ಹೇಮಾವತಿ ನದಿ ಮೂಲ ಶ್ರೀ ಮಹಾ ಗಣಪತಿ ದೇವಸ್ಥಾನ
1 min read
ಹೇಮಾವತಿ ನದಿ ಮೂಲ ಶ್ರೀ ಮಹಾ ಗಣಪತಿ ದೇವಸ್ಥಾನ
ಜಾವಳಿ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ 577122
ನದಿ ಮೂಲ ಮತ್ತು ಋಷಿ ಮೂಲವನ್ನು ಹುಡುಕಲು ಯತ್ನಿಸಬಾರದು ಎಂಬ ಮಾತಿದೆ. ಉಕ್ತಿಗೆ ವ್ಯತಿರಿಕ್ತವಾಗಿ ನಾವಿಂದು ಹೇಮಾವತಿ ನದಿ ಮೂಲ . ಮತ್ತು ನದಿ ಮೂಲದಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದ ಕುರಿತು ಇಲ್ಲಿ ಉಲ್ಲೇಖಿಸುತ್ತಿದ್ದೇವೆ. ಈ ಸ್ಥಳ ರಮ್ಯವಾದ ಮಲೆನಾಡಿನ ಸುಂದರ ಪರಿಸರ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದಲ್ಲಿದೆ. ಇದಕ್ಕೆ ಪೂರಕವಾದ ಕೆಲವೊಂದು ಅಂಶಗಳು ಈ ಕೆಳಗಿನಂತಿವೆ
ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಸತ್ಯಕಾಮ ಎಂಬ ಹುಡುಗನು ಗೌತಮ ಮಹರ್ಷಿಗಳ ಬಳಿ ವಿನಂತಿಸಿಕೊಳ್ಳುತ್ತಾನೆ. ಆಗ ಗೌತಮ ಮಹರ್ಷಿಗಳು ಇವನ ಗೋತ್ರವನ್ನು ಕೇಳಿದಾಗ ನನಗೇನು ಗೊತ್ತಿಲ್ಲವೆಂದು ಅಮ್ಮನಲ್ಲಿ ಕೇಳಿಕೊಂಡು ಬರುವುದಾಗಿ ಹೇಳಿ ಮನೆಗೆ ಹೋಗಿ ನನ್ನ ತಂದೆಯ ಹೆಸರೇನೆಂದು ತಾಯಿಯ ಬಳಿ ಕೇಳುತ್ತಾನೆ. ಆಗ ತಾಯಿಯು ನಾನು ಒಂದು ಮನೆಯಲ್ಲಿ ಕೆಲಸಮಾಡಿಕೊಂಡಿದ್ದಾಗ ನಿನ್ನ ಜನನವಾಯಿತು ಆತನ ಹೆಸರು ಗೊತ್ತಿಲ್ಲವೆಂದು ಸತ್ಯಕಾಮನಿಗೆ ಹೇಳುತ್ತಾಳೆ. ನನ್ನ ಹೆಸರು ಜಾಬಲ ಆಗಿರುವುದರಿಂದ ನೀನು ಇನ್ನು ಮುಂದೆ “ಜಾಬಲ ಸತ್ಯಕಾಮ” ಎಂದು ಹೆಸರಿರಿಸಿಕೊಂಡು ಮಹರ್ಷಿಗಳ ಬಳಿ ಹೋಗು ಎನ್ನತ್ತಾಳೆ. ಸತ್ಯಕಾಮನು ಗೌತಮ ಮರ್ಷಿಗಳ ಬಳಿಗೆ ಹೋಗಿ ತನ್ನ ತಾಯಿ ಹೇಳಿದ ವಿಚಾರವನ್ನು ಹೇಳುತ್ತಾನೆ. ಆಗ ಗೌತಮ ಮಹರ್ಷಿಗಳು ತಮ್ಮ ದಿವ್ಯ ದೃಷ್ಟಿಯಿಂದ ಸತ್ಯಕಾಮನ ಪೂರ್ವಪರಗಳನ್ನು ತಿಳಿದುಕೊಂಡು ಅವನ ತಂದೆ ಒಬ್ಬ ಬ್ರಾಹ್ಮಣನಗಿದ್ದು. ಈತನನ್ನು ಶಿಷ್ಯನನ್ನಾಗಿ ಸ್ವೀಕರಿಸುವುದಾಗಿ ತಿಳಿಸುತ್ತಾನೆ. ನಂತರ, ಸತ್ಯಕಾಮನಿಗೆ ಬ್ರಹೋಪದೇಶ ಮಾಡಿ ಆತನಿಗೆ ಮುನ್ನೂರು ಹಸುಗಳನ್ನು ಕೊಟ್ಟು ಈ ಹಸುಗಳ ಸಂಖ್ಯೆ ಒಂದು ಸಾವಿರ ಆಗುವ ತನಕ ನೋಡಿ ಕೊಳ್ಳುವಂತೆ ಹೇಳುತ್ತಾರೆ.
ಸತ್ಯಕಾಮನು ಹಸುಗಳನ್ನು ಕಾಡಿಗೆ ಕೊಂಡೊಯ್ಯುತ್ತಾನೆ. ಅಲ್ಲಿ ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಅಗ್ನಿ, ನೀರು ಆತನಿಗೆ ಬ್ರಹ್ಮತ್ವದ ಜ್ಞಾನವನ್ನು ಮತ್ತು ಅಧಿಶಕ್ತಿಯ ಪರಿಚಯವನ್ನು ಒದಗಿಸುತ್ತವೆ. ಪಂಚಭೂತಗಳಿಂದ ಆತನು ಬ್ರಹ್ಮತ್ವದ ಉಪದೇಶ ಪಡೆದ ಬಳಿಕ ಆತನು ಗುರುಗಳು ಕೊಟ್ಟ ಹಸುಗಳೊಂದಿಗೆ ತಪಸ್ಸಿಗೆ ತೆರಳುತ್ತಾನೆ.
ಹಾಗೆ ತಪಸ್ಸಿಗೆ ಕುಳಿತ ಸ್ಥಳವೇ ಈಗಿನ ಜಾವಳಿಯ ಸಮೀಪದ ಹೇಮಾವತಿ ಗುಡ್ಡ ಎಂಬ ಐತಿಹ್ಯವಿದೆ. ಆತನು ಸ್ಥಾಪಿಸಿದ ಆಶ್ರಮ (ಈಗಿನ ಹೇಮಾವತಿ ಗುಡ್ಡದ ಬಳಿ ನೀರಿನಲ್ಲದೆ ಇರುವುದು ಆತನ ಗಮನಕ್ಕೆ ಬಂತು ಆಗ ಆತನು ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಈ ತಪಸ್ಸು ನಿರ್ವಿಷ್ಟವಾಗಿ ನಡೆಯಲಿ ಎಂದು ತಪಶಕ್ತಿಯಿಂದ ಗಣಪತಿಯನ್ನು ಸೃಷ್ಟಿಸಿಕೊಂಡು ಪೂಜಿಸುತ್ತಾನೆ. ಹೀಗೆ ಬಹುಕಾಲ ತಪಸ್ಸನ್ನು ಮಾಡಿದ ನಂತರ ಪಾರ್ವತಿಯು ಪ್ರತ್ಯಕ್ಷವಾಗಿ ನಿನಗೆ ಏನು ವರ ಬೇಕೆಂದು ಕೇಳುತ್ತಾಳೆ. ಅದಕ್ಕೆ ಸತ್ಯಕಾಮನು ನಾನು ತಪಸ್ಥರ್ಯೆಗೆ ಈ ಜಾಗವನ್ನು ಆರಿಸಿಕೊಂಡಿರುವುದಾಗಿಯೂ ನನ್ನ ಗುರುಗಳು ಈ ಹಸುಗಳನ್ನು ಕೊಟ್ಟು ಅದು ಸಾವಿರ ಸಂಖ್ಯೆ ಆಗುವ ತನಕ ನೋಡಿಕೊಳ್ಳುವಂತೆ ಹೇಳಿರುತ್ತಾರೆ ಈ ಜಾಗದಲ್ಲಿ ತನ್ನ ಹಸುಗಳಿಗೆ ಕುಡಿಯುಲು ನೀರಿಲ್ಲವೆಂತಲೂ ನಿವೇದಿಸುತ್ತಾನೆ.
ಆಗ ದೇವಿಯು ಹಿಮ ಕರಗಿ ನೀರಾಗಿ ಕೆಳಗಿನ ದಂಡಕಾರಣ್ಯದ ಮೂಲಕ ಒಣ ಭೂಮಿಯಲ್ಲಿ ಹರಿಯಲಿ ಎಂದು ವರವನ್ನು ಕೊಟ್ಟಳು. ಆಗ ಹಿಮದ ಗೆಡ್ಡೆಗಳು ಕರಗಿ ನೀರಾಗಿ ಹರಿಯಲಾರಂಭಿಸಿದವು ಈಗಿನ ಹಾಸನ ಜಿಲ್ಲೆಯು ಅಂದಿನ ದಂಡಕಾರಣ್ಯದ ಒಂದು ಭಾಗವಾಗಿತ್ತು. ಮತ್ತು ಆ ಭಾಗವು ಒಣ ಭೂಮಿಯಾಗಿತ್ತು. ಹಿಮ ವಾಹಿನಿಯು ಹರಿದು ದಂಡಕಾರಣ್ಯದ ಈ ಒಣ ಭೂಮಿಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲನ ಜನ ಜೀವನವೇ ಬದಲಾಗಿ ಅವರಿಗೆ ಸುಖ ಸಂಪತ್ತು ತುಂಬಿ ಬಂತು.
ಆಗ ಜನರು ಈ ನದಿಯನ್ನು ಹೇಮವಾಹಿನಿ (ಹೇಮ ಅಂದರೆ ಚಿನ್ನ ಎಂದು ಕರೆಯಲಾರಂಬಿಸಿ ಕ್ರಮೇಣ ಹೇಮಾವತಿ ನದಿ ಎಂದಾಯಿತು. ಹಾಸನ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾದ ಸಕಲೇಶಪುರದ ಹೆಸರು ಕೂಡ ಸಂಸ್ಕೃತದ ಸಕಲ ಐಶ್ವರ್ಯ+ಪುರ ಎಂಬುದರಿಂದ ರಚಿತವಾಗಿದೆ. ಸಕಲೇಶಪುರ ಎಂದರೆ ಸಕಲ ಸಂಪತ್ತಿನ ಪಟ್ಟಣ ಎಂದರ್ಥ. ಹೇಮವಾಹಿನಿಯಿಂದಾಗಿ ಸಕಲೇಶಪುರವು ಸಂಪದ್ಭರಿತವಾಯಿತು. ಜಾಬಾಲಿ ಆಶ್ರಮ ಸ್ಥಾಪಿಸಿದ್ದ ಊರು ಜಾಬಾಲಪುರ ಎಂದು ಕರೆಯಲ್ಪಟ್ಟಿತು. ಕ್ರಮೇಣ ಜಾಬಾಲಿಪುರವು ಜಾವಳಿಯಾಗಿ ಮಾರ್ಪಟ್ಟದೆ. ಹೇಮಾವತಿ ನದಿ ಉಗಮವಾಗಿದ್ದು ಹೀಗೆ. ಇದು ಕೆಳಭಾಗಕ್ಕೆ ಹರಿದು ಹಾಸನ ಜಿಲ್ಲೆಗೆ ನೀರುಣಿಸಿ ಸಂಪತ್ತನ್ನು ಕರುಣಿಸುತ್ತಿದೆ.
19 ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಅಧಿಯಲ್ಲಿ ಧಾರ್ಮಿಕ ಶ್ರದ್ದೆಯುಳ್ಳ ಶಾಸ್ತ್ರ ಮತ್ತು ವೇದಪಾರಂಗತರಾದ ಶ್ರೀಯುತ ಗಣೇಶ್ ರಾವ್ ಎಂಬುವವರು ಜಾಬಾಲಿ ಕುರಿತಾದ ಅಧ್ಯೆಯನ ಮತ್ತು ಸಂಶೋಧನೆ ಮಾಡಿದಾಗ ಮಂಜನಕಟ್ಟಿಗೆ ಸಮೀಪವಿರುವ ನೀರಿನ ಕೊಳದ ಬಳಿ ಕಲ್ಲನಿಂದ ಉದ್ಭವವಾದ ಗಣಪತಿ ಪ್ರತಿಮೆಯೊಂದನ್ನು ಕಂಡರು ಇದು ಜಾಬಾಲಿ ಋಷಿಯಿಂದ ಪೂಜಿಸಲ್ಪಟ್ಟ ಪ್ರತಿಮೆ ಎಂಬ ಐತಿಹ್ಯವಿದೆ. ಆ ಪ್ರತಿಮೆಯನ್ನು ಶ್ರೀಯುತ ಗಣೇಶ್ ರಾವ್ ಎಂಬುವದು ಹೇಮಾವತಿ ನದಿಯ ಉಗಮಸ್ಥಳಕ್ಕೆ ಕೊಂಡುಹೋಗಿ ಪ್ರತಿಷ್ಠಾಪಿಸಿದರು. ಆ ನಂತರ, ದೇವಾಲಯದ ಮುಂದೆ ಕೆರೆ ನಿರ್ಮಿಸಿದರು. ಇಲ್ಲಿ ಹೇಮಾವತಿ ನದಿಯ ನೀರು ಕೆರೆಗೆ ಸೇರಿ ಗುಪ್ತಗಾಮಿನಿಯಾಗಿ ಹರಿಯುತ್ತದೆ.
ಈ ದೇವಸ್ಥಾನವನ್ನು 1974 ರಲ್ಲಿ ನಿರ್ಮಾಣಮಾಡಲಾಗಿದೆ. ಎಂದು ಇತಿಹಾಸ ಹೇಳುತ್ತದೆ. 1908 ರಲ್ಲಿ ರಥೋತ್ಸವ ಪ್ರಾರಂಭವಾಗಿ 1962ರವರೆಗೂ ನಡೆಯುತ್ತಿತ್ತು 1962 ರಲ್ಲಿ ರಥವು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿತ್ತು. ನಂತರ ಪಲ್ಲಕ್ಕಿ ಉತ್ಸವವನ್ನು ಪ್ರಾರಂಭಿಸಿ.ಮಾಘಮಾಸದ ಶುಕ್ಲ ಪಕ್ಷದ ಹೊತ್ತಿಗೆ ನಡೆಲಾಗುತ್ತಿದೆ. ಬಂದಂತಹ ಭಕ್ತಾಧಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.