लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆ, ಕಳಸ ತಾಲೂಕಿನ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿನ್ನೆ ಆಯೋಜಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಆಗಮಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಡಾ.ಬಾಲಕೃಷ್ಣ ಅವರನ್ನು ಅಮಾನತು ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ಮಾಡಿದ್ದಾರೆ ಎಂದು ವರದಿಯಾಗಿದೆ.

ಶೃಂಗೇರಿ ಆಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ಅವರನ್ನು ಕಳಸ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ನಿಯೋಜನೆ ಮಾಡಲಾಗಿತ್ತು. ಮದ್ಯಪಾನ ಮಾಡಿ ಬಂದು ಶಸ್ತ್ರಚಿಕಿತ್ಸೆ ಮಾಡದೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮಾಧ್ಯಮಗಳಲ್ಲಿ ಸುದ್ದಿಯನ್ನು ಗಮನಿಸಿದ ಆರೋಗ್ಯ ಸಚಿವರು ಸದರಿ ವೈದ್ಯರನ್ನು ಅಮಾನತುಗೊಳಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಿನಾಂಕ 31/05/2023ರ ಬುಧವಾರದಂದು ಕಳಸ ಆರೋಗ್ಯ ಕೇಂದ್ರದಲ್ಲಿ ಸಂತಾನರಣ ಶಸ್ತ್ರ ಚಿಕಿತ್ಸೆಗೆಂದು ಸುಮಾರು ಹತ್ತಕ್ಕೂ ಅಧಿಕ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರಿಗೆ ಅನಸ್ತೇಶಿಯ ಚುಚ್ಚುಮದ್ದನ್ನು ಸಹ ನೀಡಲಾಗಿತ್ತು.ಸಂಜೆ ಸುಮಾರು 3:00 ಗಂಟೆಗೆ ಶಸ್ತ್ರಚಿಕಿತ್ಸೆಗೆ ಎಂದು ಆಗಮಿಸಿದ ಡಾ. ಬಾಲಕೃಷ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗದೆ ಆಸ್ಪತ್ರೆಯಲ್ಲಿ ಕುಸಿದು ಕುಳಿತಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೆರೆದಿದ್ದ ಸಾರ್ವಜನಿಕರು ಡಾಕ್ಟರ್ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ಆರೋಪಿಸಿದರು.

ಆದರೆ ಇವರು ಕುಸಿದು ಬಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಇತರೆ ವೈದ್ಯರು ಅವರಿಗೆ ಆರೋಗ್ಯ ಸಮಸ್ಯೆ ಯಿಂದ ಕುಸಿದು ಬಿದ್ದಿದ್ದಾರೆ ಎಂದು ಅವರನ್ನು ಆಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟು ವೈದ್ಯರನ್ನು ಆರೋಪದಿಂದ ಬಚಾವ್ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ಈ ನಡುವೆ ಅನಸ್ತೇಶಿಯ ಚುಚ್ಚುಮದ್ದು ಪಡೆದಿದ್ದ ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಪರದಾಡುವಂತಾಯ್ತು. ನಂತರ ವಿಷಯ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದು ದಿನಾಂಕ 01/06/2023ರ ಗುರುವಾರದಂದು ಜಿಲ್ಲಾ ಕೇಂದ್ರದಿಂದ ಡಾ.ಲೋಹಿತ್ ಅವರನ್ನು ಕಳುಹಿಸಿಕೊಟ್ಟು ಸಂತಾನರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕಳಸ ಆಸ್ಪತ್ರೆಗೆ ದಿನಾಂಕ 01/06/2023ರ ಗುರುವಾರದಂದು ಡಿ.ಎಚ್.ಒ. ಡಾ. ಉಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಡಾ.ಉಮೇಶ್ ಅವರು ಈ ವಿಷಯವಾಗಿ ತನಿಖೆ ನಡೆಸಲು ಸಮಿತಿ ರಚಿಸಿ ವೈದ್ಯರು ತಪ್ಪಿತಸ್ಥರೆಂದು ಕಂಡುಬಂದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ.

ವಿವಾದಗಳ ಸರಮಾಲೆ : ಸದ್ಯ ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿರುವ ಡಾಕ್ಟರ್ ಬಾಲಕೃಷ್ಣ ಅವರು ಕಳೆದ ಅನೇಕ ವರ್ಷಗಳಿಂದ ಒಂದಲ್ಲ ಒಂದು ವಿವಾದಕ್ಕೆ ಗ್ರಾಸವಾಗಿದ್ದಾರೆ.

ಮದ್ಯಪಾನ ಮಾಡಿ ಡ್ಯೂಟಿಗೆ ಬಂದು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ಈ ಹಿಂದೆಯೂ ನಡೆದಿದ್ದವು.

ಹಾಗೆಯೇ 2020ರಲ್ಲಿ ಕೊಪ್ಪ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದನ್ನು ಮಾರಾಟ ಮಾಡಲಾಗಿದ್ದ ಪ್ರಕರಣದಲ್ಲಿಯೂ ಡಾ. ಬಾಲಕೃಷ್ಣ ಅವರ ಹೆಸರು ತಳಕು ಹಾಕಿಕೊಂಡಿತ್ತು. ಆ ಪ್ರಕರಣದಲ್ಲಿ ಇವರು ಅಮಾನತಾಗಿದ್ದರು.

ಇದೀಗ ಕಳಸ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರೇ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಬಂದರೆ ರೋಗಿಗಳ ಗತಿಯೇನು ?

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *