ಹಾವಿನ ದ್ವೇಷ ಹನ್ನೆರಡು ವರುಷ,ಈ ಮಾತು ಎಷ್ಟು ನಿಜ ???* ನಮ್ಮ ಜೀವನ ಪದ್ಧತಿ ಪ್ರಕೃತಿಗೆ
1 min read
*ಹಾವಿನ ದ್ವೇಷ ಹನ್ನೆರಡು ವರುಷ,ಈ ಮಾತು ಎಷ್ಟು ನಿಜ ???* ನಮ್ಮ ಜೀವನ ಪದ್ಧತಿ ಪ್ರಕೃತಿಗೆ ಪೂರಕವಾದುದ್ದಾದರೆ ಬದುಕು ಹೆಚ್ಚು ಹಸನಾಗಬಹುದು.ಈ ಪ್ರಕೃತಿ ಒಳಗಿರುವ ಕಲ್ಲು ಮಣ್ಣು ನೀರು ಗಿಡ ಮರ ಯಾವುದನ್ನೇ ಆಗಲಿ ಹುಡುಕುತ್ತಾ ಹೋದರೆ ಹೆಚ್ಚು ಒಳ್ಳೆಯದು ಎಲ್ಲಾ ಕಡೆ ಕಂಡು ಬರುತ್ತದೆ ಮತ್ತು ಅದರ ಪ್ರತಿಯೊಂದು ಸಂಗತಿಗಳಲ್ಲೂ ಜೀವನಕ್ಕೊಂದು ಪಾಠವಿರುತ್ತದೆ.ಅಮಾನುಷ ಯುಗದಿಂದ ಹಿಡಿದು ಇಂದಿನ ನಾಗರಿಕತೆ ಮತ್ತು ಆಧುನಿಕತೆಯೆಡೆಗೆ ಮನುಷ್ಯ ತನ್ನನ್ನು ತಾನು ಮೇಲ್ದರ್ಜೆಗೆ ಏರಿಸಿಕೊಂಡಿದ್ದು ಪ್ರಕೃತಿಯೊಳಗಿನ ಆಗುಹೋಗುಗಳನ್ನು ನೋಡಿಯೆ.ಎಲ್ಲಾ ನಾಗರಿಕತೆಗಳು ಅರಳಿದ್ದು ನದಿ ತೀರದಲ್ಲಿ, ಒಮ್ಮೆ ಸರಿಯಾಗಿ ಕಣ್ಬಿಟ್ಟು ನೋಡಿದರೆ,ಭೂಮಿಯ ಆಳದಲ್ಲಿ ಎಲ್ಲಿ ನೀರಿನ ಪಸೆ ಇರುತ್ತದೆಯೋ ಅಂತಹ ಜಾಗದಲ್ಲಿ ಮಾತ್ರ ವಿವಿಧ ವಿನ್ಯಾಸಗಳೊಂದಿಗೆ ಗೆದ್ದಲು ಹುಳುಗಳು ಹುತ್ತಗಳನ್ನು ಕಟ್ಟಿರುವುದನ್ನು ಕಾಣಬಹುದು.ಹುತ್ತ ಇದೆ ಎಂದರೆ ಆ ಜಾಗದಲ್ಲಿ ನೀರಿನ ಸೆಲೆ ಇದೆ ಎಂದರ್ಥ.ಇಂತಹ ಹುತ್ತಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಬದಲು ಒಂದಿಷ್ಟು ಮೌಡ್ಯದೊಂದಿಗೆ ಅದನ್ನು ಧಾರ್ಮಿಕ ಹಿನ್ನೆಲೆಯಿಂದ ಭಾರತೀಯ ಸಮಾಜ ಹೆಚ್ಚಾಗಿ ಪೂಜಿಸುತ್ತಾ ಬರುತ್ತಿದೆ. ಗೂಡೊಂದನ್ನು,ಮನೆಯೊಂದನ್ನು ನಿರ್ಮಿಸುವ ವಿಚಾರದಲ್ಲಿ ಉನ್ನತ ಶಿಕ್ಷಣವನ್ನು ಗಳಿಸಿರುವ ಇಂದಿನ ಆಧುನಿಕ ಯುಗದ ಇಂಜಿನಿಯರುಗಳು, ಹುತ್ತವನ್ನು ಕಟ್ಟುವ ಕೀಟ ಜಗತ್ತಿಗೆ ಸೇರಿದ ಈ ಸಣ್ಣಗೆದ್ದಲು ಹುಳುಗಳಿಗೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಾಗಿದೆಯೇ ಎಂಬ ಯೋಚನೆ ನಮ್ಮನ್ನು ಕಾಡದೇ ಇರಲಾರದು.ವಿವಿಧ ವಿನ್ಯಾಸದೊಂದಿಗೆ,ಹವಾ ನಿಯಂತ್ರಣ ಕೊಠಡಿಯಂತೆ ಕಂಡುಬರುವ ಹುತ್ತದೊಳಗೆ ವೈವಿಧ್ಯಮಯ ಕೋಣೆಗಳು, ವಿವಿಧ ಆಕೃತಿಯ ಸುರಂಗಗಳು, ಕಿಂಡಿಗಳು,ಕಿರುದಾರಿಗಳು, ಅದೆಂತಹ ಮಳೆ ಬಂದರೂ ಒಳಗೆ ಸೋರದಂತಹ ಗಟ್ಟಿ ಮುಟ್ಟಾದ ಸುರಕ್ಷತೆಯ ಸಂಕೀರ್ಣ ರಚನೆಯು ಮನುಷ್ಯ ಲೋಕಕ್ಕೆ ಇಂದಿಗೂ ಸವಾಲಾಗಿದೆ. ಗೆದ್ದಲುಗಳು ಮಣ್ಣು ಮತ್ತು ತಮ್ಮ ಜೊಲ್ಲು ರಸವನ್ನು ಹದವಾಗಿ ಬೆರೆಸಿ ಕಟ್ಟಿರುವ ಈ ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣ ಕೂಡ ಇದೆ,ಅಲ್ಲದೆ ಮಣ್ಣಿನೊಳಗೆ ಗಾಳಿಯ ಸಂಚಾರ ಏರ್ಪಡಿಸಿ ಆ ಮಣ್ಣನ್ನು ಆರೋಗ್ಯವರ್ಧಕವಾಗಿ ಮಾಡುವಲ್ಲಿ ಗೆದ್ದಲು ಹುಳುಗಳ ಪಾತ್ರ ಗಮನಾರ್ಹ ಸಂಗತಿಯಾಗಿದೆ. ಗೆದ್ದಲುಗಳು ಕಟ್ಟಿದ ಈ ಹುತ್ತಕ್ಕೆ ಮನುಷ್ಯ ಜೀವಿ ಹಾವಿನ ಹೊತ್ತ ಎಂದು ನಾಮಕರಣ ಮಾಡಿದ್ದಾನೆ. ಧಾರ್ಮಿಕವಾಗಿ ನಾಗದೇವತೆಯನ್ನು ಪೂಜಿಸುವ ಕೆಲವು ದೇವಸ್ಥಾನಗಳಲ್ಲಿ ಈ ಹುತ್ತದ ಮಣ್ಣನ್ನೇ ಪ್ರಸಾದ ರೂಪದಲ್ಲಿ ಕೊಡುವುದನ್ನು ಕಾಣಬಹುದು.ಹುತ್ತವೊಂದರ ಹಿಂದಿರುವ ಆಳವಾದ ಸತ್ಯವನ್ನು ನಮ್ಮದಾಗಿಸಿಕೊಳ್ಳೋಣ. ✒️ *D.M.Manjunathaswamy*