लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮರೆತರೋ, ನಿರ್ಲಕ್ಷಿಸಿದರೋ ಮಾರಿಕೊಂಡರೋ, ವಿವೇಚನೆಯನ್ನು………..

1 min read

ಮರೆತರೋ, ನಿರ್ಲಕ್ಷಿಸಿದರೋ ಮಾರಿಕೊಂಡರೋ, ವಿವೇಚನೆಯನ್ನು………..

ಇಂದು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರನೇ ದಿನ. ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಸಂಸ್ಕೃತಿಯ ಅತ್ಯಂತ ಮಹತ್ವದ ನುಡಿ ಹಬ್ಬ. ಇದು ವಿಜೃಂಭಣೆಯಿಂದ ನಡೆಯುತ್ತಿರುವಾಗ ಬಹುತೇಕ ಕನ್ನಡದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಇದನ್ನು ತೀರ ಕ್ಷುಲ್ಲಕ ಎನ್ನುವಂತೆ ನಿರ್ಲಕ್ಷಿಸಿದ್ದು ಮಾತ್ರ ಅತ್ಯಂತ ವಿಷಾದನೀಯ ಮತ್ತು ಖೇದಕರ.

ಇಂದಿನ ದಿನಮಾನಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ, ವಿವೇಚನೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಮಾಧ್ಯಮಗಳು ಇಷ್ಟೊಂದು ಮಹತ್ವದ ವಿಷಯವನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಮಾತ್ರ ತುಂಬಾ ಭೀಕರವಾಗಿರುತ್ತದೆ. ಉದಾಹರಣೆಗೆ ತಾಯಿ ಭಾಷೆ, ಇಲ್ಲಿನ ನಿಜ ಸಂಸ್ಕೃತಿಯ ಬಗ್ಗೆ ಇಡೀ ಜನ ಸಮೂಹಕ್ಕೆ ಸರಿಯಾಗಿ ಪರಿಚಯ ಮಾಡಿಕೊಡದಿದ್ದರೆ ಮೊನ್ನೆ ವಿಧಾನ ಮಂಡಲದ ಅಧಿವೇಶನದ ಕೊನೆಯ ದಿನ ಇಬ್ಬರು ಅತ್ಯಂತ ಜವಾಬ್ದಾರಿಯತ ಹಾಲಿ ಮಂತ್ರಿ ಮತ್ತು ಮಾಜಿ ಮಂತ್ರಿ ಕೆಟ್ಟದಾಗಿ ಒಬ್ಬರಿಗೊಬ್ಬರು ಅತ್ಯಂತ ಅಸಹ್ಯಕರವಾಗಿ ಬೈದುಕೊಳ್ಳಲು ಅಥವಾ ಆ ರೀತಿ ಅನೇಕ ಜನರು ಈ ರೀತಿ ಮಾತನಾಡಲು ಬಹು ಮುಖ್ಯ ಕಾರಣವೇ ಈ ರೀತಿಯ ಮುಖ್ಯ ವಾಹಿನಿಗಳ ಸಾಂಸ್ಕೃತಿಕ ನಿರ್ಲಕ್ಷ್ಯವೇ ಕಾರಣ……

ಮುಗಿಯುತ್ತಲಿದೆ ಕನ್ನಡದ ನುಡಿ ಹಬ್ಬ,
ಎಂದೆಂದೂ ಮುಗಿಯಬಾರದ ನಿತ್ಯ ಹಬ್ಬ………

ತಮ್ಮ ಅನ್ನದ ಮೂಲವನ್ನೇ ನಿರ್ಲಕ್ಷಿಸಿದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು…

ಎಷ್ಟೋ ಬೇಡದ ವಿಷಯಗಳನ್ನು ನೇರ ಪ್ರಸಾರ ಮಾಡುತ್ತವೆ. ಮನೆಯ ಜಗಳಗಳನ್ನು ದಿನ ಪೂರ್ತಿ ತೋರಿಸುತ್ತವೆ. ಯಾರದೋ ಆತ್ಮಹತ್ಯೆ, ಕೊಲೆ ಇವರಿಗೆ ಮೂರು ದಿನದ ಸರಕು.
ಇನ್ಯಾವುದೋ ವಂಚನೆ, ದರೋಡೆ ಇವರಿಗೆ ವಾರದ ಆಹಾರ,
ರಾಜಕೀಯ ಭಿನ್ನಮತ ಇವರಿಗೆ ತಿಂಗಳಾನುಗಟ್ಟಲೆ ಹಗಲು ರಾತ್ರಿಗಳ ಬ್ರೇಕಿಂಗ್ ನ್ಯೂಸ್,
ಇಬ್ಬರು ಬಲಾಢ್ಯ ಮಂತ್ರಿಗಳ ಖಾಸಗಿ ಜಗಳ ಸಾಹಿತ್ಯ ಸಮ್ಮೇಳನಕ್ಕಿಂತ ಮಹತ್ವದ ವಿಷಯ……

ಆದರೆ ಕನ್ನಡಮ್ಮನ‌ ಅತ್ಯಂತ ಪ್ರಮುಖ ಜಾತ್ರೆ ಕೇವಲ ಕೆಲವು ನಿಮಿಷಗಳ ಒಂದು ಸುದ್ದಿ ಮಾತ್ರ……..

ಛೇ, ಎಷ್ಟೊಂದು ವಿವೇಕಹೀನ ಸಂಸ್ಕೃತಿಯ ಜನ ಇವರು. ಸಾಹಿತ್ಯಾಸಕ್ತರು ಮತ್ತು ಪಕ್ಕಾ ಕನ್ನಡ ಅಭಿಮಾನಿಗಳನ್ನು ಹೊರತುಪಡಿಸಿ ಅನೇಕರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿದೆ ಎಂದು ತಿಳಿಯಲೇ ಇಲ್ಲ.‌ ಕೆಲವರಿಗೆ ತಿಳಿದರೂ‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಅದನ್ನು ಮನೆ ಮನೆಗೆ ತಲುಪಿಸುವ ಅವಕಾಶವಿದ್ದ ಮಾಧ್ಯಮಗಳು ಅನಾವಶ್ಯಕ ವಿಷಯಗಳ ಸುತ್ತಲೇ ಸುತ್ತಿದವು……

ಈಗಾಗಲೇ ಆಂಗ್ಲ ಮಾಧ್ಯಮದ ಮೋಹಕ್ಕೆ, ಬೆರಕೆ ಸಾಂಸ್ಕೃತಿಕ ವಾತಾವರಣದ ಪ್ರಭಾವಕ್ಕೆ ಒಳಗಾಗಿರುವ ಮಕ್ಕಳು ಮತ್ತು ಯುವ ಪೀಳಿಗೆಯನ್ನು ತನ್ನ ತಾಯಿ ಭಾಷೆಯ ಬಗ್ಗೆ ಸ್ವಲ್ಪವಾದರೂ ಹೆಮ್ಮೆ ಮತ್ತು ಜಾಗೃತಿ ಮೂಡಿಸುವ ಕೆಲಸ ಈ ಸಮ್ಮೇಳನದ ಸಂದರ್ಭದಲ್ಲಿ ಮಾಧ್ಯಮಗಳು ನಿರ್ವಹಿಸಬೇಕಿತ್ತು…..

ಸಮ್ಮೇಳನದ ಮೆರವಣಿಗೆ, ಅಧ್ಯಕ್ಷೀಯ ಭಾಷಣ, ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಪುಸ್ತಕ ಮೇಳ, ಜಾನಪದ ಕಲಾ ಪ್ರದರ್ಶನ, ಕರ್ನಾಟಕದ ವಿವಿಧ ಭಾಗಗಳ ಊಟದ ವೈವಿಧ್ಯತೆ, ಮಂಡಿಸಿದ ಬೇಡಿಕೆಗಳು ಎಲ್ಲವನ್ನೂ ನೇರ ಅಥವಾ ಮುದ್ರಿತ ಪ್ರಸಾರ ಮಾಡಬಹುದಿತ್ತು……

ಅಲ್ಲದೆ ಈ ನೆಪದಲ್ಲಿ ತಾಯಿ ಭಾಷೆಯ ಉಗಮ, ಬೆಳವಣಿಗೆ, ಮಹತ್ವ, ಸಾಧನೆ, ಭವಿಷ್ಯ, ಎಚ್ಚರಿಕೆ, ಕರ್ನಾಟಕದ ಸಮಗ್ರ ಅಭಿವೃದ್ಧಿ ಎಲ್ಲವನ್ನೂ ವಿಷಯ ತಜ್ಞರಿಂದ ತಮ್ಮ ಕೇಂದ್ರಿಂದಲೇ ಚರ್ಚಿಸಬಹುದಿತ್ತು…….

ವಿಶ್ವದ ವಿವಿಧ ಭಾಷೆಗಳು ಹೇಗೆ ಆಂಗ್ಲ ಭಾಷೆಯ ಹೊಡೆತಕ್ಕೆ ಸಿಲುಕಿ ನಾಶ ಹೊಂದುತ್ತಿವೆ, ಭಾರತದಲ್ಲಿ ಹಿಂದಿ ಹೇರಿಕೆ ಹೇಗೆ ಅಪಾಯಕಾರಿ, ಆ ಮುಖಾಂತರ ತಮ್ಮ ಬದುಕಿನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ,
ತಾಯಿ ಭಾಷೆಯ ಕಲಿಕೆ ಹೇಗೆ ನಮ್ಮ ಯೋಚನೆ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಕನ್ನಡವನ್ನು ನಾವು ಹೇಗೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸ್ವಲ್ಪವಾದರೂ ಪ್ರಯತ್ನಿಸಬೇಕಿತ್ತು…..

ಅದು ಯಾವುದೂ ಪ್ರಸಾರವಾಗಲೇ ಇಲ್ಲ. ನೆಪಕ್ಕೆ ಸಮ್ಮೇಳನದ ಕೆಲವು ತುಣುಕುಗಳು ಮಾತ್ರ ಕಾಣಿಸಿದವು. ಸಮಕಾಲೀನ ವಿಷಯಗಳಿಗೆ ಮಹತ್ವ ನೀಡದೆ, ಆಳದ ಚಿಂತನೆ ನಡೆಸದೆ, ಕೇವಲ ಹಣದ ಮೋಹದ ಹಿಂದೆ ಬಿದ್ದು, ನಿರೂಪಕರೆಂಬ ಬಾಯಿಬುಡುಕ ಸಂಸ್ಕೃತಿಯ ಜನರನ್ನು ಸೃಷ್ಟಿಸಿ, ಜನರನ್ನು ಮರುಳು ಮಾಡುತ್ತಿರುವ ಕನ್ನಡ ಟಿವಿ ವಾರ್ತಾ ಮಾಧ್ಯಮಗಳಿಗೆ ಈ ಮೂಲಕ ಛೀಮಾರಿ ಹಾಕುತ್ತಾ……

ಅದೇ ರೀತಿ ತುಂಬಾ ಎಚ್ಚರಿಕೆಯಿಂದ ಕಾರ್ಯಕ್ರಮದ ಬಹಳಷ್ಟು ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿದ ಕನ್ನಡದ ಕೆಲವು ಪತ್ರಿಕಾ ಮಾಧ್ಯಮವನ್ನು ಅಭಿನಂದಿಸುತ್ತಾ….

ಇನ್ನಾದರೂ ಟಿವಿ ವಾಹಿನಿಗಳು ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

About Author

Leave a Reply

Your email address will not be published. Required fields are marked *