ಜಗತ್ತಿನ ಎಲ್ಲ ಸಾಹಿತ್ಯಗಳ ತಾಯಿ ಬೇರು ಜನಪದವೆ
1 min read
*ಚಿಕ್ಕಮಗಳೂರು03:*
ಜಗತ್ತಿನ ಎಲ್ಲ ಸಾಹಿತ್ಯಗಳ ತಾಯಿ ಬೇರು ಜನಪದವೆ ಆಗಿದೆ. ಜಾನಪದವನ್ನು ಬಿಟ್ಟು ಅದ್ಯಾವುದೇ ಸಾಹಿತ್ಯವು ಹೊರ ಹೊಮ್ಮಲು ಸಾಧ್ಯವಿಲ್ಲ, ಕೃಷಿ ಮೂಲಾಧಾರವಾದ, ಶಮಸಂಸ್ಕೃತಿಯ ಹಿನ್ನೆಲೆ ಇರುವ ಈ ಜಾನಪದವು ವಾಸ್ತವದ ಅನುಭವದ ಮೂಸೆಯಿಂದ ಜನಿಸಿದಂತಹವು. ಇಲ್ಲಿನ ಪ್ರತಿ ಅನುಭವವು ಹೊಸ ಹೊಸ ತಾಜಾತನದೊಂದಿಗೆ ಕೂಡಿರುತ್ತದೆ, ಅದೆಷ್ಟೇ ಬಾರಿ ಜನಪದವನ್ನು ಮೆಲುಕು ಹಾಕಿದರು ಅದು ನಮ್ಮೊಳಗೆ ಹೊಸ ಹೊಸ ರುಚಿ ಪಡೆಯುತ್ತಾ ಹೋಗುತ್ತದೆ, ನಮ್ಮೊಳಗೊಂದು ಸಧುಬಿರುಚಿಯನ್ನು ತುಂಬುತ್ತದೆ, ಸೃಜನಶೀಲರನ್ನಾಗಿ ರೂಪಿಸುತ್ತದೆ,ಇದು ಜನಪದಕ್ಕಿರುವ ತಾಕತ್ತು.
ಪೀಠಿಕೆ ಇಷ್ಟು ಮಾತ್ರ ಸಾಕು ಅನಿಸುತ್ತದೆ,,,,,,
ನಾನು ಈಗ ಹೇಳಲು ಹೊರಟಿರುವುದು ಕಳೆದ ಶತಮಾನದ 1967ರ ಸಾಲಿನ ಹಳೇ ಸಂಗತಿ,
ಆಗ ನಾವೆಲ್ಲ ಇನ್ನೂ ತಾಯಿಯ ಎದೆ ಹಾಲು ಕುಡಿಯುತ್ತಿದ್ದ ಸಮಯ, ರಚ್ಚೆ ಮಾಡುತ್ತಿದ್ದ ನಮ್ಮನ್ನು ನಮ್ಮವ್ವ ತೊಟ್ಟಿಲಿಗೆ ಹಾಕಿ ಜೊ,, ಜೊ,, ಮಾಡುತ್ತಾ ಜನಪದದ ಐಸಿರಿ ಯೊಂದಿಗೆ ಅವಳ ಕಂಠಸಿರಿಯ ಮೂಲಕ ಪದಕ್ಕೆ ಪದ ಕಟ್ಟಿ ನಮ್ಮನ್ನು ಮುಟ್ಟಿ ತಟ್ಟಿ ಬೆಚ್ಚ ಬೆಚ್ಚನೆಯ ಹಬೆಯ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಮಲಗಿಸುತ್ತಿದ್ದ ಕಾಲ ಅದು.
ಹೀಗೆ ನಾವು ತೊಟ್ಟಿಲಲ್ಲಿ ಮಲಗಿ ತೂಗಾಡುತ್ತಿದ್ದ ಅ ಕಾಲಘಟ್ಟದಲ್ಲಿ, ಅಂದರೆ 1967ರಲ್ಲಿ, ಚಿಗುರೆಲೆ ವೀಳ್ಯದೆಲೆಗೆ ಹೆಸರಾಗಿರುವ, ಜನಪದ ಸಂಸ್ಕೃತಿಯ ತವರೂರಿನಂತಿರುವ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಕರ್ನಾಟಕದ ಪ್ರಪ್ರಥಮ ರಾಜ್ಯ ಮಟ್ಟದ ಜಾನಪದ ಸಮ್ಮೇಳನವು ಜನಪದ ಕೋಗಿಲೆ ಕೆ.ಆರ್. ಲಿಂಗಪ್ಪ ಮತ್ತು ನಾಡೋಜ ಗೊರುಚ ಅವರ ಮುಖಂಡತ್ವದಲ್ಲಿ ಜರುಗಿತ್ತು. ಇವರಿಬ್ಬರೂ ಆ ಸಮ್ಮೇಳನಕ್ಕೆ ಜೋಡಿತ್ತಿನಂತೆ ದುಡಿದಿದ್ದರು.
ಇಂಥಹ ಐತಿಹಾಸಿಕವಾದ ರಾಜ್ಯಮಟ್ಟದ ಜನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ವರಕವಿ ದ.ರಾ ಬೇಂದ್ರೆಯವರು. ಅಂದು ಈ ಸಮ್ಮೇಳನವನ್ನು ಉದ್ಘಾಟನೆ ಮಾಡಿದವರು ಮೈಸೂರಿನ ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಬಹುದ್ದೂರ್ ಅವರು.
ಈ ಸಮ್ಮೇಳನದ ಸವಿ ನೆನಪಿಗಾಗಿ ಅಂದು ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ 800ಕ್ಕೂ ಹೆಚ್ಚು ಪುಟಗಳ ಬೃಹತ್ ಗ್ರಂಥವನ್ನು ಹೊರತರಲಾಗಿತ್ತು.
ಈ ಜಾನಪದ ಸ್ಮರಣ ಗ್ರಂಥದಲ್ಲಿ
ನಾಡಿನ ಅನೇಕ ಜಾನಪದ ವಿದ್ವಾಂಸರ ಅಭಿಪ್ರಾಯಗಳು ಮತ್ತು ಅವರ ಆಳವಾದ ಚಿಂತನೆಗಳುಳ್ಳ ಜಾನಪದ ಹಿನ್ನೆಲೆ ಇರುವ ಮಹತ್ವಪೂರ್ಣ ಲೇಖನಗಳು ಪ್ರಕಟಣೆ ಆಗಿವೆ.
ಈ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಜಾನಪದ ಸಾಹಿತ್ಯ ಸಮ್ಮೇಳನದ ಈ ಸ್ಮರಣ ಗ್ರಂಥದಲ್ಲಿರುವ ಲೇಖನಗಳನ್ನು ಒಮ್ಮೆ ಓದಿದರೆ, ಒಂದರ್ಥದಲ್ಲಿ ಇಡೀ ಜಾನಪದವನ್ನು ತಿಳಿದಂತೆ ಆಗುತ್ತದೆ, ಆ ಮಟ್ಟದ , ಆ ಎತ್ತರ ಮತ್ತು ಆಳವಾದ ಸಾರಸತ್ವ ಇರುವ ಲೇಖನಗಳು ಇದರೊಳಗೆ ಇವೆ. ವಿದ್ಯಾರ್ಥಿಗಳಿಗೆ ಅಧ್ಯಾಪಕರಿಗೆ ಇದೊಂದು ಬೃಹತ್ ಸಂಶೋಧನಾ ಗ್ರಂಥದಂತೆ ಇದೆ.
ಈ ಬೃಹತ್ ಗ್ರಂಥದ ಪ್ರಥಮ ಪ್ರಕಟಣೆ 1967 ರಲ್ಲಿ ಆಗಿತ್ತು. ನಂತರ 2009ರಲ್ಲಿ ಎರಡನೇ ಆವೃತ್ತಿಯನ್ನು ಹೊರತರಲಾಗಿತ್ತು. ಈಗ ಈ ಪುಸ್ತಕಗಳ ಪ್ರತಿಗಳೆಲ್ಲವೂ ಮಾರಾಟವಾಗಿದ್ದು, ಇಂತಹ ಗ್ರಂಥಕ್ಕೆ ಈಗ ನಾಡಿನಾದ್ಯಂತ ಬಹು ಬೇಡಿಕೆ ಇದ್ದುದ್ದರಿಂದ, ಮಗದೊಮ್ಮೆ ಮೂರನೇ ಆವೃತ್ತಿಯನ್ನು ಚಿಕ್ಕಮಗಳೂರಿನ ಸುದ್ದಿರಾಜು ಪ್ರಕಾಶನ ಹೊರ ತರುತ್ತಿದೆ. ಇದಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜೊತೆಗೆ ನಿಂತಿದೆ.
ಈ ಬೃಹತ್ ಗ್ರಂಥದ ಮೂರನೇ ಆವೃತ್ತಿ ಹೊರಬರಲು ಕಾರಣ ನಾಡೋಜ ಗೊರುಚ ಅವರು.
ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಸಂದರ್ಭದಲ್ಲಿ, ಚಿಕ್ಕಮಗಳೂರಿನ ನಾಗರೀಕರ ಪರವಾಗಿ ಅವರನ್ನು ಸನ್ಮಾನಿಸಲು ಕರೆ ತಂದಿದ್ದೆವು. ಆ ಸಂದರ್ಭದಲ್ಲಿ ಅವರೊಟ್ಟಿಗೆ ಸಂವಾದವನ್ನು ಕೂಡ ಇಟ್ಟುಕೊಂಡಿದ್ದೆವು, ಆ ಸಮಯದಲ್ಲಿ ಸಂವಾದದಲ್ಲಿ ಎದುರಾದ ಅನೇಕ ಪ್ರಶ್ನೆಗಳಿಗೆ ಹಾಸ್ಯ ಬರಿತವಾಗಿ ಕೆಲವೊಮ್ಮೆ ಚುಚ್ಚುಮದ್ದನ್ನು ಕೊಡುವಂತೆ ಉತ್ತರಿಸುತ್ತಿದ್ದರು.
ನಿಮ್ಮ ಮುಂದಿನ ಯೋಜನೆಗಳೇನು? ಮತ್ತೇನು ನಿರೀಕ್ಷೆ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗಳಿಗೆ ಅವರಿಂದ ಬಂದ ಪ್ರತಿಕ್ರಿಯೆಗಳಲ್ಲಿ ಬಹಳ ಮುಖ್ಯವಾದದ್ದು *ಹೊನ್ನ ಬಿತ್ತೇವು ಹೊಲಕ್ಕೆಲ್ಲ* ಈ ಸ್ಮರಣ ಗ್ರಂಥವನ್ನು ಮೂರನೇ ಮುದ್ರಣವಾಗಿ ಮತ್ತೊಮ್ಮೆ ಹೊರ ತರಬೇಕೆಂಬ ಆಸೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಅವರ ಈ ನಿರೀಕ್ಷೆ ಮತ್ತು ಸೂಚನೆಯ ಮೇರೆಗೆ ಸುದ್ದಿ ರಾಜು ಪ್ರಕಾಶನ ಈ ಸ್ಮರಣ ಗ್ರಂಥದ ಮೂರನೇ ಆವೃತ್ತಿ ಹೊರತರುತ್ತಿದೆ.
ಇದೆ 2025ರ ಮಾರ್ಚ್11ರಂದು ಚಿಕ್ಕಮಗಳನ ಕುವೆಂಪು ಕಲಾ ಮಂದಿರದಲ್ಲಿ ಈ ಗ್ರಂಥವು ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀಗಳ ಸಾನಿಧ್ಯದಲ್ಲಿ, ನಾಡೋಜ ಗೊರುಚ ಅವರ ಘನ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ.
ಈ ಸಂಬಂಧ, ಜಿಲ್ಲೆಯ ಸಾಹಿತ್ಯ,ಸಂಸ್ಕೃತಿ ಮತ್ತು ವಿವಿಧ ಜನಪರ ಸಂಘಟನೆಯ ಪ್ರಮುಖರ ಸಮ್ಮುಖದಲ್ಲಿ, ಇಂದು ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಈ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುತ್ತಿದೆ.
•••••••••••••••••••••••••✒️✒️
D. M. Manjunathaswamy