“ಅವನಿಗೆ ತಲೆ ಸರಿ ಇಲ್ಲ.”
1 min read
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯ ಹೆತ್ತವರು ಆರೋಪಿಸಿದ್ದ ಧರ್ಮಸ್ಥಳದ ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ನಮ್ಮ ವಾಹಿನಿಯೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಉಪಸ್ಥಿತರಿದ್ದರು. ಸೌಜನ್ಯ ಕುಟುಂಬಿಕರು ಮತ್ತು ಹೋರಾಟಗಾರರು ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ನಲ್ಲಿ ಈ ಮೂವರ ವಿರುದ್ದ ಆರೋಪ ಮಾಡಿದ್ದರು. ವಾಹಿನಿಯೊಂದಿಗೆ ಮಾತನಾಡಿದ ಆರೋಪ ಹೊತ್ತಿದ್ದ ಧೀರಜ್ ಜೈನ್,ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ನಮ್ಮ ವಿರುದ್ದ ಆರೋಪ ಮಾಡಿದ್ದರು. ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ಈ ಆರೋಪ ಮಾಡಿದ್ದರು. ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು.
ಹೀಗಾಗಿ ನಾವು ಕಾನತ್ತೂರು ದೈವರ ಮೊರೆ ಹೋಗಿ ಆಣೆಗೆ ಕರೆದಿದ್ದೆವು. ಆದರೆ ಆವಾಗ ಅವರು ತಪ್ಪಿಸಿದ್ದರು. 2014ರಲ್ಲಿ ಜುಲೈ ಹಾಗೂ ಅಗಸ್ಟ್ ನಲ್ಲಿ ಸಿಬಿಐ ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿ ಐಬಿಯಲ್ಲಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮನ್ನು ತನಿಖೆ ಮಾಡಿದ್ದಾರೆ. ನಮ್ಮ ರಕ್ತ ಪರೀಕ್ಷೆ, ಡಿಎನ್ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಕೂಡ ಸಿಬಿಐ ಮಾಡಿದೆ. ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ.
2015ರ ಫೆ.23ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್ ಗೆ ಬ್ರೈನ್ ಮ್ಯಾಪಿಂಗ್ ಗೆ ಅರ್ಜಿ ಹಾಕಿತ್ತು. ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು. ಆದರೆ ನಮ್ಮ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ಅನುಮತಿ ನೀಡಿತ್ತು.ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.ಆದರೆ ಆ ಆರೋಪ ಪಟ್ಟಿಯಲ್ಲಿ ಎಲ್ಲೂ ನಮ್ಮನ್ನ ಅಪರಾಧಿ ಮಾಡಿಲ್ಲ.
ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಸಹ ಆರೋಪಿ ಮಾಡಲು ಅರ್ಜಿ ಹಾಕಿದ್ರು. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತ್ತು. ಹೀಗಾಗಿ ನಾವು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿತ್ತು. ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಸಹ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸೌಜನ್ಯ ತಂದೆಯ ಮನವಿ ರದ್ದು ಮಾಡಿತು
ಇದೀಗ ಇಡೀ ಕೇಸ್ ನಲ್ಲಿ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ. ಹೀಗಿದ್ದರೂ ಮಹೇಶ್ ಶೆಟ್ಟಿ ಮತ್ತೆ ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾನೆ. ಮಾಧ್ಯಮಗಳ ಎದುರು ಬಂದು ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾನೆ. ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರೀತಾ ಇದೇವೆ. ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ. ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದರು.
ಮಲ್ಲಿಕ್ ಜೈನ್ ಮಾತನಾಡಿ, ಆರೋಪಿ ಸಂತೋಷ್ ನನ್ನ ನಾವು ಕಳ್ಳತನದ ಸಂಶಯದ ಮೇಲೆ ಪೊಲೀಸರಿಗೆ ಹಿಡಿದು ಕೊಟ್ಟೆವು. ಆದರೆ ಪೊಲೀಸರು ಅವನನ್ನ ಅರೆಸ್ಟ್ ಮಾಡಿದ್ದು, ನಾವು ಅವನೇ ಸೌಜನ್ಯ ಆರೋಪಿ ಅಂತ ಹೇಳಿಲ್ಲ, ಅದು ನಮಗೆ ಸಂಬಂಧಿಸಿದ್ದಲ್ಲ. ಆಗ ಊರವರು ಸಂತೋಷ್ ಗೆ ಹೊಡೆದಿದ್ದರು,ನಾವು ಹೊಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೌಜನ್ಯ ಹೆತ್ತವರು ಆರೋಪಿಸಿರುವ ಮಲ್ಲಿಕ್ ಜೈನ್ ಹೇಳಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ , ಮಹೇಶ್ ಶೆಟ್ಟಿ ತಿಮರೋಡಿ ಇದೀಗ ಮತ್ತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಮಾತನಾಡ್ತಿದಾನೆ ಎಂದು ತಿಮರೋಡಿ ವಿರುದ್ಧ ಗುಡುಗಿದರು. ಅವನು ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡ್ತಿದಾನೆ, ಅವನು ಒಬ್ಬ ರೌಡಿಶೀಟರ್, ತಿಮರೋಡಿ ಬೆಳ್ತಂಗಡಿ ತಾಲೂಕಿನ ಕೆಟ್ಟ ವ್ಯಕ್ತಿ. ಅವನ ಈ ಹೇಳಿಕೆಗಳ ವಿರುದ್ಧ ನಾವು ಪ್ರತಿಭಟಿಸ್ತೇವೆ.
ಅವನಿಗೆ ತಲೆ ಸರಿ ಇಲ್ಲ, ನಮ್ಮ ಹೆಗ್ಗಡೆಯವರ ಬಗ್ಗೆ ಮಾತನಾಡ್ತಾನೆ, ಅವನ ವಿರುದ್ದ ಕಾನೂನಾತ್ಮಕ ಹೋರಾಟ ನಾವು ಮಾಡ್ತೇವೆಸಮಾಜದ ವ್ಯಕ್ತಿ ಹೆಗಡೆಯವರ ವಿರುದ್ದ ಅವನು ಅಪನಂಬಿಕೆ ಮೂಡಿಸ್ತಿದಾನೆ. ತಿಮರೋಡಿ ಎಷ್ಟೇ ದೊಡ್ಡ ರೌಡಿಯಾದ್ರೂ ನಾವು ನೋಡಿಕೊಳ್ತೇವೆ.
ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿ ಎದುರು ಹೋರಾಟ ಮಾಡಲಿ. ಯಾರೋ ದೊಡ್ಡ ವ್ಯಕ್ತಿ ವಿರುದ್ದ ಮಾತನಾಡುವುದಲ್ಲ. ಜೈನ ಸಮುದಾಯಕ್ಕೂ ಮಹೇಶ್ ಶೆಟ್ಟಿ ತಿಮರೋಡಿ ಅವಮಾನ ಮಾಡಿದ್ದಾನೆ. ಇದಕ್ಕಾಗಿ ಮಹೇಶ್ ಶೆಟ್ಟಿಯ ವಿರುದ್ಧ ಹೋರಾಟ ಮಾಡಬೇಕಾದೀತು ಎಂದರು.
ಬರಹ ಕೃಪೆ.
ಶಾಹಿನ್.ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









