“ಬಿಡಾಡಿ ದನಕ್ಕೆ ಡಿಕ್ಕಿ : ಪ್ರಾಣ ಕಳೆದುಕೊಂಡ ಯುವಕ.”
1 min read
ರಸ್ತೆ ಮಧ್ಯೆ ಮಲಗಿದ್ದ ಬಿಡಾಡಿ ದನಗಳಿಂದ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಅಮಾಯಕ ಯುವಕನೊಬ್ಬ ಜೀವ ಕಳೆದುಕೊಂಡ ಘಟನೆ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಮತ್ತು ಕೊಟ್ಟಿಗೆಹಾರ ರಸ್ತೆಯಲ್ಲಿ ನಡೆದಿದೆ.ಮೃತ ಯುವಕನನ್ನು ಜನ್ನಾಪುರದ ಹೊಯ್ಸಳಲು ನಿವಾಸಿಯಾದ ಮೋಹನ್ ಎಂದು ಗುರುತಿಸಲಾಗಿದೆ.
ಕೆಲಸದ ನಿಮಿತ್ತ ಬಾಳೆಹೊಳೆಗೆ ಹೋಗಿ ಕೊಟ್ಟಿಗೆಹಾರ ಮಾರ್ಗವಾಗಿ ಜನ್ನಾಪುರಕ್ಕೆ ತೆರಳುತ್ತಿದ್ದಾಗ ರಸ್ತೆಗೆ ಅಡ್ಡ ಬಂದ ದನಗಳ ಹಿಂಡಿನಲ್ಲಿ ಒಂದು ದನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದನದ ಕೊಂಬು ಯುವಕನ ತಲೆಗೆ ಬಡಿದು ತೀವ್ರ ಪೆಟ್ಟಾಗಿತ್ತು. ಅವರನ್ನು ಮೊದಲು ಚಿಕಿತ್ಸೆಗಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು , ಆದರೆ ಯುವಕನ ತಲೆಗೆ ಮತ್ತು ಎದೆಗೆ ತೀವ್ರ ಪೆಟ್ಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24/10/2023ರ ಸೋಮವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
“ಸಾರ್ವಜನಿಕರಿಂದ ಪ್ರತಿಭಟನೆಯ ಎಚ್ಚರಿಕೆಯ ಗಂಟೆ.”
ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಫಲ್ಗುಣಿ, ಸಬ್ಬೇನಹಳ್ಳಿ ಭಾಗದಲ್ಲಿ ಬಿಡಾಡಿ ದನಗಳ ಸಮಸ್ಯೆ ಹಿಂದಿನಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಆದಷ್ಟು ಬೇಗ ಬಿಡಾಡಿ ದನಗಳ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
“ಅಕ್ಟೋಬರ್ 27 ಶುಕ್ರವಾರದಂದು ಬಿಡಾಡಿ ದನಗಳ ಸಮಸ್ಯೆ ಕುರಿತು ಸಭೆ.”
ತರುವೆ ಗ್ರಾ.ಪಂ ಆವರಣದಲ್ಲಿ ಬಿಡಾಡಿ ದನಗಳ ಸಮಸ್ಯೆಯ ಕುರಿತು ಅಕ್ಟೋಬರ್ 27 ರಂದು ಸಭೆ ನಡೆಯಲಿದೆ ಎಂದು ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ.ಸಿ ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಅಕ್ಟೋಬರ್ ೨೭ ರಂದು ಬೆಳಿಗ್ಗೆ 11 ಗಂಟೆಗೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ತರುವೆ ಗ್ರಾ.ಪಂ ಆವರಣದಲ್ಲಿ ನಡೆಯುವ ಸಭೆಯಲ್ಲಿ ಆ ಭಾಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಾನುವಾರುಗಳ ವಾರಸುದಾರರು, ಪ್ರಾಣಿಪ್ರಿಯರು ಸಭೆಯಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.