‘ಮಂಜುನಾಥ ನಿನಗೆ “ಸೌಜನ್ಯ” ಇದೆಯೇ.’
1 min read
ಸೌಜನ್ಯ ಪ್ರಕರಣ ಧರ್ಮಸ್ಥಳದಲ್ಲಿ ಸುದೀರ್ಘವಾಗಿ ನಡೆದುಕೊಂಡು ಬಂದಿರುವ ಅತ್ಯಾಚಾರ -ಅನಾಚಾರ, ಧರ್ಮಾಧಿಕಾರಿ ಹೆಸರಿನ ದರ್ಪ ದೌರ್ಜನ್ಯಗಳನ್ನು ವಿಶ್ವದ ಮುಂದೆ ಬಯಲು ಮಾಡಿದೆ. ಯಾವ ಹೆಣ್ಣುಮಗುವಿಗೂ ಬರಬಾರದ ಕ್ರೂರ ಸ್ಥಿತಿಯಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ನಡೆದಿದೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಆಯೋಜಿಸಿದ್ದ ‘ಸೌಜನ್ಯ ಸಂವಾದ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. “ನಾವು ಗುರುತಿಸಿರುವಂತೆ ಹಾಗೂ ಸೌಜನ್ಯ ಕುಟುಂಬ ದೂರು ನೀಡಿರುವಂತೆ ಮಲಿಕ್ ಜೈನ್, ಉದಯ್ ಜೈನ್, ಹರ್ಷಿತ್ ಜೈನ್, ನಿಶ್ಚಲ್ ಜೈನ್ – ಇವರೆಲ್ಲ ನಿಜವಾಗಿ ನಿಜವಾದ ಆರೋಪಿಗಳು. ಆದರೆ, ಅವರನ್ನು ವಿಚಾರಣೆಗೆ ಒಳಪಡಿಸಿದರೆ, ನಿರ್ದೋಶಿ ಸಂತೋಷ್ ರಾವ್ಅನ್ನು ಬಂಧಿಸಿ, ಹಿಂಸೆ ನೀಡಿದರು. ಸಂತೋಷ್ ನಿರಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ನಂತರವೂ, ಸೌಜನ್ಯ ಕುಟುಂಬ ಗುರುತಿಸಲ್ಪಟ್ಟ ಆರೋಪಿಗಳ ಪರ ವಕೀಲರು ಮಾಧ್ಯಮಗಳ ಮುಂದೆ ಬೊಬ್ಬೆ ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.

“80ರ ದಶಕದಲ್ಲಿ ಧರ್ಮಸ್ಥಳ ಪಂಚಾಯತಿಯಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಕುಟುಂಬವೊಂದರ ಯುವತಿ ಪದ್ಮಲತಾ ಎಂಬಾಕೆಯನ್ನು ಅಪಹರಿಸಿ ನಿರಂತರವಾಗಿ 40 ದಿವಸ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ವೇದಾವಲ್ಲಿ ಎಂಬ ಶಿಕ್ಷಕಿ ವರ್ಗಾವಣೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಪೆಟ್ರೋಲ್ ಹಾಕಿ ಸುಟ್ಟುಬಿಟ್ಟರು. ಅದನ್ನು ಕಂಡ ಸಾಕ್ಷಿಗಳಾದ ಇಬ್ಬರು ಹೆಣ್ಣುಮಕ್ಕಳು ಮರುದಿನವೇ ಹೆಣವಾಗಿದ್ದರು” ಎಂದು ಆರೋಪಿಸಿದ್ದಾರೆ.
“ಅದೇರೀತಿ ಸೌಜನ್ಯ ಬದಲಿಗೆ ವರ್ಷಾ ಎಂಬ ಬ್ರಾಹ್ಮಣ ಹೆಣ್ಣು ಮಗುವಿನ ಅತ್ಯಾಚಾರ ಕೊಲೆ ಆಗಬೇಕಿತ್ತು. ಆಕೆಯ ಕುಟುಂಬ ಧರ್ಮಸ್ಥಳದವರಿಗೆ ತಮ್ಮ ಭೂಮಿ ಕೊಡದಿದ್ದಕ್ಕೆ ಹೆದರಿಸಿ ಒಕ್ಕಲೆಬ್ಬಿಸಲು ಮಾಡಿದ ತಂತ್ರ ಅದು. ಆದರೆ, ವರ್ಷಾ ಅದೃಷ್ಟವಶಾತ್ ಬಚಾವಾಗಿದ್ದಳು. ಆರೋಪಿಗಳಲ್ಲಿ ಒಬ್ಬನಾದ ಮಲಿಕ್ ಜೈನ್ ಎಂಬಾತ ಸೌಜನ್ಯ ತಾಯಿಯ ಕ್ಲಾಸ್ಮೆಟ್. ಆತನನ್ನು ಸೌಜನ್ಯ ಕಾಣೆಯಾದ ದಿನ ಆಕೆ ನೋಡಿದ್ದು ಮಾತ್ರವಲ್ಲ, ಅವರ ಸಂಚು ರೂಪಿಸುತ್ತಿದ್ದದ್ದನ್ನು ಕೇಳಿಸಿಕೊಂಡಿದ್ದರು. ಅದಾಗ್ಯೂ, ಪ್ರಕರಣದ ಪ್ರಮುಖ ಸಾಕ್ಷಿಗಳಾದ ಪರಿಮಳ ಎಂಬ ಶಿಕ್ಷಕಿ ಮತ್ತು ಬಂಟ ಸಮುದಾಯದ ಹುಡುಗಿಯ ಸ್ಟೆಟ್ಮೆಂಟ್ ಪಡೆದು ತನಿಖೆ ಮಾಡಿಸಿ ಚಾರ್ಜ್ಶೀಟ್ ಹಾಕಲಾಗಿಲ್ಲ. ಆ ಶಿಕ್ಷಕಿ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಲಿಲ್ಲ. ಪೊಲೀಸರು ಮತ್ತು ಧರ್ಮಸ್ಥಳದವರು ವ್ಯವಸ್ಥಿತವಾಗಿ ಪ್ರಕರಣವನ್ನು ಸಂಪೂರ್ಣವಾಗಿ ಹಳ್ಳ ಇಡಿಸಿದರು” ಎಂದು ದೂರಿದ್ದಾರೆ.
“ಅಕ್ಟೋಬರ್ 11ನೇ ತಾರೀಖು, ಈ ಪ್ರಕರಣದ ಪರ ನೀವು ದನಿ ಎತ್ತಬೇಕು ಅಂತ ಸರ್ಕಲ್ ಇನ್ಸ್ಪೆಕ್ಟರ್ ನನ್ನನ್ನ ಕರೆಸುತ್ತಾರೆ. ಆದರೆ, ಎಸ್ಪಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸುತ್ತಾರೆ. ಅದೂ ದೊಡ್ಡವರ (ವೀರೇಂದ್ರ ಹೆಗಡೆ) ಸೂಚನೆಯಂತೆ ಅನ್ನೋದು ಗೊತ್ತಾದಾಗಲಿಂದ ನಾನು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಸೌಜನ್ಯಗಳಿಗೆ ನ್ಯಾಯ ಕೊಡಿಸದೆ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
“ಧರ್ಮಸ್ಥಳದಲ್ಲಿ ಅತ್ಯಾಚಾರ-ಕೊಲೆಗಳು ಎಷ್ಟು ಭೀಕರವಾಗಿ ನಡೆಯುತ್ತವೆ ಎಂಬುದನ್ನು ಆ ಊರಿನ ಜನರನ್ನು ಕೇಳಿದರೆ ತಿಳಿಯುತ್ತದೆ. ಧರ್ಮಸ್ಥಳದಲ್ಲಿ ಪೊಲೀಸರು, ಆಡಳಿತ, ಮಾಧ್ಯಮಗಳು ಕೂಡ ಮಾರಾಟವಾಗಿವೆ. ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಒಂದು ಪ್ರೆಸ್ಮೀಟ್ ಕರೆದೂ ಬರುವುದಿಲ್ಲ. ಸೌಜನ್ಯ ಕುಟುಂಬ ಹೊರತಾಗಿ ಇದುವರೆಗೂ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ವಿರುದ್ಧ ಯಾರೂ ನ್ಯಾಯಕ್ಕಾಗಿ ದನಿ ಎತ್ತಿಲ್ಲ. ಧರ್ಮಸ್ಥಳದಿಂದ ಇಲ್ಲಿಗೆ ಬಂದಿರುವ ನನ್ನನ್ನು, ಸೌಜನ್ಯ ಕುಟುಂಬವನ್ನು ಯಾವಾಗ ಬೇಕಿದ್ದರೂ ಕೊಲೆ ಮಾಡಬಹುದು. ನಮಗೆ ಏನೇ ಆದರೂ ಅವರೇ ಕಾರಣ” ಎಂದರು.
“2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ, ಗೃಹಮಂತ್ರಿಯಾಗಿದ್ದ ಆರ್ ಅಶೋಕ್ ಸೇರಿದಂತೆ ಅಧಿಕಾರದಲ್ಲಿದ್ದ ಯಾರೂ ಸೌಜನ್ಯ ಕುರಿತು ಮಾತಾಡಲಿಲ್ಲ. ಧರ್ಮಸ್ಥಳಕ್ಕೆ ಬಂದು ಸೂಟ್ಕೇಸ್ ತೆಗೆದುಕೊಂಡು ಹೋದರು. ಆದ್ದರಿಂದ ಯಾವುದೇ ಸರ್ಕಾರ ಬಂದರೂ ವೀರೇಂದ್ರ ಹೆಗಡೆ ಕೇಸ್ ಮುಚ್ಚಿಸುತ್ತಾರೆ. ಇಡೀ ಸರ್ಕಾರವೇ ಅವರದ್ದು. ಅದಾಗ್ಯೂ, ಇವರ ಹಣೆಬರಹ ವಿಶ್ವಕ್ಕೆ ಗೊತ್ತಾಗಬೇಕು” ಎಂದರು.
“ಸೌಜನ್ಯ ಪ್ರಕರಣದ ಸಾಕ್ಷಿಗಳಾದ ರವಿ ಪೂಜಾರಿ, ಆರೋಪಿಯ ಮನೆ ಕೆಲಸದಾಕೆ ಎಲ್ಲರನ್ನು ಕೊಲೆ ಮಾಡಲಾಗಿದೆ. ನಮ್ಮದು ಯಾವಾಗ ಕೊಲೆ ಆಗತ್ತೊ ಗೊತ್ತಿಲ್ಲ. ಆಕ್ಸಿಡೆಂಟ್ ಎಂದು ಬಿಂಬಿಸಿಬಿಡುತ್ತಾರೆ. ಧರ್ಮಸ್ಥಳದ ಸುತ್ತಮುತ್ತ ಅಥವಾ ಅವರು ಕಣ್ಣು ಹಾಕಿದ ಜಾಗವೆಲ್ಲ ಅವರಿಗೆ ಬೇಕು. ಕೊಡದೆ ವಿರೋಧ ಮಾಡಿದ್ರೆ, ಮರುದಿನ ಅವರ ಕೊಲೆ ಆಗಿರುತ್ತದೆ. ಬಹುತೇಕರನ್ನು ಜಾಗಕ್ಕಾಗಿ ಸ್ಲೋ ಪಾಯಿಸನ್ ಕೊಟ್ಟು ಸಾಯಿಸಿದ್ದಾರೆ. ಇದರ ಬಗ್ಗೆ ಮಾತಾಡಿದರೆ, ವಿರೇಂದ್ರ ಹೆಗಡೆ ಮೇಲೆ ಆರೋಪ ಮಾಡಿದರೆ, ಕಂಟೆಂಪ್ಟ್ ಆಫ್ ಕೋರ್ಟ್ ಆಗುತ್ತದೆ. ಪೊಲೀಸ್, ಇಡಿ, ಸಿಬಿಐ, ನ್ಯಾಯಾಲಯ ಎಲ್ಲದರ ಮೇಲೂ ನಂಬಿಕೆ ಕಳೆದುಕೊಂಡಿದ್ದೇವೆ. ಸಮಾಜ, ಜನ ಮಾತ್ರವೇ ನಮಗೆ ಆಶಾವಾದ” ಎಂದು ತಿಮರೋಡಿ ಹೇಳಿದರು.
ಕಾರ್ಯಕ್ರಮದಲ್ಲಿ ಮತಾನಾಡಿದ ಸೌಜನ್ಯ ತಾಯಿ ಕುಸುಮಾವತಿ, “ನನ್ನ ಮಗಳನ್ನು ಅತ್ಯಾಚಾರ ಮಾಡಿದವರು ಅವಳನ್ನು ಸಾಯಿಸದೆ ಹಾಗೆ ಬಿಟ್ಟಿದ್ದರೆ ಸಾಕಿತ್ತು. ತಾಯಿಯಾಗಿ ನನ್ನ ಮಗುವನ್ನು ನಾನು ಸಾಕುತ್ತಿದ್ದೆ. ಆದರೆ, ನನ್ನ ಮಗು ಕ್ರೂರವಾಗಿ ಸತ್ತದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಕಣ್ತುಂಬಿಕೊಂಡರು.
“ಮಧ್ಯಾಹ್ನ ಊಟಕ್ಕೆ ಬರುತ್ತೇನೆ ಅಂತ ಹೇಳಿ ಖಾಲಿ ಹೊಟ್ಟೆಯಲ್ಲೇ ಹೋದ ನನ್ನ ಮಗುವಿನ ಮುಖವನ್ನು ಸರಿಯಾಗಿ ನೋಡಲಿಲ್ಲ. ಪರೀಕ್ಷೆ ಮುಗಿಸಿ ಒಂದು ಗಂಟೆಗೆ ಮನೆಗೆ ಬರಬೇಕಾದವಳು ನಾಲ್ಕು ಗಂಟೆಯಾದರೂ ಬರಲಿಲ್ಲ. ಅವಳ ಬಳಿ ಪೋನ್ ಕೂಡ ಇರಲಿಲ್ಲ. ಆದರೂ, ಅವಳ ಶವ ಸಿಕ್ಕ ಜಾಗದಲ್ಲಿ ಪೋನ್ ಸಿಕ್ಕಿತು ಎಂದು ಪೊಲೀಸರು ಹೇಳಿದರು. ಒಳ ಉಡುಪನ್ನು ನಮ್ಮ ಮನೆಯಿಂದ ತೆಗೆದುಕೊಂಡು ಹೋಗಿ ಅದೇ ಅವಳು ಧರಿಸಿದ್ದು ಅಂತ ಬಿಂಬಿಸಿದರು. ನನ್ನನ್ನ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾರೆ ಅಂತ ಹೇಳಿ ಆಸ್ಪತ್ರೆಗೆ ಸೇರಿಸಿದ್ದರು. ನನ್ನ ಮಗುವಿನ ಸಾವಿಗೆ ನ್ಯಾಯ ಸಿಗಬೇಕು” ಎಂದು ಅಳಲು ತೋಡಿಕೊಂಡರು.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ಮಾತನಾಡಿ, “ಸೌಜನ್ಯ ನಮ್ಮ ಮಗಳು. ಆಕೆಗೆ ನ್ಯಾಯ ಸಿಗಬೇಕು. ನ್ಯಾಯಕ್ಕಾಗಿನ ಹೋರಾಟದಲ್ಲಿ ಸೌಜನ್ಯ ಕುಟುಂಬದೊಂದಿಗೆ ಒಡನಾಡಿ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಂಸ್ಥೆ ಹೋರಾಟ ಮಾಡಲಿದೆ” ಎಂದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.