆ ವಿವಿಧ ಫಲಗಳನ್ನು ಪಾದಯಾತ್ರೆಗಳಿಗೆ ಹಂಚುವ ದೃಶ್ಯ ದಾರಿ ಯುದ್ದಕ್ಕೂ ಕಂಡು ಬರುತ್ತಿತ್ತು.
ನೆನ್ನೆ ಅಜ್ಜಂಪುರ ತಾಲೂಕಿನ ಬೇಗೂರು ನಲ್ಲಿ ಹಮ್ಮಿಕೊಂಡಿದ್ದ ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಒಂದುವರೆ ಸಾವಿರಕ್ಕೂ ಹೆಚ್ಚು ಸುತ್ತಮುತ್ತಲಿನ ಹಳ್ಳಿಯ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾಲ್ಗೊಂಡ ಎಲ್ಲರಿಗೂ ಕೂಡ ರುಚಿಕಟ್ಟಾದ ಊಟದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ನಾಟಕಕಾರರು ಹಾಡುಗಾರರು ಆದ ತರೀಕೆರೆಯ ಎನ್ಎಸ್ ಜಯಣ್ಣ. ಚಿಕ್ಕನಾವಂಗಲದ ಶಂಕರಪ್ಪ. ರಮೇಶ್ ನಾಯಕ್. ಬೇಗೂರು ಮಲ್ಲಿಕಾರ್ಜುನ್. ಕಾಟಿಗನೆರೆ ಮಂಜಪ್ಪ. ಭಕ್ತನಕಟ್ಟೆ ಲೋಕೇಶ್ ಅವರ ಸಿರಿ ಕಂಠದಿಂದ ಮೊಳಗಿದ ಜನಜಾಗೃತಿ ಹಾಡುಗಳು ಪಾದಯಾತ್ರಿಗಳ ಬೆವರನ್ನು ಅಳಿಸಿ, ಆಯಾಸವನ್ನು ಮರೆಮಾಚಿ,ನಡೆಯುವ ಕಾಲುಗಳಿಗೆ ಮತ್ತಷ್ಟು ಚೈತನ್ಯ ನೀಡುತ್ತಿದ್ದವು.
ಮಹತ್ವಕಾಂಕ್ಷಿಯುಳ್ಳ ಒಂದು ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಪಾದಯಾತ್ರೆಯು ಹತ್ತರಲ್ಲಿ ಹನ್ನೊದನೆಯದಾಗದೆ, 12ನೇ ಶತಮಾನದ ಕಲ್ಯಾಣದ ಶರಣರ ಸತ್ಕ್ರಾಂತಿಯಂತೆ ಮತ್ತೊಮ್ಮೆ ಹೊರ ಹೊಮ್ಮಲಿ.
•••••••••••••••••••••••••••••
D. M.Manjunathaswamy