ಮುಂದುವರಿದ ಕಣದಲ್ಲಿ ಒಣ ಹಾಕಿದ ಕಾಫಿ ಮಳೆನೀರಿಗೆ ಕೊಚ್ಚಿ ಹೋಗಿದೆ. #avintvcom
1 min read
ಮೂಡಿಗೆರೆ ತಾಲ್ಲೂಕಿನಾದ್ಯಂತ ಮುಂದುವರಿದ ಮಳೆ
ಮಳೆಗೆ ಕೊಚ್ಚಿ ಹೋದ ಕಣದಲ್ಲಿ ಒಣ ಹಾಕಿದ ಕಾಫಿ
ಮೂಡಿಗೆರೆಯಲ್ಲಿ 5 ದಿನ ಮಳೆ ಮುಂದುವರಿಕೆ
ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆ ಮುಂದುವರಿದಿದ್ದು ಬಣಕಲ್, ಮಾಲಿಂಗನಾಡು , ಕೊಟ್ಟಿಗೆಹಾರ ಭಾಗದಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿ ಮಣ್ಣು ಪಾಲಾಗಿದೆ.
ಗಬ್ಗಲ್, ಮಾಗುಂಡಿ, ಮಾಲಿಂಗನಾಡು, ಕೂವೆ, ಬಾಳೂರು, ಕೊಟ್ಟಿಗೆಹಾರ, ಬಣಕಲ್, ಕೊಡೆಬೈಲ್, ಗುತ್ತಿ, ದಾರದಹಳ್ಳಿ, ಫಲ್ಗುಣಿ, ಭಾರತಿಬೈಲ್ ಮುಂತಾದ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ಮಳೆ ಸುರಿಯತೊಡಗಿದ್ದು ಮಾಳಿಗನಾಡಿನ ವೀರೇಶ್ಗೌಡ ಎಂಬುವವರ ಕಣದಲ್ಲಿ ಒಣ ಹಾಕಿದ ಕಾಫಿ ಮಳೆನೀರಿಗೆ ಕೊಚ್ಚಿ ಹೋಗಿದೆ.
ಮಂಗಳವಾರ ದಿಡೀರ್ ಮಳೆ ಪ್ರಾರಂಭವಾಗಿದ್ದು ಕಣದಿಂದ ಹರಿದು ಹೋಗುವ ಮಳೆ ನೀರಿನ ಜೊತೆಗೆ ಕಾಫಿ ಕೊಚ್ಚಿ ಹೋಗದಿರಲಿ ಎಂದು ಕಣದ ಸುತ್ತ ಹುಲ್ಲನ್ನು ಅಡ್ಡವಾಗಿ ಇಟ್ಟಿದ್ದರು. ಆದರೆ ಮಳೆ ಧಾರಾಕಾರವಾಗಿ ಸುರಿಯತೊಡಗಿದ್ದು ಮಳೆಯ ರಭಸಕ್ಕೆ ಅಡ್ಡ ಇಟ್ಟಿದ್ದ ಹುಲ್ಲುಕೂಡ ಕೊಚ್ಚಿ ಹೋಗಿದೆ. ಮಳೆಯ ನೀರಿನ ಜೊತೆಗೆ ತೇಲಿಕೊಂಡು ಕೊಚ್ಚಿ ಹೋದ ಕಾಫಿಯನ್ನು ಜಾಲರಿಯಳ್ಳಿ ಸೋಸುತ್ತಿರುವ ದೃಶ್ಯ ಮನ ಕಲಕುವಂತಿತ್ತು.
ಈ ಬಗ್ಗೆ ಮಾತನಾಡಿದ ಮಾಲಿಂಗನಾಡಿನ ಕಾಫಿ ಬೆಳೆಗಾರರಾದ ವೀರೇಶ್ಗೌಡ, ಒಂದೆಡೆ ಕಾರ್ಮಿಕರ ಕೊರತೆಯ ನಡುವೆ ಕಳೆದ ವರ್ಷದ ಅತಿವೃಷ್ಟಿಯಿಂದ ಈ ಬಾರಿಯ ಫಸಲು ಕಡಿಮೆಯಾಗಿತ್ತು. ಅಳಿದುಳಿದ ಕಾಫಿ ಫಸಲು ಕೈ ಸೇರುವ ಸಮಯದಲ್ಲಿ ಈಗ ಮತ್ತೆ ಅಕಾಲಿಕ ಮಳೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಮಾಲಿಂಗನಾಡಿನ ತೋಟದ ಕಾರ್ಮಿಕ ಸುದೀಪ್ ಮಾತನಾಡಿ ಕಾಫಿಯನ್ನು ಮಳೆಯಿಂದ ರಕ್ಷಿಸುವುದು ಸವಾಲಾಗಿದೆ. ಅಕಾಲಿಕ ಮಳೆಯಿಂದ ಕಾಫಿ ಕುಯ್ಲನ್ನು ಬಹುತೇಕ ಕಡೆಗಳಲ್ಲಿ ನಿಲ್ಲಿಸಲಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.
ಮೂಡಿಗೆರೆಯಲ್ಲಿ 5 ದಿನ ಮಳೆ ಮುಂದುವರಿಕೆ
ಮುಂದಿನ 5 ದಿನಗಳಲಿ ಸಾಧಾರಣ ಮಳೆಯಾಗುವ ಸಂಭವವಿದ್ದು ಭತ್ತ, ಕಾಫಿ, ಅಡಿಕೆ ಕುಯ್ಲನ್ನು ಮೂರ್ನಾಲ್ಕು ದಿನಗಳ ಮುಂದೂಡುವಂತೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞರಾದ ಪ್ರವೀಣ್ ಕೆ.ಎಂ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಮಳೆಯಾಗುವ ಸಾಧ್ಯತೆ ಇರುವುದರಿಂದ ಭತ್ತದ ಕಟಾವನ್ನು ಮುಂದೂಡುವದು ಸೂಕ್ತವಾಗಿದೆ. ಕಟಾವಾದ ಭತ್ತ ಹಾಗೂ ಭತ್ತದ ಹುಲ್ಲನ್ನು ಸುರಕ್ಷಿತ ಪ್ರದೇಶದಲ್ಲಿ ಇರಿಸುವುದು ಸೂಕ್ತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ.
ಬ್ಯೂರೊ ನ್ಯೂಸ್.