AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ದಲಿತರ ಹೃದಯ, ಬಡವರ ಆಶಯ ಡಾ.ಸಿದ್ದಲಿಂಗಯ್ಯ* #avintvcom

1 min read
Featured Video Play Icon

*ದಲಿತರ ಹೃದಯ, ಬಡವರ ಆಶಯ ಡಾ.ಸಿದ್ದಲಿಂಗಯ್ಯ*
*****
(ಬರಹ ಕೃಪೆ.
ಡಾ.ಸಂಪತ್ ಬೆಟ್ಟಗೆರೆ.
ಸಾಹಿತಿಗಳು. ಮೂಡಿಗೆರೆ)
*****
ಕನ್ನಡ ಸಾಹಿತ್ಯದಲ್ಲಿ ತಮ್ಮ ವಿಭಿನ್ನ ಶೈಲಿಯ ಕವನಗಳು, ‘ಊರುಕೇರಿ’ ಎನ್ನುವ ಆತ್ಮಕಥನ, ‘ಗ್ರಾಮದೇವತೆಗಳು’ ಎಂಬ ಸಂಶೋಧನಾತ್ಮಕ ಕೃತಿಯ ಮೂಲಕ ಜನಪರವಾದ ನವ ಜಾನಪದೀಯವಾದ ಸಾಹಿತ್ಯವನ್ನು ಸೃಜಿಸಿದವರು ಡಾ.ಸಿದ್ದಲಿಂಗಯ್ಯನವರು. ಕನ್ನಡದ ವಿಚಾರಪೂರ್ಣ ವಿಮರ್ಶಕರೆನಿಸಿದ್ದ ಡಿ.ಆರ್.ನಾಗರಾಜ್ ಅವರಿಂದ “ಬಡವರ ನಗುವಿನ ಶಕ್ತಿ” ಎನಿಸಿಕೊಂಡಿದ್ದ ಪರಮಾಪ್ತ ಬರಹಗಾರ ಕೂಡ ನಮ್ಮ ಪ್ರೀತಿಯ ಡಾ.ಸಿದ್ದಲಿಂಗಯ್ಯ ಎಂಬುವುದರಲ್ಲಿ ಎರಡುಮಾತಿಲ್ಲ.

ಕನ್ನಡ ದಲಿತ ಸಂವೇದನೆಯ ಬರಹದಲ್ಲಿ ಗದ್ಯಕ್ಕೆ ದೇವನೂರು ಮಹಾದೇವ ಅವರು ಹೇಗೋ, ಹಾಗೆ ಪದ್ಯಕ್ಕೆ ಸಿದ್ದಲಿಂಗಯ್ಯ ಎಂಬ ಭಾವದೃಷ್ಟಿಗೆ ಸಾಹಿತ್ಯ ಸೃಷ್ಟಿಯನ್ನು ನೀಡಿದವರು ಡಾ.ಸಿದ್ದಲಿಂಗಯ್ಯ. ಅದೇ ರೀತಿ ಅವರ ‘ಊರುಕೇರಿ’ ಮತ್ತು ‘ಗ್ರಾಮದೇವತೆಗಳು’, ‘ಅವತಾರಗಳು’ ಕೃತಿಗಳ ಜೊತೆಗೆ ‘ಏಕಲವ್ಯ’ ‘ಪಂಚಮ’ ‘ನೆಲಸಮ’ ನಾಟಕಗಳ ಒಳಗಿನ ಕಾವ್ಯಧ್ವನಿ ಹೊಸ ಬಗೆಯ ಓದಾಗಿ ಕನ್ನಡದ ಮನಸುಗಳನ್ನು ಸೆಳೆದದ್ದೂ ಸುಳ್ಳಲ್ಲ.

ಕಥನ ಶೈಲಿಯಲ್ಲಿ ಉತ್ತಮ ಮಾತುಗಾರರೂ ಆಗಿದ್ದ ಡಾ.ಸಿದ್ದಲಿಂಗಯ್ಯನವರು ಸಾಹಿತ್ಯಗೋಷ್ಠಿ, ಸಮ್ಮೇಳನ, ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಜೀವಮಾನದ ನೋವಿನ ಸಂಗತಿ, ವಿಚಾರಗಳನ್ನು ವಿದ್ಯಾರ್ಥಿಗಳು ಹಾಗೂ ಸಭಿಕರ ನಡುವೆ ಹಾಸ್ಯದ ಧಾಟಿಯಲ್ಲಿ ಅಭಿವ್ಯಕ್ತ ಮಾಡುತ್ತಿದ್ದರು. ಆಗ ಅಲ್ಲಿನ ಎಲ್ಲಾ ಕಣ್ಣುಗಳು ತೇವಗೊಳ್ಳುತ್ತಿದ್ದವು! ಅದು ನಗುವಿನ ಉನ್ಮಾದದ ಆನಂದ ಭಾಷ್ಪವಾ? ಅಥವಾ ತಮ್ಮ ಅಂತರಾಳದ ಒಳ ಅರಿವ ನೋವಿನಲ್ಲಿ ತಾಳೆಯಾಗಿ ಪ್ರಕಟಗೊಂಡ ಕಣ್ಣೀರೋ? ಅದಕ್ಕೆ ಅವರವರ ಭಾವವೇ ಉತ್ತರದಾಯಿ ಎಂಬಂತೆ ಆ ಸಭೆ ಮತ್ತೊಮ್ಮೆ ಮೂಕ ಸ್ತಬ್ಧತೆಯಿಂದ ಸಿದ್ದಲಿಂಗಯ್ಯನವರ ಮುಂದಿನ ಹೃದಯಾಪ್ತ ಮಾತುಗಳಿಗೆ ಕಿವಿಯಾಗುತಿತ್ತು. ಅಂತಹ ಒಬ್ಬ ಕರ್ನಾಟಕದ ಸಾಕ್ಷಿಪ್ರಜ್ಞೆ ಮತ್ತು ಸಾಂಸ್ಕೃತಿಕ ಮುಖಾಮುಖಿಯ ರಾಯಬಾರಿ ನಮ್ಮ ಕನ್ನಡದ ಕವಿ ಸಿದ್ದಲಿಂಗಯ್ಯ ಎಂದರೆ ತಪ್ಪಾಗಲಾರದು.

“ಆ ಬೆಟ್ಟದಲ್ಲಿ.. ಬೆಳದಿಂಗಳಲ್ಲಿ..ಸುಳಿದಾಡಬೇಡ ಗೆಳತಿ.. ಚೆಲುವಾದ ನಿನ್ನ.. ಮಲ್ಲಿಗೆಯ ಮೈಯ.. ಸುಟ್ಟಾವೋ ಬೆಳ್ಳಿ ಕಿರಣ!” ಹಾಗೆಯೇ “ಗೆಳತಿ.. ಓ ಗೆಳತಿ.. ಅಪ್ಪಿಕೋ.. ನನ್ನ ಅಪ್ಪಿಕೋ.. ಬಾಳೆಲ್ಲಾ ನನ್ನ ತಬ್ಬಿಕೋ!” ಎನ್ನುವ ಅವರ ಜನಪ್ರಿಯ ಗೀತೆಗಳು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಹಳ ಜನಪ್ರಿಯವಾಗಿರುವ ಚಲನಚಿತ್ರ ಗೀತೆಗಳು ಎನಿಸಿವೆ. ಚಲನಚಿತ್ರದ ಸಾಂದರ್ಭಿಕತೆಯ ಹಿನ್ನೆಲೆಯಲ್ಲಿ ಇವುಗಳನ್ನು ನೋಡಿದಾಗ ಹತ್ತರಲ್ಲಿ ಒಂದು ಎಂಬ ಲೆಕ್ಕದಲ್ಲಿ ಸರಳವಾಗಿ ಅರ್ಥೈಸಲ್ಪಡುತ್ತವೆ. ಆದರೆ ಇದನ್ನೇ ದಲಿತ ಸಂವೇದನೆಯ ಹಿನ್ನೆಲೆಯಲ್ಲಿ ಪರಿಭಾವಿಸಿದಾಗ ಬೇರೊಂದು ಆಯಾಮದಲ್ಲಿ ಹೃದ್ಯ ಸಾಲುಗಳು ಎನಿಸುತ್ತವೆ. ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಎಂದರೆ ಶ್ರೀಮಂತರ ಅಥವಾ ಮೇಲ್ವರ್ಗದವರ ಅರಮನೆಯ ಮಾಯಾಜಾಲದ ಪ್ರಖರ ಕಿರಣಗಳ ಬೆಳಕಿನಲ್ಲಿ ಬಡವರ ಅಥವಾ ದಲಿತರ ಹೆಣ್ಣು ಮಕ್ಕಳು ಸಿಕ್ಕಿ ಹಾಕಿಕೊಂಡು ನರಳುವಂತಾಗಬಾರದು ಎಂಬ ಎದೆಯಾಸೆ ಕವಿಯದು. ಅದೇ ರೀತಿಯಲ್ಲಿ “ಅಪ್ಪಿಕೋ ನನ್ನ ಬಾಳೆಲ್ಲಾ ತಬ್ಬಿಕೋ!” ಎಂದು ಗೆಳತಿಯನ್ನು ಕೋರುವುದು ಉನ್ನತ ವರ್ಗದ ಅಥವಾ ಶ್ರೀಮಂತ ವರ್ಗದ ಗೆಳತಿ ಬಡವ ಅಥವಾ ದಲಿತನನ್ನು ಎಲ್ಲಾ ಹಮ್ಮುಬಿಮ್ಮುಗಳನ್ನು ಒತ್ತಟ್ಟಿಗಿಟ್ಟು, ಅಸ್ಪೃಶ್ಯತೆಯನ್ನು ತೊಡೆದು ಪ್ರೀತಿಯನ್ನು ಪ್ರೀತಿಯಿಂದ ಅಪ್ಪಿ, ಒಪ್ಪಿಕೊಳ್ಳಬೇಕಾದ ಮಹಾ ಕೋರಿಕೆಯ ಪ್ರತೀಕವಾಗಿ ಕಂಡುಬರುತ್ತದೆ.

ಕನ್ನಡದಲ್ಲಿ ರೈತಗೀತೆ, ಭಾವಗೀತೆ, ಹೋರಾಟದ ಹಾಡುಗಳು, ಕಾರ್ಮಿಕರ ಗೀತೆಗಳು ಸಾಕ್ಷರತೆ ಗೀತೆಗಳನ್ನು ನಾವು ಕೇಳಿದ್ದೇವೆ. ಆದರೆ ಡಾ.ಸಿದ್ದಲಿಂಗಯ್ಯ ಅವರ ಗೀತೆಗಳಲ್ಲಿ ಇವೆಲ್ಲಾ ಸಂವೇದನೆಯ ರಸಾಂಶಗಳು ಒಗ್ಗೂಡಿ ಜೀವ ಪಡೆದಿವೆ. “ಯಾರಿಗೆ ಬಂತು? ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?!” ಎಂದು ಈ ಕವಿ ಪ್ರಶ್ನಿಸಿದಾಗ, “ದಲಿತರು ಬಂದರು ದಾರಿಬಿಡಿ! ದಲಿತರ ಕೈಗೆ ರಾಜ್ಯಕೊಡಿ!” ಎಂದು ಕೇಳಿದಾಗ ಪ್ರಜಾಪ್ರಭುತ್ವದೊಳಗೇ ತಣ್ಣಗೆ ಸದ್ದಿಲ್ಲದೆ ನುಸುಳಿಕೊಂಡು ಅವಕಾಶಗಳಿಗಾಗಿ ಹಪಹಪಿಸುತ್ತಿದ್ದ ಪ್ರಭುತ್ವದ ಎದೆ ಬೆಚ್ಚಗಾಗಿ ಬೆಚ್ಚಿ ಬಿದ್ದಿತ್ತು! ಅಂದರೆ ಸಿದ್ದಲಿಂಗಯ್ಯ ಅವರ ಕಾವ್ಯದಲ್ಲಿ ಕಂಡುಬರುವ ಕ್ರಾಂತಿ ಕಿಡಿಗಳು ಎಂತಹವು ಎಂಬುದು ಗಮನಾರ್ಹ. ಇವರ ಹೊಲೆಮಾದಿಗರ ಹಾಡು, ಕಪ್ಪುಕಾಡಿನ ಹಾಡು, ಸಾವಿರಾರು ನದಿಗಳು, ನನ್ನ ಜನಗಳು, ಮೆರವಣಿಗೆ, ಅಲ್ಲೆ ಕುಂತವರೆ ಕವನ ಸಂಕಲನಗಳು ಈ ನಿಟ್ಟಿನಲ್ಲಿ ಒಂದೊಂದು ರೀತಿಯಲ್ಲಿ ವಿಭಿನ್ನ, ವಿಶಿಷ್ಟ.

ಹೀಗೆ ಸಿದ್ದಲಿಂಗಯ್ಯ ಅವರ ಕುರಿತು ಇನ್ನೂ ಬರೆಯಬಹುದು. ಬರೆಯಬೇಕು.. ಸದ್ಯ ಬಾಕಿ ಇರಲಿ ಬರೆಯುವೆ! 03 ಫೆಬ್ರವರಿ 1954 ಜನನ, 11 ಜೂನ್ 2021 ನಿಧನ ಎಂದು ಭೌತಿಕ ಜೀವಾವಧಿಯನ್ನು ಮಾತ್ರ ಈ ಕವಿಗೆ ಹೇಳಲಾಗುವುದಿಲ್ಲ. ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದ ದೇವಯ್ಯ, ವೆಂಕಮ್ಮ ದಂಪತಿಗಳ ಮುದ್ದಿನ ಹುಡುಗ ಸಿದ್ಲಿಂಗು.. ಡಾ.ಸಿದ್ದಲಿಂಗಯ್ಯ ಎಂಬ ಹೆಸರಿನಲ್ಲಿ ಕನ್ನಡ ಮೇಷ್ಟರಾಗಿ, ಸಾಹಿತಿಯಾಗಿ, ಅಕಾಡೆಮಿ, ಪ್ರಾಧಿಕಾರದ ಸದಸ್ಯ, ಅಧ್ಯಕ್ಷರಾಗಿ, ವಿಧಾನ ಪರಿಷತ್ತಿನ ಸದಸ್ಯತ್ವದ ಗೌರವಕ್ಕೆ ಪಾತ್ರರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗದ್ದುಗೆ ಏರಿದ್ದು ಸಾಮಾನ್ಯವಾ? ಹೀಗೆ ವ್ಯವಸ್ಥೆಯ ಒಳಗೇ ಸೇರುವ ಅವಕಾಶದಲ್ಲಿ ಮೈಮರೆಯದೇ ತನ್ನತನದ ಹುಡುಕಾಟವಾಗಿ ಕಂಡುಕೊಂಡದ್ದು ವಿಶೇಷವೇ!

“ಈ ಸಿದ್ದಲಿಂಗಯ್ಯ ಈಚೀಚೆಗೆ ವ್ಯವಸ್ಥೆಯೊಂದಿಗೆ ರಾಜಿಯಾಗಿಬಿಟ್ಟರು..” ಎಂಬಂತ ಟೀಕೆ ಟಿಪ್ಪಣಿಗಳ ಸೂಕ್ಷ್ಮನೋಟಕ್ಕೆ ಸಣ್ಣದೊಂದು ಮುಗುಳ್ನಗೆ ತೋರುತ್ತಿದ್ದ ಡಾ.ಸಿದ್ದಲಿಂಗಯ್ಯನವರು ಒಮ್ಮೊಮ್ಮೆ ಅರ್ಥವಾಗದೆ ನಮ್ಮದೇ ವಠಾರದಲ್ಲಿ ದಿನಾಲೂ ಎದುರುಗೊಳ್ಳುವ ಪ್ರೀತಿಯ ಮುದ್ದಣ್ಣನಾಗಿಯೂ ಕೂಡ ಉಳಿದುಬಿಟ್ಟರು. ಅದೇನೇ ಇರಲಿ.. ಅವರ ಒಲುಮೆಗೆ ಕನ್ನಡ ಮನಸು ಸದಾ ಚಿರಋಣಿ. ಏಕೆಂದರೆ ಅವರೊಬ್ಬ ದಲಿತರ ಹೃದಯ! ಬಡವರ ಆಶಯ! ಅದಕ್ಕೆ ಅವರ ‘ಎಡಬಲ’ವೆಲ್ಲವೂ ‘ಉರಿಕಂಡಾಯ’! ಇಲ್ಲಿ ‘ಹಕ್ಕಿನೋಟವು’ ಇದೆ, ‘ರಸಗಳಿಗೆಗಳು’ ಕೂಡಿವೆ!

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author