“ಕಾರ್ಯಕರ್ತರ ಸಮಸ್ಯೆ ಆಲಿಸದ ಎಂ.ಪಿ. : ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಬಿಜೆಪಿ ಕಚೇರಿಯ ಮುಂದೆ ಧರಣಿ.”
1 min read
ಜಿಲ್ಲಾ ಬಿಜೆಪಿ ಕಚೇರಿ ಪಂಚಜನ್ಯದಲ್ಲಿ ಭಾನುವಾರ ನಡೆಯಬೇಕಾಗಿದ್ದ ಚುನಾವಣಾ ನಿರ್ವಹಣಾ ಸಭೆ ವೇಳೆಯೇ ಪಕ್ಷದ ಕಾರ್ಯಕರ್ತರು ಸಭೆ ನಡೆಸಲು ಬಂದಿದ್ದ ಪ್ರಮುಖರ ಎದುರು ಪ್ರತಿಭಟನೆ ನಡೆಸಿ ಶೋಭಾ ಕರಂದ್ಲಾಜೆ ಟೀಕೆಟ್ ನೀಡದಂತೆ ಆಗ್ರಹಿಸಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಭೆ ನಡೆಸಲು ಕ್ಷೇತ್ರ ಪ್ರಭಾರಿ ಎಂ.ಬಿ.ಭಾನುಪ್ರಕಾಶ್ ಹಾಗೂ ಚುನಾವಣಾ ಪ್ರಭಾರಿ ಆರಗ ಜ್ಞಾನೇಂದ್ರ ಆಗಮಿಸಿ ಇನ್ನೇನು ಸಭೆ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆ ಕೂಗಿದರು.
ಅಲ್ಲದೆ ಈ ಬಾರಿ ಯಾವುದೇ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ, ಸಭೆ ನಡೆಯಬೇಕಿದ್ದ ಸಭಾಂಗಣದ ಎದುರೇ ಪ್ರತಿಭಟನೆ ಕುಳಿತ ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಶೋಭಾ ಕರಂದ್ಲಾಜೆ ಅವರೇ ನೇರ ಕಾರಣ ಆರೋಪಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಜೊತೆಗೆ ಪಕ್ಷ ಸಂಘಟನೆಗೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಕಾರ್ಯಕರ್ತರನ್ನೇ ಹತ್ತಿರಕ್ಕೆ ಸೇರಿಸುತ್ತಿಲ್ಲ ಹೀಗಿರುವಾಗ ಕ್ಷೇತ್ರದ ಅಭಿವೃದ್ಧಿ ಹೇಗಾಗುತ್ತದೆ. ಚುನಾವಣೆ ಮುಗಿದ ಮೇಲೆ ಪಕ್ಷದ ಕಾರ್ಯಕರ್ತರೇ ಬೇಡ ಎನ್ನುವ ಮನಸ್ಥಿತಿಯ ಶೋಭಾ ಕರಂದ್ಲಾಜೆ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದ್ದೆ ಆದಲ್ಲಿ ನಾವುಗಳೇ ಮುಂದೆ ನಿಂತು ಅವರನ್ನು ಸೋಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶೋಭಾ ಕರಂದ್ಲಾಜೆ ವಿರುದ್ಧವಾಗಿ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಚುನಾವಣಾ ನಿರ್ವಹಣಾ ಸಭೆಯನ್ನು ಅರ್ಧಕ್ಕೆ ಮಟಕುಗೊಳಿಸಿ ಆರ್ಗ ಜ್ಞಾನೇಂದ್ರ ಹಾಗೂ ಎಂಬಿ ಭಾನುಪ್ರಕಾಶ್ ಸಭಾಂಗಣದಿಂದ ಹೊರ ನಡೆದರು ಬಳಿಕ ಪಕ್ಷದ ಮುಖಂಡರ ಜೊತೆ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.