“ಕಾಫಿ ಗಿಡ ಕಸಿ.ಪರಿಣಿತರು ಯಾರು???????”
1 min read
ಸುಮಾರು ವರ್ಷದ ಹಿಂದೆ ನಾನು ಒಂದು ಎಸ್ಟೇಟ್ ನ ಬದಿಯಲ್ಲಿ ಹೋಗುವಾಗ ಅರೇಬಿಕಾ ಕಾಫಿ ಗಿಡದ ಕಸಿ ಮಾಡುತ್ತಿದ್ದರು. ಎಲ್ಲಿಯಾದರೂ ಹೋಗುವಾಗ ದಾರಿ ಬದಿಯಲ್ಲಿ ತೋಟದ ಕೆಲಸ ಮಾಡುತ್ತಿದ್ದರೆ ಅದನ್ನೊಂದು 10 ನಿಮಿಷ ನೋಡಿ ತಲೆಯಲ್ಲಿ ಹಲವಾರು ವಿಷಯಗಳನ್ನು ತುಂಬಿಸಿಕೊಂಡು ಹೋಗುವ ಅಭ್ಯಾಸ. ಮಾರ್ಚ್ ತಿಂಗಳು.ಹೂವಿನ ಮಳೆ ಬಂದು 5 ದಿನ ಆಗಿರಬಹುದು.ಕಾಫಿ ಗಿಡಗಳಲ್ಲಿ ಹೂವು ತುಂಬಾ ಚೆನ್ನಾಗಿ ಕಾಣುತ್ತಿತ್ತು. ಅದರಲ್ಲಿಯೂ ಒಂದು ಗಿಡದಲ್ಲಿ ತುಂಬಾ ಹೂವುಗಳಿದ್ದವು.ದೇವರು ಬರುವ ವರ್ಷದ ಒಳ್ಳೆಯ ಫಸಲು ಕೊಟ್ಟಿದ್ದಾರೆ ಹೀಗೆ ಯೋಚನೆಗಳು ಸಾಗುತ್ತಿರುವಾಗ ಕಸಿ ಮಾಡುವವಳು ನಾನು ನೋಡುತ್ತಿದ್ದ ರೆಕ್ಕೆಯನ್ನು ಕತ್ತಿಯಿಂದ ಕಡಿದೇ ಬಿಟ್ಟಳು. ನನಗೆ ಆಶ್ಚರ್ಯ. ಅರ್ಧ ಅಡಿ ರೆಕ್ಕೆ ಅಂತು ಅಲ್ಲ. ನೆತ್ತಿ ಮೇಲೆ ಬಂದ ರೆಕ್ಕೆ ಅಂತು ಅಲ್ಲವೇ ಅಲ್ಲ. ಮತ್ತೇನು ?
ಬೇರೆಯವರ ತೋಟ , ಕಾಂಟ್ರಾಕ್ಟರ್ ಮೇಸ್ತ್ರಿ ಅಲ್ಲೆ ಇದ್ದರು.ಆದರೂ ಗಿಡದ ಹತ್ತಿರ ಹೋಗಿ ಕೆಳಗೆ ಬಿದ್ದಿದ್ದ ರೆಕ್ಕೆಯನ್ನು ಎತ್ತಿ “ಈ ರೆಕ್ಕೆಯನ್ನು ತೆಗೆಯುವಂತದ್ದ ” ಅಂತ ಮೇಸ್ತ್ರಿಯ ಹತ್ತಿರ ಕೇಳಿಯೇ ಬಿಟ್ಟೆ. ಅದಕ್ಕೆ ಅವರ ಉತ್ತರ ಅವರದ್ದೇ ಧಾಟಿಯಲ್ಲೇ ಸೂಕ್ಷ್ಮವಾಗಿ ಇತ್ತು. “ಅವಳಿಗೆ ಕಸಿ ಹೆಚ್ಚು ಗೊತ್ತಿಲ್ಲ. ಮತ್ತು ರೇಟ್ ಕಡಿಮೆ. ನಮಗೆ ಲಾಭ ಆಗಬೇಕಲ್ವ” ನಾನು ನಿಶ್ಶಬ್ಧನಾದೆ.ಅಲ್ಲಿಂದ ಹೊರಟೆ.ನನಗನಿಸಿದ್ದು ಅನುಭವಿ ಕೆಲಸಗಾರರ ಕೊರತೆಗೊಂದು ಉದಾಹರಣೆ ಅಷ್ಟೆ.
ಮಾಹಿತಿಗಳ ಪ್ರಕಾರ ಇಸವಿ 1670ರಲ್ಲಿ ಮೊದಲು ಕಾಫಿ ಗಿಡದ ಬೆಳೆ ಚಿಕ್ಕಮಗಳೂರಿನಲ್ಲಿ ಆರಂಭವಾಯಿತು.ಕಾಫಿ ಬೆಳೆಯ ಆರಂಭದಲ್ಲಿ ಕಾಫಿ ಗಿಡಕ್ಕೆ ಕಸಿ ಕಟ್ಟುವುದು, ಬೇರೆ ಬೇರೆ ಜಾತಿಯ ಕಾಫಿ ಗಿಡ ಅಂತ ಇರಲಿಲ್ಲ ಅಂತ ಹೇಳಲಾಗುತ್ತದೆ.ಮುಂದೆ ಬ್ರಿಟಿಷರಿಗೆ ಕಾಫಿ ತುಂಬಾ ಇಷ್ಟವಾದ ಕಾರಣ ಅಧಿಕೃತವಾಗಿ ಚಿಕ್ಕಮಗಳೂರು, ಮಡಿಕೇರಿ,ಹಾಸನ, ಕೇರಳ ಹೀಗೆ ಅದರ ವ್ಯಾಪ್ತಿ ದೊಡ್ಡದಾಗುತ್ತಾ ಹೋಯಿತು.ಬ್ರಿಟಿಷರು ಯಾವಾಗ ಕಾಫಿ ಬೆಳೆಯಲು ಶುರು ಮಾಡಿದರೋ ಆಗ ಅದಕ್ಕೊಂದು ನವೀನವಾದ ರೂಪುರೇಷೆಗಳನ್ನು ಕೊಡಲು ಶುರು ಮಾಡಿದರು.ಅದರಲ್ಲಿ ಒಂದು ಗಿಡ ಕಸಿ. ಹೀಗೆ ಕಾಫಿಯ ಬಗ್ಗೆ ಹಲವಾರು ಜನರ ತುಂಬಾ ಕೊಡುಗೆ ಇದೆ.ಅದರಲ್ಲೂ CRS (ಈಗಿನ CCRI) ಎಂಬ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದವರು ಮೈಸೂರು ಮಹಾರಾಜರು.
ಬಹುವರ್ಷಗಳ ಹಿಂದೆ ಕೆಲಸಗಾರರು ಕೇಳಿಕೊಂಡು ಬಂದು ಕೆಲಸ ಮಾಡುತ್ತಿದ್ದರು.ಕೆಲಸದ ಪ್ರಮಾಣ ಮತ್ತು ಗುಣಮಟ್ಟ ಅತ್ಯುತ್ತಮವಾಗಿತ್ತು. ಕೆಲಸಗಾರರ ಮತ್ತು ಮಾಲೀಕರ ಮಧ್ಯೆ ಉತ್ತಮ ಬಾಂಧವ್ಯ ಮತ್ತು ಗೌರವ ಇತ್ತು.ಕೆಲಸಗಾರರಿಗೆ ಸಂಬಳ ಮತ್ತು ಕೆಲಸದ ಸಮಯದ ಮೇಲೆ ಗಮನ ಇರಲಿಲ್ಲ. ಹಾಗೇನೆ ಕೆಲಸಗಾರ ಮನೆಯ ಸದಸ್ಯನಂತಿದ್ದರು. ಗಿಡ ಕಸಿ ಅಂದರೆ ಅದೊಂದು ಪವಿತ್ರವಾದ ಕೆಲಸ ಆಗಿತ್ತು.ಪರಿಣಿತ ಕೆಲಸಗಾರರು , ಬ್ಲೇಡ್ ಗಿಂತ ಹರಿತವಾದ ಕತ್ತಿ, ಕಸಿ ಮಾಡುವುದಕ್ಕಿಂತ ಮೊದಲೇ ಗಿಡ ನೋಡಿದ ಕೂಡಲೇ ಗಿಡದಲ್ಲಿ ಉಳಿಯುವ ಮತ್ತು ಗಿಡದಿಂದ ತೆಗೆಯುವ ರೆಕ್ಕೆ ಚಿಗುರುಗಳ ಬಗ್ಗೆ ಇರುವ ತಿಳಿವಳಿಕೆ ಮಾಹಿತಿ ಹೀಗೆ ಅವರ ಕೆಲಸದಲ್ಲಿ ಪರಿಪೂರ್ಣತೆ ಇತ್ತು. ಅದರೊಂದಿಗೆ ಕೆಲಸ ಮಾಡಿಸುವವರಿಗೆ ಇರುತ್ತಿದ್ದ ಅನುಭವ ಗಿಡದ ಕಸಿಗೆ ನೂರರಷ್ಟು ನ್ಯಾಯ ಸಿಗುತ್ತಿತ್ತು.ಅಪ್ಪಿತಪ್ಪಿನೂ ತೆಗೆಯುವ ರೆಕ್ಕೆ ಬಿಡುವ ಹಾಗೇನು ಬಿಡುವ ರೆಕ್ಕೆಯನ್ನು ತೆಗೆಯುವ ಹಾಗೇನು ಇರಲಿಲ್ಲ.
ಆದರೆ ಈಗ 75% ಗಿಡ ಕಸಿ ಮಾಡುವವರಿಗೆ ಯಾವ ಅನುಭವವೂ ಇರುವುದಿಲ್ಲ.ಕತ್ತಿ ಹೇಗಿರಬೇಕು ಎಂದು ಕೂಡ ಗೊತ್ತಿಲ್ಲ. ಹೆಚ್ಚಿನ ಕಡೆ ಕಾಂಟ್ರಾಕ್ಟ್ ಕೆಲಸಗಾರರು. ಮಾಲೀಕರಿಗೆ ಕಸಿ ಗೊತ್ತಿದ್ದರೂ ಕೂಡ ಹೆಚ್ಚು ಮಾತನಾಡಿದರೆ ನಾಳೆ ಈ ಕೆಲಸಗಾರರು ಇಲ್ಲ ಎಂಬ ಅಳುಕು. ಕೆಲಸಗಾರರ ಅಭಾವ. ಅನುಭವಿ ಕೆಲಸಗಾರರ ಕೊರತೆ.ಬಂದಷ್ಟು ಬೆಳೆ ಬರಲಿ ಎಂಬ ಅಸಹಾಯಕತೆ. ಇದರ ಮಧ್ಯೆ ಕೆಲವೊಂದು ಕಾಫಿ ಬೆಳೆಗಾರರು ಮತ್ತು ಅವರ ಮಕ್ಕಳು ತಮ್ಮನ್ನು ಪೂರ್ತಿ ಯಾಗಿ ಕಾಫಿ ಬೆಳೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.

ಬರೆಯುತ್ತಾ ಹೋದರೆ ಕಾಫಿಯ ಬಗ್ಗೆ ಸಾವಿರಾರು ಪುಟಗಳನ್ನು ಬರೆಯಬಹುದು. ಅದರೆ ಎಷ್ಟು ಜನ ಓದುತ್ತಾರೆ ಮತ್ತು ನಾನು ಬರೆದ ವಿಷಯದ ಬಗ್ಗೆ ತಪ್ಪು ಒಪ್ಪುಗಳನ್ನು ತಿಳಿಸುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ.ದಯವಿಟ್ಟು ತಪ್ಪು ಒಪ್ಪುಗಳನ್ನು ತಿಳಿಸಿ. ತುಂಬಾ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ. ಯಾಕೆಂದರೆ ಇದು ನನ್ನ ಅನುಭವ.
ಕಾಫಿ ಗಿಡದ ಕಸಿಯನ್ನು ಹಲವಾರು ರೀತಿಯಲ್ಲಿ ಮಾಡುತ್ತಾರೆ.

1. ಮಡಿಕೇರಿ ಕಸಿ: ಗಿಡದ ರೆಕ್ಕೆಗಳನ್ನು ವ್ಯವಸ್ಥಿತವಾಗಿ ಇಡಲು ಈ ರೀತಿಯ ಕಸಿ ಉತ್ತಮ.ಕಾಫಿ ಹಣ್ಣು ಕೊಯ್ದು ಆದ ಕೂಡಲೆ ಕಸಿ ಮಾಡಬೇಕಾಗುತ್ತದೆ.
2 . ಬರ್ಲ್ ಕಸಿ.: ಹೆಚ್ಚಾಗಿ ಅರೇಬಿಕಾ ಗಿಡದಲ್ಲಿ ಕಾಫಿ ಜಾಸ್ತಿಯಾಗಿ ಗಿಡ ಸೋತು ಹೋಗಿದ್ಧರೆ ಈ ಕಸಿ ಮಾಡುತ್ತಾರೆ.
- ಕಟಾಪ್ ಕಸಿ: ಹೆಚ್ಚಾಗಿ ರೊಬಸ್ಟಾ ಗಿಡ ಹಲವಾರು ವರ್ಷಗಳಿಂದ ಸರಿಯಾಗಿ ಕಸಿ ಮಾಡದಿದ್ದರೆ ಅಥವಾ ರೆಕ್ಕೆಗಳು ಉದ್ದ ಹೋಗಿದ್ದಾರೆ ಈ ಕಸಿ ಮಾಡುತ್ತಾರೆ.
4.ಸೋಸು ಕಸಿ: ಗಿಡದಲ್ಲಿ ಮುಂದಿನ ವರ್ಷದ ತುಂಬಾ ಹೂವು ಅಥವಾ ಫಸಲು ಇದ್ದರೆ ಸೋಸು ಕಸಿ ಮಾಡುತ್ತಾರೆ.
4 ಸಾದಾ ಕಸಿ: ಯಾವ ಗಿಡಕ್ಕೆ ಎಷ್ಟು ಕಸಿ ಬೇಕು ಎಂದು ನೋಡಿ ಮಾಡುವ ಕಸಿ.
5.ಚಿಗುರು ಕಸಿ: ಕಸಿ ಆದ ನಂತರ ದೊಡ್ಡ ಗಿಡದಲ್ಲಿ ಬೇಡದ ಚಿಗುರು ಮತ್ತು ಕೊಂಬು ಚಿಗುರು
ತೆಗೆಯುವುದು.
6.ಅರ್ಧ ಅಡಿ: ಕಸಿ ಆದ ನಂತರ ಅರೇಬಿಕಾ ಅಥವಾ 30 ವರ್ಷ ಒಳಗಿನ ರೊಬಸ್ಟಾ ಗಿಡಗಳಿಗೆ ಸಂಬಂಧಿಸಿದ್ದು. ಹೆಸರೇ ಹೇಳುವ ಹಾಗೆ ತಾಯಿ ರೆಕ್ಕೆಯಲ್ಲಿ ಕಾಫಿ ಕಾಂಡದಿಂದ ಅರ್ಧ ಅಡಿಯ ಒಳಗೆ ಇರುವ ರೆಕ್ಕೆ ಮತ್ತು ನೆತ್ತಿ ಬಿಡಿಸುವುದು.
7.ಕೊಂಬ ಚಿಗುರು: ಹೆಚ್ಚಿನ ಕಡೆ ಕೊಂಬ ಚಿಗುರು ತೆಗೆಯುವುದಂದರೆ ಅನುಭವದ ಕೆಲಸಗಾರರು ಅಗತ್ಯವಿಲ್ಲ ಎಂದು ತಿಳಿದಿರುತ್ತಾರೆ.ಆದರೆ ಕೊಂಬ ಚಿಗುರು ತೆಗೆಯಲು ಎಷ್ಟು ಅನುಭವ ಇದ್ದರೂ ಕಡಿಮೆಯೇ ಎಂದು ನನ್ನ ಅನಿಸಿಕೆ.ಕೊಂಬ ಚಿಗುರಿನ ಬಗ್ಗೆ ಹೇಳುತ್ತಾ ಹೋದರೆ ಪ್ರತಿ ಗಿಡದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಹೇಳಬೇಕಾಗುತ್ತದೆ.
ರೆಕ್ಕಯ ಹೆಸರು ಹೇಳುವಾಗಲೇ ಅ ರೆಕ್ಕೆ ಹೆಸರಿಗೆ ತಕ್ಕಂತೆ ಇರುತ್ತದೆ.(ರೆಕ್ಕೆಯ ಹೆಸರು ತುಳು ಅಥವಾ ಕನ್ನಡ ಭಾಷೆಯಲ್ಲಿ ಇದೆ.)
ಕಸಿ ಮಾಡುವಾಗ ಮೂರು ತರ ಯೋಚಿಸಬೇಕಾಗುತ್ತದೆ
A.ತೆಗೆಯುವ ರೆಕ್ಕೆಗಳು
B.ತೆಗೆಯಲೇ ಬಾರದ ರೆಕ್ಕೆಗಳು
C.ತೆಗೆಯಬೇಕಾ ಬೇಡವಾ ಎಂದು ಅವರವರ ವಿವೇಚನೆಗೆ ಬಿಟ್ಟ ರೆಕ್ಕೆಗಳು.
A .ಕಸಿ ಮಾಡುವಾಗ ತೆಗೆಯುವ ರೆಕ್ಕೆಗಳು.
1.ಸೋತ ರೆಕ್ಕೆಗಳು: ಹೆಸರೇ ಹೇಳುವಂತೆ ಇದು ಹಿಂದಿನ ವರ್ಷಗಳಲ್ಲಿ ಫಸಲು ಆಗಿ ಸೋತು ಹೋಗಿರುವ ರೆಕ್ಕೆ.ತುದಿಯಲ್ಲಿ ಒಂದೆರಡು ಗಂಟು ಫಸಲು ಇರಬಹುದು. ತುಂಬಾ ಫಸಲು ಇದ್ದರೆ ತೆಗೆಯುವ ಅಗತ್ಯವಿಲ್ಲ.ಆದರೆ ಸೋತು ರೆಕ್ಕೆಯನ್ನು ತೆಗೆದರೆ ಜವಾಬ್ ರೆಕ್ಕೆ ಬಲಯುತವಾಗಿ ಬೆಳೆದು ಮುಂದಿನ ವರ್ಷದ ಫಸಲು ಜಾಸ್ತಿ ಆಗುತ್ತದೆ.
2.ನೂಲು ರೆಕ್ಕೆ: ನೋಡಲು ನೂಲಿನ ಹಾಗೆ ತುಂಬಾ ಸಪೂರವಾಗಿ ಇದ್ದು ತುಂಬಾ ಉದ್ದಕ್ಕೆ ಹೋಗಿರುತ್ತದೆ.ಒಂದು ಕಾಲದಲ್ಲಿ ಸೋತು ರೆಕ್ಕೆಆಗಿರುತ್ತದೆ.ನೂಲು ರೆಕ್ಕೆಗೆ ಜವಾಬ್ ರೆಕ್ಕೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
3.ಗಂಟು ರೆಕ್ಕೆ: ರೆಕ್ಕೆಯ ಗಂಟಲ್ಲಿ ಹುಟ್ಟಿ ನೆಟ್ಟಗೆ ಮೇಲೆ ಹೋಗಿರುತ್ತದೆ.ಈ ರೆಕ್ಕೆಯಲ್ಲಿ ಫಸಲು ಆಗುತ್ತದೆ.
ಆದರೆ ಉಳಿದ ಎಲ್ಲಾ ರೆಕ್ಕೆಗಳ ಬೆಳವಣಿಗೆ ಇರುವುದಿಲ್ಲ.
4.ಜಿಗ್ ರೆಕ್ಕೆ,ಬಣ್ಣನಿಗೆ ರೆಕ್ಕೆ,ಸಾವಿರ ಗಂಟಿನ ರೆಕ್ಕೆ.:
ರೆಕ್ಕೆಯ ಅರ್ಧ ಭಾಗದ ನಂತರ ಕೆಲವೊಮ್ಮೆ ಚಿಕ್ಕ ಚಿಕ್ಕ
ತುಂಬಾ ರೆಕ್ಕೆಗಳು ಹುಟ್ಟುತ್ತವೆ.ಈ ರೆಕ್ಕೆಗಳಲ್ಪಿ ಫಸಲು ಆಗುವುದಿಲ್ಲ.
5.ಅರ್ಧ ಅಡಿ ರೆಕ್ಕೆ: ತಾಯಿ ರೆಕ್ಕೆಯಲ್ಲಿ ಬಡ್ಡೆಯಿಂದ ಅರ್ಧ ಅಡಿ ದೂರದಲ್ಲಿ ಇರುವ ರೆಕ್ಕೆ.ಒಂದು ವೇಳೆ ಅರ್ಧ ಅಡಿ ರೆಕ್ಕೆ ಇದ್ದು ಎದುರುಗಡೆ ತಾಯಿ ರೆಕ್ಕೆ ಸತ್ತಿದ್ದರೆ ಆಗ ಅರ್ಧ ಅಡಿ ರೆಕ್ಕೆಯನ್ನು ಬಿಡಬೇಕಾಗುತ್ತದೆ.ಅರ್ಧ ಅಡಿ ರೆಕ್ಕೆಯನ್ನು ಬಿಟ್ಟರೆ ಕೊಳೆರೋಗ ಜಾಸ್ತಿ ಆಗುತ್ತದೆ.ಮತ್ತು ಉಳಿದ ರೆಕ್ಕೆಗಳು ಬಲಯುತವಾಗುವುದಿಲ್ಲ.
6. ನೆತ್ತಿಗೆ ಬಂದ ರೆಕ್ಕೆ:ತಾಯಿ ರೆಕ್ಕೆಯಿಂದ ಅಥವಾ ಬೇರೆ ಯಾವುದೇ ರೆಕ್ಕೆಯಿಂದ ಗಿಡದ ನೆತ್ತಿಯ ಕಡೆಗೆ ಬರುತ್ತಿರುವ ರೆಕ್ಕೆ.
7.ರೆಕ್ಕೆ ಬೋರಾರಿನ ರೆಕ್ಕೆ: ಸಾಧಾರಣವಾಗಿ ರೆಕ್ಕೆ ಬೋರಾರು ಹಸಿರು ಬಣ್ಣವಿರುವಲ್ಲಿ ರೆಕ್ಕೆಯ ಅಡಿಭಾಗದಲ್ಲಿ ತೂತು ಮಾಡಿ ತಿರುಳಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ರೆಕ್ಕೆಯ ಅಡಿಯಲ್ಲಿ ತೂತು ಮಾಡಿ ತಿರುಳಿನಲ್ಲಿ ರೆಕ್ಕೆಯ ಮೇಲು ಬದಿಗೆ ಹೋಗುತ್ತದೆ.ಯಾವುದೇ ಕಾರಣವಿಲ್ಲದೆ ರೆಕ್ಕೆಯಲ್ಲಿ ಸೊಪ್ಪು ಉದುರಿದ್ದರೆ , ಅಥವಾ ರೆಕ್ಕೆಯ ಮೇಲು ಬದಿಯಲ್ಲಿ ಗೀಟ್ ಬಿದ್ದಿದ್ದರೆ ಅದು ರೆಕ್ಕೆ ಬೋರಾರಿನ ರೆಕ್ಕೆ. ನೀರು ಸರಬರಾಜು ಇಲ್ಲದೆ ರೆಕ್ಕೆಯು ಬಾಡುತ್ತದೆ,ಎಲೆ ಉದುರುತ್ತದೆ,ಅಥವಾ ರೆಕ್ಕೆ ಸತ್ತು ಹೋಗುತ್ತದೆ.ಈ ರೆಕ್ಕೆಯಲ್ಲಿ ಫಸಲು ಇದ್ದರೂ ಕೊಯ್ಯುವಾಗ ಸಿಗುವುದಿಲ್ಲ.
8. ಒಣ ರೆಕ್ಕೆ : ಹಲವಾರು ಕಾರಣಗಳಿಂದ ರೆಕ್ಕೆ ಒಣಗಿರುತ್ತದೆ.
B. ತೆಗೆಯಲೇ ಬಾರದ ರೆಕ್ಕೆಗಳು
1.ತಾಯಿರೆಕ್ಕೆ: ಕಾಫಿ ಗಿಡದ ಬಡ್ಡೆ ಮತ್ತು ತಾಯಿ ರೆಕ್ಕೆಗೆ ನೇರ ಸಂಬಂಧ ಇದೆ.ಕಾಫಿ ಗಿಡದಲ್ಲಿ ಯಾವುದಾದರೂ ರೆಕ್ಕೆ ತೆಗೆಯಲಿಕ್ಕಿಲ್ಲ ಅದು ತಾಯಿ ರೆಕ್ಕೆ ಮಾತ್ರ.ಅದನ್ನು ಒಂದು ಸಲ ತುಂಡು ಮಾಡಿದರೆ ಮತ್ತೆ ಅದು ಬೆಳೆಯುವುದಿಲ್ಲ.ತಾಯಿ ರೆಕ್ಕೆ ಇಲ್ಲದೆ ಬೇರೆ ರೆಕ್ಕೆ ಇರಲು ಸಾಧ್ಯವಿಲ್ಲ.ತಾಯಿ ರೆಕ್ಕೆಯ ಬಗ್ಗೆ ಬರೆದರೆ ಮುಗಿಯದಷ್ಟು ವಿಷಯ ಇದೆ.
2.ಮಕ್ಕಳು ರೆಕ್ಕೆ: ತಾಯಿ ರೆಕ್ಕೆಯಿಂದ ಹೊರಡುವ ರೆಕ್ಕೆಗಳಲ್ಲಿ ಅರ್ಧ ಅಡಿ ರೆಕ್ಕೆ ಬಿಟ್ಟು ಉಳಿದದ್ದೆಲ್ಲಾ ಮಕ್ಕಳು ರೆಕ್ಕೆಗಳೇ.
3.ಹೊರಬಂದ ರೆಕ್ಕೆ: ತಾಯಿ ರೆಕ್ಕೆಯಿಂದ ಹೊರಬಂದ ಮಕ್ಕಳು ರೆಕ್ಕೆಗಳು ಹಲವಾರು ವರ್ಷಗಳ ನಂತರ ಬೇರೆ ಬೇರೆ ರೂಪಾಂತರ ಹೊಂದಿ ರೆಕ್ಕೆಗಳು ಹೊರಬಂದಿದ್ಧರೆ ಅದು ಹೊರಬಂದ ರೆಕ್ಕೆಗಳು.ಈ ರೆಕ್ಕೆಗಳು ಕಾಫಿ ಬೆಳೆಗಾರರ ಜೀವಾಳ.
4.ಫಸಲು ರೆಕ್ಕೆ:ಹಿಂದಿನ ವರ್ಷದ ಪುಡಿ ಚಿಗುರು ಈ ವರ್ಷದ ಫಸಲು ರೆಕ್ಕೆ.
5. ಜವಾಬ್ ರೆಕ್ಕೆ:ಸೋತು ರೆಕ್ಕೆ ತೆಗೆದಾಗ ಉಳಿಯುವುದೇ ಜವಾಬ್ ರೆಕ್ಕೆ.
C.ತೆಗೆಯಬೇಕಾ ಅಥವಾ ಬಿಡಬೇಕಾ ಎಂಬ ಅನುಮಾನ ಇರುವ ರೆಕ್ಕೆ.
ಈ ಕೆಳಗೆ ಕಾಣಿಸಿದ ರೆಕ್ಕೆಗಳಲ್ಲಿ ಬೆಳೆಗಾರರಲ್ಲಿ ಭಿನ್ನವಾದ ಅಭಿಪ್ರಾಯ ಇರುತ್ತದೆ.
1.ಮಡಲು ರೆಕ್ಕೆ: ನೋಡಲು ತೆಂಗಿನ ಕಾಯಿ ಮರದ ಸೋಗೆ ತರಹ ಇರುತ್ತದೆ.ರೆಕ್ಕೆ ಬೆಳೆದ ನಂತರ ಕೆಲವೊಮ್ಮೆ ರೆಕ್ಕೆ ಹೀಗೆ ಆಗುತ್ತದೆ.ಇದು ನೋಡಲು ಗಂಟು ರೆಕ್ಕೆ ತರಹ ಕಂಡರೂ ಇದು ಗಂಟು ರೆಕ್ಕೆ ಅಲ್ಪ.
2.ಕವಲು ರೆಕ್ಕೆ : ಬೆಳೆದ ರೆಕ್ಕೆಯ ಮೇಲೆ ಒಂದು ರೆಕ್ಕೆ ಎರಡು ಭಾಗವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಹರಡುತ್ತದೆ.ಒಂದು ರೆಕ್ಕೆ ತೆಗೆದರೆ ಕವಲು ರೆಕ್ಕೆ ಬೇರೇನೇ ರೆಕ್ಕೆಯಾಗುತ್ತದೆ.
- ಜೋಡಿ ರೆಕ್ಕೆ: ತಾಯಿ ರೆಕ್ಕೆಯಲ್ಲಿ ಹುಟ್ಟುವ ಮಕ್ಕಳು ರೆಕ್ಕೆಗಳು ಗುಂಪಿನಲ್ಲಿ ಜಾಸ್ತಿ ಒಂದಕ್ಕಿಂತ ಹುಟ್ಟಿದರೆ ಅದು ಜೋಡಿ ರೆಕ್ಕೆ.
4.ಪುಡಿ ಚಿಗುರು: ಸಾಧಾರಣವಾಗಿ ಎಲ್ಲಾ ರೆಕ್ಕೆಗಳಲ್ಲಿ ಚಿಕ್ಕ ಚಿಕ್ಕ ಚಿಗುರುಗಳು ಬರುತ್ತಾ ಇರುತ್ತದೆ.ಯಾವುದನ್ನು ತೆಗೆಯಬೇಕು ಮತ್ತು ತೆಗೆಯಬಾರದು ಎಂದು ಅವರವರ ವಿವೇಚನೆಗೆ ಬಿಟ್ಟ ವಿಚಾರ.
5.ಅರ್ಕಲ್ ರೆಕ್ಕೆ ಅಥವಾ ಅಡ್ಡಾದಿಡ್ಡಿ ಹೋದ ರೆಕ್ಕೆ: ಹೊರಹೋದ ರೆಕ್ಕೆಗಳಲ್ಲಿ ಒಂದರ ಒಳಗೆ ಇನ್ನೊಂದು ರೆಕ್ಕೆ ಬಂದರೆ ಅದು ಅರ್ಕಲ್ ರೆಕ್ಕೆ.
ಎಷ್ಟು ವರ್ಷದ ಅನುಭವ ಇದ್ದರೂ ಕಾಫಿ ಗಿಡದ ಕಸಿಯಲ್ಲಿ ಪೂರ್ತಿಯಾಗಿ ತಿಳಿದವರು ಯಾರು ಇರುವುದಿಲ್ಲ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










