ಹುಚ್ಚು ಯೋಚನೆ ಮತ್ತು ಯೋಜನೆ…
1 min read
ಹುಚ್ಚು ಯೋಚನೆ ಮತ್ತು ಯೋಜನೆ…
….
ಕಾವೇರಿ ಆರತಿ ಮತ್ತು ಕೆಆರ್ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ………..
ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ ಜಲ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ……
ಕೃಷಿಗಾಗಿಯೋ, ಕುಡಿಯುವ ನೀರಿಗಾಗಿಯೋ ಎಷ್ಟು ಸಾಧ್ಯವೋ ಅಷ್ಟು ಅದನ್ನ ಸಹಜ ರೀತಿಯಲ್ಲೇ ಉಪಯೋಗಿಸಿಕೊಳ್ಳಿ ಅಷ್ಟೇ. ಅದು ನದಿಗೆ ನೀವು ಕೊಡಬಹುದಾದ ಬಹುದೊಡ್ಡ ಕೊಡುಗೆ. ಅದು ಬಿಟ್ಟು ಅನಾವಶ್ಯಕವಾಗಿ ಕಾವೇರಿ ಆರತಿ ಎನ್ನುವ ಕಾರ್ಯಕ್ರಮ ಮಾಡಿ ಆ ನದಿಯನ್ನು ಕಲ್ಮಶ ಮಾಡುವುದಲ್ಲದೆ, ಮೌಢ್ಯವನ್ನು ಬಿತ್ತುತ್ತಿದ್ದೀರಿ……….
ಗಂಗಾರತಿ ಎಂಬ ಕಾರ್ಯಕ್ರಮ ಇದೇ ರೀತಿಯ ಮೌಢ್ಯ. ಇದು ಅದರ ನಕಲು. ಜನರನ್ನು ಭಾವನಾತ್ಮಕವಾಗಿ ಸೆಳೆಯುವ ರಾಜಕೀಯ ಕುತಂತ್ರ. ಜನರಲ್ಲಿ ಗುಲಾಮಿ ಮನಸ್ಥಿತಿ ಬೆಳೆಸುವ ಹುನ್ನಾರ………
ನದಿ ನೀರಿಗೆ ಒಂದಷ್ಟು ಗೌರವ, ಒಂದಷ್ಟು ಪ್ರೀತಿ ಕೊಡಬೇಕೆಂಬುದು ನಿಜ, ಅದು ಸಹಜವಾಗಿಯೇ ಆಗುತ್ತಿರುತ್ತದೆ. ಅದನ್ನು ಮಲಿನಗೊಳಿಸದೆ, ಸಹಜವಾಗಿ ಹರಿಯಲು ಬಿಡುವುದೇ ನಾವು ಅದಕ್ಕೆ ಕೊಡುವ ಗೌರವ, ಪ್ರೀತಿ. ಗಂಗೆಗಾಗಲಿ, ಕಾವೇರಿಗಾಗಲಿ ಎರಡೂ ಸರ್ಕಾರಗಳು ಮಾಡುತ್ತಿರುವುದು ನಿಜಕ್ಕೂ ದ್ರೋಹ ಮತ್ತು ಅದರ ಬೆನ್ನಿಗೆ ಚೂರಿ ಇರಿಯುವ ಕೆಲಸ…….
ಅನಾವಶ್ಯಕವಾಗಿ ಆ ನದಿಯ ಬಳಿ ಜನ ಸೇರಿಸಿ ಅದನ್ನು ಮಲಿನ ಮಾಡುವ ಕ್ರಿಯೆ ಅದು ಹೇಗೆ ಕಾವೇರಿಯ ಗೌರವವಾಗುತ್ತದೆ. ಸರ್ಕಾರ ಕಾವೇರಿ ಆರತಿ ಮಾಡಿ ನನಗೆ ಗೌರವ ನೀಡುತ್ತಿದೆ ಎಂದು ಕಾವೇರಿ ನದಿಗೆ ತಿಳಿಯುತ್ತದೆಯೇ. ನಾಳೆಯಿಂದ ಅದರ ಗುಣಲಕ್ಷಣಗಳಲ್ಲಿ ಬದಲಾವಣೆ ಆಗುತ್ತದೆಯೇ. ಇದಕ್ಕಾಗಿ ಖರ್ಚಾಗುವ ಹಣ ವ್ಯರ್ಥವಲ್ಲವೇ……..
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮನರಂಜನೆ ಎಂಬುದು ತುಂಬಾ ಜಾಸ್ತಿಯಾಗಿದೆ. ಎಲ್ಲಿ ನೋಡಿದರೂ ಥಿಯೇಟರ್ ಗಳು, ಮಾಲ್ಗಳು, ಅಮ್ಯೂಸ್ಮೆಂಟ್ ಪಾರ್ಕ್ ಗಳು ತುಂಬಾ ಹೆಚ್ಙಾಗಿದೆ. ಇರುವುದನ್ನೇ ಉಪಯೋಗಿಸಿಕೊಂಡರೆ ಸಾಕಾಗಿದೆ. ಇದೀಗ ಆ ನದಿ ಪ್ರದೇಶದಲ್ಲಿ ಅನಾವಶ್ಯಕವಾಗಿ ಮತ್ತೊಂದು ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನ ಅವಶ್ಯಕತೆ ಇದೆಯೇ ? ಅದರಿಂದ ಆಗಬಹುದಾದ ಹಾನಿಯ ಅರಿವಿದೆಯೇ ?…….
ಹೌದು, ಅದರಿಂದ ವ್ಯಾಪಾರ , ಪ್ರವಾಸೋದ್ಯಮ ವೃದ್ದಿಯಾಗಿ ಹಣ ಬರಬಹುದು. ಆದರೆ ಆ ಹಣಕ್ಕಾಗಿ ಪ್ರಕೃತಿ ಮತ್ತು ಸಾಮಾನ್ಯ ಜನ ತೆರಬೇಕಾಗಿರುವ ಬೆಲೆ ಎಷ್ಟು ಎಂಬುದರ ಅರಿವಿದೆಯೇ……
ಬಿಡ್ರೀ ಸಾಕು, ಮಾಡಲಿಕ್ಕೆ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದೆ.
ರೈತರ ಆತ್ಮಹತ್ಯೆ ಇನ್ನೂ ನಿಂತಿಲ್ಲ. ಅವುಗಳನ್ನೇ ನಿಯತ್ತಾಗಿ ಮಾಡಿ. ಅಭಿವೃದ್ಧಿ ಎನ್ನುವುದು ಸುಸ್ಥಿರವಾಗಿರಬೇಕು, ಸಮಗ್ರವಾಗಿರಬೇಕು. ಅದು ಕೇವಲ ವ್ಯಾಪಾರದ, ಹಣಕಾಸಿನ ಹುಚ್ಚಾಗಬಾರದು………
ಪರಿಸರವೆಂಬುದು ಅತ್ಯಂತ ಸೂಕ್ಷ್ಮವಾದದ್ದು, ಬಹಳ ಸಂವೇದನಶೀಲವಾದದ್ದು. ಮನುಷ್ಯ ಕೂಡ ಸೂಕ್ಷ್ಮವಾಗಿ ವಿವೇಚನೆಯಿಂದ ಅದರೊಂದಿಗೆ ವರ್ತಿಸಬೇಕು. ಇಲ್ಲದಿದ್ದರೆ ಈ ರೀತಿ ಹುಚ್ಚು ತೀರ್ಮಾನಗಳಿಂದ ಪರಿಸರಕ್ಕೆ ಅಪಾರ ಪ್ರಮಾಣದ ಧಕ್ಕೆಯಾದರೆ ಅದು ಎಲ್ಲಾ ಜೀವಸಂಕುಲಕ್ಕೆ ವಿನಾಶಕಾರಿಯಾಗಲಿದೆ……
ಕಾವೇರಿಗೆ ಆರತಿ ಮಾಡುವುದಕ್ಕಿಂತ ಜನಪ್ರತಿನಿಧಿಗಳ, ಅಧಿಕಾರಿಗಳ ಮುಖಕ್ಕೆ ಆರತಿ ಮಾಡಬೇಕು. ಆಗ ಜನರು ಜೀವನ ಮಟ್ಟ ಸುಧಾರಿಸುತ್ತದೆ. ಆ ಮೈಸೂರಿನ ಭೂ ಪ್ರದೇಶ ಇರುವುದರಲ್ಲಿ ಒಂದಷ್ಟು ಉತ್ತಮ ಗುಣಮಟ್ಟವನ್ನು ಹೊಂದಿದೆ. ಅಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಪ್ರಾರಂಭವಾದರೆ ಜನಸಂಖ್ಯೆಯ ಒತ್ತಡ, ವಾಹನಗಳ ಒತ್ತಡ ಎಲ್ಲಾ ಸೇರಿ ಆ ಭಾಗ ಮತ್ತಷ್ಟು ಹಾಳಾಗಲಿದೆ………
ಸುಮಾರು ಒಂದು ತಿಂಗಳ ದಸರಾ ಅವಧಿಯೇ ಸಾಕಷ್ಟು ಒತ್ತಡ ನಿರ್ಮಿಸುತ್ತದೆ. ಇನ್ನು ಅಮ್ಯೂಸ್ಮೆಂಟ್ ಪಾರ್ಕಾದರೆ ಮೈಸೂರು ಭಾಗದಲ್ಲಿ ಪ್ರತಿದಿನವೂ ದಸರಾವೇ ಆಗುತ್ತದೆ. ವ್ಯಾಪಾರಿಗಳಿಗೆ ಹಣಕಾಸಿನ ಲಾಭವೇನೋ ಆಗಬಹುದು, ಕುಂಭಮೇಳದಲ್ಲಿ ಉತ್ತರ ಪ್ರದೇಶಕ್ಕೆ ಅಪಾರ ಆದಾಯ ಹರಿದು ಬಂದಂತೆ ಕರ್ನಾಟಕ ಸರ್ಕಾರಕ್ಕೂ ಆದಾಯ ಹರಿದು ಬರಬಹುದು. ಟೋಲ್ ಶುಲ್ಕ ಸಂಗ್ರಹ ಹೆಚ್ಚಾಗಬಹುದು. ಆದರೆ ದುಡ್ಡಿಗಾಗಿ ಪರಿಸರವನ್ನೇ ಅಡವಿಡುವ ದೈನೇಸಿ ಸ್ಥಿತಿ ಸರ್ಕಾರಕ್ಕೆ ಬಾರದಿರಲಿ……..
ದುಡ್ಡು ಒಂದು ವ್ಯಾವಹಾರಿಕ ಸಾಧನ ಮಾತ್ರ. ದುಡ್ಡಿನಿಂದಲೇ ಬದುಕು, ದುಡ್ಡಿನಿಂದಲೇ ಸರ್ಕಾರ ಎಂಬ ಧೋರಣೆ ನಮ್ಮನ್ನೆಲ್ಲಾ ವಿನಾಶದ ಅಂಚಿಗೆ ಕೊಂಡೊಯ್ಯಲಿದೆ, ಎಚ್ಚರ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451..Watsapp)
9844013068……