ಸಾವಿನಲ್ಲೂ ರೂಪಗೊಂಡ ಬದುಕು: ದೇಹ ದಾನದ ಮೂಲಕ ಜನ್ಮದಾತೆಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳುತ್ತಿರುವ ಸಾಮಾಜಿಕ ಕಾರ್ಯಕರ್ತೆ ಪ್ರಶಾಂತಿ ವಿ ಕುವೇಲೊ ಕುಟುಂಬ ವರ್ಗ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾವಿನಲ್ಲೂ ರೂಪಗೊಂಡ ಬದುಕು: ದೇಹ ದಾನದ ಮೂಲಕ ಜನ್ಮದಾತೆಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳುತ್ತಿರುವ ಸಾಮಾಜಿಕ ಕಾರ್ಯಕರ್ತೆ ಪ್ರಶಾಂತಿ ವಿ ಕುವೇಲೊ ಕುಟುಂಬ ವರ್ಗ.
ಚಿಕ್ಕಮಗಳೂರು ಆ 26: ಚಿಕ್ಕಮಗಳೂರು ನಗರದ ಗೌರಿ ಕಾಲುವೆ ವಾಸಿ ಸಾಮಾಜಿಕ ಕಾರ್ಯಕರ್ತೆ ಪ್ರಶಾಂತಿ ವಿ ಕುವೇಲೋ ಅವರ ತಾಯಿ 74ರ ವಯೋಮಾನದ ಪ್ರಿಸ್ಸಿಲ್ಲ ಕುವೇಲೋ ಅವರು ಅನಾರೋಗ್ಯದ ಕಾರಣ ಇಂದು ಸಂಜೆ ನಿಧನರಾಗಿದ್ದಾರೆ.
ಬದುಕಿನಲ್ಲಷ್ಟೇ ಅಲ್ಲ ಸಾವಿಗೊಂದು ಸಾರ್ಥಕತೆ ದಕ್ಕಬೇಕೆಂಬ ಆಶಯದಿಂದ ಮೃತಪಟ್ಟಿರುವ ತನ್ನ ತಾಯಿಯ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲವಾಗಲೆಂದು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಪ್ರಶಾಂತಿ ವಿ ಕುವೇಲೋ ಕುಟುಂಬ ವರ್ಗ ದೇಹ ದಾನ ಮಾಡಲು ನಿರ್ಧರಿಸಿದೆ.
ಈ ಮೂಲಕ ಸಾವಿನ ಸಂದರ್ಭದಲ್ಲಿಯೂ ಸಾರ್ಥಕತೆ ಮೆರೆದು ಸಮಾಜಕ್ಕೆ ಕೊಡುಗೆ ನೀಡಿದ ಈ ಕುಟುಂಬದ ನಿರ್ಧಾರವು ಶ್ಲಾಘನೀಯವಾಗಿದೆ.
ತಾಯಿಯ ನೆನಪನ್ನು ಕೇವಲ ಕುಟುಂಬದೊಳಗೆ ಉಳಿಸದೆ, ವೈದ್ಯಕೀಯ ಕ್ಷೇತ್ರದ ಜ್ಞಾನಾರ್ಜನೆಗೆ ಅರ್ಪಿಸಿರುವ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
27 ಆಗಸ್ಟ್ 2026ರ ಗುರುವಾರ ಬೆಳಿಗ್ಗೆ 10:00 ಘಂಟೆಯ ತನಕ ನಗರದ ಗೌರಿ ಕಾಲುವೆಯಲ್ಲಿರುವ ಮೃತರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ, ನಂತರ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುತ್ತದೆ ಎಂದು ಪ್ರಶಾಂತಿ ವಿ ಕುವೇಲೋ ಅವರ ಕುಟುಂಬ ವರ್ಗ ತಿಳಿಸಿದೆ.
ಓರ್ವ ಮಗ, ಓರ್ವ ಮಗಳು, ಅಳಿಯ ಮೊಮ್ಮಕ್ಕಳು ಸೇರಿದಂತೆ ದೊಡ್ಡ ಕುಟುಂಬ ವರ್ಗ ಮತ್ತು ಅಪಾರವಾದ ಸ್ನೇಹ ಬಳಗವನ್ನು ಬಿಟ್ಟು ಅಗಲಿದ ಪ್ರಿಸಿಲ್ಲ ಕುವೇಲೋ ಅವರಿಗೆ ಸಂಘ ಸಂಸ್ಥೆಗಳು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ … ✍️
ಚಿಕ್ಕಮಗಳೂರು

