ರಾಜ್ಯದ ನಿವೃತ್ತ *ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ವಿ.ರವೀಂದ್ರನಾಥ ಟ್ಯಾಗೋರ್ ನೇಪಥ್ಯಕ್ಕೆ..* #avintvcom
1 min read
……….ನಿಧನ………
ನಿವೃತ್ತ ಡಿಜಿಪಿ ಟ್ಯಾಗೋರ್ ನೇಪಥ್ಯಕ್ಕೆ..
ರಾಜ್ಯದ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ವಿ.ರವೀಂದ್ರನಾಥ ಟ್ಯಾಗೋರ್ (71) ಇಂದು ಬೆಳಿಗ್ಗೆ ಇಹಲೋಕ ಚಟುವಟಿಕೆ ಮುಗಿಸಿ ನೇಪಥ್ಯಕ್ಕೆ ಸರಿದಿದ್ದಾರೆ. ಕೋವಿಡ್ ಲಕ್ಷಣ ಕಂಡು ಬಂದ ಕಾರಣದಿಂದ ಈಗ್ಗೆ ಹತ್ತು ದಿನಗಳ ಮೊದಲು, ಬೆಂಗಳೂರಿನ ಸಾಗರ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮೃತರು,
ನಿನ್ನೆಯವರೆಗೂ ಚೈತನ್ಯಶೀಲರಾಗಿದ್ದರು. ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದ ವೈದ್ಯರು ಸಹ ಇನ್ನು ಜೀವಾಪಾಯದ ಅಂಜಿಕೆಯಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಇಂದು ಬೆಳಿಗ್ಗೆ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ ಟ್ಯಾಗೋರ್ ಸಾಹೇಬರು ಮರಳಿ ಬಾರದ ಲೋಕಕ್ಕೆ ನಡೆದರು ಎಂಬುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಶೃಂಗೇರಿ ಕ್ಷೇತ್ರದಿಂದ ಎರಡು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ದಿವಂಗತ ವೀರಪ್ಪಗೌಡರ ಸುಪುತ್ರರಾಗಿದ್ದ ಕೆ.ವಿ.ಆರ್ ಟ್ಯಾಗೋರ್ ಅವರು, ತಾಲೂಕಿನ ಪ್ರತಿಷ್ಠಿತ ಪಟ್ಟಮಕ್ಕಿ ಕುಟುಂಬಕ್ಕೆ ಹತ್ತಿರದ ಬಂಧುಗಳು. ಪಟಮಕ್ಕಿ ಮಹಾಬಲೇಶ್, ಮಂಜುನಾಥ್, ರಂಗನಾಥ್ ಮತ್ತು ವಿಶ್ವನಾಥ್ ಸಹೋದರರ ತಾಯಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ವಿಜಯದೇವ್ ಅವರ ಧರ್ಮಪತ್ನಿ ಟ್ಯಾಗೋರ್ ಅವರ ತಾಯಿಯ ಹಿರಿಯ ಸಹೋದರಿ. ಹಚ್ಚ ಹಸಿರಿನ ಮಲೆಗಳ ಸುಂದರಿ ಮಲೆನಾಡು ಮಡಿಲಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗುಗಳಿಂದ ಉದ್ಯೋಗ ಅರಸಿ ರಾಜ್ಯ ರಾಜಧಾನಿ ಬೆಂಗಳೂರಿಗೆ ನಡೆದು, ಅಲ್ಲಿಯೇ ವಿವಿಧ ಉದ್ಯಮ- ನೌಕರಿಗಳಲ್ಲಿ ನೆಲೆ ಕಂಡುಕೊಂಡಿದ್ದ ಸಾವಿರಾರು ಮಲೆನಾಡಿಗರು.
ತಮ್ಮ ಸಂಸ್ಕೃತಿ- ಸಂಪ್ರದಾಯಗಳ ವಿಸ್ತರಣೆಗಾಗಿ ಕಟ್ಟಿಕೊಂಡಿದ್ದ ಸಹ್ಯಾದ್ರಿ ಸಂಘದ ದ್ವಿತೀಯ ಅಧ್ಯಕ್ಷರಾಗಿ (ಕಡಿದಾಳು ಮಂಜಪ್ಪನವರು ಪ್ರಥಮ ಅಧ್ಯಕ್ಷರು) ಸುದೀರ್ಘ ಕಾಲದವರೆಗೆ ಸೇವೆ ಸಲ್ಲಿಸಿದ್ದ ಶ್ರೀಯುತರು, ನೌಕರಿ ಹುಡುಕಿ ಬೆಂಗಳೂರಿಗೆ ಬಂದು ತಮ್ಮ ನೆರವನ್ನು ಯಾಚಿಸಿದ್ದ ಈ ಭಾಗದ ಕನಿಷ್ಠ ಸಾವಿರ ಮಂದಿಯ ಅನ್ನಕ್ಕೆ ದಾರಿ ಮಾಡಿದ ಪುಣ್ಯಾತ್ಮರಾಗಿದ್ದರು.
ನಿವೃತ್ತಿಯ ನಂತರವೂ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಒಂದಷ್ಟು ವರ್ಷ ವಿವಿಧ ಮಹತ್ವಪೂರ್ಣ ಹುದ್ದೆಗಳನ್ನು ಅಲಂಕರಿಸಿದ್ದರು.
ಮೃತರ ತಂದೆ ವೀರಪ್ಪಗೌಡರಿಗೆ, ಕವಿ ರವೀಂದ್ರನಾಥ ಟಾಗೋರ್ ಅಂದರೆ ಅಪಾರ ಅಭಿಮಾನ. ಹಾಗಾಗಿ ತಮ್ಮ ಸುಪುತ್ರರಿಗೆ ಅವರ ಹೆಸರನ್ನೇ ಇಟ್ಟಿದ್ದರು.
ಪ್ರಪಂಚ ಪ್ರಖ್ಯಾತ ಕವಿಯ ಹೆಸರಿಗೆ ತಕ್ಕಂತೆ ಸಾಧನೆ ಮಾಡಿದ ಇವರು, ಐಪಿಎಸ್ ಪರೀಕ್ಷೆಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.
ತವರು ನೆಲ ಕರುನಾಡನ್ನು ತಮ್ಮ ಸೇವಾಕ್ಷೇತ್ರವಾಗಿ ಆರಿಸಿಕೊಂಡವರು, ಹೆಸರಿಗೆ ಅನುಗುಣವಾಗಿ ಶಿಸ್ತು ದಕ್ಷತೆ ಮೆರೆದರು. ಪತ್ನಿ ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು ಬಾಂಧವರನ್ನು, ಅಭಿಮಾನಿಗಳನ್ನು ಅಗಲಿರುವ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ, ಸದ್ಗತಿ ದೊರಕಲಿ ಎಂದು ಕೋರುತ್ತಿರುವ,ದಾರದಹಳ್ಳಿ ಕುಟುಂಬ ವರ್ಗದವರು.
ಹಾಗು ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ದುಃಖ ಸೈರಿಸುವ ಶಕ್ತಿ ನೀಡಲೆಂದು ಭಗವಂತಲ್ಲಿ ಪ್ರಾರ್ಥಿಸಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/