“ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಆಸಕ್ತಿ ತೋರದ ಸದಸ್ಯರು.”
1 min read
ಗ್ರಾಪಂಗಳಿಗೆ ಕಳೆದ ಎರಡುವರೆ ವರ್ಷದಿಂದ ಸರ್ಕಾರ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡದೆ ಗ್ರಾಪಂಗಳು ಬರಿದಾಗಿವೆ. ಯಾವುದೆ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗದೆ ಮೊದಲ ಅವಧಿಯನ್ನು ಅಧ್ಯಕ್ಷ, ಉಪಾಧ್ಯಕ್ಷರು ಕಳೆದಿದ್ದಾರೆ. ಈಗ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದ್ದು. ಅಧ್ಯಕ್ಷ ಉಪಾಧ್ಯಕ್ಷರಾಗಲು ಸದಸ್ಯರು ಉತ್ಸಾಹ ತೋರುತ್ತಿಲ್ಲ.
ಗ್ರಾಪಂ ಚುನಾವಣೆಯಲ್ಲಿ ಗೆಲುವು ಪಡೆಯಲು ಅಭ್ಯರ್ಥಿಗಳು ಹರಸಾಹಸ ಪಟ್ಟು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಜನರಿಂದ ಆರಿಸಿ ಬಂದಿದ್ದಾರೆ. ಮೊದಲ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಲು ಚುನಾವಣೆ ನಡೆದಾಗ ತಾಲೂಕಿನ 23 ಗ್ರಾಪಂನ ಸದಸ್ಯರೆಲ್ಲರೂ ತಾವೇ ಅಧ್ಯಕ್ಷ, ಉಪಾಧ್ಯಕ್ಷರಾಗಬೇಕು ಎಂದು ಮುಗಿಬಿದ್ದು ಸದಸ್ಯರನ್ನು ಹೊತ್ತೊಯ್ದು ಬೇರೆ ಜಿಲ್ಲೆಗಳ ರೆಸಾರ್ಟ್ ಅಥವಾ ತೋಟದ ಮನೆಯಲ್ಲಿರಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದರು. ಸದಸ್ಯರ ಕುದುರೆ ವ್ಯಾಪಾರವು ಜೋರಾಗಿ ನಡೆದಿತ್ತು. ಎಲ್ಲಾ ಆಟವೂ ಮುಗಿದ ಬಳಿಕ ಗ್ರಾಮ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಆಗಲೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೊತ್ತಾಗಿದ್ದು, ಸರ್ಕಾರ ಗ್ರಾಪಂಗೆ ಅನುದಾನ ನೀಡುತ್ತಿಲ್ಲ. ಯಾವುದೆ ಪ್ರಯೋಜನವಿಲ್ಲದ ಅಧಿಕಾರ ವಹಿಸಿಕೊಂಡಿದ್ದೇವೆ. ಚುನಾವಣೆಯಲ್ಲಿ ಖರ್ಚು ಮಾಡಿದ ಹಣವು ಸಿಗಲಿಲ್ಲ. ಕುದುರೆ ವ್ಯಾಪಾರ ನಡೆಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಎಂದು ನಿರುದ್ಯೋಗಿಗಳಂತೆ ಎರಡುವರೆ ವರ್ಷ ಕಳೆದು ಈಗ ತಲೆ ಮೇಲೆ ಕೈ ಹೊತ್ತು ಅಧಿಕಾರದಿಂದ ಕೆಳಗಿಳಿಯಲು ತಯಾರಾಗಿದ್ದಾರೆ. ಬೇರೆ ಸದಸ್ಯರಿಗೆ ಎರಡನೆ ಅವಧಿಯ ಅಧಿಕಾರ ನೀಡಲು ಮುಂದಾಗಿದ್ದಾರೆ. ಸದ್ಯದಲ್ಲಿ ಅಧ್ಯಕ್ಷ. ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ. ಈಗಾಗಲೆ ಮೀಸಲಾತಿ ಘೋಷಣೆಯಾಗಿದ್ದರು ಅಧಿಕಾರದ ಮೇಲಾಟ ನಡೆಸದೆ ಸದಸ್ಯರ ಖರೀದಿಯಲ್ಲಿ ತೊಡಗದೆ ಅಥವಾ ಬೇರೆಡೆಗೆ ಹೊತ್ತೊಯ್ಯದೆ ಮೀಸಲಾತಿಯಲ್ಲಿ ಅರ್ಹತೆ ಪಡೆದವರು ಕೈ ಚೆಲ್ಲಿ ಕುಳಿತಿದ್ದಾರೆ.
ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ 1993ರಲ್ಲಿ ಅಂದಿನ ಸರ್ಕಾರ ಗ್ರಾಪಂ ಸ್ಥಾಪನೆ ಮಾಡಿತ್ತು. ಅದಕ್ಕಿಂತ ಹಿಂದೆ ಮಂಡಲ ಪಂಚಾಯಿತಿ ಅಧಿಕಾರದಲ್ಲಿತ್ತು. ಮಂಡಲ ಪಂಚಾಯಿತಿಯನ್ನು ವಿಂಗಡಿಸಿ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ತರಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೇರ ಅನುದಾನ ನೀಡಿ, ಸಾರ್ವಜನಿಕರ ಎಲ್ಲಾ ಕೆಲಸ ಒಂದೆ ಕಚೇರಿಯಲ್ಲಿ ಆಗಬೇಕು. ಇತರ ಕಚೇರಿಗಳಿಗೆ ಜನ ಅಲೆದಾಡಬಾರದು ಎಂದು ಗ್ರಾಮ ಮಟ್ಟದ ಸರ್ಕಾರವೆಂದು ಗ್ರಾಪಂಗಳಿಗೆ ಪೂರ್ಣ ಅಧಿಕಾರ ನೀಡಿ. ಉದ್ಯೋಗ ಖಾತ್ರಿ, 12ರಿಂದ 15ನೇ ಹಣಕಾಸು ಯೋಜನೆವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿತ್ತು. ಶಾಸನಬದ್ಧ ಅನುದಾನವನ್ನು ನೀಡುತ್ತಿತ್ತು. ಅಲ್ಲದೆ ವಿವಿಧ ಯೋಜನೆ ಮೂಲಕ ಅಭಿವೃದ್ಧಿ ಅನುದಾನ. ಪ್ರತಿ ಮನೆ, ಗ್ರಾಮ, ಶಾಲೆ, ಅಂಗನವಾಡಿ, ಬಸ್ ತಂಗುದಾಣ, ಸಮುದಾಯ ಭವನ ಹೀಗೆ ಎಲ್ಲಾ ಕಡೆ ಶೌಚಗೃಹ ನಿರ್ಮಾಣಕ್ಕೂ ಅನುದಾನ. ಪ್ರತಿ ಮನೆಯ ಬಳಿ ಹಿಂಗು ಗುಂಡಿ. ಹೀಗೆ ಹಲವಾರು ಯೋಜನೆಗಳು ಗ್ರಾಪಂಗಳಿಗೆ ತಲುಪುತ್ತಿದ್ದವು. ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ ಗ್ರಾಪಂನ ಎಲ್ಲಾ ಸದಸ್ಯರಿಗೆ ಕಾಮಗಾರಿಯನ್ನು ಹಂಚಿಕೆ ಮಾಡಿ ಜನಪ್ರತಿನಿಧಿಗಳ ಉಸ್ತುವಾರಿಯಲ್ಲಿ ಎಲ್ಲಾ ಕಾಮಗಾರಿಯನ್ನು ನಡೆಸಲಾಗುತ್ತಿತ್ತು.
ಹಿಂದೆ ಎಲ್ಲಾ ಗ್ರಾಪಂಗಳಲ್ಲೂ 3ತಿಂಗಳಿಗೊಮ್ಮೆ ಗ್ರಾಮಸಭೆ ನಡೆಯುತ್ತಿದ್ದವು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮಸಭೆಯಲ್ಲಿ ಭಾಗವಹಿಸಿ ಜನರಿಗೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಗ್ರಾಮ ಸಭೆ ನಡೆದ ಬಳಿಕ ಸದಸ್ಯರ ಸಾಮಾನ್ಯ ಸಭೆ ನಡೆಸಿ ಕಾಮಗಾರಿ ಯೋಜನೆ ತಯಾರಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿತ್ತು ಅದರಂತೆ ಕಾಮಗಾರಿಗಳು ನಡೆಯುತ್ತಿದ್ದವು. ಅಭಿವೃದ್ಧಿಗೆ ಅನುದಾನವು ಸರ್ಕಾರದಿಂದ ಹರಿದು ಬರುತ್ತಿತ್ತು. ಈಗಿನ ಗ್ರಾಪಂನಲ್ಲಿ ಎರಡುವರೆ ವರ್ಷದಲ್ಲಿ 2ಗ್ರಾಮಸಭೆ ಮಾತ್ರ ನಡೆದಿದೆ. ಈಗಿನ ಗ್ರಾಮಸಭೆಗಳಿಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಅಭಿವೃದ್ಧಿ ಅನುದಾನವಿಲ್ಲದೆ ಕ್ರಿಯಾಯೋಜನೆ ತಯಾರಾಗುತ್ತಿಲ್ಲ. ಪ್ರತಿ ತಿಂಗಳ ಸದಸ್ಯರ ಸಾಮಾನ್ಯ ಸಭೆಯು ಪ್ರಯೋಜನಕ್ಕೆ ಬರುತ್ತಿಲ್ಲ. ಎರಡೂವರೆ ವರ್ಷದ ಅವಧಿಯಲ್ಲಿ ಪ್ರತಿ ಗ್ರಾಪಂಗೆ 14 ರಿಂದ 40 ಲಕ್ಷದವರೆಗೆ ಎರಡು ಬಾರಿ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ವಿದ್ಯುತ್ ಬಾಕಿ, ಸಿಬ್ಬಂದಿ ವೇತನ, ಕಸವಿಲೆ ವಾಹನದ ಖರ್ಚು ಇವೆಲ್ಲವೂ ಕಳೆದು ಉಳಿಕೆ ಹಣವನ್ನು ಗ್ರಾಪಂ ಸದಸ್ಯರಿಗೆ ಹಂಚಿಕೆ ಮಾಡಿ ಸಣ್ಣಪುಟ್ಟ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇನ್ನು ಕೆಲವು ಗ್ರಾಪಂಗಳಲ್ಲಿ ವಿದ್ಯುತ್ ಬಿಲ್ ಸಿಬ್ಬಂದಿ ವೇತನ ಉಳಿದ ಖರ್ಚು ಕಳೆದು ಅನುದಾನ ಉಳಿಕೆಯಾಗಿಲ್ಲ. ಸದಸ್ಯರಿಗೆ ಅನುದಾನ ಸಿಕ್ಕಿಲ್ಲ ಇದರಿಂದಾಗಿ ಯಾವುದೇ ಕಾಮಗಾರಿಯು ನಡೆದಿಲ್ಲ. ವಸತಿ ಯೋಜನೆಯಲ್ಲಿ ಪ್ರತಿ ಗ್ರಾಪಂಗೆ 30 ರಿಂದ 40 ಮನೆ ನೀಡಲಾಗಿತ್ತು. ಆ ಮನೆಗಳ ನಿರ್ಮಾಣಕ್ಕೆ ಸರ್ಕಾರ ಫಲಾನುಭವಿಗಳಿಗೆ ವಿಪರೀತ ಷರತ್ತು ವಿಧಿಸಿದ್ದರಿಂದ ಅರ್ಧದಷ್ಟು ಮನೆಗಳು ಸರ್ಕಾರಕ್ಕೆ ವಾಪಸಾಗಿದೆ. ಹಿಂಗುಗುಂಡಿ, ಶೌಚಗೃಹ. ಸಮುದಾಯ ಭವನ, ಬೀದಿ ದೀಪ, ಕುಡಿಯುವ ನೀರು ಪೂರೈಕೆ ಯಾವುದಕ್ಕೂ ಸರ್ಕಾರ ಗ್ರಾಪಂಗಳಿಗೆ ಅನುದಾನ ನೀಡುತ್ತಿಲ್ಲ. ಅನುದಾನವಿಲ್ಲದ ಗ್ರಾಪಂ ಸದಸ್ಯರಾಗಿದ್ದು ಪ್ರಯೋಜನವಿಲ್ಲ. ಬರಿದಾದ ಗ್ಯಾಪಂಗೆ ಚುನಾಯಿತ ಸದಸ್ಯರು ಬೇರೆ ಕೇಡು ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಾಗುವುದಕ್ಕಿಂತ ಸುಮ್ಮನಿರುವುದೆ ಉತ್ತಮ ಎಂದು ಜನಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್: ಎರಡುವರೆ ವರ್ಷದಿಂದ ಅನುದಾನವಿಲ್ಲದೆ ಅಭಿವೃದ್ಧಿ ಕಾಮಗಾರಿ ನಡೆಸಲು ಆಗಿಲ್ಲ. ಸರ್ಕಾರ ಗ್ರಾಪಂಗಳಿಗೆ ಅನುದಾನ ನೀಡದೆ ವಂಚಿಸುತ್ತಿದೆ. ಚುನಾವಣೆ ವೇಳೆ ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ವಸತಿ ಯೋಜನೆಯ ಮನೆಗಳನ್ನು ಸರ್ಕಾರ ಗ್ರಾಪಂಗೆ ನೀಡಿದ್ದರು ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದಷ್ಟು ಷರತ್ತು ವಿಧಿಸುತ್ತಿರುವುದರಿಂದ ಮನೆಗಳು ಸರ್ಕಾರಕ್ಕೆ ವಾಪಸಾಗುತ್ತಿದೆ. ಅನುದಾನವಿಲ್ಲದೆ ಎರಡುವರೆ ವರ್ಷದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ನಿರುದ್ಯೋಗಿಗಳಂತೆ ಕಾಲ ಕಳೆದಿದ್ದರಿಂದ ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸದಸ್ಯರಿಗೆ ಮನಸ್ಸಿಲ್ಲ. ಸರ್ಕಾರ ಕೂಡಲೆ ಗ್ರಾಪಂಗಳಿಗೆ ಹಿಂದಿನಂತೆ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕು:
ಮಲ್ಲೇಶ್, ಚಿನ್ನಿಗ ಗ್ರಾಪಂ ಸದಸ್ಯ
(2) ಗ್ರಾಪಂಗಳಿಗೆ ಸರ್ಕಾರದಿಂದ ಕಾಮಗಾರಿಗನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಪ್ರತಿ ವರ್ಷ ಎಲ್ಲಾ ಗ್ರಾಪಂಗಳಿಗೂ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ನಡೆದಿದೆ. ನರೇಗಾ ಯೋಜನೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ವಹಿಸುವ ಕಾಮಗಾರಿಗೆ ಮಿತಿ ಇಲ್ಲದಂತೆ ಅನುದಾನ ಬಿಡುಗಡೆಯಾಗುತ್ತಿದೆ. ಆಶ್ರಯ, ಇಂದಿರಾ ಅವಾಸ್, ರಾಜೀವ್ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆಗಳು ಬಿಡುಗಡೆಯಾಗಿದೆ. ಸರ್ಕಾರ ವಿಧಿಸುತ್ತಿರುವ ಷರತ್ತಿನಂತೆ ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಜೆಜೆಎಂ ಯೋಜನೆಯಲ್ಲಿ ತಾಲ್ಲೂಕಿನ ಎಲ್ಲಾ 23 ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ:
ಹರ್ಷಕುಮಾರ್, ಮೂಡಿಗೆರೆ ತಾಪಂ ಇಒ,
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










