**ಮಲೆನಾಡಿನ ಆಶಾಕಿರಣ ಯುವ ಪ್ರತಿಬೆ.ಬರಹ ಚತುರ ಹೆಸಗಲ್ ವೆಂಕಟೇಶ್**#avintvcom
1 min read
**ಮಲೆನಾಡಿನ ಆಶಾಕಿರಣ
ಯುವ ಪ್ರತಿಬೆ.ಬರಹ ಚತುರ ಹೆಸಗಲ್ ವೆಂಕಟೇಶ್**
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಹೆಸಗಲ್.
ಸೇವೆಯೊಂದಿಗೆ ಸಾಹಿತ್ಯದ ಕನಸ ಹೊತ್ತಿರುವ ಹೆಸಗಲ್ ಪ್ರತಿಭೆ ವೆಂಕಟೇಶ್…
ಕಲ್ಪನೆಯ ಸಾಂಗತ್ಯದಿ ಕಾಗದದ ಸಮೀಪದಿ
ಕರಗುವ ಕಣ್ಣೀರ ಹನಿಯ ಕುರಿತು ಕವಿತೆ ಗೀಚುವ ಗೀಳು,ರೆಪ್ಪೆಯ ತುದಿಗೆ ಭಾರವಾಗದಿದ್ದರೂ,
ಭಾವಾಂತರಂಗದಲ್ಲಿ ಸುಡುವ ಬೆಚ್ಚನೆಯ ಸಣ್ಣಬಿಂದು.
ಬರಿದಾದ ಬೇಗೆಯು ಬೇಯಿಸುತ್ತಿದೆ ನನ್ನನು,
ಕಣ್ಣಾಲಿಯಲಿ ಮೆಲ್ಲಗೆ ಜಾರುತಿದೆ ಕಂಬನಿಯ ಜಲಪಾತ!!
ಈ ಅಮೋಘ ಕಲ್ಪನೆಯ ಸಾಲುಗಳು ಯುವ ಬರಹಗಾರರು, ಸಾಧಕರು ಹಾಗೂ ಸಮಾಜ ಸೇವಕರಾಗಿರುವ ಹೆಸಗಲ್ ವೆಂಕಟೇಶ್ ಎಂಬ ಪ್ರತಿಭಾನ್ವಿತ ಕವಿಯ ಲೇಖನಿಯಿಂದ ಮೊಳಕೆಯೊಡೆದವು.ಭಾವಗಳ ಬೆನ್ನೇರಿ ಭಾಷೆಯ ಮೆರಗನ್ನು ಹೆಚ್ಚಿಸುವ ಇವರ ಬರಹಗಳು ವೈಶಿಷ್ಟ್ಯಪೂರ್ಣವಾಗಿವೆ.
ಕಾಫಿನಾಡು ಹಾಗೂ ಹಸಿರಿಗೆ ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ, ಹೆಸಗಲ್ ಎಂಬ ಪುಟ್ಟ ಗ್ರಾಮದಲ್ಲಿ ೦೬/೦೫/೧೯೯೨ ರಲ್ಲಿ ರುದ್ರಯ್ಯ ಹಾಗೂ ಸುಶೀಲ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಹುಟ್ಟು ಪ್ರತಿಭಾವಂತರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೆಸಗಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ಬಣಕಲ್ ಪ್ರೌಢಶಾಲೆ (೮೬ ವರ್ಷಗಳ ಇತಿಹಾಸವಿರುವ ಶಾಲೆ) ಯಲ್ಲಿ ಪೂರೈಸಿದ್ದು ಮೊದಲ ಬಾರಿಗೆ ಚಿನ್ನದ ಪದಕವನ್ನು ಪಡೆದ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಡೆದು ಸನ್ಮಾನಿತರಾಗಿರುತ್ತಾರೆ.
ಪಿ.ಯು ಶಿಕ್ಷಣವನ್ನು ಆಶ್ರಯ ಪದವಿ ಪೂರ್ವ ಕಾಲೇಜು ಮೂಡಿಗೆರೆ,ಬಿ.ಎ. ಪದವಿಯನ್ನು ಮಹಾರಾಜ ಕಾಲೇಜು,ಮೈಸೂರು ಹಾಗೂ ಎಂ.ಎ ಸ್ನಾತಕೋತ್ತರ ಪದವಿ(ಸಾರ್ವಜನಿಕ ಆಡಳಿತ)ಯನ್ನು ಚಿನ್ನದ ಪದಕದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಿಂದ ಪಡೆದಿರುತ್ತಾರೆ.
ಜನಪರ ಕಾಳಜಿ ಹಾಗೂ ಸಮಾಜಮುಖಿಯ ಚಿಂತನೆಯನ್ನೊಳಗೊಂಡ ಇವರ ಅನೇಕ ಕವಿತೆಗಳು ರಾಗಸಂಯೋಜನೆಗೊಂಡು ಅತ್ಯದ್ಭುತ ಹಾಡುಗಳಾಗಿ ಮೂಡಿಬಂದಿವೆ.ಅವುಗಳಲ್ಲಿ ಕೊರೋನಾ ಜಾಗೃತಿ ಹಾಗೂ ಬುದ್ಧನ ಕುರಿತ ಗೀತೆಗಳು ಬಹಳ ಪ್ರಮುಖವಾದವು.
ಅದರ ತುಣುಕು ಇಂತಿದೆ.
ಮರೆಯದಿರಿ ಮಣ್ಣಾದವರ
ಮನೆಯಲ್ಲೇ ಇರಿ ಮಣ್ಣಾಗುವಿರಾ?
ಕಣ್ಣಿಗೆ ಕಾಣದ ಜೀವಕಣ ತೆಗೆಯಿತು ಎಲ್ಲರ ಪ್ರಾಣ
ತೆಪ್ಪಗೆ ಇದ್ದರೆ ನಮ್ಮಜನ ಉಳಿಯದೆ ಕಾಂಚಾಣ
ಉಳಿಯಲಿ ಎಲ್ಲರ ಪ್ರಾಣ ಉಳಿಯಲಿ ಎಲ್ಲರ ತ್ರಾಣ
ಕೊಲ್ಲುತ್ತಿದೆ ವೈರಾಣು ಕಣ ಅನ್ನ ಉಣ್ಣುವ ಜನರನ್ನ
ಎಲ್ಲಂದರಲ್ಲಿ ಸಂದಿಗೊಂದಿಯಲ್ಲಿ
ಗಲ್ಲಿ ಗಲ್ಲಿಯಲ್ಲಿ ಕ್ಷಣ ಕ್ಷಣ ಪ್ರತಿಕ್ಷಣ
ಜೇಬಲ್ಲಿ ಇದ್ದರೂ ಕಾಂಚಾಣ
ಕೊರೋನ-ಕೊರೋನ -ಕೊರೋನ ಇದು ಒಂದೆ ಕಾರಣ
ಇರೋಣ ಇರೋಣ ಮನೆ ಮಕ್ಕಳು ಮಡದಿಯೊಂದಿಗೆ ಸದ್ಯದ ಜೀವನ!!
ಇವರ ಸಾಮಾಜಿಕ ಸೇವೆ :
ಸತತವಾಗಿ 25 ಬಾರಿ ರಕ್ತದಾನವನ್ನು ಮಾಡಿರುವ ಇವರು ಮ್ಯಾನ್ ಕೈಂಡ್ ಕ್ಲಬ್ ಬಣಕಲ್ ಸಂಸ್ಥೆಯ ಸದಸ್ಯ ಮತ್ತು ಸಲಹೆಗಾರನಾಗಿ ಈ ಸಮಾಜಕ್ಕೆ ಬಡವರು ರೋಗಿಗಳು ಅನಾಥರಿಗೆ ನೆರವಾಗಲು ಸೇವೆಯನ್ನು ಸಲ್ಲಿಸುತ್ತಿರುತ್ತಾರೆ.
ಪೀಸ್ ಆಂಡ್ ಅವೆರ್ನೆಸ್ ಟ್ರಸ್ಟ್ ಕರ್ನಾಟಕ ಇದರ ಸದಸ್ಯನಾಗಿ ಹಲವಾರು ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡಿದ್ದು ಪ್ರಸ್ತುತ ಸಕ್ರಿಯ ಸದಸ್ಯರಾಗಿ ಸಲಹೆಗಾರರಾಗಿ ಈ ಸಮಾಜದ ಒಳಿತಿಗಾಗಿ ಜನ ಜಾಗೃತಿಗಾಗಿ ಶ್ರಮಿಸುತ್ತಿದ್ದಾರೆ.
ಸುವಿಚಾರ ಸಾಹಿತ್ಯವೇದಿಕೆ ಕರ್ನಾಟಕ ಇದರ ಅಧ್ಯಕ್ಷರಾಗಿ,ಮಿತ್ರ ಜಾನಪದ ಕಲಾ ಸಂಘದ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ,ಮೂಡಿಗೆರೆ ಇದರ ಸದಸ್ಯರಾಗಿ ಕನ್ನಡ ಭಾಷೆ ನಾಡು ನುಡಿ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸಾಹಿತ್ಯ ಕೃಷಿಯ ಮೂಲಕ ಸೇವೆ ಸಲ್ಲಿಸಲು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ತಾವು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಅಮೃತ ಮಹೋತ್ಸವ ವನ್ನು ಆಚರಿಕೊಂಡ ಸಂದರ್ಭದಲ್ಲಿ “ಅಮೃತಧಾರೆ “ಎಂಬ ವಿಶೇಷ ಸ್ಮರಣ ಸಂಚಿಕೆಯ ಸಂಪಾದಕನಾಗಿ ಹಾಗೂ ಪ್ರಸ್ತುತ ವಿ.ಎಂ.ಪಿ.ಎಂ. ಟ್ರಸ್ಟ್ ಹೊರತರುತ್ತಿರುವ “ಸ್ಮರಣೆಧಾರೆ “ಎಂಬ ಶೀರ್ಷಿಕೆಯ ವಿಶೇಷ ಸ್ಮರಣ ಸಂಚಿಕೆಯ ಸಂಪಾದಕನಾಗಿ ಕಾರ್ಯನಿರ್ವಹಿಸಿರುತ್ತಾರೆ.
ಮೂಡಿಗೆರೆ ತಾಲ್ಲೂಕಿನ ಅವಿನ್ ಟಿವಿಯಲ್ಲಿ ಪ್ರಸಾರವಾಗುವ “ಸಾಹಿತ್ಯ ಚಿಗುರು”ಎಂಬ ಶೀರ್ಷಿಕೆಯ ವಿನೂತನ ಕಾರ್ಯಕ್ರಮದಲ್ಲಿ ಇವರು ಬರೆದ ಪ್ರಕೃತಿ, ಅಂಬೇಡ್ಕರ್ ಬುದ್ದ, ರಕ್ತದ ಮಹತ್ವ, ಮಲೆನಾಡು, ನಾಲ್ವಡಿ ಕೃಷ್ಣ ರಾಜ ಒಡೆಯರ್, ಕೊರೋನ ವಿವಿಧ ಭಾವ ಗೀತೆಗಳು ಪ್ರೇಮ ಗೀತೆಗಳು, ತಾಯಿಯ ಕುರಿತ ಗೀತೆಗಳು, ಕಾಫಿ ದೊರೆ ವಿ.ಜಿ.ಸಿದ್ದಾರ್ಥ್ ಹೆಗ್ಗಡೆರವರ ಕುರಿತು ಮೂಡಿಗೆರೆಯ ಜೀವನದಿ ಮತ್ತು ಕಾವೇರಿಯ ಉಪನದಿ ಹೇಮಾವತಿ ಕುರಿತು ವಿಭಿನ್ನವಾದ ಹಾಡುಗಳನ್ನು ಹಾಗೆಯೇ ನಮ್ಮನ್ನು ನಿಮ್ಮಂತೆ ಜೀವಿಸಲು ಬಿಡಿ ಎಂಬ ಪ್ರಕೃತಿಯ ಬಗೆಗಿನ ಲೇಖನ ಬರೆದು ಜನ ಜಾಗೃತಿ,ಪರಿಸರ ಕಾಳಜಿಯ ಕುರಿತು ತಿಳಿಹೇಳುವ ಬರಹಗಾರರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುತ್ತಾರೆ.
ಕವಿಗಳು ಮೈಸೂರು ಸಾಹಿತ್ಯ ದೀವಿಗೆ ಮತ್ತು ಕಥಾಕಮ್ಮಟ ಕವಿಗಳ ಗುಂಪಿನ ಯುವ ಕವಿಯಾಗಿದ್ದಾರೆ.
ಬಿವಿಎಸ್ ಹೊರತರಲಿರುವ ಬುದ್ಧನ ಕುರಿತಾದ ನೂತನ ಧ್ವನಿ ಸುರಳಿಯಲ್ಲಿ “ಪಂಚಶೀಲ”ತತ್ವದ ಕುರಿತು ಒಂದು ಗೀತೆಯನ್ನು ಬರೆದಿದ್ದಾರೆ.
ಸೋಸಲೆ ಗಂಗಾಧರ್ ಹಾಗೂ ಮಗ್ಗಲಮಕ್ಕಿ ಗಣೇಶ್ (ಅಧ್ಯಕ್ಷರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್) ಇವರ ಮಾರ್ಗದರ್ಶನದಲ್ಲಿ ಸಾಹಿತ್ಯ ಕೃಷಿ ಸಾಗಿದ್ದು, ಮಲೆನಾಡ ಜಾನಪದ ಕೋಗಿಲೆ ಬಕ್ಕಿ ಮಂಜುನಾಥ್ ರವರು (ಅಧ್ಯಕ್ಷರು ತಾಲ್ಲೂಕು ಕನ್ನಡ ಜಾನಪದ ಪರಿಷತ್ ಮೂಡಿಗೆರೆ) ಇವರ ಹಾಡುಗಳಿಗೆ ಅದ್ಭುತವಾಗಿ ರಾಗ ಸಂಯೋಜಿಸಿರುತ್ತಾರೆ.
ಪ್ರಸ್ತುತ ಇವರು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದು ಎಲೆಮರೆಕಾಯಂತಿರುವ ಈ ಯುವಪ್ರತಿಭೆಯ ಬರಹಗಳು ಸಮಾಜದ ಮುಖ್ಯ ವಾಹಿನಿಗೆ ತಲುಪವಂತಾಗಲಿ ಶ್ರೇಷ್ಠ ಪ್ರಶಸ್ತಿಗಳು ಇವರನ್ನು ಅರಸಿ ಬರಲೆಂಬುದೇ ನಮ್ಮ ಹೆಬ್ಬಯಕೆ.
ಬರಹ ಕೃಪೆ.
ಶ್ರಿಮತಿ.ರಂಜಿತಸೂರ್ಯ. ಪಿ.ಆರ್
ಮೈಸೂರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/
http://nisargacare.com/navachaithanya-old-age-home/