ಪರಂಪರೆಯ ಮುಂದುವರಿಕೆ ಶ್ರೀಫಲಾಹಾರಸ್ವಾಮಿ ಮಠದ ಹಿತಾರ್*
1 min read
*ಪರಂಪರೆಯ ಮುಂದುವರಿಕೆ ಶ್ರೀಫಲಾಹಾರಸ್ವಾಮಿ ಮಠದ ಹಿತಾರ್*
ಚಿಕ್ಕಮಗಳೂರು: ಭಾವೈಕ್ಯತೆಯ ಸಂಕೇತವಾಗಿರುವ ಗೌರಿ ಗಣೇಶ ಹಬ್ಬದ ಆದರ್ಶಗಳನ್ನು ಯುವ ಜನತೆಗೆ ಒಂದು ಎಚ್ಚರಿಕೆಯಿಂದ ಕಟ್ಟಿಕೊಡಬೇಕಾಗಿದೆ. ತಲೆತಲಾಂತರ ಗಳಿಂದ ವಿವಿಧ ಸಮುದಾಯಗಳ ಹೆಸರಿನಲ್ಲಿ, ಭಿನ್ನವಿಭಿನ್ನ ಆಚರಣೆಗಳ ಮೂಲಕ ಒಂದಾಗಿ ನೆಲೆಯೂರಿ ಬದುಕು ಕಟ್ಟಿಕೊಂಡಿರುವ ಬಿಂಡಿಗ ನಾಡಿನ ಜನರು ಒಂದು ಶ್ರೀಮಂತ ಸಂಸ್ಕೃತಿಯನ್ನು ಸಂಪಾದಿಸಿಕೊಂಡಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ, ಇಂತಹ ಹೆಗ್ಗಳಿಕೆಯ ಜನಜೀವನಕ್ಕೆ ಯಾವುದೇ ಧಕ್ಕೆ ಬಾರದಂತೆ ಶ್ರೀ ಫಲಾಹಾರಸ್ವಾಮಿ ಮಠದ ಉದ್ದೇಶ ಮತ್ತು ಆಶಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಶ್ರೀಮಠದ ಮುರುಗೇಂದ್ರ ಸ್ವಾಮೀಜಿ ಕರೆಕೊಟ್ಟರು.
ಮಲ್ಲೇನಹಳ್ಳಿ ಸಮೀಪ ಬಿಂಡಿಗಾ ಶ್ರೀ ದೇವಿರಮ್ಮ ದೇವಸ್ಥಾನದ ಆವರಣದಲ್ಲಿ, ಇಂದು ಸಂಜೆ ಆದಿಗುರು ಶ್ರೀ ಪಲಾಹಾರಸ್ವಾಮಿ ಮಠದ ಪರಂಪರೆ ಮತ್ತು ಸಂಪ್ರದಾಯದಂತೆ, ಗೌರಿ ಗಣೇಶ ಹಬ್ಬದ ಪ್ರಯುಕ್ತ, ಹಬ್ಬದ ಮುನ್ನಾದಿನ ಬಿಂಡಿಗಾ ನಾಡಿನ ಸದ್ಭಕ್ತರಿಗೆ ಹಿತಾರ್ ಹೆಸರಿನಲ್ಲಿ ಕೊಡ ಮಾಡುವ ಜೋಡಿ ತೆಂಗಿನಕಾಯಿ, ಅಕ್ಷತೆ, ವಿಭೂತಿಯನ್ನು ಪ್ರಸಾದ ರೂಪದಲ್ಲಿ ಕೊಟ್ಟು, ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಮಠಕ್ಕೆ ಧೀಮಂತವಾದ ಪ್ರಾಚೀನ ಪರಂಪರೆ ಇದ್ದು, ಅಷ್ಟೇ ಪ್ರಾಚೀನತೆ ಶ್ರೀ ಮಠಕ್ಕೆ ಸೇರಿದ ಎಲ್ಲಾ ಹಳ್ಳಿಗಳಿಗೂ ಇದೆ. ಶ್ರೀಮಠವು ತಮಗೆಲ್ಲ ತಿಳಿದಂತೆ ತಪೋ ಕ್ಷೇತ್ರಗಳ ಸ್ಥಾನವಾಗಿದ್ದು ಅನೇಕ ಸಿದ್ಧಿ ಪವಾಡಗಳಿಗೆ ಪ್ರಸಿದ್ಧಿಯಾಗಿದೆ. ಮತ್ತು ಭಾವೈಕ್ಯತೆಯ ತಾಣವಾಗಿದೆ.ವಿಶೇಷವಾಗಿ ಎಲ್ಲ ಜಾತಿ ಜನಾಂಗದ ಸಮುದಾಯವು ಶ್ರೀಮಠದ ಭಕ್ತರಾಗಿ, ತಲೆತಲಾಂತರದಿಂದ ಶ್ರದ್ಧಾ ಭಕ್ತಿಯೊಂದಿಗೆ ಮಠಕ್ಕೆ ನಡೆದುಕೊಂಡು ಬರುತ್ತಿರುವುದು ಒಂದು ಮಾದರಿಯಾಗಿದೆ. ಇಂತಹ ಒಂದು ಶ್ರೀಮಂತ ಪರಂಪರೆಯ ಸೌವಾರ್ಧಯುತ ಜೀವನಕ್ಕೆ ಯುವುದೇ ಭಂಗವಾಗದ ಹಾಗೆ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿ, ಹಿತಾರ್ ಕೊಡುವ ಹಿಂದೆ ಇರುವ ಸಂಪ್ರದಾಯವನ್ನು ವಿವರಿಸಿದರು.
ಹಿತಾರ್ ಎಂದರೆ ಹಿರಿಯರಿಗೆ ಕೊಡುವ ಫಲ ಎಂದರ್ಥ.ಹಿತಾರ್ ಹೆಸರಿನಲ್ಲಿ ಕೊಡ ಮಾಡುವ ಜೋಡಿ ತೆಂಗಿನಕಾಯಿಯಲ್ಲಿ ಒಂದನ್ನು ಹಿರಿಯರಿಗೆ ಒಡೆದು ಪೂಜಿಸಿದರೆ. ಮತ್ತೊಂದು ತೆಂಗಿನ ಕಾಯಿಯನ್ನು ಕಳಸದಲ್ಲಿಟ್ಟು ಗೌರಿ ರೂಪದಲ್ಲಿ ಪೂಜಿಸಿ ಆರಾಧಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ಈ ಹಿತಾರ್ ಪಡೆಯಲು, ಮಲ್ಲೇನಹಳ್ಳಿ, ಬಿಂಡಿಗಾ, ಹರಿಶಿಣಗುಪ್ಪೆ, ಹೆಬ್ಬಳ್ಳಿ. ಚಿನ್ನಮಕ್ಕಿ, ಹಲಸುಬಾಳು ಸೇರಿದಂತೆ ನಾಡಿನ ಹತ್ತಾರು ಹಳ್ಳಿಯ ಸುಮಾರು 500ಕ್ಕೂ ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತು ಹಿತಾರ್ ಸ್ವೀಕರಿಸಿ, ಶ್ರೀಮಠಕ್ಕೆ ಕಾಣಿಕೆ ಅರ್ಪಿಸುವುದು ಕಂಡುಬಂತು.
ಈ ಸಂದರ್ಭದಲ್ಲಿ ವಿವಿಧ ಗ್ರಾಮದ ಮುಖ್ಯಸ್ಥರಾದ ದೇವಿರಶೆಟ್ಟರು. ಚಂದ್ರೇಗೌಡ್ರು. ರಾಜೇಗೌಡ್ರು
ಹನುಮಂತ ಶೆಟ್ಟಿ. ಲೋಕಪ್ಪ ಗೌಡ. ದರ್ಶನ. ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪ್ರಸನ್ನ ಕುಮಾರ್. ಅರಿಶಿನಗುಪ್ಪೆಯ ಆಕರ್ಷ
ಮಹೇಶ್ ಗೌಡ. ಅಶೋಕ್. ಹಲಸಬಾಳು ಮೂರ್ತಿ. ಸಿದ್ದಪ್ಪ ಶೆಟ್ರು ಸೋಮಶೇಖರ್ ಮುಂತಾದವರು ಇದ್ದರು.