“ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಿ : ಬೆಳೆಗಾರರ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ.”
1 min read
ದಿನಾಂಕ 08/11/2023ರ ಬುಧವಾರದಂದು ಮೂಡಿಗೆರೆಗೆ ಭೇಟಿ ನೀಡಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಆರ್.ಬಾಲಕೃಷ್ಣರವರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಈ ಅಂಶಗಳನ್ನು ಪ್ರಸ್ತಾಪ ಮಾಡಲಾಯಿತು.
ಅನಧಿಕೃತ ಸಾಗುವಳಿ ಭೂಮಿಯನ್ನು ಲೀಸ್ ಮೂಲಕ ನೀಡುವ ಪ್ರಕ್ರಿಯೆಗೆ ಆದಷ್ಟು ಶೀಘ್ರವಾಗಿ ಚಾಲನೆ ನೀಡುವಂತೆ ಕೋರಿದ್ದಾರೆ.
ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಆನೆ – ಮಾನವ ಸಂಘರ್ಷ ನಿಯಂತ್ರಣಕ್ಕೆ ಕೂಡಲೇ ಕ್ರಮ ವಹಿಸುವಂತೆ ಮನವಿ ಸಲ್ಲಿಸಿದ್ದಾರೆ.
ಹಾಗೂ ಅತ್ಯಂತ ಪ್ರಮುಖವಾಗಿ ಬ್ಯಾಂಕುಗಳು ವಿವೇಚನಾರಹಿತವಾಗಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ನೊಟೀಸ್ ಜಾರಿ ಮಾಡಿ ಕೆಲವೇ ದಿನಗಳಲ್ಲಿ ತೋಟಗಳನ್ನು ಆನ್ ಲೈನ್ ಹರಾಜು ಹಾಕುತ್ತಿರುವುದರ ವಿರುದ್ಧ ಮಾನ್ಯ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. ಸ್ಥಳದಲ್ಲೇ ಹಾಜರಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನಾ ನಾಗರಾಜ್ ರವರು ತಾವು ಈ ಕುರಿತು ಈಗಾಗಲೇ ಬೆಳೆಗಾರರು ಹಾಗೂ ಜಿಲ್ಲಾ ಬ್ಯಾಂಕರ್ಸ್ ಸಭೆ ಕರೆದು ಬ್ಯಾಂಕ್ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ “ಬೆಳೆಗಾರರಿಗೆ ಕಿರುಕುಳ ನೀಡದಂತೆ ” ತಿಳಿಸಿರುವುದಾಗಿಯೂ ಹಾಗೂ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಭೆ (SLBC) ನಡೆಯುವ ವರೆಗೂ ಸರ್ಫೇಸಿ ಇ-ಹರಾಜು ಇತ್ಯಾದಿ ಜರುಗಿಸದಂತೆ ಸೂಚಿಸಿರುವುದಾಗಿಯೂ ತಿಳಿಸಿದರು. ಹೀಗಿದ್ದಾಗ್ಯೂ ಕೆನರಾ ಬ್ಯಾಂಕ್ ಮಾತ್ರ ಈ ರೀತಿ ಬೆಳೆಗಾರರಿಗೆ ನೋಟೀಸ್ ಜಾರಿಗೊಳಿಸುವುದನ್ನು ಹಾಗೂ ಹರಾಜು ಸೂಚನೆಯನ್ನು ಪ್ರಕಟಿಸುವುದನ್ನು ಮುಂದುವರೆಸಿದೆ. ತಾವು ಈ ಕುರಿತು ಕೆನರಾ ಬ್ಯಾಂಕ್ ನ ಮಂಗಳೂರಿನ ಕಛೇರಿಗೆ ಈ ಕೂಡಲೇ ಪತ್ರ ಬರೆಯುವುದಾಗಿಯೂ ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಈ ಕ್ರಮವನ್ನು ತತ್ ಕ್ಷಣ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಾದ ಆದೇಶ ನೀಡಿದ್ದಾರೆ.
ಮೂಡಿಗೆರೆ ಶಾಸಕರಾದ ಶ್ರೀಮತಿ ನಯನಾ ಮೋಟಮ್ಮ,ಶೃಂಗೇರಿ ಶಾಸಕರಾದ ಶ್ರೀ ಟಿ.ಡಿ.ರಾಜೇಗೌಡ,ಚಿಕ್ಕಮಗಳೂರು ಶಾಸಕರಾದ ಶ್ರೀ ಹೆಚ್.ಡಿ.ತಮ್ಮಯ್ಯ,ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ ಹಾಗೂ ಶ್ರೀ ಬಿ.ಬಿ.ನಿಂಗಯ್ಯ,ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಗಾಯಿತ್ರಿ ಶಾಂತೇಗೌಡ ಮತ್ತು ಗೃಹ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಜಿ ಹಾಲಪ್ಪಗೌಡ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು.ಕೆ.ಜಿ.ಎಫ್ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಎಸ್. ಜಯರಾಂ ಹಾಗೂ ಸಂಘದ ಗೌರವ ಕಾರ್ಯದರ್ಶಿ ಶ್ರೀ ಕೆ.ಡಿ.ಮನೋಹರ್ ರವರು ಈ ಸಂದರ್ಭದಲ್ಲಿ ಹಾಜರಿದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಸದರಿ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಸಹಕರಿಸಿದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.