लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಾಡಾನೆ ಸೆರೆ : ಅರಣ್ಯ ಇಲಾಖೆ ಹಾಗೂ ಅಭಿಮನ್ಯು ನೇತೃತ್ವದ ಸಾಕಾನೆಗಳಿಂದ ಕಾರ್ಯಾಚರಣೆ.”

1 min read

ಚಿಕ್ಕಮಗಳೂರು ಜಿಲ್ಲೆಯ ಸಾರಗೋಡು ಸಮೀಪ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.

ಬುಧವಾರ ಮಧ್ಯಾಹ್ನ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲಾಗಿತ್ತು. ಆನೆ ಸುಮಾರು 8 ಕಿಲೋ ಮೀಟರ್ ನಷ್ಟು ದೂರ ಸಾಗಿ ಸಾರಗೋಡು ಸಮೀಪ ಅರಣ್ಯದಲ್ಲಿ ಬಿದ್ದಿತ್ತು ಎನ್ನಲಾಗಿದೆ.

ನಂತರ ಸಂಜೆ ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಆನೆಯನ್ನು ತಡರಾತ್ರಿ ಲಾರಿಗೆ ತುಂಬಿಸಿ ಸಕ್ರೇಬೈಲ್ ಆನೆ ಶಿಬಿರದ ಕಡೆ ಕೊಂಡೊಯ್ಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ನವೆಂಬರ್ 8 ರಂದು ಮಹಿಳೆಯನ್ನು ಕೊಂದ ದಿನವೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದರು. ಅವರ ಸೂಚನೆಯ ಮೇರೆಗೆ ಈ ಆನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರ ಆದೇಶ ಮಾಡಿತ್ತು. ಈ ಆನೆ ಮಲೆನಾಡು ಭಾಗದಲ್ಲಿ ಹಲವು ಜೀವಹಾನಿಗೆ ಕಾರಣವಾಗಿತ್ತು.

ಅದರ ಸೆರೆಗೆ ಮತ್ತು ಆಲ್ದೂರು ಸುತ್ತಮುತ್ತ ಸಂಚರಿಸುತ್ತಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟಲು ಒಟ್ಟು 9 ಸಾಕಾನೆಗಳನ್ನು ಕರೆತರಲಾಗಿತ್ತು. ಒಂಟಿ ಸಲಗದ ಪತ್ತೆಗೆ ಸತತ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ನಿಗದಿತ ಒಂಟಿ ಸಲಗ ಕಾರ್ಯಾಚರಣೆ ವೇಳೆ ಪತ್ತೆಯಾಗಿರಲಿಲ್ಲ.

ಪ್ರಾಣಹಾನಿ ಉಂಟುಮಾಡುತ್ತಿದ್ದ ಒಂಟಿಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದು ಕಾಡಾನೆಯನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಆನೆಯೂ ಸಹ ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಉಪಟಳ ನೀಡುತ್ತಿತ್ತು ಎನ್ನಲಾಗಿದೆ.

“ಪ್ರಾಣಹಾನಿ ಮಾಡಿದ ಆನೆಯಲ್ಲ ಸ್ಥಳೀಯರ ಆರೋಪ.”

ಈಗ ಸೆರೆಯಾಗಿರುವ ಆನೆ ಜನರನ್ನು ಸಾಯಿಸಿರುವ ಆನೆಯಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮೊನ್ನೆ ಆಲ್ದೂರು ಸಮೀಪ ಮಹಿಳೆಯನ್ನು ಸಾಯಿಸಿದ್ದ ಆನೆಯ ಬೆನ್ನಿನ ಭಾಗದಲ್ಲಿ ದಪ್ಪದ ಗಂಟು ಇತ್ತು. ಅದರ ದಂತಗಳು ಚಿಕ್ಕದಾಗಿದ್ದವು, ಈಗ ಹಿಡಿದಿರುವ ಆನೆಯ ದಂತಗಳು ತುಂಬಾ ಉದ್ದವಾಗಿವೆ. ಹಾಗಾಗಿ ಈಗ ಹಿಡಿದಿರುವುದು ಮನುಷ್ಯರನ್ನು ಕೊಂದಿರುವ ಒಂಟಿಸಲಗವಲ್ಲ ಎಂದು ಹೇಳುತ್ತಿದ್ದಾರೆ.

“ಕಾರ್ಯಾಚರಣೆ ಮುಂದುವರಿಯುತ್ತದೆ ; ಅರಣ್ಯ ಇಲಾಖೆ ಸ್ಪಷ್ಟನೆ.”

ಒಂಟಿ ಸಲಗವನ್ನು ಸೆರೆ ಹಿಡಿಯಲು ಒಟ್ಟು 9 ಸಾಕಾನೆಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದವು. ಸತತ ಐದು ದಿನಗಳಿಂದ ಕಾಡಾನೆ ಸೆರೆಗೆ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಮನುಷ್ಯರನ್ನು ಸಾಯಿಸಿದ್ದ ಒಂಟಿಸಲಗದ ಸುಳಿವು ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ರೈತರ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿಸಲಗವನ್ನು ಸೆರೆ ಹಿಡಿಯಲಾಗಿದೆ. ಒಂದು ದಿನದ ವಿಶ್ರಾಂತಿ ನಂತರ ಮತ್ತಾವರ ಭಾಗದಲ್ಲಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟುವ ಮತ್ತು ಮನುಷ್ಯರ ಸಾವಿಗೆ ಕಾರಣವಾಗಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂಟಿಸಲಗದ ಸುಳಿವು ಸಿಕ್ಕರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *