ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ, ಎಪಿಎಂಸಿ ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾಗುತ್ತದೆ ಸಿದ್ದಣ್ಣ ತೇಜಿavintvcom
1 min readಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ, ಎಪಿಎಂಸಿ ಮತ್ತು ಅಗತ್ಯ ವಸ್ತುಗಳ ಸಂಗ್ರಹ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾಗುತ್ತದೆ. ಈ ತಿದ್ದುಪಡಿ ಕಾಯ್ದೆಗಳನ್ನು ಮರಳಿ ವಾಪಸ್ಸು ಪಡೆಯಲು ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ಈ ಹೋರಾಟದ ಕುರಿತು ಬಿಜೆಪಿಯ ಈ ಮುಖಂಡರು ವಿವಿಧ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದರ ಮೂಲಕ ಸಮಸ್ತ ರೈತ ಭಾಂದವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 25 ರಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ರಾಜ್ಯ ಸಚಿವರಾದ ಜಗದೀಶ ಶೆಟ್ಟರ ರವರು ರೈತರ ಹೋರಾಟವನ್ನು ದಲ್ಲಾಳಿಗಳ ಹೋರಾಟ, ಬೋಗಸ್ ಹೋರಾಟ ಎಂದು ಹೇಳಿಕೆ ನೀಡುವುದರ ಮೂಲಕ ಸಮಸ್ತ ರೈತರನ್ನು ಹೀಯಾಳಿಸಿದ್ದಾರೆ ಮತ್ತು ಬಿಜೆಪಿಯ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ.
ಬಿಜೆಪಿ ಪಕ್ಷವು ಅದಾನಿ, ಅಂಬಾನಿ ಯಂತಹ ದೈತ್ಯ ದಲ್ಲಾಳಿಗಳಿಗೆ ಅನುಕೂಲ ಮಾಡಿಕೋಳ್ಳಲು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕಪಿ ಮುಷ್ಠಿಯಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಸರ್ಕಾರ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ಕಾರ್ಪೊರೇಟ್ ದಲ್ಲಾಳಿಗಳು ನೀಡುವ ಹಣದಿಂದಲೇ ಇಂದು ಬಿಜೆಪಿ ಪಕ್ಷದ ಉಸಿರು ಇದೆ. ದೈತ್ಯ ಕಾರ್ಪೊರೇಟ್ ಸಂಸ್ಥೆಗಳ ದಲ್ಲಾಳಿಗಳ ರಕ್ಷಣೆಗೆ ಇಡಿ ಬಿಜೆಪಿ ಪಕ್ಷ ನಿಂತಿದೆ. ಮುಖ್ಯವಾಗಿ ನಮ್ಮ ಭಾಗದ ಇಬ್ಬರು ಮಹಾನ್ ಮದ್ಯವರ್ತಿಗಳು ಕಾರ್ಪೋರೇಟ್ ದಲ್ಲಾಳಿಗಳ ಪರ ನಿಂತಿದ್ದಾರೆ ಆ ಮಹಾನ್ ವ್ಯಕ್ತಿಗಳೇ, ಪ್ರಹ್ಲಾದ ಜೋಶಿ ಮತ್ತು ಜಗದೀಶ ಶೆಟ್ಟರ. ಈ ಇಬ್ಬರು ಮದ್ಯವರ್ತಿಗಳಿಗೆ ಮುಂದಿನ ದಿನಗಳಲ್ಲಿ ದೇವರು ಒಳ್ಳೆಯ ಬುದ್ಧಿ ನೀಡಲಿ ಎನ್ನುವುದು ನಮ್ಮ ಪ್ರಾರ್ಥನೆ.
ವಂದನೆಗಳೊಂದಿಗೆ
ಕರ್ನಾಟಕ ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ
ಸಿದ್ದಣ್ಣ ತೇಜಿ