“ಹಲೋ…ಮಹಿಳೆಯರೇ…ಇತ್ತ ಗಮನಿಸಿ.”
1 min read
ಮಂಗಳೂರು – ಉಡುಪಿ- ಕುಂದಾಪುರ ಪ್ರಯಾಣ ಮಾಡುವ ಮಹಿಳೆಯರ ಗಮನಕ್ಕೆ
ಕರ್ನಾಟಕ ಸರಕಾರವು ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆ ಜಾರಿಗೆ ತಂದಿದೆ. ಈ ಸೌಲಭ್ಯವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರು ಬಳಸಿಕೊಳ್ಳಬೇಕು.
ಈಗ ಖಾಸಗಿ ಬಸ್ ಗಳಲ್ಲಿ ಮಂಗಳೂರಿನಿಂದ ಉಡುಪಿಗೆ ಕೇವಲ 55 ಕಿಲೋಮೀಟರ್ ದೂರಕ್ಕೆ ದುಬಾರಿ 95 ರೂಪಾಯಿ ಬಸ್ ಟಿಕೇಟ್ ಇದ್ದು, ವಾಪಾಸು ಬರುವಾಗ ಅಷ್ಟೇ ಕೊಡಬೇಕು. ( ಇಷ್ಟೇ ದೂರ ಇರುವ ಮಂಗಳೂರು- ಪುತ್ತೂರು ಟಿಕೇಟ್ ದರ ಖಾಸಗಿ ಬಸ್ ಗಳಲ್ಲಿ ಕೇವಲ ರೂ.45) ಇದಕ್ಕೆಲ್ಲಾ ಪರಿಹಾರವಾಗಿ ಕರ್ನಾಟಕ ಸರಕಾರದ ಈ ಉಚಿತ ಪ್ರಯಾಣ ಯೋಜನೆಯನ್ನು ಮಹಿಳೆಯರು ಯಶಸ್ವಿಯಾಗಿ ಬಳಸಬೇಕು.

ಮಂಗಳೂರು ಲಾಲ್ ಬಾಗ್ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡಿನಿಂದ ಪ್ರತೀ 15-30 ನಿಮಿಷಕ್ಕೊಂದು ಬಸ್ ಉಡುಪಿ, ಕುಂದಾಪುರ, ಬೈಂದೂರು ಕಡೆಗೆ ಅದೇ ರೀತಿ ಉಡುಪಿ ಬನ್ನಂಜೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡಿನಿಂದ, ಕುಂದಾಪುರ ಸರಕಾರಿ ಬಸ್ ಸ್ಟಾಂಡಿನಿಂದ ಮಂಗಳೂರು ಕಡೆಗೆ ಬಸ್ ಹೊರಡುತ್ತದೆ. ಶಿರಸಿ, ಹುಬ್ಬಳ್ಳಿ, ಗದಗ, ಕಾರವಾರ, ಮುರುಡೇಶ್ವರ, ಹಾವೇರಿ, ಬೆಳಗಾವಿ, ಕೊಪ್ಪಳ, ಗಜೇಂದ್ರಗಡ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ ಮತ್ತಿತರ ಕಡೆಗೆ ಹೋಗಿ ಬರುವ ಬಸ್ ಗಳು ಮಂಗಳೂರು- ಉಡುಪಿ – ಕುಂದಾಪುರ ಮಾರ್ಗದಲ್ಲಿ ಸಂಚರಿಸುತ್ತವೆ.

ಈ ಮಾರ್ಗದಲ್ಲಿ ಸಂಚರಿಸುವ ಬಸ್ ಗಳ ಮುಂಭಾಗದ ಗ್ಲಾಸಿನ ಮೇಲಿನ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಅಥವಾ ವಾಯುವ್ಯ ಕರ್ನಾಟಕ ಸಾರಿಗೆ ಅಥವಾ ಕಲ್ಯಾಣ ಕರ್ನಾಟಕ ಸಾರಿಗೆ ಎಂದು ದೊಡ್ಡದಾಗಿ ಹೆಸರು ಹಾಕಲಾಗಿರುತ್ತದೆ.
ಈ ಬಸ್ಸಿನಲ್ಲಿ ಮಹಿಳೆಯರು ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ ಕಡೆಗೆ ಅದೇ ರೀತಿ ಅಲ್ಲಿಂದ ಮಂಗಳೂರು ಕಡೆಗೆ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದು.
ಅದೇ ರೀತಿ ಉಡುಪಿ – ಕುಂದಾಪುರ ಕಡೆಯಿಂದ ಮಂಗಳೂರಿಗೆ ಬರುವ ಮಹಿಳಾ ಪ್ರಯಾಣಿಕರು ಈ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಬಹಳ ಅರಾಮವಾಗಿ,
ನಿಗದಿತ ವೇಗದಲ್ಲಿ ಯಾವುದೇ ಸ್ಪರ್ಧೆ ಇಲ್ಲದೆ ಸಂಚರಿಸುತ್ತಿದ್ದು, ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣ ಮಾಡಬಹುದು. ಅಲ್ಲದೆ, ಈ ಬಸ್ ಗಳ ಡ್ರೈವರ್, ಕಂಡಕ್ಟರ್ ಗಳು ಪ್ರಯಾಣಿಕರೊಂದಿಗೆ ಉತ್ತಮ ರೀತಿಯಲ್ಲಿ, ಸೌಜನ್ಯ ರೀತಿಯಲ್ಲಿ ಗೌರವಯುತರಾಗಿ ವರ್ತಿಸುತ್ತಾರೆ.
ಆದರೆ, ಈ ಖಾಸಗಿ ಬಸ್ ಗಳು ಪ್ರಯಾಣಿಕರ ಜೀವ ಲೆಕ್ಕಿಸದೇ ಅತೀ ವೇಗದಲ್ಲಿ ಸಂಚರಿಸುತ್ತಾ, ಪರಸ್ಪರ ಓವರ್ ಟೇಕ್ ಮಾಡುತ್ತಾ ಹೈ ಸ್ಪೀಡ್ ನಲ್ಲಿ ಸಂಚರಿಸುತ್ತಿವೆ. ಬಸ್ಸಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿ, ಕರ್ಕಶ ಹಾರನ್ ಹಾಕುತ್ತಾ ಪ್ರಯಾಣಿಕರ ನೆಮ್ಮದಿಗೇ ಭಂಗ ತರುತ್ತಿರುವ ಘಟನೆಗಳನ್ನು ನೀವೆಲ್ಲಾ ನೋಡಿರುವಿರಿ.

ಆದುದರಿಂದ ಮಂಗಳೂರಿನಿಂದ ಉಡುಪಿ ಕಡೆಗೆ ಹಾಗೂ ಉಡುಪಿ,ಕುಂದಾಪುರ ದಿಂದ ಮಂಗಳೂರು ಕಡೆಗೆ ಪ್ರಯಾಣಿಸುವ ಮಹಿಳೆಯರು ನೆಮ್ಮದಿಯ ಪ್ರಯಾಣಕ್ಕಾಗಿ ಮತ್ತು ಹಣ ಉಳಿಸಲು
ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲೇ ಉಚಿತವಾಗಿ ಸಂಚರಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








