AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕಣ್ಣ ಕನ್ನಡಿಯಲ್ಲಿ ಅಂಕಣಕ್ಕೆ ಐವತ್ತರ ಸಂಭ್ರಮ* #avintvcom

1 min read
Featured Video Play Icon

ಕಣ್ಣ ಕನ್ನಡಿಯಲ್ಲಿ ಅಂಕಣಕ್ಕೆ ಐವತ್ತರ ಸಂಭ್ರಮ*

ಕಣ್ಣ ಕನ್ನಡಿಯಲ್ಲಿ -50

ಇವರಿಗೆ ಮಸಣದಲ್ಲೆ ನಿತ್ಯಜೀವನ

ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿರುವ ಚಿತಾಗಾರದ ಒಳ ಹೊಕ್ಕಾಗ ಆಗಷ್ಟೆ ತಂದ ಮೃತದೇಹವೊಂದನ್ನು ಚಿತೆಯ ಮೇಲೆ ಇಡಲಾಗಿತ್ತು.
ಮೃತರ ಸಂಬಂಧಿಕರು ವಿಧಿವಿಧಾನಗಳನ್ನು ನೆರವೇರಿಸುವುದರಲ್ಲಿ ನಿರತರಾಗಿದ್ದರು.
ಆ ಚಿತಾಗಾರದಲ್ಲಿ ಕಾರ್ಯ ನಿರ್ವಹಿಸುವ ಬಾಳ ಮುಸ್ಸಂಜೆಯಲ್ಲಿರುವ ಇಳಿ ವಯಸ್ಸಿನ ಭಾಗ್ಯಮ್ಮ ಮೃತರ ಸಂಬಂಧಿಕರಿಗೆ ವಿಧಿ ವಿಧಾನಗಳ ಬಗ್ಗೆ ವಿವರಿಸುತ್ತಿದ್ದರು.
ಕೆಲ ಹೊತ್ತಲ್ಲೆ ವಿಧಿವಿಧಾನಗಳು ಮುಗಿದು ಮೃತದೇಹಕ್ಕೆ ಅಗ್ನಿಸ್ಪರ್ಶವಾಗಿ ಚಿತೆ ನಿಧಾನಕ್ಕೆ ಹೊಗೆಯಾಡುತ್ತಾ ದಗದಗಿಸಿ ಉರಿಯತೊಡಗಿತು. ಮೃತರ ಸಂಬಂಧಿಕರು ಕೆಲ ಸಮಯವಿದ್ದು ಹೊರಟು ಹೋದರು.
ಕಳೆದ 14 ವರ್ಷದಿಂದ ಈ ಚಿತಾಗಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗ್ಯಮ್ಮ ಇಲ್ಲಿನವರ ಪಾಲಿಗೆ ಚಿತಾಗಾರದಮ್ಮ.

ದಗದಗಿಸಿ ಉರಿಯುತ್ತಿರುವ ಚಿತೆಯ ಸಮೀಪವೇ ಇದ್ದ ಕಲ್ಲು ಹಾಸಿನ ಮೇಲೆ ಕೂತು ಎಲೆ ಅಡಿಕೆ ಚೀಲದಿಂದ ಅಡಿಕೆ ಚೂರೊಂದನ್ನು ತೆಗೆದು ಉರುವಿ ದವಡೆಗೆ ಎಸೆದು ಮೆಲುಕು ಹಾಕುತ್ತಾ, ಎಲೆಯ ತುದಿ ಚಿವುಟಿ, ಅದರ ಬೆನ್ನಿಗೆ ಸುಣ್ಣ ಸವರಿ ಸುರುಳಿಯಾಗಿಸಿ ಬಾಯಿಗಿಟ್ಟು ಬಾಯಾಡಿಸತೊಡಗಿದರು ಭಾಗ್ಯಮ್ಮ.
ಸದಾ ಭಯ ಹುಟ್ಟಿಸುವ ಮಸಣದಲ್ಲಿ ಹೆಣ್ಣುಹೆಂಗಸೊಂದು ರಾತ್ರಿ ಹಗಲೆನ್ನದೇ ಅಂತ್ಯಸಂಸ್ಕಾರ ಮಾಡುತ್ತಾ ಮಸಣ ಕಾಯುತ್ತಾ 14 ವರ್ಷ ಮಸಣದಲ್ಲೆ ಕಳೆದ ಕಥೆ ರೋಚಕವಾದದ್ದು. ನೀವ್ ಹೇಗೆ ಇಲ್ಲಿಗೆ ಬಂದ್ರಿ ಇಲ್ಲಿ ಯಾಕೆ ಕೆಲಸ ಮಾಡ್ಬೇಕು ಅಂತ ಅನಿಸ್ತು ನಿಮ್ಗೆ ಎಂದು ಅವರನ್ನು ಕೇಳಿದೆ. ದವಡೆಯ ನಡುವಿನ ಎಲೆಅಡಿಕೆಯ ಜೊತೆಗೆ ನೆನಪುಗಳನ್ನು ಮೆಲುಕು ಹಾಕುತ್ತಾ ತಮ್ಮ ಕಥೆ ಹೇಳುತ್ತಾ ಹೋದರು ಭಾಗ್ಯಮ್ಮ.
ನನ್ನ ಊರು ಕೆಂಗೇನಹಳ್ಳಿ. 14 ವರ್ಷದಿಂದ ಈ ಚಿತಾಗಾರದಲ್ಲಿ ಕೆಲಸ ಮಾಡ್ತಾ ಇದ್ದೀನಿ. ಹಲವು ವರ್ಷದ ಹಿಂದೆ ನನ್ನ ಗಂಡ ಸೌದೆ ಹೊಡೆಯೋ ಕೆಲಸ ಮಾಡ್ತಾ ಇದ್ರು. ನಾನು ಅವರಿಗೆ ಕೆಲಸಕ್ಕೆ ಸಹಾಯ ಮಾಡ್ತಾ ಇದ್ದೆ.
ಈ ಚಿತಾಗಾರದಲ್ಲಿ ಮುಂಚೆ ವಾಚ್ ಮ್ಯಾನ್ ಆಗಿದ್ದೋರು ತೀರ್ಕೊಂಡ್ರು. ಆ ನಂತರದಲ್ಲಿ ನಾನು ನನ್ನ ಗಂಡ ಸೌದೆ ಒಡಿಯೋದರ ಜೊತೆಗೆ ಇಲ್ಲಿಯೇ ಇದ್ದು ಅಂತ್ಯ ಸಂಸ್ಕಾರ ಮಾಡೋ ಕೆಲ್ಸ ಮಾಡ್ತಾ ಇದ್ವಿ.
ಇಲ್ಲಿಗೆ ಬಂದ ಐದು ವರ್ಷಕ್ಕೆ ನಮ್ ಯಜಮಾನ್ರು ತೀರ್ಕೊಂಡ್ರು. ಆ ನಂತರ ಅಂತ್ಯಸಂಸ್ಕಾರ ಕಾರ್ಯವನ್ನು ನಾನು ಮಾಡ್ತಾ ಬರ್ತಾ ಇದ್ದೀನಿ.
ಪ್ರಾರಂಭದಲ್ಲಿ ಮೊದಲ ಮೃತದೇಹವನ್ನು ಸುಟ್ಟಾಗ ಸ್ವಲ್ಪ ಭಯ ಇತ್ತು. ಆಮೇಲಾಮೇಲೆ ದೈರ್ಯ ಬಂತು.
ಇದು ನನ್ನ ಕರ್ತವ್ಯ ಅಂತ ಅನಿಸಿ ಮಾಡೋಕೆ ಶುರು ಮಾಡ್ದೆ.
ಮೃತದೇಹವನ್ನು ತಂದ ಮೃತರ ಸಂಬಂಧಿಕರು ಬೆಂಕಿ ಕೊಟ್ಟ ಮೇಲೆ ಹೊರಟು ಹೋಗ್ತಾರೆ. ಪೂರ್ತಿ ದೇಹ ಉರಿದು ಹೋಗೋವರೆಗೂ ಇಲ್ಲೆ ಇದ್ದು ನೋಡ್ಕೊಬೇಕಾಗುತ್ತೆ. ಕೆಲವೊಮ್ಮೆ ಕಾಲಿನ, ತಲೆಯ ಚಿಪ್ಪುಗಳು ಕೆಳಗೆ ಬೀಳುತ್ತೆ. ಅದನ್ನೆಲ್ಲಾ ಎತ್ತಿ ಚಿತೆಗೆ ಹಾಕ್ಬೇಕು. ಆ ದೇಹ ಸರಿಯಾದ ರೀತಿಯಲ್ಲಿ ಉರಿಬೇಕು. ಅದಕ್ಕೆ ನೆಮ್ಮದಿ ಕೊಡಬೇಕು ಅನ್ನೋದು ಮುಖ್ಯ ಆದಾಗ ದೈರ್ಯ ಬಂತು.
ಭಯ ಅಂತ ಅನಿಸ್ತಾ ಇರ್ಲಿಲ್ಲ.
ಕೊರೊನಾ ಹೆಚ್ಚಾಗಿದ್ದ ಸಮಯದಲ್ಲಿ ಒಂದು ದಿನಕ್ಕೆ 9 ಮೃತದೇಹದ ಅಂತ್ಯಸಂಸ್ಕಾರವನ್ನು ಮಾಡಿದ್ದೇನೆ. ಕೆಲವರು ಕೊರೊನಾದಿಂದ ಸತ್ತವರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡೋಕೆ ಹಿಂಜರಿತ ಇದ್ರು. ಭಯ ಪಡ್ತಾ ಇದ್ರು. ಎಲ್ಲಾರೂ ಭಯ ಪಡ್ತಾ ಇದ್ರೆ ಆ ದೇಹಗಳ ಅಂತ್ಯ ಸಂಸ್ಕಾರ ಮಾಡೋರ್ ಯಾರು?. ನಾನೇ ಆ ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದೆ.
ಕೆಲ ಧರ್ಮದಲ್ಲಿ ಬೇರೆ ಧರ್ಮಕ್ಕೆ ಮತಾಂತರವಾದವರೂ ಮೃತಪಟ್ಟರೇ ಆ ವ್ಯಕ್ತಿಯ ಧರ್ಮಕ್ಕೆ ಸಂಬಂಧಿಸಿದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಕೆಲ ಸಂದರ್ಭದಲ್ಲಿ ಅವಕಾಶ ಕೊಡುವುದಿಲ್ಲ. ಅಂತಹ ಸಂದರ್ಭದಲ್ಲಿ ಇಲ್ಲಿಗೆ ಮೃತದೇಹವನ್ನು ತಂದಾಗ ಅವರ ಅಂತ್ಯಸಂಸ್ಕಾರವನ್ನು ಕೂಡ ಮಾಡಿದ್ದೇನೆ.
ಬದುಕಿನ ಕೊನೆ ಕ್ಷಣದವರೆಗೂ ಇಲ್ಲಿಯೇ ಕೆಲಸ ಮಾಡ್ಬೇಕು ಅನ್ನೋದು ನನ್ನ ಆಸೆ. ಈ ಮಣ್ಣಲ್ಲೆ ಮುಕ್ತಿ ಹೊಂದಬೇಕು ಅನ್ನೋದು ನನ್ನ ಬಯಕೆ. ನನಗೆ ಸ್ಮಶಾನದಲ್ಲಿ ವಾಸ ಮಾಡೋಕೆ ದೆವ್ವ ಭೂತಗಳ ಭಯ ಇಲ್ಲ. ಇಷ್ಟು ವರ್ಷದಲ್ಲಿ ನನಗೆ ಯಾವುದು ಆ ತರದ್ದು ಕಾಣಿಸಿಕೊಂಡಿಲ್ಲ. ಒಬ್ಬಳೇ ಮದ್ಯರಾತ್ರಿಲ್ಲಿ ಇಲ್ಲಿ ಓಡಾಡ್ತೀನಿ. ಸ್ಮಶಾನದಲ್ಲಿರೋ ತೆಂಗಿನಮರದಿಂದ ಒಂದು ಕಾಯಿ ಬೀಳ್ಬಹುದು. ಅಥವಾ ತೆಂಗಿನಗರಿ ಬೀಳ್ಬಹುದು. ಅಂತ ಸಂದರ್ಭದಲ್ಲ್ಲಿ ಮನಸ್ಸು ದೆವ್ವ ಭೂತ ಅಂತ ಯೋಚನೆ ಮಾಡಲ್ಲ.
ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಇಲ್ಲಿಗೆ ತಂದಾಗ ವಿಧಿವಿಧಾನ ಮಾಡೋಕೆ ಯಾರು ಇಲ್ಲ ಅಂದ್ರೆ ನಾನೇ ಹೇಗೆ ಮಾಡೋದು ಅನ್ನೋದನ್ನ ಅವರಿಗೆ ಹೇಳಿ ಕೊಡ್ತೀನಿ. ಹಲವರು ಅವ್ರೆ ವಿಧಿವಿಧಾನವನ್ನು ಮಾಡ್ಕೊಳ್ತಾರೆ. ಒಂದು ಮೃತದೇಹ ಪೂರ್ತಿ ಸುಡಲಿಕ್ಕೆ ನಾಲ್ಕು ಗಂಟೆ ಬೇಕು. ಕೆಲವೊಂದು ಮೃತದೇಹ ಬೆಳಕ್ ಹರಿಯೋವರೆಗೂ ಬೇಯುತ್ತೆ. ಇಷ್ಟ್ ವರ್ಷ ಆದ್ರೂ ಅದು ಯಾಕೆ ಹಾಗೆ ಅಂತ ಗೊತ್ತಾಗಿಲ್ಲ.
ಚಿತೆಯಲ್ಲಿ ಬೇಯೋ ದೇಹದ ತಲೆ ಸಿಡಿದು ಶಬ್ದ ಬರುತ್ತೆ ಅನ್ನೋ ಕಲ್ಪನೆ ತುಂಬಾ ಜನಕ್ಕೆ ಇದೆ. ಚಿತೆಗೆ ಬಿದಿರು ಏನಾದ್ರೂ ಹಾಕಿದ್ರೆ ಮಾತ್ರ ಸಿಡಿಯೋ ಸೌಂಡ್ ಬರುತ್ತೆ. ಮನುಷ್ಯನ ಶರೀರ ಮಿಷಿನರಿ ಇದ್ದ ಹಾಗೆ. ದೇಹದ ಕೀಲುಗಳು ಸುಟ್ಟಾಗ ಸ್ವಲ್ಪ ಮಟ್ಟಿಗಿನ ಶಬ್ದ ಬರುತ್ತೆ ಅಷ್ಟೆ. ಜಾಸ್ತಿ ಏನು ಶಬ್ದ ಬರೋದಿಲ್ಲ. ತಲೆ ಸಿಡಿದು ಶಬ್ದ ಬರುತ್ತೆ ಅನ್ನೋದು ಕಲ್ಪನೆ ಅಷ್ಟೆ. ಹಳ್ಳಿ ಕಡೆಗಳಲ್ಲಿ ಅಂತ್ಯ ಸಂಸ್ಕಾರ ಮಾಡುವಾಗ ಚಿತೆ ಮೇಲೆ ಮೃತದೇಹವನ್ನು ಇಟ್ಟು ಬೆಂಕಿ ಕೊಟ್ಟ ನಂತರ ಅಲ್ಲಿ ಇದ್ದ ಉಳಿದ ವಸ್ತುಗಳ ಜೊತೆಗೆ ಬಿದಿರಿನ ಚಟ್ಟವನ್ನು ಕೂಡ ಚಿತೆಗೆ ಹಾಕ್ತಾರೆ. ಆ ಬಿದಿರು ಸಿಡಿದು ಶಬ್ದ ಮಾಡೊದ್ರಿಂದ ಬಹುಶಃ ತಲೆ ಸಿಡಿದು ಶಬ್ದ ಬರುತ್ತೆ ಅನ್ನೋ ನಂಬಿಕೆ ಬಂದಿರಬಹುದು. ಇಲ್ಲಿ ಚಟ್ಟವನ್ನು ಚಿತೆಗೆ ಹಾಕೋದಿಲ್ಲ. ಅದನ್ನ ಬೇರೆ ಕಡೆ ಸುಟ್ಟು ಹಾಕ್ತೀವಿ.
ತುಂಬಾ ಸಂದರ್ಭಗಳಲ್ಲಿ ಅನಾಥ ಶವಗಳನ್ನು ಪೋಲಿಸರು ತರ್ತಾರೆ. ಆಗ ಆ ಮೃತದೇಹಗಳಿಗೆ ನಾನೆ ಅಗ್ನಿಸ್ಪರ್ಶ ಮಾಡಿದ್ದೀನಿ. ಕೆಲವರು ಕೊರೊನಾ ಸಂದರ್ಭದಲ್ಲಿ ಸಂಬಂಧಿಕರು ಎಲ್ಲಾ ಇದ್ದವರೇ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡೋಕೆ ಮುಂದೆ ಬರ್ಲಿಲ್ಲ. ನೀವೆ ಕೊಟ್ಬಿಡಿ ಅಮ್ಮ ಅಂದ್ರು. ಒಬ್ಬ ಮೊಮ್ಮಗ ಸಹ ಅವ್ನ ಅಜ್ಜಿಗೆ ಅಗ್ನಿ ಸ್ಪರ್ಶ ಮಾಡು ಅಂದ್ರೆ ಹಿಂದೆ ಮುಂದೆ ನೋಡ್ದ. ಕೊನೆಗೆ ನಾನೇ ಅಗ್ನಿಸ್ಪರ್ಶ ಮಾಡ್ದೆ.
ನನಗೆ ದಿನಾನೂ ಸಂತೋಷನೇ ಈ ಕೆಲಸದಲ್ಲಿ. ಹೊರಗೆ ಪ್ರಪಂಚದಲ್ಲಿ ಹೇ, ನೀನ್ ಹಂಗೆ ಹಿಂಗೆ ಅಂತಾರೆ. ಒಳ್ಳೆ ಬಟ್ಟೆ ಹಾಕ್ಕೊಂಡ್ ತಿರ್ಗಿದ್ರೆ ಹೆಂಗ್ ತಿರುಗ್ತಾಳೆ ನೋಡು ಅಂತಾರೆ. ಇಲ್ಲಿ ಯಾರು ಕೇಳಲ್ಲ. ಶಾಂತವಾದ ಜಾಗ ಇದು. ಸ್ಮಶಾನ ದೇವಸ್ಥಾನ ಇದ್ದಂಗೆ ನನಗೆ. ಹೊರಗಡೆ ಪ್ರಪಂಚ ನೋಡಿದ್ರೆ ಹೆದರಿಕೆ ನನಗೆ. ಇಲ್ಲಿ ನೆಮ್ಮದಿಯಾಗಿದ್ದೀನಿ. ದಿನವೂ ಸಂತೋಷವಾಗಿಯೆ ಕೆಲಸ ಮಾಡ್ತೀನಿ. ಹೊರಗೆ ಪ್ರಪಂಚಕ್ಕಿಂತ ಈ ಪ್ರಪಂಚವೇ ಬೆಸ್ಟು ಅಂತ ನನ್ನ ಭಾವನೆ.
ಹೊರಗೆ ಮೇಲು ಕೀಳು, ಬಡವ ಶ್ರೀಮಂತ, ಮೇಲ್ಜಾತಿ, ಕೀಳ್ಜಾತಿ ಅಂತ ಕಚ್ಚಾಡ್ತಾರೆ. ಇಲ್ಲಿ ಬಂದ ಮೇಲೆ ಎಲ್ಲಾ ಒಂದೆ. ದೊಡ್ಡವರು ಅಂತ ಎರಡು ಚೀಲ ಬೂದಿ ಆಗಲ್ಲ. ಬಡವರು ಅಂತ ಒಂದು ಚೀಲ ಬೂದಿ ಆಗಲ್ಲ. ಬಡವನೂ ಅರ್ದ ಚೀಲ ಬೂದಿ, ಶ್ರೀಮಂತನೂ ಅರ್ದ ಚೀಲ ಬೂದಿ. ಸುಮ್ನೆ ಜನಗಳು ಕಿತ್ತಾಡೋದು. ಕೊನೆಗೆ ಅರ್ದ ಚೀಲ ಬೂದಿ ಅಷ್ಟೆ ಎಂದರು ಭಾಗ್ಯಮ್ಮ.
ಮಾತಿನ ನಡುವೆ ಭಾಗ್ಯಮ್ಮ ಉರಿಯುತ್ತಿದ್ದ ಚಿತೆಗೆ ಒಂದಷ್ಟು ಸೌದೆ ಹಾಕಿ ಬಡಿಗೆಯಿಂದ ಹೊರಗೆ ಚಾಚಿದ ಉರಿಸೌದೆಯನ್ನು ಒಳಗೆ ತಳ್ಳಿ ಮತ್ತೆ ಕಲ್ಲು ಹಾಸಿನ ಮೇಲೆ ಕುಳಿತರು. ಪಕ್ಕದಲ್ಲೆ ಇದ್ದ ಸತ್ಯ ಹರಿಶ್ಚಂದ್ರನ ವಿಗ್ರಹವನ್ನು ನೋಡಿ ಇದ್ಯಾರ ವಿಗ್ರಹ ಗೊತ್ತಾ? ಎಂದು ಭಾಗ್ಯಮ್ಮ ಅವರ ಕಡೆಗೆ ನೋಡಿದೆ. ನಸು ನಗುತ್ತಾ ‘ಸತ್ಯಹರಿಶ್ಚಂದ್ರ ಮಾರಾಜನ ವಿಗ್ರಹ ಅದು. ಹರಿಶ್ಚಂದ್ರನಂಥ ಹರಿಶ್ಚಂದ್ರನೇ ಸ್ಮಶಾನ ಕಾಯ್ದಿದ್ದಾನೆ, ಹರಿಶ್ಚಂದ್ರನಂತಹವನೇ ಕಷ್ಟ ಪಟ್ಟಿರುವಾಗ ನಮ್ದ್ ಯಾವ ಲೆಕ್ಕ? ಎಂದು ನಸುನಕ್ಕರು ಭಾಗ್ಯಮ್ಮ.

ಲೇಖನ…….
-ನಂದೀಶ್ ಬಂಕೇನಹಳ್ಳಿ.

Career | job

Navachaitanya Old Age Home

About Author