AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ನಾಳೆಯಿಂದ ಲಾಕ್ಡೌನ್‌ ಅಂತೆ….” ಅಂತ ಏನಾದ್ರೂ ಈಗ ನ್ಯೂಸ್‌ ಬಂತು ಅಂದ್ರೆ, #avintvcom

1 min read
Featured Video Play Icon

ಸ್ನೇಹಿತರೇ ಇದೊಂದು ಸಣ್ಣ ಚರ್ಚೆಯಷ್ಟೆ
ನಮ್ಮ-ನಮ್ಮ ಮನೆಯಲ್ಲಿ ಚರ್ಚಿಸುವ ಹಾಗೆ.
“ನಾಳೆಯಿಂದ ಲಾಕ್ಡೌನ್‌ ಅಂತೆ….” ಅಂತ ಏನಾದ್ರೂ ಈಗ ನ್ಯೂಸ್‌ ಬಂತು ಅಂದ್ರೆ, “ಓಹ್‌ ಹೌದಾ ಸಧ್ಯ!” ಅಂತ ಒಂದು ವರ್ಗದ ಜನರು ನಿಟ್ಟುಸಿರು ಬಿಟ್ಟರೆ, “ಅಯ್ಯೋ.. ನಾವು ಹೊಟ್ಟೆಗೆ ಏನು ಮಾಡೋದು?” ಅಂತ ತಲೆ ಮೇಲೆ ಕೈಹೊತ್ತು ಅಳುವ ವರ್ಗ ಮತ್ತೊಂದು. ಸ್ಕೂಲ್-ಕಾಲೇಜ್‌ ಇಲ್ವಂತೆ ಅಂದ್ರೆ “ಅಬ್ಬಾ, ಮಕ್ಕಳು ಸೇಫ್”‌ ಅಂತ ಸಮಾಧಾನ ಪಡುವ ಪೋಷಕ ವರ್ಗ ಒಂದು ಕಡೆಯಾದರೆ, “ಓದು ಬರಹ ಇಲ್ಲದೆ ಮಕ್ಕಳು ಹಾಳಾಗ್ತಾರೆ” ಅಂತ ಕಳವಳ ಪಡುವ ಪೋಷಕ ವರ್ಗ ಮತ್ತೊಂದು ಕಡೆ. ಕಳೆದ ವರ್ಷದಿಂದಲೂ ಬರೀ ಇಂಥದ್ದೇ ಸಮಸ್ಯೆಗಳು.
ಇವೆಲ್ಲಾ ಸಮಸ್ಯೆಗಳೂ ಕೊರೊನಾ ಅತಿಯಾಗಿ ಹರಡಿದ್ದರಿಂದ ತಾನೆ? ಹಾಗೆ ಹರಡೋದಕ್ಕೆ ಕಾರಣವೇನು? ನಮ್ಮ ದೇಶ ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದದ್ದು. ತಾನೆ? ಹಾಗಿದ್ರೆ ತಪ್ಪು ಆದದ್ದು ಎಲ್ಲಿ? ನಮ್ಮಿಂದಲೇ? ಯಾವ ರಾಜಕೀಯ ಪಕ್ಷದವರು ತಪ್ಪು ಮಾಡಿದ್ದಾರೆ? ಯಾವ ಸರ್ಕಾರ ಇದ್ದಿದ್ರೆ ನಮ್ಮನ್ನೆಲ್ಲಾ ಕೊರೊನಾದಿಂದ ಬಚಾವ್‌ ಮಾಡ್ಬಹುದಾಗಿತ್ತು? ಈ ಪ್ರಶ್ನೆಗಳನ್ನೆಲ್ಲಾ ನಮಗೆ ನಾವೇ ಕೇಳಿಕೊಂಡ್ರೆ ನಾವು ಎಷ್ಟು ಮೂರ್ಖರು ಎಂದು ಗೊತ್ತಾಗುತ್ತದೆ. ಯಾಕೆ ಅಂದ್ರೆ, ಇಲ್ಲಿ ಯಾರು ಸರಿ? ಯಾರು ತಪ್ಪು ಎಂದು ಯೋಚಿಸುವ ಸಮಯವೇ ಇದಲ್ಲಾ. ಅದನೆಲ್ಲಾ ಬದಿಗಿಟ್ಟು ಮೊದಲಿಗೆ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸ ಬೇಕಾಗಿದೆ. ಜನರ ದಟ್ಟಣೆಯನ್ನು ನಿಯಂತ್ರಿಸಬೇಕಾಗಿದೆ. ಹಾಗಿದ್ರೆ ಲಾಕ್‌ ಡೌನ್‌ ಮಾಡಲೇ ಬೇಕು. “ಅಯ್ಯೋ, ಜೀವ ಉಳಿದರೆ ಸಾಕು ತಾನೆ” ʼಜೀವʼನೇ ಮುಖ್ಯ ಎನ್ನುವವರಿಗೆ ಲಾಕ್‌ ಡೌನ್‌ ಸರಿ. ಆದರೆ ಭಾರತದಲ್ಲಿ ಕೊರೊನಾ ಇಲ್ಲದಿದ್ದ ಸಮಯದಲ್ಲೂ ಅದೇ ʼಜೀವʼವನ್ನು ಉಳಿಸಿಕೊಳ್ಳುವುದಕ್ಕಾಗಿ ದಿನಗೂಲಿ ಮಾಡುವ ವರ್ಗವೇ ದೊಡ್ಡದಿದೆ. ನಮಗೆಲ್ಲಾ, ಜೀವನಕ್ಕಿಂತ ಜೀವ ಹೇಗೇ ಮುಖ್ಯವೋ ಹಾಗೆ ಅವರಿಗೆ ಜೀವ ಉಳಿಸಿಕೊಳ್ಳಲು ಜೀವನ ಮಾಡೋದು ಅಷ್ಟೇ ಮುಖ್ಯ. ಹಾಗಿರುವಾಗ ವಾರಗಟ್ಟಲೇ ಲಾಕ್‌ ಡೌನ್‌ ಮಾಡಿ ಅಂದಿನ ದಿನಕ್ಕೆ ಅಂದು ದುಡಿದು ತಿನ್ನುವ ಆ ವರ್ಗದ ಜನರನ್ನು ಕೊರೊನಾ ಬಿಟ್ರು, ಹಸಿವೆಯೇ ಕೊಲ್ಲುತ್ತದಲ್ಲ? ಸರಿಯಪ್ಪಾ… ಹಾಗಂತ ಮಧ್ಯಮ ವರ್ಗದ ಜನರ್ಯಾಕೆ ಕಷ್ಟ ಪಡಬೇಕು? ನಮಗೆ ಮನೆಯಲ್ಲಿ ಕೂತು ಕೂಡ ಕೆಲಸ ಮಾಡುವ ವ್ಯವಸ್ಥೆಯೂ ಇರುವುದರಿಂದ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು? ಎಂದೂ ಕೇಳಬಹುದು. ಇಲ್ಲಿ ಯಾರದೂ ತಪ್ಪಿಲ್ಲ. ಹಾಗಿದ್ರೆ ಸರ್ಕಾರ ಏನ್‌ ಮಾಡ್ಬೇಕು? ಯಾವ ವರ್ಗದ ಜನರನ್ನು ಇದು ಕಾಪಾಡ್ಬೇಕು? ಯಾವ್ದು ಸರಿ?
ಇಷ್ಟೊತ್ತಿಗಾಗ್ಲೇ ನಮ್ಮಲ್ಲಿ ಬಹಳಷ್ಟು ಜನ ಕೊರೊನಾವನ್ನು ಬಹಳ ಹತ್ತಿರದಿಂದ ಕಂಡಿರುತ್ತೇವೆ. ಹತ್ತಿರದವರು ಒದ್ದಾಡುವುದನ್ನು ನೋಡಿರ್ತೇವೆ. ಎಷ್ಟೋ ಜನರು ಅನುಭವಿಸಿಯೂ ಆಗಿದೆ ಬಿಡಿ. ಆಗೆಲ್ಲಾ ಅದು ಯಾರ ತಪ್ಪಿನಿಂದ ಆದದ್ದು ಎಂದು ಯೋಚಿಸಿದ್ದಿದೆಯಾ? ಯೋಚಿಸಿದ್ದಿದ್ದರೆ ಕೊರೊನಾ ಇಷ್ಟೊಂದು ಹರಡಲು ಸಾಧ್ಯವೇ ಇರಲಿಲ್ಲ ಅಲ್ವೇ? ಈಗಲೂ ತಡವಾಗಿಲ್ಲ. ಅಟ್ಲೀಸ್ಟ್‌ ಇದರ ಮೂರನೆ, ನಾಲ್ಕನೇ ಅಲೆಯನ್ನಾದರೂ ನಿಯಂತ್ರಿಸಲು ಸಾಧ್ಯವೇ ನೋಡೋಣ.
ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು, ಸ್ಯಾನಿಟೈಝರ್‌ ಬಳಕೆ ಇದೆಲ್ಲಾ ನಮಗಾಗಲೇ ಗೊತ್ತಿದೆ. ಅದು ಯಾವುದನ್ನೂ ಬಿಡುವ ಹಾಗೆಯೇ ಇಲ್ಲ. ಇದರ ಜೊತೆ, ಸರ್ಕಾರ ಲಾಕ್‌ ಡೌನ್‌ ಮಾಡ್ಲಿ ಬಿಡ್ಲಿ, ನಮ್ಮನ್ನು ನಾವು ಸಾಧ್ಯವಾದಷ್ಟು ಕಂಟ್ರೋಲ್‌ ಮಾಡಿಕೊಳ್ಳ ಬೇಕು. ಹೀಗೆ ಮಾಡೋಣ…
• ಕೊರೊನಾ ಲಸಿಕೆಗಳನ್ನು ತೆಗೆದುಕೊಳ್ಳೋಣ. ಈಗ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಮೇ ಒಂದರಿಂದ ಲಸಿಕೆ ಲಭ್ಯವಿದೆಯಂತೆ. ತಪ್ಪದೆ ಹಾಕಿಸಿಕೊಳ್ಳೋಣ.
• ಕೊರೊನಾ ಪೊಸಿಟೀವ್‌ ಬಂದವರು, ತಮ್ಮೊಡನೆ ಸಂಪರ್ಕ ಬಂದರಿಗೆಲ್ಲಾ ತಪ್ಪದೆ ಎಚ್ಚರಿಸಿ, ಅವರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಉತ್ತೇಜಿಸಿ. ಇದು ನಿಮ್ಮ ಕರ್ತವ್ಯ.
• ರೋಗ ಲಕ್ಷಣರಹಿತ ಸೋಂಕಿತರೂ ರೋಗವನ್ನು ಹರಡ ಬಲ್ಲರು ಹಾಗಾಗಿ ಪೊಸಿಟೀವ್‌ ಎಂದು ಗೊತ್ತಾದೊಡನೇ ಸ್ವತಃ ಪ್ರತ್ಯೇಕಗೊಳ್ಳಿ. ವೈದ್ಯರ ಸಲಹೆ ಪಡೆಯಿರಿ.
• ದಿನದ ಚಿಕ್ಕ ಪುಟ್ಟ ದಿನಸಿಗೂ ಮಾಲ್‌ ಗಳಿಗೆ ದಾಳಿ ಇಡೋದು ಕಡಿಮೆಯಾಗ್ಬೇಕು.
• ಇಲ್ಲಿಂದ ಮತ್ಯಾವ್ದೋ ಏರಿಯಾದಲ್ಲಿರುವ ಅಂಗಡಿಗೆ ಹೋಗುವ ಬದಲು ಮನೆಯ ಹತ್ತಿರ ಇರುವ ಅಂಗಡಿಯಲ್ಲೇ ಖರೀದಿ ಮಾಡುವುದರಿಂದ, ನಮ್ಮ ಮನೆಯಿಂದ ಆಚೆ ಇರುವ ಸಮಯ ಕಡಿಮೆಯಾಗುತ್ತದೆ.
• ನಾವು ಹೆಂಗಸರು ಬೇಳೆ ಹಾಕಿದಾಗ ತರಕಾರಿ ತರಲು ಸ್ಕೂಟರ್‌ ಹತ್ತಿ ಓಡುವ ಬದಲು, ವಾರಕ್ಕಾಗುವಷ್ಟು ತರಕಾರಿಯನ್ನು ಖರೀದಿಸಿಡ ಬೇಕು.
• ಅಗತ್ಯದ ಔಷಧಿಯನ್ನು ಮುಂಚಿತವಾಗಿ ಕೊಂಡು ಇಡಿ.
• ಸಭೆ- ಸಮಾರಂಭ, ಮದುವೆ-ಮುಂಜಿಗಳಿಗೆ ಸರ್ಕಾರದಿಂದ ಅನುಮತಿ ಇದ್ದರೂ ಸಾಧ್ಯವಾದಷ್ಟು ಮಾಡದೇ ಇರುವುದೇ ಒಳ್ಳೆಯದು. ನಿಮ್ಮಿಂದ ಬೇರೆಯವರು ಅಪಾಯಕ್ಕೆ ಸಿಲುಕುವುದು ಬೇಡ. (ಇದೇ ನೆಪ ಹೇಳಿ ಒಂದಿಷ್ಟು ದುಡ್ಡು ಸೇರಿಸಿಕೊಳ್ಳಿ ತಪ್ಪೇನಿಲ್ಲ).
• ಸಭೆ- ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿ ಅಥವಾ ಕಡಿಮೆ ಮಾಡಿ.
• ಗುಂಪು ಸೇರಿ ಮಾಡುವಂತಹ ಯಾವುದೇ ಮುಷ್ಕರ, ಮೆರವಣಿಗೆ, ಪ್ರಚಾರಗಳಿಂದ ನಿಮ್ಮನ್ನು ನೀವು ದೂರವಿಡಿ.
• ದೇವಾಲಯದಲ್ಲಿರುವ ದೇವರನ್ನು ಮನೆಯಲ್ಲಿಯೇ ಪೂಜಿಸಿ.
• ವದಂತಿಗಳಿಗೆ ಕಿವಿಗೊಡದೆ ನಿಮಗೆ, ನಿಮ್ಮ ಕುಟುಂಬಕ್ಕೆ ಯಾವುದೋ ಸರಿಯೋ ಅದನಷ್ಟೆ ಮಾಡಿ.
ಈ ತರಹದ ಚಿಕ್ಕ-ಪುಟ್ಟ ಬದಲಾವಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಲಾಕ್‌ ಡೌನ್‌ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಅದನ್ನು ಬಿಟ್ಟು, ಮಾಸ್ಕ್‌ ಹಾಕಿಕೊಳ್ಳದೆ ಓಡಾಡಿದ್ದಕ್ಕೆ ಫೈನು… ಕರ್ಫ್ಯೂ ಮುರಿದುದ್ದಕ್ಕೆ ಲಾಠಿ ಏಟು… ಬೇಕೇನ್ರಿ ಇದಲ್ಲಾ? ಬರೀ ಅಂಥದ್ದೆಲ್ಲಾ ವೀಡಿಯೋ ಆಗಿ ನಾವೂ ನೋಡಿ ನಕ್ಕಿದ್ದಷ್ಟೆ ಬಂತು. ಅಲ್ಲಾರೀ, ನಮಗೆ ಒಳ್ಳೆದನ್ನು ನಾವು ಅನುಸರಿಸೋಕ್ಕೆ ಪನಿಶ್ಮೆಂಟ್‌ ಭಯ ಬೇಕಾ? ನಾವೇನು ಚಿಕ್ಕ ಮಕ್ಕಳಾ? ಹೋಮ್‌ ವರ್ಕ್‌ ಮಾಡದಿದ್ರೆ, ಟೀಚರ್ ಹೊಡಿತ್ತಾರೆ ಅಂತ ಭಯದಿಂದ ಹೋಮ್‌ ವರ್ಕ್‌ ಮಾಡ್ಕೊಂಡ್‌ ಹೋಗೋಕ್ಕೆ? ಅದು ಯಾವಾಗ ಬುದ್ದಿ ಬರುತ್ತೋ? ಮಾರ್ಕೆಟ್‌ ನಲ್ಲಿ ಜನರನ್ನು ನೋಡ್ಬೇಕು… ಯಾರನ್‌ ಕೇಳಿದ್ರೂ, ʼಕೊರೊನಾನಾ? ಅದಕ್ಯಾಕ್ರೀ ಹೆದರಿ ಮನೆಯಲ್ಲಿ ಕೂತ್ಕೋಬೇಕು?ʼ ಎಂದು ಹೆಂಗೆ ಬೇಕೋ ಹಂಗೆ ಅವರುಗಳು ಓಡಾಡಿದುದರ ಪರಿಣಾಮ ಈಗ ಮಾಸ್ಕು…ಸ್ಯಾನಿಟೈಜರ್‌ ಎಂದು ಅನುಸರಿಸುತ್ತಿದ್ದವರೂ ಕೂಡ ಎದುರಿಸುವ ಹಾಗಾಗಿದೆ.
ಆಡಳಿತ ಪಕ್ಷ, ಪ್ರತಿಪಕ್ಷ, ಜಾತಿ, ಧರ್ಮಗಳ ಬಗ್ಗೆ ತಲೆಕೆಡಿಸಿ ಕೊಳ್ಳುವ ಬದಲು ಮನೆಯ ಯಜಮಾನ ತನ್ನ ಸಂಸಾರಕ್ಕೆ ಯಾವುದು ಒಳ್ಳೆಯದೋ ಅದನ್ನೇ ಹೇಗೆ ಮಾಡುತ್ತಾನೋ ಹಾಗೆ ಸರ್ಕಾರವು ತನ್ನ ಪ್ರಜೆಗಳಿಗಾಗಿ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಗೌರವಿಸೋಣ. ಎಲ್ಲಿ ಕೊರೊನಾವನ್ನು ಗೆದ್ದು ಬಿಟ್ಟರೆ ಅದರ ಕಿರೀಟ ಆ ಸರ್ಕಾರಕ್ಕೆ ಹೋಗಿ ಬಿಡುತ್ತದೆಯೋ ಎಂಬ ಆತಂಕದಿಂದ ಒಬ್ಬರ ಕಾಲನ್ನು ಒಬ್ಬರು ಎಳೆಯುವ ಬದಲು, ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತಿರುವ ಈ ಕೋವಿಡನ್ನು ಮೊದಲು ಹೊಡೆದು ಓಡಿಸೋಣ. ಅದು ನಮ್ಮ ನಿಜವಾದ ಶತೃ.
ಪ್ರಾಪರ್ ಟೆಸ್ಟ್ ಇಲ್ಲ… ಟ್ರೀಟ್ಮೆಂಟ್ ಸರಿ ಇಲ್ಲ….ಆಸ್ಪತ್ರೆಯಲ್ಲಿ ಬೆಡ್ ಇಲ್ಲ….ಆಕ್ಸಿಜನ್ ಇಲ್ಲ…ವೆಂಟಿಲೇಟರ್ ಸಿಗ್ತಾಯಿಲ್ಲ…ಈ ಗೊಣಗಾಟ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲಾ. ಕೊರೊನಾವನ್ನು ಎದುರಿಸುತ್ತಿರುವ ಎಲ್ಲಾ ದೇಶಗಳ ಸಮಸ್ಯೆಯೂ ಇದುವೇ ಆಗಿದೆ. ಮುಂದುವರೆದ ರಾಷ್ಟ್ರಗಳಲ್ಲೂ ಹೆಣಗಳು ಬಿದ್ದಿವೆ. ಒಟ್ಟೊಟ್ಟಿಗೆ ಹೆಣಗಳನ್ನು ಗುಂಡಿಯಲ್ಲಿ ತುಂಬಿದ್ದಾರೆ. ಹಾಗಾಗಿ ಒಬ್ಬರನೊಬ್ಬರು ದೂರದೆ ಕಷ್ಟದ ಈ ಸಮಯದಲ್ಲಿ ಎಲ್ಲರೂ ಒಂದಾಗಿ, ಬುದ್ದಿವಂತಿಕೆಯಿಂದ ವರ್ತಿಸೋಣ.
ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಅಪೇಕ್ಷಿಸದೆ, ನಮ್ಮ ಮನೆಯನ್ನು ನಾವು ಕಾಪಾಡಿಕೊಂಡರೂ ಸಾಕು. ಕೊರೊನಾ ಹೇಳ ಹೆಸರಿಲ್ಲದೆ ಓಡಿ ಹೋಗೋದು ಗ್ಯಾರಂಟಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author