ರಾಜಪುತ್ರನ ಮೂಡಿಗೆರೆಯ ನಂಟು
1 min read
ರಾಜಪುತ್ರನ ಮೂಡಿಗೆರೆಯ ನಂಟು
ಕಳೆದ ಹಲವು ವರ್ಷಗಳಿಂದ ನಟ ಪುನೀತ್ರಾಜ್ಕುಮಾರ್ ಅವರು ನಿಡುವಾಳೆ ಗ್ರಾಮಕ್ಕೆ ಬೇಟಿ ನೀಡಿದ್ದರು.
ನಿಡುವಾಳೆಯ ಉರುವಿನಖಾನ್ ಎಸ್ಟೇಟ್ನ ಮಾಲೀಕರಾದ ಸುನೀಲ್ ಜೆ ಗೌಡ ಅವರ ಮನೆಗೆ ಬೇಟಿ ನೀಡುತ್ತಿದ್ದ ಪುನೀತ್ರಾಜಕುಮಾರ್ ಅವರು ಕೆಲವು ದಿನಗಳು ನಿಡುವಾಲೆಯಲ್ಲಿಯೇ ಕಳೆಯುತ್ತಿದ್ದರು. ಹಲವು ಬಾರಿ ಕುಟುಂಬದೊAದಿಗೆ ನಿಡುವಾಳೆಗೆ ಆಗಮಿಸುತ್ತಿದ್ದರು. ನಿಡುವಾಳೆಗೆ ಬಂದಾಗಲೆಲ್ಲಾ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು.
ಕೊನೆಯ ಹುಟ್ಟುಹಬ್ಬ ಆಚರಿಸಿದ್ದು ನಿಡುವಾಳೆಯಲ್ಲಿ
೨೦೨೧ರ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಕೋವೀಡ್ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ನಿಡುವಾಳೆಯಲ್ಲಿ ಸರಳವಾಗಿ ಆಚರಿಸಿಕೊಂಡಿದ್ದರು. ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.
ಕುಟುಂಬ ಸಮೇತರಾಗಿ ಆಗಮಿಸಿ ಹರಕೆ ಒಪ್ಪಿಸಿದ್ದರು.
ಪುನೀತ್ ರಾಜಕುಮಾರ್ ಅವರು ನಿಡುವಾಳೆಗೆ ಕುಟುಂಬದೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಬೆಂಗಳೂರಿಗೆ ಹಿಂದಿರುಗಿದ ನಂತರ ಹರಕೆ ಈಡೇರಿದ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಕುಟುಂಬ ಸಮೇತರಾಗಿ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಹರಕೆ ಒಪ್ಪಿಸಿ ದೇವಸ್ಥಾನಕ್ಕೆ ೨೫ ಸಾವಿರ ಕಾಣಿಕೆ ನೀಡಿದ್ದರು.
ದೇವಸ್ಥಾನ ಸ್ವಚ್ಚಗೊಳಿಸುವ ವೃದ್ದರೊಂದಿಗೆ ಬೆರೆಯುತ್ತಿದ್ದ ರಾಜಪುತ್ರ
ನಿಡುವಾಳೆಗೆ ಪುನೀತ್ ರಾಜಕುಮಾರ್ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳಿಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ನಿಡುವಾಳೆಯ ರಾಮೇಶ್ವರ ದೇವಸ್ಥಾನ ಸ್ವಚ್ಚಗೊಳಿಸುವ ಸಿಬ್ಬಂದಿಯಾಗಿದ್ದ ವೃದ್ದರಾದ ಬೊಗ್ರ ಸಪಲ್ಯ ಎಂಬ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಮೂಲಕ ಪುನೀತ್ ರಾಜಕುಮಾರ್ ಸ್ಥಳಿಯರು ನಿಬ್ಬೆರಗಾಗುವಂತೆ ಮಾಡಿದ್ದರು. ಮೇರು ನಟನಾದರೂ ಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು. ಕೊನೆಯ ಬಾರಿಗೆ ನಿಡುವಾಳೆಗೆ ಬಂದಾಗ ವೃದ್ದರಾದ ಬೊಗ್ರ ಸಪಲ್ಯ ಅವರನ್ನು ನೆನಪಿಸಿಕೊಂಡು ಅವರನ್ನು ಕರೆಸುವಂತೆ ಸ್ಥಳೀಯರಿಗೆ ತಿಳಿಸಿದ್ದರು. ಆದರೆ ಅಂದು ಬೊಗ್ರ ಸಪಲ್ಯ ಅವರು ಊರಿನಲ್ಲಿ ಇಲ್ಲದೇ ಇರುವುದರಿಂದ ಬೇಟಿ ಮಾಡಲು ಆಗಿರಲಿಲ್ಲ. ಆದರೆ ತಿಂಗಳುಗಳ ನಂತರ ಬಂದರೂ ಸಾಮಾನ್ಯನೊಬ್ಬನನ್ನು ಗುರುತಿಸಿ ಮಾತನಾಡಿಸುತ್ತಿದ್ದ ಪುನೀತ್ ಅವರ ಸರಳ ಸಜ್ಜನಿಕೆ ದೊಡ್ಡದು ಎನ್ನುತ್ತಾರೆ ಸ್ಥಳೀಯರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನಿಡುವಾಳೆಯ ಉರುವಿನಖಾನ್ ಎಸ್ಟೇಟ್ನ ಮಾಲೀಕರಾದ ಸುನೀಲ್ ಜೆ ಗೌಡ ಅವರು, ಪುನೀತ್ ರಾಜಕುಮಾರ್ ಅವರು ನಮ್ಮ ಕುಟುಂಬದ ಸ್ನೇಹಿತರು, ಒತ್ತಡದ ಬದುಕಿನ ನಡುವೆ ಬಿಡುವು ಮಾಡಿಕೊಂಡು ನಿಡುವಾಳೆಯಲ್ಲಿ ಕೆಲ ದಿನಗಳು ಇದ್ದು ಹೋಗುತ್ತಿದ್ದರು. ಮಲೆನಾಡಿನ ವಾತಾವರಣ ಅವರಿಗೆ ಪ್ರಿಯವಾಗಿತ್ತು. ತಂದೆಯಂತೆಯೆ ಸರಳ ಸಜ್ಜನಿಕೆಯ ಪ್ರತಿರೂಪದಂತಿದ್ದರು. ಹಿರಿಯರನ್ನು ಪ್ರೀತಿಯಿಂದ ಮಾತನಾಡಿಸುತ್ತಿದರು. ನವೆಂಬರ್ ತಿಂಗಳಲ್ಲಿ ನನ್ನ ಮಗಳ ಮದುವೆಗೆ ಪುನೀತ್ ರಾಜಕುಮಾರ್ ಅವರು ಬರುವವರಿದ್ದರು. ಆದರೆ ದಡೀರನ್ನೆ ಅವರು ನಮ್ಮನ್ನು ಅಗಲಿರುವುದು ಅತೀವ ನೋವು ಉಂಟು ಮಾಡಿದೆ ಎಂದರು.
ಮೂಡಿಗೆರೆ ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿದ ಪುನೀತ್ ರಾಜಕುಮಾರ್.
೨೦೦೬ ರಲ್ಲಿ ಮೂಡಿಗೆರೆಯಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುನೀತ್ ರಾಜಕುಮಾರ್ ಅವರು ಭಾಗವಹಿಸಿದ್ದರು. ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅಂದು ಸಮ್ಮೇಳನವನ್ನು ಉದ್ಘಾಟಿಸಿದ್ದರು. ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮಾರ್, ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು, ಇಬ್ಬರು ಕನ್ನಡದ ಮೇರುವ್ಯಕ್ತಿತ್ವಗಳ ಪುತ್ರರು ಒಂದೇ ವೇದಿಕೆಯಲ್ಲಿ ಇರುವುದನ್ನು ಅಂದು ಕನ್ನಡಾಭಿಮಾನಿಗಳು ಕಣ್ತುಂಬಿಕೊಂಡಿದ್ದರು.
ವರದಿ.
ಮಗ್ಗಲಮಕ್ಕಿಗಣೆಶ್.
ಬ್ಯುರೋ ನ್ಯೂಸ್.
http://nisargacare.com/assisted-living-facilities-in-bangalore-india/