ಜಿಲ್ಲೆಯಲ್ಲಿ ಭೂ ಕಬಳಿಕೆಯಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಮಂಜುನಾಥಗೌಡ ಅಗ್ರಹ..
1 min read
ಜಿಲ್ಲೆಯಲ್ಲಿ ಭೂ ಕಬಳಿಕೆಯಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಮಂಜುನಾಥಗೌಡ ಅಗ್ರಹ..
ಚಿಕ್ಕಮಗಳೂರು ಜಿಲ್ಲೆಯ ಭೂ ಕಬಳಿಕೆಯಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಸರಕಾರ ಹಾಗೂ ಮೂಡಿಗೆರೆ ತಹಸೀಲ್ದಾರರಿಗೆ ಆದೇಶ ಮಾಡಿ 3 ವರ್ಷ ಕಳೆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡ ದೂರಿದರು.
ವಾಹಿನಿಯೊಂದಿಗೆ ಮಾತನಾಡಿ, ತಾಲೂಕಿನ ಬಾಳೂರು ಗ್ರಾಮ ಸರ್ವೆ ನಂ 168ರಲ್ಲಿ ಕೆಲವರಿಗೆ 4.38 ಎಕರೆ ಜಮೀನು ಅಕ್ರಮವಾಗಿ ಮಂಜೂರು ಮಾಡಿದ್ದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ತಾವು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಆದರೆ, ಸೂಕ್ತ ನಿಯಮ ಅನುಸರಿಸದೇ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳ ಮೇಲೆ ಕ್ರಮ ವಹಿಸದೇ ಪ್ರಕರಣ ವಜಾಗೊಳಿಸುವಲ್ಲಿ ಅಧಿಕಾರಿಗಳು ಜಯಶೀಲರಾಗಿದ್ದರು. ಉಚ್ಚ ನ್ಯಾಯಾಲಯ ಪ್ರಕರಣವನ್ನು ಕ್ರಮಬದ್ಧ ಹಾಗೂ ನಿಯಮ ಅನುಸರಿಸಿ ದಾಖಲಿಸಲು ಸರಕಾರಕ್ಕೆ ಮತ್ತು ತಹಸೀಲ್ದಾರರಿಗೆ ಆದೇಶ ಮಾಡಿ 3 ವರ್ಷ ಕಳೆದಿದ್ದು, ಇದೂವರೆಗೂ ಯಾವುದೇ ಕ್ರಮ ವಹಿಸಿಲ್ಲ.
ನ್ಯಾಯಾಲಯದ ಆದೇಶದಂತೆ ಸರಕಾರ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿ ಹಾಗೂ ಕೆರೆ ಒತ್ತುವರಿ ತಡೆಯಲು 8 ದಿನದೊಳಗೆ ಕ್ರಮ ವಹಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಶಾಂತಿಯುತವಾಗಿ ದೂರು ನೀಡಲಾಗುವುದು ಎಂದು ಹೇಳಿದರು.