ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿಯಂತ್ರಿಸುವಂತೆ ಬಿಲ್ಡರ್ಸ್ ಅಸೋಸಿಯೇಷ್ ಆಗ್ರಹ #avintvcom
1 min read
ಅನಿಯಂತ್ರಿತವಾಗಿ ಏರುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿಯಂತ್ರಿಸುವಂತೆ ಬಿಲ್ಡರ್ಸ್ ಅಸೋಸಿಯೇಷ್ ಆಗ್ರಹ
- ಒಂದು ದಿನ ಕಟ್ಟಡ ಕಾಮಗಾರಿಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ
- ಕಟ್ಟಡ ಸಾಮಗ್ರಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ
ಬೆಂಗಳೂರು ಫೆಬ್ರವರಿ 11: ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಸಿಮೆಂಟ್, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳನ್ನು ನಿಯಂತ್ರಣಕ್ಕೆ ಸರಕಾರ ಮುಂದಾಗದೇ ಇದ್ದಲ್ಲಿ, ಕೃಷಿಯ ನಂತರ ಅತಿಹೆಚ್ಚು ಕೆಲಸಗಾರರನ್ನು (60ಮಿಲಿಯನ್) ಹೊಂದಿರುವ ಕಟ್ಟಡ ನಿರ್ಮಾಣ ಕ್ಷೇತ್ರ ಅನಿವಾರ್ಯವಾಗಿ ನೈಫಥ್ಯಕ್ಕೆ ಸರಿಯಲಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆಯ ಅಧ್ಯಕ್ಷ ಜಿ.ಎಂ ರವೀಂದ್ರ ವಿಷಾಧ ವ್ಯಕ್ತಪಡಿಸಿದರು.
ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ರಸ್ತೆಗೆ ಸುರಿಯುವ ಮೂಲಕ ಪ್ರತಿಭಟಿಸಿದ ಬಿಲ್ಡರ್ಸ್ ಅಸೋಸಿಯೇಷನ್ ನ ನೂರಾರು ಸದಸ್ಯರು, ಸಿಮೆಂಟ್ ಮತ್ತು ಸ್ಟೀಲ್ ದರಗಳನ್ನು ನಿಯಂತ್ರಣಕ್ಕೆ ತನ್ನಿ ಎಂದು ಘೋಷಣೆಗಳನ್ನು ಕೂಗಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆಯ ಅಧ್ಯಕ್ಷ ಜಿ. ಎಂ ರವೀಂದ್ರ, ಕಟ್ಟಡ ನಿರ್ಮಾಣ ಕ್ಷೇತ್ರ ದೇಶದ ಜಿಡಿಪಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. 60 ಮಿಲಿಯನ್ ಕಾರ್ಮಿಕರನ್ನು ಹೊಂದಿರುವ ಈ ಕ್ಷೇತ್ರ ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ನೀಡಿರುವ ಕ್ಷೇತ್ರವಾಗಿದೆ. ಕಟ್ಟಡ ನಿರ್ಮಾಣಕ್ಕೆ ಪ್ರಮುಖ ಕಚ್ಚಾವಸ್ತುವಾಗಿ ಸಿಮೆಂಟನ್ನು ಬಳಸಲಾಗುತ್ತದೆ. ಸಿಮೇಂಟ್ ಹಾಗೂ ಸ್ಟೀಲ್ ಕಟ್ಟಡ ಕಾಮಗಾರಿಯ ಅತ್ಯಂತ ಅವಶ್ಯಕ ಕಚ್ಚಾ ವಸ್ತುಗಳು. ಈ ವಸ್ತುಗಳ ದರವನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸಿಮೆಂಟ್ ಉತ್ಪಾದಕರು ತಮ್ಮಲ್ಲೇ ತಂಡವನ್ನು ರಚಿಸಿಕೊಂಡು ಬೆಲೆಯನ್ನು ಹೆಚ್ಚಿಸುತ್ತಿರುವ ಬಗ್ಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾಂಪಿಟೇಷನ್ ಕಮಿಷನ್ ಗೆ ದೂರು ನೀಡಿತ್ತು. ಇದರ ವಿಚಾರಣೆ ನಡೆಸಿದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಬಿಲ್ಡರ್ಸ್ ಅಸೋಸಿಯೇಷನ್ ಗೆ 6307 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸಿಕೊಡುವಂತೆ ಆದೇಶ ನೀಡಿದೆ. ಈ ಪ್ರಕರಣದ ಮೇಲ್ಮನವಿಯ ತನಿಖೆ ಇನ್ನೂ ಕೂಡಾ ಸುಪ್ರೀಂ ಕೋರ್ಟಿನಲ್ಲಿದೆ.
ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಅನಿಯಂತ್ರಿತವಾಗಿ ಬೆಲೆ ಹೆಚ್ಚಿಸುವುದು, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಪಡೆಯಲು ಯತ್ನಿಸುವುದು ಹಾಗೂ ಕೃತಕ ಅಭಾವ ಸೃಷ್ಟಿಸುವುದನ್ನ ತಪ್ಪಿಸಬೇಕಾಗಿದೆ. ಈ ರೀತಿಯ ಬೆಲೆ ಏರಿಕೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡಲಿದ್ದು, ಸರಕಾರಿ ಯೋಜನೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಮೂರು ವರ್ಷಗಳ ಕಂಪನಿಗಳ ಉತ್ಪಾದನಾ ಸಾಮರ್ಥ್ಯ ಹಾಗೂ ಉತ್ಪಾದನೆಯಾದ ಪ್ರಮಾಣ ನೋಡಿದಲ್ಲಿ ಸಿಮೆಂಟ್ ಕಂಫನಿಗಳ ವ್ಯತಿರಿಕ್ತ ಹಿತಾಸಕ್ತಿಯನ್ನು ಕಾಣಬಹುದಾಗಿದೆ. ಬೇಕಂತಲೇ ತಮ್ಮ ಸಾಮರ್ಥ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಕೃತಕ ಅಭಾವನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.