ಸಾಹಿತ್ಯ ಪರಿಷತ್ತಿನ ಗೌರವ ಮರುಸ್ಥಾಪನೆಗೆ ಆದ್ಯತೆ…
1 min read
ಸಾಹಿತ್ಯ ಪರಿಷತ್ತಿನ ಗೌರವ ಮರುಸ್ಥಾಪನೆಗೆ ಆದ್ಯತೆ.
ಹಾಗೂ ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳನ್ನು ಪುನರುಜ್ಜಿವನಗೊಳಿಸಿ, ಸಂಸ್ಥೆಯ ಹಿಂದಿನ ಗೌರವ, ಘನತೆ ಮತ್ತು ಸ್ವಾಯತ್ತತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಸಾಹಿತಿ, ಪತ್ರಕರ್ತ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಕಸಾಪ ಸದಸ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಹೇಳಿದರು. ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಚಿಕ್ಕಮಗಳೂರಿನಿಂದ ಬೆಂಬಲ ಕೋರಿ ಬಂದಿರುವುದು ಸಂತಸ ತಂದಿದೆ ಎಂದರು.
ಪರಿಷತ್ತಿನ ಸಭಾಂಗಣಗಳು ಹಾಗೂ ಮೂಲಸೌಕರ್ಯಗಳು ಸಾಹಿತಿಗಳು, ಬರಹಗಾರರು, ಸಂಘ-ಸಂಸ್ಥೆಗಳು ಮತ್ತು ಸಾಮಾನ್ಯ ಕನ್ನಡಾಭಿಮಾನಿಗಳಿಗೆ ಮುಕ್ತವಾಗಿ ಲಭ್ಯವಾಗಬೇಕು. ಸಭಾಂಗಣಗಳ ಬಾಡಿಗೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಾಹಿತ್ಯಾಸಕ್ತರಿಗೆ ಹೊರೆಯಾಗದ ವ್ಯವಸ್ಥೆ ಕಲ್ಪಿಸಬೇಕು. ಕನ್ನಡದ ಚಟುವಟಿಕೆಗಳಿಗೆ ಪರಿಷತ್ತಿನ ಬಾಗಿಲು ಸದಾ ತೆರೆದಿರಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ. ರಮೇಗೌಡ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಇತಿಹಾಸದ ಘನತೆ, ಗೌರವ, ಪಾವಿತ್ರ್ಯ ಹಾಗೂ ಸಾಹಿತ್ಯಕ ಚಟುವಟಿಕೆಗಳನ್ನು ಪುನರುಜ್ಜಿವನಗೊಳಿಸುವ ಉದ್ದೇಶದಿಂದ ಈ ಬಾರಿಯ ಚುನಾವಣೆಯಲ್ಲಿ ಸಾಹಿತಿ, ಪತ್ರಕರ್ತ ಹಾಗೂ ಹೋರಾಟಗಾರ ಜಾಣಗೆರೆ ವೆಂಕಟ-ರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಹಾಗೂ ಪತ್ರಕರ್ತ ಆರ್.ಜೆ. ನಾಗರಾಜ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಕಳೆದ ಕೆಲವು ವರ್ಷಗಳಿಂದ ಆವರಿಸಿದ್ದ ಕರಾಳ ಛಾಯೆಯನ್ನು ದೂರ ಮಾಡಿ, ಸ್ಥಗಿತಗೊಂಡಿದ್ದ ಸಾಹಿತ್ಯಕ ಚಟುವಟಿಕೆಗಳಿಗೆ ಮತ್ತೆ ಜೀವ ತುಂಬುವ ಉದ್ದೇಶದಿಂದ ಹೋರಾಟ ನಡೆಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ಆರ್.ಜೆ. ನಾಗರಾಜ್, ಚಿಕ್ಕಮಗಳೂರು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸಚಿನ್ ಸಿಂಗರ, ಕನ್ನಡ ಸೇನೆ ಅಧ್ಯಕ್ಷ ಧರ್ಮರಾಜ ಕಡಗ, ಕಸಾಪ ಸ್ಥಳೀಯ ಮುಖಂಡ ಲಕ್ಷ್ಮೀ ಕಾಂತ್ ಸೇ-ರಿದಂತೆ ಹಲವರು ಉಪಸಿತರಿದ್ದರು.

