“ಸರ್ಫೇಸಿ ಕಾಯಿದೆಯಿಂದ ರೈತರು ಕಂಗಾಲು : ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್ ಗಳ ವಿರುದ್ಧ ಅನಿರ್ದಿಷ್ಟಾವಧಿ ಧರಣಿ.”
1 min read
ಸರ್ಫೇಸಿ ಕಾಯಿದೆ ನೆಪದಲ್ಲಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್ಗಳ ವಿರುದ್ಧ ಇದೇ ತಿಂಗಳ 20 ನೇ ತಾರೀಕಿನಂದು ನಮ್ಮ ಸಂಘದಿಂದ ಕೆನರಾ ಬ್ಯಾಂಕ್ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಕಳೆದ 4 ವರ್ಷದಿಂದ ತಾಲ್ಲೂಕಿನಲ್ಲಿ ಅತಿವೃಷ್ಟಿ, ಈ ವರ್ಷ ಬರಗಾಲದಿಂದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯಿದೆಯಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬಹುತೇಕ ಬ್ಯಾಂಕ್ಗಳು ಬೆಳೆಗಾರರ ಹಿತಕ್ಕಾಗಿ ಒಟಿಎಸ್ ಹಾಗೂ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಒಪ್ಪಿವೆ. ಆದರೆ ಮಂಗಳೂರಿನ ಕೆನರಾ ಬ್ಯಾಂಕ್ ವಿಭಾಗೀಯ ಮುಖ್ಯಸ್ಥರ ಇದಕ್ಕೆ ಬೆಂಬಲ ಸೂಚಿಸದೇ ಬೆಳೆಗಾರರ ವಿರುದ್ಧ ಸಾಲ ವಸೂಲಾತಿ ಕ್ರಮ ಮುಂದುವರೆಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದರೂ ಬೆಳೆಗಾರರ ವಿರುದ್ಧ ಕ್ರಮ ವಹಿಸುತ್ತಲೇ ಬರುತ್ತಿದೆ. ಹಾಗಾಗಿ ಅನಿರ್ಧಿಷ್ಟಾವದಿ ಪ್ರತಿಭಟನೆ ಅನಿವಾರ್ಯವಾಗಿದ್ದು, ತಾಲೂಕಿನ ಎಲ್ಲಾ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಯಾವುದೇ ಕೃಷಿ ಸಾಲಕ್ಕೆ ಸಫೇಸಿ ಕಾಯಿದೆ ಅನ್ವಯವಾಗುವುದಿಲ್ಲ. ಹೀಗಿದ್ದರೂ ಸರ್ಫೇಸಿ ಕಾಯಿದೆಯಡಿಯಲ್ಲಿ ನೋಟೀಸ್ ಜಾರಿ ಮಾಡಿ ತೋಟಗಳನ್ನು ಹರಾಜು ಹಾಕಲಾಗುತ್ತಿದೆ. ಕೃಷಿ ಸುಸ್ತಿ ಸಾಲಕ್ಕೆ ದಂಡ, ಬಡ್ಡಿ ವಿಧಿಸಬಾರದೆಂದು ರಿಸರ್ವ ಬ್ಯಾಂಕ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರೂ ಬ್ಯಾಂಕ್ಗಳು ದಂಡ ಬಡ್ಡಿಯನ್ನು ನಮ್ಮ ಆದಾಯದ ಮೂಲವನ್ನಾಗಿ ಮಾಡಿದೆ. ಬೆಳೆಗಾರರ ವಿರುದ್ಧ ಪರೋಕ್ಷವಾಗಿ ಬೆದರಿಸುವ ತಂತ್ರ ಬಳಸಲಾಗುತ್ತಿದೆ. ಕೇರಳ ಮತ್ತು ಮದ್ರಾಸ್ ಸರಕಾರ ಕಾಫಿಯನ್ನು ಕೃಷಿ ಎಂದು ಪರಿಗಣಿಸಿ ಬೆಳೆಗಾರರನ್ನು ಸಫೇಸಿ ಕಾಯಿದೆಯಿಂದ ಹೊರಗಿಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯಿದೆಯಿಂದ ಹೊರಗಿಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಈ ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಬಸವರಾಜು, ಕೆಜಿಎಫ್ ಮಾಜಿ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರೇವಣ್ಣಗೌಡ ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.