ಮೂಡಿಗೆರೆ ಸಮೀಪದ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ನಡೆದ ಆಫ್ ರೋಡ್ ರ್ಯಾಲಿಯ ಕುರಿತು
1 min read
ಮೂಡಿಗೆರೆ ಸಮೀಪದ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ನಡೆದ ಆಫ್ ರೋಡ್ ರ್ಯಾಲಿ ಯ ಕುರಿತು ಮಾತನಾಡಲು ಕರೆ ಮಾಡಿದ್ದ ಸ್ನೇಹಿತನಿಗೆ ಈ ಭದ್ರಾ ಸೈಕ್ಲಿಂಗ್ ಚ್ಯಾಲೆಂಜ್ ಎಂಬ ಹುಲಿಯನ್ನೋ ಸಿಂಹವನ್ನೋ ಉಳಿಸುವ ಅಭಿಯಾನದ ಕುರಿತು ಹೇಳಿದೆ. ಅದಕ್ಕವನು, ಬಹುಶಃ ಈ ಈವೆಂಟ್ ನಡೆಸ್ತಿರೋದು ನಿಮ್ಮನ್ನುಳಿಸೋಕೆ ಅಂತ ಸೈಕ್ಲಿಂಗ್ ಮಾಡುವಾಗ ಎದುರಾಗುವ ಪ್ರಾಣಿಗಳಿಗೆ ಹೇಳೋಕಿರಬಹುದು ಅಂತ ತಮಾಷೆ ಮಾಡಿದ. Save tiger ಅಂತ ಸೈಕಲ್ಲೋ, ಬೈಕಿನದೋ ಒಂದು ಈವೆಂಟ್. Save elephant ಎಂಬ ಮತ್ತೊಂದ್ಯಾವುದೋ ಆಫ್ ರೋಡ್ ಜೀಪ್ ರ್ಯಾಲಿ ಅದೇ ಆನೆ ಸೂಕ್ಷ್ಮ ಪ್ರದೇಶದಲ್ಲಿ!
ಅಸಲಿಗೆ ಇವರಿಗಿರುವ ಉದ್ದೇಶ ಹುಲಿಯನ್ನೋ, ಆನೆಯನ್ನೋ ಉಳಿಸುವುದಲ್ಲ. ದುಡ್ಡುಳಿಸುವ, ದುಡ್ಡು ಮಾಡುವ ಉದ್ದೇಶವಷ್ಟೇ. ಅದಕ್ಕೆ ಸರಿಯಾಗಿ ನಮ್ಮ ಜಿಲ್ಲೆಯ ಅಧಿಕಾರಿಗಳು. ನಾವೊಂದಷ್ಟು ಜನ ಅದೆಷ್ಟೇ ಬಟ್ಟೆ ಹರಿದುಕೊಂಡರೂ ಸಹ ಕಣ್ಣೊರೆಸುವಂತೆ ನಾಮ್ಕಾವಾಸ್ತೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುತ್ತಾರೆ.
ಇವತ್ತು ಎತ್ತಿನಭುಜ ಆಸುಪಾಸಿನಲ್ಲಿ ನಡೆದ ಆಫ್ ರೋಡ್ ರ್ಯಾಲಿಗೆ ಮಾತೆತ್ತಿದರೆ ಆನೆ ಉಳಿಸುತ್ತೇವೆ, ಕಾಡುಳಿಸುತ್ತೇವೆ ಎನ್ನುವ ಮೂಡಿಗೆರೆ ಸಕಲೇಶಪುರದ ದೊಡ್ಡ ತಲೆಗಳೇ ಮುಂದೆ ನಿಂತು ಕಾವಲೊದಗಿಸಿದರು. ಕೇಳಿದರೆ ನಾವು ನಡೆಸಿದ್ದು ಖಾಸಗಿ ಎಸ್ಟೇಟಿನಲ್ಲಿ ಅನ್ನುತ್ತಾರೆ. ಖಾಸಗಿ ಎಸ್ಟೇಟಿರುವುದು ಅತಿ ಸೂಕ್ಷ್ಮ ಆನೆ ಕಾರಿಡಾರ್ ಪ್ರದೇಶ ಎಂಬುದು ವಾಸ್ತವ.
ಇವೆಲ್ಲಾ ದಿನನಿತ್ಯ ಆನೆ ಸಮಸ್ಯೆ ಎದುರಿಸುವ ಆ ಭಾಗದ ಊರಿನ ಜನರಿಗೇ ಅರಿವಾಗುವುದಿಲ್ಲ. ಇಂಥಾ ಸೂಕ್ಷ್ಮ ಪ್ರದೇಶದಲ್ಲಿ mass commercial Activities ನಡೆಸಬಾರದು ಎಂಬ ಕನಿಷ್ಠ ಜ್ಞಾನ ತಾಲ್ಲೂಕಿನ ಅಧಿಕಾರಿಗಳಿಗೇ ಇಲ್ಲ.
ಇವತ್ತಿನ ರ್ಯಾಲಿಯಲ್ಲಿ ಯಾವನೋ ಮಂತ್ರಿಯ ಮಗನಿದ್ದಾನೆ ಹಾಗಾಗಿ ರ್ಯಾಲಿ ನಡೆಯುವುದನ್ನು ನೋಡಿಯೂ ನೋಡದಂತೆ ತೆಪ್ಪಗಿರಿ ಎಂದು ಮೂಡಿಗೆರೆಯ ರಾಜಕಾರಣಿಯೊಬ್ಬರ ಸೂಚನೆಯಿದೆ ಎಂಬ ಸುದ್ದಿಯಿದೆ. ನಾಚಿಕೆಗೇಡು.
ಇವೆಲ್ಲದರ ನಡುವೆ ಬಾಯಿ ಬಡಿದುಕೊಳ್ಳುವ ನಮ್ಮದು ಕೇವಲ ಅರಣ್ಯ ರೋಧನ.
ಕಾರ್ತಿಕ್ ಬೆಳಗೊಡು