ಮಾಜಿ ಪ್ರಧಾನಮಂತ್ರಿ #ಹೆಚ್ಡಿದೇವೇಗೌಡರು ಏನು ಮಾಡಿದ್ದಾರೆ ಎಂದು ಯಾರೋ ಕೇಳಿದ್ದು ನೆನಪು….. #avintvcom
1 min read
….ಹುಟ್ಟು ಹಬ್ಬ….
ಮಾಜಿ ಪ್ರಧಾನಮಂತ್ರಿ #ಹೆಚ್ಡಿದೇವೇಗೌಡರು ಏನು ಮಾಡಿದ್ದಾರೆ ಎಂದು ಯಾರೋ ಕೇಳಿದ್ದು ನೆನಪು…..
ದೇವೇಗೌಡರು 1996 ರಲ್ಲಿ ಪ್ರಧಾನಿಯಾದಾಗ ನಮ್ಮ ಜನರೇ ಗೌಡರಿಗೆ ಹಿಂದಿ ,ಇಂಗ್ಲಿಷ್ ಜ್ಞಾನವಿಲ್ಲ ಇನ್ನು ದೇಶ ಆಳೋದು ಸಾಧ್ಯನಾ. ? ಎಂದು ಪ್ರಶ್ನಿಸಿದ್ದರು.
ಆದರೆ 1992ರಲ್ಲಿ ಕಾವೇರಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಬಂಗಾರಪ್ಪ ಸರಕಾರದ ವಜಾ ಮಾಡಬೇಕೆಂದು ಬಿಜೆಪಿ ಮತ್ತಿತರ ವಿರೋಧ ಪಕ್ಷಗಳು ಹಾಗೂ ಇತರ ಎಲ್ಲಾ ರಾಜ್ಯ ಗಳ ಸಂಸದರು ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ್ದಾಗ ಬಂಗಾರಪ್ಪ ನಡೆಯನ್ನು ಸಮರ್ಥಿಸಲು ಹಿಂದಿ ,ಇಂಗ್ಲಿಷ್ ಜ್ಞಾನವಿದ್ದ ರಾಜ್ಯದ ಯಾವೊಬ್ಬ ಸಂಸದನೂ ಮುಂದೆ ಬಂದಿರಲಿಲ್ಲ ಅಂದು ಎಲ್ಲರೂ ಉತ್ತರವಿಲ್ಲದೆ ತಲೆತಗ್ಗಿಸಿ ಸಂಸತ್ತಿನಲ್ಲಿ ಕೂತಿದ್ದರು.
ಈ ಸಂದರ್ಭದಲ್ಲಿ ಸಂಸತ್ತಿಗೆ ನೀರಿನ ಲೋಟ ಹಿಡಿದುಕೊಂಡೇ ಧಾವಿಸಿದ್ದ ದೇವೇಗೌಡರು ಸತತ ಒಂದೂವರೆ ಗಂಟೆಗಳ ಕಾಲ ನೀರಿನ ವಿಚಾರದಲ್ಲಿ ತಮಿಳುನಾಡು ನಮ್ಮ ರಾಜ್ಯಕ್ಕೆ ಮಾಡಿದ್ದ ಅನ್ಯಾಯವನ್ನು ಇಡೀ ಸದನಕ್ಕೆ ಆಂಗ್ಲ ಭಾಷೆಯಲ್ಲೇ ಎಳೆಎಳೆಯಾಗಿ ವಿವರಿಸಿದ್ದರು.
ಗೌಡರ ಈ ಮಾತಿಗೆ ಇಡೀ ಸಂಸತ್ತೇ ತಲೆದೂಗಿತ್ತು .ಬಿಜೆಪಿಗೂ ಸತ್ಯದ ಅರಿವಾಗಿ ತನ್ನ ಧರಣಿಯನ್ನು ಕೈ ಬಿಟ್ಟಿತ್ತು ಈ ಮೂಲಕ ಕಾವೇರಿ ವಿಚಾರದಲ್ಲಿ ದಿಟ್ಟ ನಿಲುವು ಪ್ರದರ್ಶಿಸಿದ್ದ ಬಂಗಾರಪ್ಪ ಸರಕಾರವನ್ನು ವಜಾಗೊಳಿಸದಂತೆ ತಡೆದಿದ್ದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ರೈತರ ಜಮೀನಿಗೆ ಕೃಷ್ಣೆಯನ್ನು ಹರಿಸಲೇ ಬೇಕೆಂದು ಪಣ ತೊಟ್ಟು ಅರ್ಧಕ್ಕೆ ನಿಂತಿದ್ದ ಯೋಜನೆಗಳಿಗೆ ಮರು ಚಾಲನೆ ಕೊಟ್ಟಿದ್ದರು.ಕೃಷ್ಣ ಜಲ ಭಾಗ್ಯ ನಿಗಮ ಸ್ಥಾಪಿಸುವ ಮೂಲಕ ಅಂದಿನ ಪರಿಸ್ಥಿತಿಯಲ್ಲಿ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದರು.
ಪ್ರಧಾನಿಯಾಗಿ ಸಂಸತ್ತಿನಲ್ಲಿ ಬಹುಮತವನ್ನು ಸಾಬಿತುಪಡಿಸಿದ ಕೆಲವೇ ದಿನಗಳಲ್ಲಿ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು524 ಮೀಟರ್ ಗಳಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದ್ದರು ಆದರೆ ಇದಕ್ಕೆ ಅಂದಿನ ಮೈತ್ರಿಕೂಟ ಸರಕಾರದ ಭಾಗವಾಗಿದ್ದ ಚಂದ್ರಬಾಬು ನಾಯ್ಡು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರೂ ದೇವೇಗೌಡರು ಮಣಿಯಲಿಲ್ಲ ಹಾಗೂ ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಸಹಾಯಧನ ನೀಡಬಾರದೆನ್ನುವ “ಗಾಡ್ಗಿಲ್ ಫಾರ್ಮುಲ”ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಕೇಂದ್ರ ಸರಕಾರದಿಂದಲೂ ಸಾವಿರಾರು ಕೋಟಿ ದೊರಕುವಂತೆ ಮಾಡಿದ್ದರು. ಹೀಗೆ ಉತ್ತರ ಕರ್ನಾಟಕದ ಹಲವಾರು ಯೋಜನೆಗಳಿಗೆ ಪ್ರಮುಖ ಕಾರಣವಾಗಿದ್ದಾರೆ.ಆದರೂ ದೇವೇಗೌಡರನ್ನು ಮಾತ್ರ ಉತ್ತರ ಕರ್ನಾಟಕದ ವಿರೋಧಿ ಎಂದು ಆಪಾದಿಸುತ್ತಾರೆ
ಐಟಿ ಉದ್ದಿಮೆ ಬೆಂಗಳೂರಿನತ್ತ ಮುಖ ಮಾಡಲುಪ್ರಮುಖವಾಗಿ ಮೂಲಭೂತ ಸೌಕರ್ಯಗಳಾದ ಸಾರಿಗೆ ಮತ್ತು ನೀರಿನ ವ್ಯವಸ್ಥೆ ಅತ್ಯಗತ್ಯವಾಗಿತ್ತು .ದೇವೇಗೌಡರು ಪ್ರಧಾನಿಯಾಗಿದ್ದಾಗ ಕುಡಿಯುವ ಕಾರಣಕ್ಕಾಗಿಯೇ ಕಾವೇರಿಯಿಂದ ತಮಿಳುನಾಡಿನ ವಿರೋಧದ ನಡುವೆಯೂ ಬೆಂಗಳೂರಿಗೆ ೯ ಟಿಎಂಸಿ ನೀರು ಸಿಗುವಂತೆ ಡಿದ್ದರು.ಹಾಗೂ ಬೆಂಗಳೂರಿನ ವೇಗದ ಬೆಳವಣಿಗೆಯ ಜೊತೆಗೆ ಹಲವಾರು ರಸ್ತೆಗಳನ್ನು ವಿಸ್ತೀರ್ಣ ಮಾಡೋದು ತೀರಾ ಅನಿವಾರ್ಯವಾಗಿತ್ತು ಆದರೆ ಆ ಜಾಗವೆಲ್ಲ ಭಾರತೀಯ ಸೇನೆಗೆ ಸೇರಿದ್ದರಿಂದ ಇದ್ಯಾವುದು ಸಾಧ್ಯವಾಗದೆ ಹೋಗಿತ್ತು.ಮೂವತ್ತು ವರ್ಷಗಳಿಂದ ಕೇಂದ್ರ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸಿದರೂ ಇದು ಸಾಧ್ಯವಾಗಿರಲಿಲ್ಲ ಕೊನೆಗೆ ದೇವೇಗೌಡರು ಪ್ರಧಾನಿಯಾದಾಗ ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಬಿಎಂಪಿ ಗೆ ವರ್ಗಾವಣೆ ಮಾಡಿದ್ದರು.ಇದರಿಂದಾಗಿಯೇ ಹಳೆ ವಿಮಾನ ರಸ್ತೆ,ಸಿ ವಿ ರಾಮನ್ ರಸ್ತೆ ,ಹಲಸೂರು ಕೆರೆ ರಸ್ತೆಗಳು ವಿಸ್ತಾರವಾದವು.ಸಂಚಾರ ಸ್ವಲ್ಪ ಮಟ್ಟಿಗೆ ಸುಗಮವಾಯಿತು.ಪ್ರಧಾನಿಯಾಗಿ ಐಟಿ ಉದ್ಯಮಕ್ಕೆ ೧೦ ವರ್ಷ “ಟ್ಯಾಕ್ಸ್ ಹಾಲಿಡೇ” ಘೋಷಿಸುವ ಮೂಲಕ ಐಟಿ ಕ್ರಾಂತಿಗೆ ಮುನ್ನುಡಿ ಬರೆದಿದ್ದರು ಆದರೆ ದೇವೇಗೌಡರನ್ನು ಮಾತ್ರ ಐಟಿ ವಿರೋಧಿ ಎಂಬಂತೆ ಬಿಂಬಿಸಲಾಯಿತು.
ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ತೆರಳಿದಾಗ ತಮ್ಮ ಆಪ್ತರಾದ ಸಿದ್ದರಾಮಯ್ಯರನ್ನು ಬಿಟ್ಟು ಜೆ ಹೆಚ್ ಪಟೇಲ್ ರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಘೋಷಿಸಿದ್ದರು ಆದರೂ ಲಿಂಗಾಯಿತ ವಿರೋಧಿ ಎನ್ನುವ ಹಣೆ ಪಟ್ಟಿ ಕಟ್ಟಲಾಯಿತು.ಮಣ್ಣಿನಮಗನೊಬ್ಬ ಪ್ರಧಾನಿಯಾಗಿ ಸಂಸತ್ತಿನ ಊಟದ ಮೆನುವಿನಲ್ಲಿ ನಮ್ಮ ನಾಡಿನ ರಾಗಿ ಮುದ್ದೆಯನ್ನು ಸೇರಿಸಿದ್ದಕ್ಕೆ ಹೆಮ್ಮೆ ಪಡುವ ಬದಲು ಅಪಹಾಸ್ಯ ಮಾಡಿದ್ದೆ ಹೆಚ್ಚು
.ದೇವೇಗೌಡರು ಪ್ರಧಾನಿಯಾಗುವ ವರೆಗೆ ಕರ್ನಾಟಕಕ್ಕೇ ಒಂದು ಪ್ರತ್ಯೇಕ ರೈಲ್ವೆವಲಯವೇ ಇರಲೇ ಇಲ್ಲ,ಆದರೆ ದೇವೇಗೌಡರು ಪ್ರಧಾನಿಯಾಗಿ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯವನ್ನು ತಂದಿದ್ದಕ್ಕೆ ಹೆಮ್ಮೆ ಪಡುವ ಬದಲು ಇದು ಹುಬ್ಬಳ್ಳಿಯಲ್ಲಿ ಆಗುವ ಬದಲು ಬೆಂಗಳೂರಿನಲ್ಲಿ ಮಾಡಿದ್ದಾರೆಂದು ಜರೆದವರೇ ಹೆಚ್ಚು ಇದೆ ರೀತಿಯ ವಿವಾದ ದೇವೇಗೌಡರು ದೇವನಹಳ್ಳಿಯಲ್ಲಿ ಅಂತರಾಷ್ತ್ರೀಯ ದರ್ಜೆಯ ವಿಮಾನ ನಿಲ್ದಾಣ ಕ್ಕೆ ಅನುಮತಿ ನೀಡಿದಾಗಲೂ ಈ ವಿಮಾನ ನಿಲ್ದಾಣ ಬಿಡದಿಯಲ್ಲಾಗಬೇಕೆಂದು ಕೂಗೆದ್ದಿತ್ತು.ಹೀಗೆ ದೇವೇಗೌಡರು ಮಾಡಿದ ಕೆಲಸಗಳಿಗೆ ಪ್ರಚಾರಕ್ಕಿಂತ ಹೆಚ್ಚು ಅಪಪ್ರಚಾರವೇ ಮೆತ್ತಿಕೊಂಡಿದ್ದು ಮಾತ್ರ ದುರಂತ ..
ಇದೇನೇ ಇದ್ದರೂ ಇತ್ತೀಚಿಗೆ ದೇವೇಗೌಡರು ಕಾವೇರಿ ವಿಚಾರದಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳಿಂದಾಗಿ ಕರ್ನಾಟಕದ ರೈತರು ಹಾಗೂ ಮುಖ್ಯವಾಗಿ ಯುವ ಜನತೆಯ ದೃಷ್ಟಿಯಲ್ಲಿ ದೇವೇಗೌಡರು ಎತ್ತರದ ಸ್ಥಾನವನ್ನೇ ಏರಿದ್ದಾರೆ ಆದರೆ ಈ ಹಿಂದೆಯೂ ದೇವೇಗೌಡರು ಇಂತಹ ಅನೇಕ ಮಹತ್ವ ಪೂರ್ಣ ಕೆಲಸಗಳನ್ನೇ ಮಾಡಿದ್ದರಾದರೂ ಹೊಗಳಿಕೆಯಿಂದ ಹೆಚ್ಚು ತೆಗಳಿಕೆಗೇ ಗುರಿಯಾಗಿದ್ದರು.ಬಹುಶಃ ಅವರ ಸ್ಥಾನದಲ್ಲಿ ಬೇರೆ ಯಾರಿದ್ದರೂ ತಮ್ಮ ರಾಜಕಾರಣವನ್ನೇ ನಿಲ್ಲಿಸುತ್ತಿದ್ದರೇನೋ.?
ಈ ಹಿರಿಯ ಚೇತನಕ್ಕಿಗ ಹುಟ್ಟುಹಬ್ಬದ ಸಂಭ್ರಮ..
ದೇವರು ಇನ್ನಷ್ಟು ಆರೋಗ್ಯ ಆಯಸ್ಸು ಕೊಟ್ಟು ಕಾಪಡಲಿ..
ವರದಿ.
ಮಗ್ಗಲಮಕ್ಕಿಗಣೇಶ್.