“ದಶಕಗಳ ದುಡಿಮೆಗೆ ಸಂದ ಗೌರವ : ಚಿಕ್ಕಮಗಳೂರಿನಲ್ಲಿ ವಿಶೇಷ ಪ್ರಶಸ್ತಿ ಪ್ರದಾನ.”
1 min read
ಚಿಕ್ಕಮಗಳೂರು ಜು ೨೩: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಾಧನೆ ಗೈದ ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ದತ್ತಿನಿಧಿ ಹಾಗೂ ವಿಶೇಷ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಾಧ್ಯಮ ರಂಗದ ಹಿರಿಯ ಸಾಹಿತಿ, ವರದಿಗಾರರು ಮತ್ತು ಸಂಪಾದಕರ ಕೊಡುಗೆಯನ್ನು ಗುರುತಿಸಿ ಈ ಸಾಲಿನ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ ಕನ್ನಡ ಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ ಗೊಮ್ಮಟ ಮಾಧ್ಯಮ ಪ್ರಶಸ್ತಿ, ಸಂಯುಕ್ತ ಕರ್ನಾಟಕದ ಬಿ.ವಿ. ಗೋಪಿನಾಥ್ ಅವರಿಗೆ ಡಿ.ವಿ.ಜಿ. ಪ್ರಶಸ್ತಿ, ಪ್ರಜಾವಾಣಿಯ ರವಿಪ್ರಕಾಶ್ ಅವರಿಗೆ ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಸೇರಿದಂತೆ ರಾಜ್ಯದ ಹಲವು ಹಿರಿಯ ಪತ್ರಕರ್ತರು ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಪತ್ರಕರ್ತರಾದ ವಿಜಯ ಕರ್ನಾಟಕದ ಕೆ.ಎಚ್. ರುದ್ರಯ್ಯ, ಸುವರ್ಣ ನ್ಯೂಸ್ನ ಕಿರಣ್ ಕೆ. ಹಾಗೂ ವಿಜಯವಾಣಿಯ ಬಿ. ಉಮೇಶ್ ನಾಯಕ್ ಮಾಧ್ಯಮ ಪ್ರತಿನಿಧಿಗಳು ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಸಾಧಕರಿಗೆ ಫಲಕ, ಪ್ರಶಸ್ತಿ ಪತ್ರ ಹಾಗೂ ₹5,000 ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಇದೇ ಜುಲೈ 25ರಂದು ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಎಲ್ಲಾ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯುಜೆ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಅವರು ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಪತ್ರಕರ್ತರನ್ನು ಅವಿನ್ ಟಿವಿ ಸುದ್ದಿವಾಹಿನಿ ಈ ಮೂಲಕ ಅಭಿನಂದಿಸಿದೆ.
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

