लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಾಫಿ – ಕಾಫಿಡೇ – ಸಿದ್ದಾರ್ಥ – ಆತ್ಮಹತ್ಯೆ – ಪುನಶ್ಚೇತನ.”

1 min read

ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು……

ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ. ” ಕಾಫಿ ” ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ, ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಕಾಡ ಹರಟೆಯ ಖುಷಿ ಕಾಫಿ….

ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ….

ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ ವಿಷಯದ ಬಗ್ಗೆ ಬರೆಯುತ್ತಾ ಸುಲಭವಾಗಿ ಅಭ್ಯಾಸ ಮಾಡಬಹುದು…..

ಕಾಫಿ ಎಂದಾಗ ಕರ್ನಾಟಕದ ಕಾಫಿಗೆ, ಕೆಲವು ವರ್ಷಗಳಿಂದ ಜಾಗತೀಕರಣದ ಆಧುನಿಕ ದಿನಮಾನಗಳಲ್ಲಿ ಅಂತರರಾಷ್ಟ್ರೀಯ ಪ್ರಚಾರ ಮತ್ತು ಪ್ರಖ್ಯಾತಿ ನೀಡಿದ್ದು ಕಾಫಿ ಡೇ ಎಂಬ ಬ್ರಾಂಡ್ ಮತ್ತು ಅದರ ಸೃಷ್ಟಿಕರ್ತ ಸಿದ್ದಾರ್ಥ. ಕರ್ನಾಟಕದ ಕಾಫಿ ಹಿಂದಿನಿಂದಲೂ ದೇಶ ವಿದೇಶಗಳಲ್ಲಿ ರಫ್ತಾಗುತ್ತಿತ್ತು. ಅದನ್ನು ಇನ್ನೂ ಹೆಚ್ಚು ಮಾಡಿದ್ದಲ್ಲದೆ ಅಂತರರಾಷ್ಟ್ರೀಯ ಕಾಫಿಯನ್ನು ಅಂದರೆ ಬ್ರೆಜಿಲ್ ಕಾಫಿ, ಆಫ್ರಿಕಾದ ಕಾಫಿ ಇತ್ಯಾದಿಗಳನ್ನು ಕಾಫಿ ಡೇ ಮುಖಾಂತರ ಕರ್ನಾಟಕದ ಜನಸಾಮಾನ್ಯರಿಗೆ ಪರಿಚಯಿಸಿದ್ದು ಸಿದ್ದಾರ್ಥ…..

” A lot can happen over coffee ” ಎಂಬ ಅಡಿ ಬರಹದೊಂದಿಗೆ ಅದನ್ನು ಪ್ರಖ್ಯಾತ ಮಾಡಿ ಕಾಫಿ ಪ್ರಿಯರ ಬದುಕಿನ ಸ್ಪೂರ್ತಿಯಾಗಿದ್ದ ಸಿದ್ದಾರ್ಥ ಅವರ ಆರ್ಥಿಕ ವ್ಯವಹಾರಗಳು ಅವರ ಬದುಕನ್ನು ಮಧ್ಯದಲ್ಲೇ ನಿಲ್ಲಿಸಿದ್ದು ದುರಂತ…….

ನಾಲ್ಕು ವರ್ಷಗಳ ಹಿಂದೆ ಅವರ ಆತ್ಮಹತ್ಯೆಯ ಸಂದರ್ಭದಲ್ಲಿ ಬರೆದ ಲೇಖನ…..

” ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ “
Mr. Siddarth………..

ಒಂದು ಕಪ್ ಕಾಫಿ ಸೇವನೆಯಿಂದ ಬಹಳಷ್ಟು ಆಗಬಹುದು ಎಂಬ ಟ್ಯಾಗ್‌ ಲೈನ್ ನೀವೇ ನೀಡಿರುವಿರಿ.

ಹೌದು,
ಆ ದುರಂತದ ದಿನ ನೀವು ನಿಂತ ಆ ಸೇತುವೆಯಿಂದ ಕೆಲವೇ ಕಿಲೋಮೀಟರುಗಳ ಅಂತರದಲ್ಲಿ ಒಂದು ಪುಟ್ಟ ಗುಡಿಸಲಿನಂತ ರಸ್ತೆ ಬದಿಯ ಹೋಟೆಲಿನಲ್ಲಿ ಆ ಸುಂದರ ಸಂಜೆಯ ಮಬ್ಬು ಗತ್ತಲ ದಟ್ಟ ಕಾಡಿನಲ್ಲಿ ತಣ್ಣನೆಯ ಗಾಳಿಯ ನಡುವೆ ತುಂತುರು ಮಳೆ ಹನಿಯ ಪರಿಸರದಲ್ಲಿ ಒಂದು 10 ರೂಪಾಯಿಯ ಬಿಸಿಬಿಸಿ ಕಾಫಿ ಕುಡಿದು ನಿಮ್ಮ ನೆನಪಿನ ಅಂಗಳದಲ್ಲಿ ಒಂದು ಸಣ್ಣ ವಾಕ್ ಮಾಡಿದ್ದರೆ ಬಹುಶಃ ನೀವು ಇಂದು ನಮ್ಮೊಂದಿಗೆ ಇರುತ್ತಿದ್ದಿರಿ…….

ಬೆತ್ತಲೆಯೊಂದಿಗೆ ಭೂ ಪ್ರವೇಶಿಸುವ ನಾವು ಮತ್ತೆ ಬೆತ್ತಲಾಗಲು ಹೆದರುವುದೇಕೆ……,

ಬೆಳೆಯುತ್ತಾ ದೇಹ ಬಲಿಯುತ್ತದೆ. ಅಂಗಾಗಗಳು ದಪ್ಪವಾಗುತ್ತವೆ. ಉಡುಗೆ ತೊಡುಗೆಗಳು ಮೈ ಅಲಂಕರಿಸುತ್ತವೆ. ಮನಸ್ಸಿನಲ್ಲಿ ಹಲವಾರು ಭಾವನೆಗಳು ಮೂಡುತ್ತವೆ. ಬೇರೆ ಬೇರೆ ಸಂಬಂಧಗಳು ಜೊತೆಯಾಗುತ್ತವೆ‌.
ಆದರೆ ಅವೆಲ್ಲವೂ ತಾತ್ಕಾಲಿಕವಲ್ಲವೆ…..

ಜೀವನದ ಎಲ್ಲಾ ದಿನಗಳು ಹಿತಕರವಾಗಿಯೇ ಇರಬೇಕು ಎಂದರೆ ಹೇಗೆ ? ಒಂದಷ್ಟು ಕಹಿ ದಿನಗಳು ಸಹ ಸಹಿಸಬೇಕಲ್ಲವೇ ?….

ಅರವತ್ತು ವಸಂತಗಳನ್ನು ಮುಗಿಸಿದ ನೀವು ಇನ್ನೊಂದಿಷ್ಟು ದಿನ ಮುನ್ನಡೆಯಬಹುದಿತ್ತು……

ಮಿಸ್ಟರ್ ಸಿದ್ದಾರ್ಥ್,
ಈ ದೇಶ, ಈ ರಾಜ್ಯ, ಈ ಜಿಲ್ಲೆ, ಈ ತಾಲ್ಲೂಕು, ಈ ಹೋಬಳಿ, ಈ ಗ್ರಾಮ ಮತ್ತು ಇಲ್ಲಿನ ಬಹುತೇಕ ಮನೆಗಳು ಸಾಲದಲ್ಲಿಯೇ ನಡೆಯುತ್ತಿವೆ. ನಮ್ಮೆಲ್ಲರ ತಲೆಯ ಮೇಲೂ ಎಷ್ಟೋ ಸಾಲಗಳು ಹುಟ್ಟುತ್ತಲೇ ಹೆಗಲೇರುತ್ತವಂತೆ. ಅದರ ಪ್ರಮಾಣದಲ್ಲಿ ಒಂದಷ್ಟು ವ್ಯತ್ಯಾಸಗಳು ಇರಬಹುದು. ಅಂತಹ ದೇಶದ ಪ್ರಜೆಗಳಾದ ನಾವು ಸಾಲಕ್ಕೆ ಹೆದರುವುದೆ ?
ರೈತರೇನೋ ಪಾಪ ಮುಗ್ಧರು. ನೀವು……..

ನಿಮಗೂ ತಿಳಿದಿತ್ತು ಈ ಸಮಾಜದ ಸ್ಥಿತಿ ಗತಿ. ಎಷ್ಟೋ ಎಷ್ಟೋ ಜನ ಎಂತಹ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ….

ಗಣ್ಯ ವ್ಯಕ್ತಿ ಆದ ಕಾರಣಕ್ಕೆ ಕಷ್ಟಗಳು ನೋವುಗಳು ದುಃಖಗಳು ಅವಮಾನಗಳು ಸಹ ಗಣ್ಯವಾಗುವುದಿಲ್ಲ. ಅದು ಪ್ರತಿ ಮನುಷ್ಯನಿಗೂ ಸಹಜ ಮತ್ತು ಸಾಮಾನ್ಯ. ಆದರೆ ನಮ್ಮ ಭ್ರಮೆ ಮತ್ತು ಕೃತಕ ಮನಸ್ಥಿತಿಯ ಪರಿಸರ ಹಾಗು ಜನಪ್ರಿಯತೆ ನಮ್ಮ ಮಾನ ಅವಮಾನಗಳು ದೊಡ್ಡದು ಎಂಬಂತೆ ನಮ್ಮೊಳಗೆ ಬಿಂಬಿತವಾಗಿ ನಮ್ಮನ್ನು ಚಿಕ್ಕವರನ್ನಾಗಿಸುತ್ತದೆ. ಬಹುಶಃ ನೀವು ಆ ಭ್ರಮೆಗೆ ಬಲಿಯಾಗಿರಬಹುದೆ ?….

ಗರಿಷ್ಠ ಎಂದರೆ ನಿಮಗೆ ಏನು ತೊಂದರೆ ಆಗಬಹುದಿತ್ತು.
ನಿಮ್ಮ ಆಸ್ತಿಯೆಲ್ಲಾ ಸರ್ಕಾರದ ವಶವಾಗಬಹುದಿತ್ತು,
ನಿಮ್ಮನ್ನು ಜೈಲಿಗೆ ಹಾಕಬಹುದಿತ್ತು.
ನಿಮ್ಮ ಕುಟುಂಬದವರು, ಆಪ್ತರು, ಸ್ನೇಹಿತರು ನಿಮಗೆ ಛೀಮಾರಿ ಹಾಕಿ ದೂರ ಇಡಬಹುದಿತ್ತು….

” ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡ ಮೇಲೆಯೇ ನಮ್ಮನ್ನು ನಾವು ಪಡೆಯುವುದು “

ಅದಕ್ಕಿಂತ ದೊಡ್ಡ ಸ್ವಾತಂತ್ರ್ಯ ಸೃಷ್ಟಿಯ ಜೀವಿಗೆ ಇನ್ನೇನಿದೆ…..

ಇದು ಒಣ ವೇದಾಂತವಲ್ಲ ವಾಸ್ತವ….

ಇದ್ದಿರಬಹುದು,
ನಿಮಗೆ ಆರ್ಥಿಕ ಸಂಕಷ್ಟ,
ತೆರಿಗೆ ಕಿರುಕುಳ,
ಸಾಲಗಾರರ ಒತ್ತಡ,
ಸ್ವಾಭಿಮಾನಕ್ಕೆ ಧಕ್ಕೆ,
ಸೋಲಿನ ಹತಾಶೆ,
ವಿಫಲತೆಯ ನಿರಾಶೆ,….

ಅದು ಬದುಕಲು ಕಾರಣಗಳಾಗಬೇಕಿತ್ತೇ ಹೊರತು ಸಾಯಲು ಅಲ್ಲ.
ಸಾವು ಬಂದೇ ಬರುತ್ತದೆ. ಅದನ್ನು ಹುಡುಕಲು ಪ್ರಯತ್ನಿಸಬಾರದಿತ್ತು….

ನಾವು ನಮ್ಮನ್ನು ಮಾತ್ರ ನಿಯಂತ್ರಿಸಿಕೊಳ್ಳಬಹುದು. ಇತರರು ನಮ್ಮ ನಿಯಂತ್ರಣಕ್ಕೆ ಸಿಗುವುದು ಮತ್ತು ನಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುವುದು ಬಹುದೊಡ್ಡ ತಪ್ಪಾಗಬಹುದು……

ಇರಲಿ ಬಿಡಿ ನಿಮ್ಮ ಸಾಯುವ ಸ್ವಾತಂತ್ರ್ಯ ಪ್ರಶ್ನಿಸಲು ನಾವು ಯಾರು ?……

ನಿಮ್ಮ ಒಟ್ಟು ವ್ಯಕ್ತಿತ್ವ ಮತ್ತು ನಿಮ್ಮ ಸಾಮರ್ಥ್ಯವನ್ನು ಹೀಗೆ ಗ್ರಹಿಸಿದ್ದೇನೆ…..

ಚಿಕ್ಕಮಗಳೂರಿನ ಸಣ್ಣ ಹಳ್ಳಿಯ ಬಾಲಕನೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯಮಿಯಾಗಿ ಬೆಳೆದು ಹೆಸರಾಂತ ರಾಜಕಾರಣಿಯ ಅಳಿಯನಾಗಿ, ಎರಡು ಮಕ್ಕಳ ತಂದೆಯಾಗಿ, ಅರವತ್ತನೆಯ ವಯಸ್ಸಿನಲ್ಲಿ ತನ್ನ ಒಟ್ಟು ಅನುಭವದ ಲಾಭ ಪಡೆಯದೆ ಮನಸ್ಸನ್ನು ನಿಯಂತ್ರಿಸದೆ ಮಾನಸಿಕ ರೋಗಿಯಾಗಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನು……

ಸಿದ್ದಾರ್ಥ ನೀವು ಇದನ್ನು ಓದುವುದಿಲ್ಲ. ನಿಮ್ಮದು ಇನ್ನು ಮುಗಿದ ಅಧ್ಯಾಯ. ಆದರೆ ನಿಮ್ಮ ಸಾವು ನಮಗೆ ಬುದ್ಧಿತ್ವದ ಅನುಭವ ನೀಡಲಿ……”

ಈಗ ಕಾಫಿ ಡೇ ತನ್ನ ಪಾಲಿನ ಬಹಳಷ್ಟು ‌ಸಾಲವನ್ನು ತೀರಿಸಿ ಪುನಶ್ಚೇತನದ ಹಾದಿಯಲ್ಲಿದೆ ಎಂಬ ಸುದ್ದಿ ಬರುತ್ತಿದೆ. ಅವರಿಗೆ ಒಳ್ಳೆಯದಾಗಲಿ…..

ಎಷ್ಟೇ ಸಾಲ ಆಗಲಿ,
ಎಷ್ಟೇ ಅವಮಾನ ಆಗಲಿ,
ಯಾವೊನೇ ಕೈಕೊಡಲಿ,
ಯಾವೊಳೇ ಕೈಬಿಡಲಿ,
ಎಷ್ಟೇ ಸೋಲಾಗಲಿ,
ಯಾರು ಏನೇ ಅಂದುಕೊಳ್ಳಲಿ,
ಹೊಟ್ಟೆ ತುಂಬ ಊಟ ಮಾಡಿ,
ಕಣ್ಣು ತುಂಬ ನಿದ್ದೆ ಮಾಡಿ,
ಒಂದು ಕಾಫಿ ಕುಡಿದು,
ಸಿನಿಮಾಗೆ ಹೋಗಿ ಬಿಡಿ.
ಆತ್ಮಹತ್ಯೆ ಗೀತ್ಮಹತ್ಯೆ ಎಲ್ಲಾ ಹೇಡಿಗಳ ಸರಕು.
ಸಾವು ಅಂದರೆ ತುಂಬಾ ಹೆದರಿಕೆ.
ಅದಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಡಿ,
ಬದುಕು ಮುಖ್ಯ.

✍🏻ಬರಹ ಕೃಪೆ✍🏻
ವಿವೇಕಾನಂದ ಎಚ್.ಕೆ.
9844013068…..

ಒಬ್ಬ ವ್ಯಕ್ತಿ ಎಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿ,ಉದ್ಯೋಗ ನೀಡಿ,ಎಷ್ಟೋ ನೊಂದ ಜೀವಗಳಿಗೆ ಆಸರೆಯಾಗಿ ಅವರ ಕಷ್ಟಕ್ಕೆ ಸಹಾಯ ಮಾಡಿದ ಧೀಮಂತ ನಾಯಕ ನಮ್ಮೂರ ಕಾಫಿಯ ದೊರೆ ಸಿದ್ಧಾರ್ಥ ಹೆಗ್ಡೆ. ಅವರ ಕುರಿತು ಒಂದು ಸಣ್ಣ ಕಿರುಚಿತ್ರ ಇಲ್ಲಿದೆ. ವೀಕ್ಷಿಸಿ……ಶೇರ್,ಲೈಕ್,ಕಮೆಂಟ್ ಮಾಡಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *