लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ನನಸು ಮಾಡಲು ಇಂದಿನಿಂದಲೇ ಫೀಲ್ಡಿಗಿಳಿದ ನೂತನ ಶಾಸಕಿ.”

1 min read

ಕಾಂಗ್ರೆಸ್ ಪಕ್ಷದ ನಯನಾ ಮೋಟಮ್ಮ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರನ್ನು ಸೋಲಿಸಿ 20 ವರ್ಷದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಕೇತ್ರದಲ್ಲಿ ಮರುಜೀವ ತಂದಿದ್ದಾರೆ.ಕಳೆದ ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕುಮಾರಸ್ವಾಮಿ ಅವರನ್ನು ಮತದಾರರು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.

ಕೆಲ ರಸ್ತೆ, ತಡೆಗೋಡೆ, ಸೇತುವೆ ಕಾಮಗಾರಿ ಬಿಟ್ಟರೆ ಮೂಡಿಗೆರೆ ಕ್ಷೇತ್ರವು ಪಕ್ಕದ ಕ್ಷೇತ್ರಗಳಿಗೆ ಹೋಲಿಸಿದರೆ ದಶಕಗಳಿಂದಲೂ ತೀರಾ ಹಿಂದುಳಿದ ಪ್ರದೇಶವೇ ಆಗಿ ಉಳಿದಿದೆ.

ಮೊದಲಿಗೆ ಈ ಕ್ಷೇತ್ರದ ಮೂಡಿಗೆರೆ ಮತ್ತು ಕಳಸದ ವಿವಿಧ ಇಲಾಖೆಗಳಲ್ಲಿ ಇರುವ ಭ್ರಷ್ಟ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಿಸುವುದು ಶಾಸಕರ ಮೊದಲ ಕೆಲಸ ಆಗಬೇಕು ಎಂಬುದು ಬಹುತೇಕ ಜನರ ಒಕ್ಕೊರಲ ಬೇಡಿಕೆ.
ಕ್ಷೇತ್ರಕ್ಕೆ ತಗುಲಿರುವ ಭ್ರಷ್ಟಾಚಾರದ, ಕಳಪೆ ಕಾಮಗಾರಿಯ ಕಳಂಕ ತೊಡೆದುಹಾಕಲು ಈ ಕ್ರಮ ಅನಿವಾರ್ಯವೂ ಹೌದು.ಜೊತೆಗೆ ಮುಂದೆ ಬರುವ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಜನಪರ ಕೆಲಸ ಮಾಡುವಂತೆ ಅವರನ್ನು ಪ್ರೇರೇಪಣೆ ಮಾಡುವ ಅಗತ್ಯವೂ ಇದೆ.

ಈ ಕ್ಷೇತ್ರದಲ್ಲಿ ಇರುವ ನಾಲ್ಕಾರು ರಾಜ್ಯ ಹೆದ್ದಾರಿಗಳು ಗುಂಡಿಗಳಿಂದ ತುಂಬಿವೆ.ಈ ಹೆದ್ದಾರಿ ಬಳಸುವವರು ನಿತ್ಯವೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ವಿಶೇಷವಾಗಿ ಕಳಸ ತಾಲ್ಲೂಕಿನ ಕಳಸ-ಬಾಳೆಹೊಳೆ, ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಗಳು ತೀರಾ ಹದಗೆಟ್ಟಿವೆ.ಈ ರಸ್ತೆಗಳ ತುರ್ತು ಅಭಿವೃದ್ಧಿ ಆಗಬೇಕಿದೆ.ಜೊತೆಗೆ ಗ್ರಾಮೀಣ ಪ್ರದೇಶದ ಹತ್ತಾರು ರಸ್ತೆಗಳ ಅಭಿವೃದ್ಧಿ ಆಗಿಲ್ಲ ಎಂದು ಅನೇಕ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೂ ಕರೆ ನೀಡಿದ್ದರು. ಅಂತಹ ರಸ್ತೆಗಳ ಅಭಿವೃದ್ಧಿಯೂ ಸವಾಲಾಗಿದೆ.

ಇನ್ನು ಕಳಸ ತಾಲ್ಲೂಕು ಕೇಂದ್ರವಾಗಿ 2 ವರ್ಷ ಕಳೆದರೂ ತಹಶೀಲ್ದಾರ್ ನೇಮಕ ಆಗಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ನಡೆದಿಲ್ಲ.ಮಿನಿ ವಿಧಾನಸೌಧಕ್ಕೆ 10 ಕೋಟಿ ತರುವ ಭರವಸೆ ಈಡೇರಿಲ್ಲ.ಈಗ ನಯನಾ ಮೋಟಮ್ಮ ಅವರಿಗೆ ಕಳಸದಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರ ಕಾರ್ಯಾರಂಭ ಮಾಡುವ ಗುರುತರ ಜವಾಬ್ದಾರಿ ಇದೆ.

ಮೂಡಿಗೆರೆಯಲ್ಲಿ ಹೈಟೆಕ್ ಆಸ್ಪತ್ರೆ ಸ್ಥಾಪಿಸಿ ಕ್ಷೇತ್ರದ ಸಾವಿರಾರು ಬಡ ಕೂಲಿ ಕಾರ್ಮಿಕರು ದೂರದ ಮಂಗಳೂರು ಅಥವಾ ಹಾಸನದ ಆಸ್ಪತ್ರೆ ನೆಚ್ಚುವುದನ್ನು ತಪ್ಪಿಸುವ ಅಗತ್ಯವೂ ಇದೆ. ಕಳಸದಲ್ಲಿ ನಾಮಕಾವಸ್ಥೆಗೆ ಇರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಿದೆ.ಪೂರ್ಣಕಾಲಿಕ ವೈದ್ಯರ ನೇಮಕ ಮಾಡಿ ತಾಲ್ಲೂಕಿನ ಸಾವಿರಾರು ಬಡ ರೋಗಿಗಳಿಗೆ ಆಸರೆ ಆಗಬೇಕಾಗಿರುವುದು ಕೂಡ ತುರ್ತು ಅಗತ್ಯವಾಗಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಾಲೆಗಳು, ಕಾಲೇಜುಗಳಲ್ಲಿ ಶಿಕ್ಷಕರ, ಉಪನ್ಯಾಸಕರ ಹಾಗೂ ಮೂಲಸೌಲಭ್ಯದ ಕೊರತೆ ಇದೆ. ಈ ಶೈಕ್ಷಣಿಕ ಸಾಲಿಗೆ ಶಿಕ್ಷಕರನ್ನು ನೇಮಿಸುವುದು ಕೂಡ ಕ್ಷೇತ್ರದ ಶೈಕ್ಷಣಿಕ ಸಮಸ್ಯೆಗೆ ಪರಿಹಾರ ಆಗಲಿದೆ.ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ನಯನಾ ಮೋಟಮ್ಮ ಮೂಡಿಗೆರೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ ಸ್ಥಾಪನೆ ಮಾಡುವರೇ ಎಂಬುದು ಈಗಿನ ಕುತೂಹಲವಾಗಿದೆ.ಮಲೆನಾಡಿನ ಪ್ರತಿಭಾವಂತ ಯುವಜನರಿಗೆ ಉನ್ನತ ಹುದ್ದೆ ದಕ್ಕಿಸಿಕೊಳ್ಳಲಲು ಈ ಕೇಂದ್ರ ನೆರವಾಗಬೇಕಿದೆ.

ತಾಲ್ಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ವಸತಿರಹಿತರ ದೊಡ್ಡ ಪಟ್ಟಿಯೇ ಇದೆ.ಕಳೆದ 30 ವರ್ಷಗಳಿಂದ ಈ ವಸತಿರಹಿತರಿಗೆ ನಿವೇಶನ ವಿತರಣೆ ಮಾಡಿಲ್ಲ ಎಂಬುದು ನಿರ್ಲಕ್ಷ್ಯದ ಪರಮಾವಧಿಯೇ ಆಗಿದೆ.ಮುಂದಿನ 5 ವರ್ಷಗಳಲ್ಲಿ ಎಲ್ಲ ಪಂಚಾಯಿತಿ ವ್ಯಾಪ್ತಿಯ ನಿವೇಶನರಹಿತರಿಗೆ ನಿವೇಶನ ಮಂಜೂರು ಮಾಡಿ ಅವರು ಸ್ವಂತ ಸೂರು ಹೊಂದುವ ಕನಸಿಗೆ ನೀರು ಎರೆಯುವ ಜರೂರತ್ತು ಇದೆ.

ಅತಿವೃಷ್ಟಿಯಿಂದ 4 ವರ್ಷಗಳ ಹಿಂದೆ ಮನೆ ಕಳೆದುಕೊಂಡ ಕಳಸ ತಾಲ್ಲೂಕಿನ ಚನ್ನಡಲು ಮತ್ತು ಮೂಡಿಗೆರೆ ತಾಲ್ಲೂಕಿನ ಮಧುಗುಂಡಿ ಪ್ರದೇಶದ ಸಂತ್ರಸ್ತರಿಗೆ ಈವರೆಗೂ ನಿವೇಶನದ ಹಕ್ಕುಪತ್ರ ಸಿಕ್ಕಿಲ್ಲ.ತುರ್ತು ತಡೆಗೋಡೆಗಳು ತಿಂಗಳೊಳಗೆ ಮೇಲೆದ್ದು ಬೇನಾಮಿ ಗುತ್ತಿಗೆದಾರರ, ಅಧಿಕಾರಿಗಳ ಜೇಬು ತುಂಬಿದವು.ಆದರೆ ಕುಸಿದ ಮನೆಗಳ ಮುಂದಿನ ಸಂತ್ರಸ್ತರ ರೋಧನ 4 ವರ್ಷ ಕಳೆದರೂ ನಿಂತಿಲ್ಲ.ಈ ಸಂತ್ರಸ್ತರ ಕಣ್ಣೀರು ಒರೆಸುವ ಮಾನವೀಯ ಕೆಲಸವೂ ನಯನಾ ಅವರಿಂದ ತುರ್ತಾಗಿ ಆಗಬೇಕಿದೆ.

ಕಳೆದ 15 ವರ್ಷಗಳಿಂದ ಪಾಳು ಬಿದ್ದಿರುವ ಕುದುರೆಮುಖ ಪಟ್ಟಣವನ್ನು ಪುನರುಜ್ಜೀವನ ಮಾಡಲು ದೊಡ್ಡ ಮಟ್ಟದ ಪ್ರಭಾವ ಬೀರಬೇಕಿದೆ.ಈ ಪಟ್ಟಣದಲ್ಲಿ ಯಾವುದಾದರೂ ಶೈಕ್ಷಣಿಕ ಕೇಂದ್ರ, ಅರಣ್ಯ ಸಂಶೋಧನಾಲಯ ಅಥವಾ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನಡೆದರೆ ಆಸುಪಾಸಿನ ಜಾಂಬಳೆ, ನೆಲ್ಲಿಬೀಡು, ಸಿಂಗ್ಸಾರ್, ಬಿಳಗಲ್ ಮತ್ತಿರತರ ಪ್ರದೇಶದ ನೂರಾರು ಕುಟುಂಬಗಳಿಗೆ ಉದ್ಯೋಗ, ಆದಾಯ ಸಿಗಲಿದೆ.

ಇನ್ನು ಫಾರಂ ನಂಬರ್ 50, 53 ಮತ್ತು 57ರ ಜೊತೆಗೆ 94ಸಿ ಅಡಿ ಮನೆ ನಿವೇಶನ, ಕೃಷಿ ಭೂಮಿಗೆ ನೂರಾರು ಬಡವರು ಅರ್ಜಿ ಸಲ್ಲಿಸಿ ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಲಂಚ ಕೊಡುವ ಅರ್ಹತೆ ಇಲ್ಲದ ಈ ಅರ್ಹ ಅರ್ಜಿದಾರರಿಗೆ ಯಾರದೇ ಹಂಗು ಇಲ್ಲದಂತೆ ಹಕ್ಕು ಪತ್ರವನ್ನು ನಯನಾ ಮೋಟಮ್ಮ ಕೊಡಿಸಿದರೆ ದೀರ್ಘಕಾಲದವರೆಗೂ ಅವರನ್ನು ಜನರು ನೆನಪಿನಲ್ಲಿ ಇಡುತ್ತಾರೆ.

ಕಾಫೀ, ಅಡಿಕೆ, ಭತ್ತ, ಕಾಳುಮೆಣಸಿನ ಕೃಷಿ ಆರ್ಥಿಕತೆ ನಂಬಿದ ಕ್ಷೇತ್ರದಲ್ಲಿ ಕೃಷಿಕರಿಗೆ ಕಾಲ ಕಾಲಕ್ಕೆ ಬೇಕಾದ ಮಾಹಿತಿ, ಸಲಹೆ ನೀಡಲು ಕೂಡ ಕೃಷಿ ಕಾಲ್ ಸೆಂಟರ್ ಅಗತ್ಯ ಇದೆ.ಪ್ರಾಮಾಣಿಕ ಅಧಿಕಾರಿಗಳ ಸೇವೆಯ ಅಗತ್ಯ ಕೃಷಿ ಕ್ಷೇತ್ರದಲ್ಲಿದೆ.ಹೊಸ ರೋಗಗಳ ನಿವಾರಣೆ, ನಿಯಂತ್ರಣ, ಆಧುನಿಕ ಕೃಷಿ ಪದ್ಧತಿ ಬಗ್ಗೆ ಸಮಗ್ರ ಮಾಹಿತಿ ಕೊರತೆ ಬೆಳೆಗಾರರಲ್ಲಿ ಇದೆ.

ಕ್ಷೇತ್ರದ ಮೂಡಿಗೆರೆ, ಕಳಸ, ಸಂಸೆ, ಕುದುರೆಮುಖ, ಹೊರನಾಡು ಆಸುಪಾಸು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಇದೆ.ಖಾಸಗಿ ವಲಯದಲ್ಲಿ ಹೋಂಸ್ಟೇ, ರೆಸಾರ್ಟ್ ರೂಪದಲ್ಲಿ ಬಹಳ ಪ್ರಯತ್ನಗಳೂ ನಡೆದಿದೆ.ಆದರೆ ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆಯ ಕೊಡುಗೆ ಶೂನ್ಯವೇ ಆಗಿದೆ.ಪ್ರವಾಸೋದ್ಯಮ ನೀತಿಯನ್ನು ಪರಿಷ್ಕರಿಸಿ ಈ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಿದರೆ ನೂರಾರು ಉದ್ಯೋಗಗಳ ಸೃಷ್ಟಿಗೆ ಅನುಕೂಲ ಆಗಲಿದೆ.

ಮೂಡಿಗೆರೆ ಎಂ.ಜಿ.ಎಂ ಗೆ ಶಾಕ್ ಕೊಟ್ಟ ನೂತನ ಶಾಸಕಿ

ಇನ್ನೂ ಮೂಡಿಗೆರೆಯಲ್ಲಿರುವ ಎಂ.ಜಿ.ಎಂ ಆಸ್ಪತ್ರೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗೂ ಅಲ್ಲಿರುವ ಶವಗಾರ ಸತ್ತ ರೀತಿಯಲ್ಲಿದೆ ಇದರ ಮಾಹಿತಿ ತಿಳಿದ ಕೂಡಲೇ ದಿನಾಂಕ 14/05/2023ರ ಭಾನುವಾರದಂದು ದಿಢೀರ್ ಭೇಟಿ ನೀಡಿದ ನೂತನ ಶಾಸಕಿ ನಯನ ಮೋಟಮ್ಮ ಅವರು ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಕೂಡಲೇ ಮಾಡಲು ಆದೇಶಿಸಿ ವಾಹಿನಿಯೊಂದಿಗೆ ಮಾತನಾಡಿದರು.

ಒಟ್ಟಾರೆ, ನಯನಾ ಮೋಟಮ್ಮ ಅವರಿಗೆ ಬೆಟ್ಟದಷ್ಟು ಕೆಲಸ ಮಾಡುವ ಅವಕಾಶ ಕ್ಷೇತ್ರದಲ್ಲಿ ಇದೆ.ಜೊತೆಗೆ ತಮ್ಮದೇ ಸರ್ಕಾರವೂ ಇರುವುರಿಂದ ವಿಶೇಷ ಪ್ಯಾಕೇಜ್ ತಂದು ಈ ಮೀಸಲು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ ಮಾಡುವ ಇಚ್ಛಾಶಕ್ತಿಯೂ ಇದೆ.

ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಯನಾ ಮೋಟಮ್ಮ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಯಶಸ್ವಿ ಆದರೆ ಅದು ಕ್ಷೇತ್ರದ ಜನರ ಯಶಸ್ಸು ಕೂಡ ಹೌದು.ಏಕೆಂದರೆ ಈ ಕ್ಷೇತ್ರದಲ್ಲಿ ಇರುವ ಶೇ.80ರಷ್ಟು ದಲಿತರು, ಮೂಲನಿವಾಸಿಗಳು, ಆದಿವಾಸಿಗಳು, ಕಾರ್ಮಿಕರು ಮತ್ತು ಬಡವರು ಕಳೆದ ಹಲವಾರು ದಶಕದಿಂದ ಸೌಲಭ್ಯಗಳಿಂದ ವಂಚಿತವಾಗಿ ಎರಡನೇ ದರ್ಜೆ ನಾಗರೀಕರಂತೆ ಬದುಕುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.ಅವರ ಉದ್ಧಾರ ಆದರೆ ಕ್ಷೇತ್ರ ಮಾದರಿ ಕ್ಷೇತ್ರ ಆದಂತೆ.ಈ ನಿಟ್ಟಿನಲ್ಲಿ ನಯನಾ ಮೋಟಮ್ಮ ಅವರು ಕಾರ್ಯೋನ್ಮುಖರಾಗಲಿ ಎಂದು ಹಾರೈಸೋಣ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *