*ಮಣ್ಣಾಟ… ನೀರಾಟ* ಈ ವರ್ಷದ ಮಳೆಗಾಲದ ಆರಂಭದಲ್ಲಿಯೇ ತನ್ನ ನಿಜಬಣ್ಣ #avintvcom
1 min read
*ಮಣ್ಣಾಟ… ನೀರಾಟ*
ನಾನು ಮತ್ತು ನನ್ನ ಸ್ನೇಹಿತ ಹೀಗೇ ಸುಮ್ಮನೆ ಮಳೆಗಾಲದ ಒಂದು ತಿರುಗಾಟ ಮಾಡುತ್ತಿದ್ದೆವು. ಅಲ್ಲೊಂದು ಕಡೆ ಹೋದವರ್ಷದ ಮಳೆಗಾಲದಲ್ಲಿ ಕುಸಿದುಹೋಗಿದ್ದ ಮೋರಿಯನ್ನು ರಿಪೇರಿ ಮಾಡಿದ ಜಾಗವೊಂದಿತ್ತು. ಅಭಿಯಂತರರ ಅಪ್ರತಿಮ ಬುದ್ಧಿವಂತಿಕೆಯಿಂದ ಮಾಡಿದ ಕೆಲಸವಾದ ಕಾರಣ ಅದು ಈ ವರ್ಷದ ಮಳೆಗಾಲದ ಆರಂಭದಲ್ಲಿಯೇ ತನ್ನ ನಿಜಬಣ್ಣ ತೋರಿಸಿ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಪುಣ್ಯಕ್ಕೆ ರಸ್ತೆಯ ಅಡಿಯಲ್ಲಿ ಹಳೆಯ ಕಾಲದ ಪ್ರಾಮಾಣಿಕ ದಡ್ಡರು ಕಲ್ಲಿನಲ್ಲಿ ಕಟ್ಟಿದ ಮೋರಿ ಗಟ್ಟಿಯಾಗಿರುವುದರಿಂದ ರಸ್ತೆ ಕುಸಿಯದೆ ಉಳಿದಿತ್ತು. ಆ ಮೋರಿಯಲ್ಲಿ ನೀರು ರಭಸವಾಗಿ ಹರಿಯುತ್ತ ಹೊರಬಂದು ತಗ್ಗಿನ ಕಡೆಗೆ ಓಡಿ ಸಮೀಪದಲ್ಲಿಯೇ ಹರಿಯುವ ಭದ್ರಾನದಿಗೆ ಸೇರುತ್ತಿತ್ತು. ಅಲ್ಲಿ ಒಂದು ಜೆಸಿಬಿ ಮತ್ತು ಒಂದು ಟ್ರ್ಯಾಕ್ಟರ್ ಭಾರೀ ಗಡಿಬಿಡಿಯಲ್ಲಿ ತಿರುಗಾಡುತ್ತಿದ್ದವು. ಜೆಸಿಬಿ ಪಕ್ಕದಲ್ಲಿಯೇ ಇದ್ದ ತೋಟದವರೊಬ್ಬರ ಮಣ್ಣಿನ ದಿಬ್ಬವನ್ನು ಬಗೆದು ಟ್ರ್ಯಾಕ್ಟರಿಗೆ ತುಂಬಿದರೆ ಅದು ಮಣ್ಣನ್ನು ತಂದು ನೀರು ಹರಿಯುತ್ತಿದ್ದ ಕಂದಕಕ್ಕೆ ಸುರಿಯುತ್ತಿತ್ತು. ಮತ್ತೊಂದು ಲೋಡು ಬರುವಷ್ಟರಲ್ಲಿ ಹಾಕಿದ ಮಣ್ಣೆಲ್ಲ ನೀರಿನಲ್ಲಿ ತೊಳೆದು ಹೊಳೆಗೆ ಹೋಗಿ ಸೇರುತ್ತಿತ್ತು. ನೀರು ಗೆಲ್ಲುವುದೋ ಮಣ್ಣು ಗೆಲ್ಲುವುದೋ? ಎಂಬ ಈ ಆಟವನ್ನು ನಾವು ಬಹಳ ಹೊತ್ತು ನೋಡುತ್ತಾ ನಿಂತೆವು. ಯಾಕೋ ನೀರಿನ ಕೈಯೇ ಮೇಲಾಗುತ್ತಿತ್ತು. ಕೊನೆಗೆ ಆ ಡ್ರೈವರುಗಳ ಹತ್ತಿರ ಹೋಗಿ ‘ಈ ಆಟ ತುಂಬಾ ಮಜವಾಗಿದೆ ಮಾರ್ರೆ. ನಾವು ಊಟಕ್ಕೆ ಹೋಗಿ ಬರ್ತೀವಿ. ನೀವು ಎಷ್ಟು ಹೊತ್ತಿನವರೆಗೂ ಆಡ್ತೀರಿ?’ ಎಂದು ಕೇಳಿದೆವು. ಅದಕ್ಕೆ ಅವರು ‘ಇದು ಆಟ ಅಲ್ಲ ಸಾರ್, ಮೋರಿ ರಿಪೇರಿ ಕೆಲಸ’ ಎಂದರು. ನಮಗೆ ಆಶ್ಚರ್ಯವಾಯಿತು. ಅಲ್ಲ, ಇಳಿಜಾರಿನಲ್ಲಿ ಧುಮ್ಮಿಕ್ಕುವ ನೀರಿಗೆ ಕಾಕದಾಳಿ ಮಣ್ಣನ್ನು ಸುರಿಯುವುದೂ ಹೊಳೆಗೆ ಹುಣಸೆಹಣ್ಣು ಕದರುವುದೂ ಒಂದೇ ಅಲ್ಲವೇ! ಅವರು ಸುಮ್ಮನೆ ತಮಾಷೆ ಮಾಡುತ್ತಿರಬಹುದೆಂದುಕೊಂಡು ಮನೆಗೆ ಹೋದೆವು. ಸಂಜೆ ಮತ್ತೆ ಹೋಗಿ ನೋಡಿದರೆ ಅಲ್ಲಿದ್ದ ಮಣ್ಣಿನ ದಿಬ್ಬವೆಲ್ಲ ಖಾಲಿಯಾಗಿ ಮಟ್ಟವಾಗಿತ್ತು. ಕಂದಕದೊಳಗೆ ನೀರು ಮಾತ್ರ ಅದೇ ರಭಸದಲ್ಲಿ ಹರಿಯುತ್ತಿತ್ತು. ಆಟಗಾರರು ‘ಟೈಂ ಪ್ಲೀಸ್’ ಹೇಳಿ ನಾಪತ್ತೆಯಾಗಿದ್ದರು. ಪಂದ್ಯದಲ್ಲಿ ಸದ್ಯಕ್ಕೆ ನೀರು ಮುನ್ನಡೆ ಸಾಧಿಸಿದ್ದರೂ ಆಟವಿನ್ನೂ ಮುಗಿದಿಲ್ಲ… ಮಣ್ಣು ಯಾವಾಗ ಗೆಲ್ಲುತ್ತದೋ ಕಾದು ನೋಡಬೇಕು. ನಮ್ಮ ಮಲೆನಾಡಿನಲ್ಲಿ ಇಂಥ ಆಟ ಹಲವಾರು ಕಡೆ ನಡೆಯುತ್ತದೆ. ಇದನ್ನು ಆಡುವುದು ದುಬಾರಿಯೆನಿಸಿದರೂ ನೋಡಿ ಆನಂದಿಸಲು ಅಡ್ಡಿಯೇನಿಲ್ಲ.
ಆಟಕ್ಕೆ ಬೇಕಾಗುವ ಸ್ಥಳ ಹಾಗೂ ಸಾಮಗ್ರಿಗಳು:
1. ಮಳೆಗೆ ಜರಿದು ಹೋಗಿರುವ ಮೋರಿ
2. ಒಂದು ಜೆಸಿಬಿ (ಹೆಚ್ಚಿಗೆಯಿದ್ದರೆ ಅಡ್ಡಿಯಿಲ್ಲ)
3. ಒಂದು ಟ್ರ್ಯಾಕ್ಟರ್ (ಹೆಚ್ಚಿಗೆಯಿದ್ದರೆ ಅಡ್ಡಿಯಿಲ್ಲ)
4. ಬುದಬುದನೆ ತೊಳೆದುಹೋಗುವ ಕಾಕದಾಳಿ ಮಣ್ಣು (ಎಷ್ಟಿದ್ದರೂ ಬೇಕು)
5. ಸ್ವಂತ ಬುದ್ಧಿ ಇಲ್ಲದ ಡ್ರೈವರ್ ಮತ್ತು ಕಂಟ್ರ್ಯಾಕ್ಟರುಗಳು.
6. ಅಪ್ರತಿಮ ಬುದ್ಧಿವಂತಿಕೆಯಿಂದ ತಯಾರಿಸಿದ ಅಭಿಯಂತರರ ಯೋಜನೆ.
7. ಸ್ಥಳದಲ್ಲಿ ಹಾಜರಿದ್ದು ತಮ್ಮ ಅಮೂಲ್ಯ ಹಾಗೂ ಅನಗತ್ಯ ಸಲಹೆಗಳನ್ನು ನೀಡುತ್ತಲೇ ಇರುವ ಬುದ್ಧಿವಂತ ಸ್ಥಳೀಯರು.
8. ಇಂಧನದ ಬಿಲ್ ಪಾವತಿಸಲು ಸರ್ಕಾರದ ಅಂದರೆ ಜನರ ಯಥೇಚ್ಛ ದುಡ್ಡು.
ಇಷ್ಟಿದ್ದರೆ ಒಂದೇ ಸ್ಥಳದಲ್ಲಿ ಈ ಆಟವನ್ನು ಪ್ರತಿವರ್ಷವೂ ನಿರಾತಂಕವಾಗಿ ಆಡಬಹುದು.
ಚಿತ್ರ: ಈ ಆಟ ಆಡಲು ಪ್ರಶಸ್ತವಾದ ಸ್ಥಳವೊಂದರ ಸಾಂದರ್ಭಿಕ ಚಿತ್ರ ಎಂದುಕೊಳ್ಳಬಹುದು.
ಬರಹ ಕೃಪೆ.
-ಪ್ರೇಮ್ ಸಾಗರ್ ಕಾರಕ್ಕಿ
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.