ಕುಂಕುಮ ಲೇಪಿಸಿ ಒಂದು ಸಮುದಾಯದವರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ.ಚಿಕ್ಕಮಗಳೂರು….
1 min read
ಕುಂಕುಮ ಲೇಪಿಸಿ ಒಂದು ಸಮುದಾಯದವರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ.ಚಿಕ್ಕಮಗಳೂರು….
ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆಯ ಎಡ ಭಾಗದಲ್ಲಿ ಮಾಮ ಜಿಗ್ನಿ ಮತ್ತು ಬಲ ಭಾಗದಲ್ಲಿರುವ ದಾದಾಪೀರ್ ಛಿಲ್ಲಾ ಹಾಗೂ ಗಾದಿ(ಧ್ಯಾನ ಸ್ಥಳ ಮತ್ತು ಪೀಠ)ಗೆ ಕೆಲ ಕಿಡಿಗೇಡಿಗಳು ಇತ್ತೀಚಿಗೆ ಕುಂಕುಮ ಲೇಪಿಸಿ ಒಂದು ಸಮುದಾಯದವರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ.
ಅಲ್ಲದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹೊಸ ಆಚರಣೆಗೆ ಮುಂದಾಗಿದ್ದಾರೆ. ಈ ಆಚರಣೆಯ ಹಿಂದೆ ದಾದಾಪೀರ್ ಛಿಲ್ಲಾ ಹಾಗೂ ಗಾದಿಯನ್ನು ಬದಲಾಯಿಸುವ ಸಂಚು ಅಡಗಿದೆ ಎಂದು ಬಾಬಾ ಬುಡನ್ ವಂಶಸ್ಥರಾದ ಸೈಯದ್ ಫಕ್ರುದ್ದಿನ್ ಶಾ ಖಾದ್ರಿ ಆರೋಪಿಸಿದ್ದಾರೆ.
ಈ ಸಂಬಂಧ ರವಿವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆಯಲ್ಲಿರುವ ದಾದಾಪೀರ್ ಧ್ಯಾನ ಸ್ಥಳ ಹಾಗೂ ಪೀಠಕ್ಕೆ ಕೆಲ ಕಿಡಿಗೇಡಿಗಳು ಕುಂಕುಮ, ಅರಿಶಿನ ಲೇಪಿಸಿ ಪೂಜೆ ಮಾಡಿದ್ದಾರೆ. ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ಆಚರಣೆಯಾಗಿದೆ. ಈ ಆಚರಣೆಯನ್ನು ಖಂಡಿಸಿ ಸಮುದಾಯದ ಮುಖಂಡರೊoದಿಗೆ ದರ್ಗಾದ ಆವರಣದಲ್ಲಿ ನಾವು ಪ್ರತಿಭಟನೆ ಮಾಡಿದ್ದು, ಈ ವೇಳೆ ಸ್ಥಳಕ್ಕೆ ಬಂದ ಮುಜರಾಯಿ ಇಲಾಖೆ ಅಧಿಕಾರಿಗಳು, ಈ ಆಚರಣೆ ತಮ್ಮ ಗಮನಕ್ಕೆ ಬಂದಿರಲಿಲ್ಲ, ಕೂಡಲೇ ಆಚರಣೆಯನ್ನು ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದಿದ್ದಾರೆ.
ಈ ಮಧ್ಯೆ ವಿಎಚ್ಪಿ, ಬಜರಂಗದಳ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಕುಂಕುಮ ಲೇಪಿಸಿದವರು ನಾವಲ್ಲ, ನಾವು ಪಾದುಕೆ ಮತ್ತು ಪೀಠಕ್ಕೆ ಮಾತ್ರ ಪೂಜೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾವು ಮುಹಮ್ಮದೀಯ ಸಂಸ್ಥೆ ಎಂದು ಮುಜರಾಯಿ ಇಲಾಖೆಯ ಗೆಜೆಟಿಯರ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಮುಹಮ್ಮದೀಯ ಸಂಸ್ಥೆಯಾಗಿದ್ದರೂ ಹಿಂದೂ ಮುಸಲ್ಮಾನರು ಗೌರವದಿಂದ ನಡೆದುಕೊಳ್ಳುವ ಸ್ಥಳ ಎಂದು ಮುಜರಾಯಿ ಗೆಜೆಟಿಯರ್ನ ಪುಟ ಸಂಖ್ಯೆ ೫೭೧ರಲ್ಲಿ ಉಲ್ಲೇಖಿಸಿರುವುದನ್ನು ವಿಎಚ್ಪಿ, ಬಜರಂಗದಳದ ಮುಖಂಡರು ಗಮನಿಸಬೇಕಿದೆ ಎಂದು ತಿಳಿಸಿದ್ದಾರೆ.
ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಜನ್ನತ್ ನಗರ, ಸೊರಗುಪ್ಪೆ ಹಾಗೂ ದತ್ತಾತ್ರೇಯ ಪೀಠ ಸೇರಿರುವ ಬಗ್ಗೆಯೂ ಇಲಾಖೆಯ ಗೆಜೆಟಿಯರ್ನಲ್ಲಿ ಉಲ್ಲೇಖಿಸಲಾಗಿದ್ದು, ಸೂಫಿ ಪಂಥದವರಿಗೆ ಹಿಂದೂ ಧರ್ಮದ ಬಗ್ಗೆ ವಿಶೇಷ ಗೌರವ ಇತ್ತು. ಈ ಕಾರಣದಿಂದಲೇ ಹಲವು ದರ್ಗಾಗಳನ್ನು ಊರುಗಳ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಇದಕ್ಕೆ ರಾಮನಹಳ್ಳಿಯಲ್ಲಿರುವ ಕಂಬುಲ್ ಪೋಷ್ ದರ್ಗಾ, ಲಕ್ಷೆ÷ಈಶ್ವರ್ ದೂದ್ ನಾನಾ ದರ್ಗಾ, ಜಾವಗಲ್ ಬಾಬಾ ದರ್ಗಾ ಉದಾಹರಣೆಯಾಗಿವೆ. ಊರುಗಳ ಹೆಸರಿನಿಂದ ಗುರುತಿಸಿಕೊಂಡಿರುವ ದರ್ಗಾ, ಮಸೀದಿಗಳ ಹೆಸರಿನಲ್ಲಿ ಕೋಮುಭಾವನೆ ಕೆರಳಿಸುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ..
ಸೂಫಿ ಪಂಥದ ಎಲ್ಲ ಗುರುಗಳು ಜಾತಿ, ಧರ್ಮಗಳ ನಡುವೆ ಎಂದೂ ಬೇಧಭಾವ ಮಾಡಿದವರಲ್ಲ. ಬಾಬಾ ಬುಡನ್ ದರ್ಗಾದ ಆವರಣದಲ್ಲಿ ನಮ್ಮ ಪೂರ್ವಜರ ಗೋರಿಗಳಿದ್ದು, ಅವರೂ ಕೂಡ ಜಾತಿ, ಧರ್ಮಗಳ ನಡುವೆ ಬೇಧಭಾವ ಮಾಡಿದವರಲ್ಲ ಎಂದಿರುವ ಅವರು, ನಮ್ಮ ಪೂರ್ವಜರಾದ ಬಾಬಾ ಬುಡನ್ ಅವರು ಕಾಫಿಯನ್ನು ಇಲ್ಲಿ ಬೆಳೆಸುವ ಮೂಲಕ ಇಡೀ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರಸಕ್ತ ಕಾಫಿ ಬೆಳೆ ಎಲ್ಲ ಜಾತಿ, ಧರ್ಮದವರ ಆರ್ಥಿಕಾಭಿವೃದ್ಧಿಗೆ ನೆರವಾಗುತ್ತಿದ್ದು, ಕಾಫಿ ಬೆಳೆಯನ್ನು ಧರ್ಮ, ಜಾತಿ ಮೀರಿ ಎಲ್ಲರೂ ಅಪ್ಪಿಕೊಂಡಿದ್ದಾರೆ.
ದರ್ಗಾದ ಗುಹೆಯಲ್ಲಿರುವ ಧ್ಯಾನ ಸ್ಥಳ ಮತ್ತು ಪೀಠಕ್ಕೆ ಕುಂಕುಮ ಲೇಪಿಸಿ ಹೊಸ ಆಚರಣೆ ಮೂಲಕ ಈ ಸ್ಥಳಗಳನ್ನು ಬದಲಾಯಿಸಲು ಯತ್ನಿಸಿರುವ ಹಾಗೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವವರ ವಿರುದ್ಧ ಜಿಲ್ಲಾಡಳಿತ ಮೃಧುಧೋರಣೆ ತಳೆದಂತಿದೆ. ಹೊಸ ಆಚರಣೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ಒಂದು ಧರ್ಮದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಹಾಗೂ ನ್ಯಾಯಾಲಯದ ಆದೇಶಕ್ಕೂ ಗೌರವ ನೀಡದವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಮುಹಮ್ಮದೀಯ ಸಂಸ್ಥೆಯ ಪೀಠ, ದರ್ಗಾ, ಗೋರಿಗಳು ಹಾಗೂ ಹಸಿರು ಬಟ್ಟೆ, ಹೂವು ಹಾಕುವ ಹಳೆಯ ಸಂಪ್ರದಾಯವನ್ನು ಉಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಎಚ್ಪಿ, ಬಜರಂಗದಳದ ಮುಖಂಡರು ೧೪೦೦ವರ್ಷಗಳ ಹಿಂದೆ ಇಸ್ಲಾಂ, ಅಲ್ಲಾಹ್ ಇರಲಿಲ್ಲ ಎಂದು ಅಪಪ್ರಚಾರ ಮಾಡುವಂತಹ ಹೇಳಿಕೆ ನೀಡಿದ್ದಾರೆ, ಈ ಹೇಳಿಕೆ ಹೇಗಿದೆ ಎಂದರೇ, ಹಿಂದೆ ಚಾಂದ್, ಸೂರಜ್ ಇರಲಿಲ್ಲ, ಚಂದ್ರ ಮತ್ತು ಸೂರ್ಯ ಮಾತ್ರ ಇತ್ತು ಎಂದು ಜನರನ್ನು ಮೂರ್ಖರನ್ನಾಗಿಸುವಂತಿದೆ. ನಮ್ಮ ದೃಷ್ಟಿಯಲ್ಲಿ ಅಲ್ಲಾಹ್ ಎಂದರೆ ಸೃಷ್ಟಿಕರ್ತನ ಹೆಸರಾಗಿದ್ದು, ಹೆಸರು, ಭಾಷೆ ಬೇರೆ ಬೇರೆಯಾಗಿದ್ದರೂ ನೋಡುವ ದೃಷ್ಟಿ ಮಾತ್ರ ಒಂದೇ ಆಗಿದೆ ಎಂದು ಸೈಯದ್ ಫಕ್ರುದ್ದಿನ್ ಹೇಳಿದ್ದಾರೆ.
ಸೈಯದ್ ಫಕ್ರುದ್ದಿನ್ ಶಾ ಖಾದ್ರಿ
ಬಾಬಾ ಬುಡನ್ ವಂಶಸ್ಥರು