ಕನ್ನಡಿಗನಾಗಿ ಸಂತಸದ ಸಂಗತಿಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.
1 min read
ಕನ್ನಡಿಗನಾಗಿ ಸಂತಸದ ಸಂಗತಿಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.
ಇಂದು ಮಂಗಳೂರಿಗೆ ಪಯಣಿಸಲು ರಾಜ್ಯ ಸಾರಿಗೆ ಬಸ್ಸನ್ನೇರಿದೆ. ಫೋನ್ಪೇ ಮೂಲಕ ಟಿಕೇಟು ಶುಲ್ಕವನು ಪಾವತಿ ಮಾಡಿ, ಕೂರಲು ಸ್ಥಳಾವಕಾಶ ಇಲ್ಲದ್ದರಿಂದ ನಿಂತುಕೊಂಡಿದ್ದೆ. ಪ್ರಯಾಣಿಕರಿಗೆ ಟಿಕೇಟು ವಿತರಿಸಿದ ನಿರ್ವಾಹಕರು ಸಾರಾಂಶವನು ಬರೆಯಲು ಪಟ್ಟಿಯೊಂದನ್ನು ನಿಂತಕೊಂಡೇ ನಮೂದಿಸಲಾರಂಭಿಸಿದರು.
ಅವರ ಕೈಬರಹ ಕೊಂಚ ವಿಭಿನ್ನವಾಗಿತ್ತು. ಕುತೂಹಲದಿಂದ ಗಮನಿಸಿದೆ.
ನಮ್ಮಲ್ಲಿ ಹಲವರಿಗೆ ಸ್ಥಿರವಾದ ಮೇಜಿನ ಮೇಲೆ ಪುಸ್ತಕವನ್ನು ಇಟ್ಟುಕೊಂಡು, ಖುರ್ಚಿಯಲ್ಲಿ ಕುಳಿತುಕೊಂಡೇ ದುಂಡಾಗಿ ಬರೆಯಲು ತಿಣುಕಾಟವಾಗುತ್ತದೆ.
ಅಂಥದ್ದರಲ್ಲಿ, ಚಲಿಸುತ್ತಿರುವ ಬಸ್ಸಿನಲ್ಲಿ ಜೋತು ನೇತಾಡುತ್ತಿರುವ ಪ್ರಯಾಣಿಕರ ನಡುವೆ ನಿಂತುಕೊಂಡೇ ಅಂಕಿ-ಸಂಖ್ಯೆಯನ್ನು ಸುಂದರವಾದ ಕೈಬರಹದಲಿ ನಮೂದಿಸುತಿದ್ದ ಆ ನಿರ್ವಾಹಕರು ಬಳಸುತಿದ್ದುದು ನಮ್ಮದೇ ಕನ್ನಡ ಲಿಪಿಯ ಅಂಕಿಗಳಾದ ೧,೨,೩,೪,೫,೬,೭,೮,೯,೦ !!!!!😌.
ಅದನ್ನು ನೋಡಿ ನನಗೆ ಸಂತೋಷದಿಂದ ರೋಮಾಂಚನವಾಯ್ತು.
ಯಾವುದರಲ್ಲಾದರೂ ಕನ್ನಡ ಅಂಕೆಗಳನ್ನು ಬಳಸಿದ್ದರೆ, ಅದನ್ನು ಓದುವ ಗೋಜಿಗೆ ಹೋಗದೇ, ಓದಲು ಬಾರದೇ, ಮನಸ್ಸಿನಲ್ಲೇ ಸಂಖ್ಯೆಯಲ್ಲೇನಿದೆ ಎಂಬ ಹಾರಿಕೆಯ ನೆಪ ಮಾಡಿಕೊಂಡು, ನಮಗೆ ನಾವೇ ಸುಳ್ಳು ಹೇಳಿಕೊಳ್ಳುವ ನಾವೆಲ್ಲಿ?; ಕರ್ತವ್ಯದ ನಡುವೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನವನು ಆನಂದಿಸುತ್ತಿರುವ ರಾಣೆಬೆನ್ನೂರು ಸಾರಿಗೆ ಘಟಕದ ನಮ್ಮ ಮಂಜುನಾಥರೆಲ್ಲಿ??
ಅವರೊಂದಿಗೆ ಮಾತನಾಡುತ್ತಾ, ಅವರಲ್ಲದೇ ಅವರ ಐದಾರು ಜನ ವೃತ್ತಿ ಬಾಂಧವರೂ ಸಹಾ ತಮ್ಮ ದೈನಂದಿನ ಕರ್ತವ್ಯದಲ್ಲಿ ಇದೇ ರೀತಿ ಸ್ವಇಚ್ಛೆಯಿಂದ ಕನ್ನಡ ಅಂಕೆಗಳನು ಬಳಸುತ್ತಿರುವುದಾಗಿ ಹೇಳಿದರು.
ಕನ್ನಡ, ಒಂದು ಭಾಷೆಯಾಗಿ ಬೆಳೆಯುವುದು ಹಾಗೂ ಉಳಿಯುವುದು ಯಾವುದೇ ಸಮ್ಮೇಳನ, ಡಾಕ್ಟರೇಟು, ಭಾಷಣ, ಬೋರ್ಡು, ಗೂಟದ ಕಾರು, ಪ್ರಶಸ್ತಿ, ಶಾಲು-ಹಾರ-ಫಲಕ-ಸನ್ಮಾನ, ಅಧ್ಯಕ್ಷತನ, ಜ್ಞಾನಪೀಠದಿಂದಲ್ಲ.
ನಮ್ಮ ಕನ್ನಡವನು ನಾವಲ್ಲದೇ ಇನ್ಯಾರು
ಮಾತನಾಡಲು, ಬರೆಯಲು, ಓದಲು ಸಾಧ್ಯ?
ಹಾಗಾಗದಿದ್ದರೆ ನಮ್ಮದೆಂದು ಇರುವ ಭವ್ಯ ಪರಂಪರೆಯ
ನಮ್ಮ ಕನ್ನಡವೇ ಕಾಣೆಯಾಗಲಿದೆ.
ಬಳಕೆಯಿಂದ ಮಾತ್ರವೇ ಉಳಿಸಿಕೊಳ್ಳಬಹುದಾದ
ಹಾಗೂ ಬೆಳೆಸಿಕೊಳ್ಳಬಹುದಾದುವೆಂದರೆ; ಅವು,
ಜ್ಞಾನ ಮತ್ತು ಭಾಷೆ ಮಾತ್ರ. ಯಾವುದೇ ಭಾಷೆ ಉಳಿದು, ಬೆಳೆಯಬೇಕೆಂದರೆ ನಾವದನ್ನು ನಿರಂತರವಾಗಿ ಪ್ರೀತಿ ಮತ್ತು ಗೌರವದಿಂದ ಬಳಸಬೇಕು.
ಒಂದು ಭಾಷೆಯೆಂದರೆ ಬರೀ ಅಕ್ಷರಗಳ, ಪದಗಳ ಜೋಡಣೆಯೊಂದೇ ಅಲ್ಲ; ಅದು ಆ ನೆಲದ ಮಣ್ಣಿನ, ಜನರ ಬದುಕಿನ, ಭಾವನೆಗಳ ಸಂಗಮ; ಅಸ್ಮಿತೆ.
ಕನ್ನಡದಲ್ಲೇ ಮಾತನಾಡೋಣ, ಕನ್ನಡದಲ್ಲೇ ಬರೆಯೋಣ, ಕನ್ನಡದಲ್ಲೇ ವ್ಯವಹರಿಸೋಣ.
ಕನ್ನಡ ಜನರ ಭಾಷೆಯಾಗಬೇಕು, ಮನದ ಭಾಷೆಯಾಗಬೇಕು, ಬದುಕಿನ ಭಾಷೆಯಾಗಬೇಕು.
ನಾವೆಂದುಕೊಂಡಿರುವ ಪ್ರಾಚೀನತೆ, ಮಹಾಕಾವ್ಯ, ಶಾಸ್ತ್ರೀಯ ಸ್ಥಾನ-ಮಾನ, ಜ್ಞಾನಪೀಠ ಇವ್ಯಾವುವೂ ಒಂದು ಭಾಷೆಗೆ ಶಕ್ತಿ ನೀಡುವುದಿಲ್ಲ,
ಹಾಗೇನಾದರೂ ಇದ್ದಲ್ಲಿ ನಮ್ಮ ಕನ್ನಡಕ್ಕೆ ಅಸ್ತಿತ್ವದ ಆತಂಕ ಶುರುವಾಗುತ್ತಿರಲಿಲ್ಲ. ಈ ಎಲ್ಲಾ ಹೆಗ್ಗಳಿಕೆಗಳು ನಮ್ಮ ಭ್ರಮೆಗಳಾಗಿಯೇ ಉಳಿಯಲಿವೆ.
ಮತ್ತೊಮ್ಮೆ ನಮ್ಮ ಈ ಮಂಜುನಾಥರಂಥವರಿಗೆ ಗೌರವ ನಮನಗಳನು ಸಲ್ಲಿಸುತ್ತಾ………
……………………………………..ಜೀವಾಳ.