ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರಗೊಳಿಸಿದ ಶಿವಾನಿ ದೀದೀಜಿಯವರ ಪ್ರವಚನ
1 min read
ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರಗೊಳಿಸಿದ ಶಿವಾನಿ ದೀದೀಜಿಯವರ ಪ್ರವಚನ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಿಲ್ಲಾಸಂಚಾಲಕಿ ಭಾಗ್ಯಕ್ಕನವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಪ್ರವಚನ
ಚಿಕ್ಕಮಗಳೂರು: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಇಂದು ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಕುಮಾರಿ ಶಿವಾನಿ ದೀದೀಜಿಯವರ ಸ್ವಾಸ್ಥ್ಯ,ಸಾಮರಸ್ಯ, ಹಾಗೂ ಸಂತೋಷ ಜೀವನಕ್ಕೆ ಜಾಗೃತಿ ಮೂಡಿಸುವ ಸ್ಫೂರ್ತಿದಾಯಕ ಉಪನ್ಯಾಸ ಸೇರಿದ್ದ ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರಗೊಳಿಸುವಲ್ಲಿ ಯಶಸ್ವಿಯಾಯಿತು.
ಶನಿವಾರ ಮುಂಜಾನೆಯಿಂದಲೇ ಸುಭಾಷ್ ಚಂದ್ರಭೋಸ್ ಆಟದ ಮೈದಾನದಲ್ಲಿ ಹಾಕಿದ್ದ ಬೃಹತ್ ಪೆಂಡಾಲಿನಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಿಲ್ಲಾಸಂಚಾಲಕಿ ಭಾಗ್ಯಕ್ಕನವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಪ್ರವಚನಗಳು ಆರಂಭಗೊಂಡವು.
ಸುಮಾರು 9.30ರ ಸುಮಾರಿಗೆ ಸಾಂಕೇತಿಕವಾಗಿ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಬ್ರಹ್ಮಕುಮಾರಿ ಶಿವಾನಿ ದೀದೀಜಿಯವರ ನೀಡಿದ ಆಧ್ಯಾತ್ಮಿಕ ಪ್ರವಚನವನ್ನು ಕಣ್ಣು,ಕಿವಿ, ಮನಸ್ಸುಗಳನ್ನು ಇನ್ನು ಕೇಂದ್ರಿಕರಿಸಿ ಬಹು ನಿಶ್ಯಬ್ದತೆಯಿಂದ ಕುಳಿತು ಕೇಳಿಸಿಕೊಂಡ ನೂರಾರು ಸಂಖ್ಯೆಯ ಆಸ್ತಿಕರೊಳಗಿನ ಆಧ್ಯಾತ್ಮಿಕ ಚಿಂತನೆಗಳು ಜಾಗೃತಗೊಂಡವು.
ಮಲಗುವ ಮೊದಲು ಮತ್ತು ನಿದ್ರೆಯಿಂದ ಎದ್ದ ನಂತರದ ಒಂದು ಗಂಟೆಗಳ ಕಾಲ ಟಿವಿ ಮತ್ತು ಮೊಬೈಲ್ಗಳಿಂದ ದೂರವಿದ್ದು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದ ದೀದಿಜಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ನಂತರದ ಆ ಒಂದು ಗಂಟೆಯ ಅವಧಿ ಮನಸ್ಸು ಶಾಂತವಾಗಿರುವ ಸಮಯವಾದ್ದರಿಂದ ಪರಮಾತ್ಮನ ಧ್ಯಾನ ಮಾಡುವ ಮೂಲಕ ಆತ್ಮಸಂತೋಷ ಹೊಂದಬೇಕು ಎಂದು ಹೇಳಿದರು
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನಕ್ಕೆ
ಮೊಬೈಲ್ ಅತ್ಯವಶ್ಯಕವಾಗಿದ್ದರೂ ಸಹ ಅವಶ್ಯಕತೆಗಷ್ಟೆ ಬಳಸುತ್ತೇವೆ ಎಂದು ಪ್ರತಿಯೊಬ್ಬರು ಸಂಕಲ್ಪಿಸಬೇಕಿದೆ ಎಂದು ಹೇಳಿದ ಅವರು ಇಂದಿನ ಮಕ್ಕಳು ಹುಟ್ಟಿನಿಂದಲೇ ಮೊಬೈಲ್ ಗೀಳಿಗೆ ಬಿದ್ದು ಹೇಳಿದ ಮಾತು ಕೇಳಿದೆ, ಸಿಟ್ಟು ಸೆಡವು ಗಳಿಗೆ ಬಲಿಯಾಗಿ,ಅಧ್ಯಯನದಲ್ಲಿಯೂ ಹಿಂದೆ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆ ಹಿನ್ನೆಲೆಯಲ್ಲಿ ಟಿವಿ ಮತ್ತು ಮೊಬೈಲ್ ಮನುಷ್ಯನ ನೆಮ್ಮದಿ ಹಾಳು ಮಾಡುತ್ತಿದ್ದು ಮೊಬೈಲ್ ಗೀಳಿನಿಂದ ಹೊರ ಬರುವಂತೆ ಪೋಷಕರು ಮಕ್ಕಳಿಗೆ ಹೇಳುವ ಮೊದಲು ತಾವು ಆ ಗೀಳಿನಿಂದ ಹೊರಬರುವ ಸಂಕಲ್ಪ ತೊಡಗಬೇಕಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಊಟ ಮಾಡುವಾಗ ಮೊಬೈಲ್ ಗಳನ್ನು ನೋಡುತ್ತಲೇ ಊಟ ಮಾಡುವುದು.ದೂರದರ್ಶನಗಳನ್ನ ನೋಡುತ್ತಲೆ ಊಟ ಮಾಡುವುದರಿಂದ ಅವುಗಳಲ್ಲಿ ಬಿತ್ತರವಾಗುವ ನಕಾರತ್ಮಕ ಚಿಂತನೆಗಳು ಮನುಷ್ಯನ ಹೊಟ್ಟೆಗೆ ತಲುಪಿ ಮನುಷ್ಯನ ನಕಾರಾತ್ಮಕತೆಯೆಡೆಗೆ ಸೆಳೆದೊಯ್ಯುತ್ತದೆ ಈ ಬಗ್ಗೆ ಸದಾಜಾಗೃತರಾಗಿರಬೇಕೆಂದರು.
ಇಂದಿನ ಒತ್ತಡದ ದಿನಮಾನಗಳಲ್ಲಿ ಕುಟುಂಬ ಸಹಿತ ಹೊರಗಿನ ಊಟ ತಿಂಡಿಗಳನ್ನು
ಸೇವಿಸುವ ಪರಿಪಾಠ ಬೆಳೆಯುತ್ತಿದೆ ಅದು ತಪ್ಪಬೇಕು. ಪ್ರತಿಯೊಬ್ಬರ ಮನೆಯಲ್ಲಿಯೆ ತಾವೇ ತಯಾರಿಸುವ ಆಹಾರವನ್ನು ಸೇವಿಸಬೇಕು ಎಂದು ಹೇಳಿದ ಅವರು ಆಹಾರ ತಯಾರಿಸುವವರ ಮನಸ್ಥಿತಿಯೂ ಸಹ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಸಂತೋಷ,ತೃಪ್ತಿ, ಸ್ವಚ್ಛತೆಯನ್ನು ಆಚರಿಸಿ ತಾವು ತಯಾರಿಸುವ ಆಹಾರವನ್ನು ಪ್ರಸಾದಂತೆ ಸಿದ್ದಪಡಿಸಿ, ಪ್ರಸಾದಂತೆ ಸೇವಿಸುವ ಮೂಲಕ ತಮ್ಮ ಕುಟುಂಬಗಳನ್ನು ಸಂತೋಷವಾಗಿಟ್ಟು ಕೊಳ್ಳಬಹುದು ಈ ಬಗ್ಗೆ ಮಹಿಳೆಯರು ವಿಶೇಷವಾಗಿ ಗಮನ ಹರಿಸಬೇಕು ಎಂದು ಹೇಳಿದರು.
ದಿನಮಾನಗಳಲ್ಲಿ ಶಾಂತಿ ಸಹನೆ ಸೇವಾ ಮನೋಭಾವ ಮೈಗೂಡಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ತಾವು ಮಾಡುವ ಕೆಲಸದಲ್ಲಿ ಆತ್ಮ ಸಂತೃಪ್ತಿಯನ್ನು ಹೊಂದುವುದರೊಂದಿಗೆ ಪರರ ನಿಂದೆಯಿಂದ ಟೀಕೆಗಳಿಂದ ದೂರವಿದ್ದರೆ ಮನುಷ್ಯನ ಅಗತ್ಯವಿರುವ ಶಾಂತಿಯುತ ಜೀವನ ತಾನೇ ತಾನಾಗಿ ದೊರೆಯುತ್ತದೆ.
ಶಾಂತಿ, ಸಹನೆಯನ್ನು
ಯಾರು ದಯಪಾಲಿಸುತ್ತಾರೋ
ಅಂತಹವರು ಈ ಸಮಾಜಕ್ಕೆ ಕೊಡುಗೆಗಳ ನೀಡುವ ದೇವರ ಸಮಾನರಾಗುತ್ತಾರೆ ಎಂದು ಹೇಳಿದ ಅವರು ಒಂದು ಹೊಲದಲ್ಲಿ,ಶ್ರದ್ದೆ,ಪ್ರೀತಿಯಿಂದ ಬೀಜವನ್ನು ಬಿತ್ತಿ ಅದಕ್ಕೆ ಮಂತ್ರೋಧಕದಂತೆ ನೀರೆರದು ಅದರ ಪೋಷಣೆ ಮಾಡುವ ರೈತನ ಸೇವೆಗೆ ಬೆಳೆಯು ಸಹ ಉತ್ಕೃಷ್ಟವಾಗಿ ಬರುತ್ತದೆ. ಆದರೆ ವ್ಯಾವಹಾರಿಕ ದೃಷ್ಟಿಯಿಂದ ಮಾಡುವ ವ್ಯವಸಾಯವು ಸಹ ಸಮಾಜಕ್ಕೆ ಮಾರಕವಾದ ಬೆಳೆ ತಂದುಕೊಡುತ್ತದೆ ಎಂದು ದೃಷ್ಟಾಂತದ ಮೂಲಕ ವಿವರಿಸಿದರೂ,
ಈ ಕಾರ್ಯಕ್ರಮದಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯಶ್ರೀಗಳು, ಬೇರುಗಂಡಿಮಠದ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು,ಜಯಬಸವಾನಂದ ಶ್ರೀಗಳು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ.ಎಸ್. ಎಲ್ ಬೋಜೇಗೌಡ, ಕಾಂಗ್ರೆಸ್ ಮುಖಂಡ ಡಾ.ವಿಜಯ್ ಕುಮಾರ್,ಎ.ಐ.ಟಿ ಕಾಲೇಜಿನ ಉಪಕುಲಪತಿ ಸಿ.ಕೆ.ಸುಬ್ಬರಾಯ,ಸಿ.ಟಿ ಜಯದೇವ, ಮಕ್ಕಳ ವೈದ್ಯ ಜೆ.ಪಿ.ಕ್ರಷ್ಣೆಗೌಡ.. ಪೋಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ,ವಿದ್ಯಾಲಯದ ವಿಧ್ಯಾರ್ಥಿ ನಂದಕುಮಾರ್ ಸೇರಿದಂತೆ ಸಾವಿರಾರು ಜನ ಸೇರಿದ್ದರು.