ಮೂರು ವರ್ಷಗಳಾಯಿತು ನೆರೆ ಸಂತ್ರಸ್ತರ ಬದುಕು ಬೀದಿಗೆ ಬಿದ್ದು!! #avintvcom
1 min read
ಮೂರು ವರ್ಷಗಳಾಯಿತು ನೆರೆ ಸಂತ್ರಸ್ತರ ಬದುಕು ಬೀದಿಗೆ ಬಿದ್ದು!!
ಮಲೆನಾಡು ಎಲ್ಲಾ ವಿಧದಲ್ಲೂ, ಎಲ್ಲಾ ಕಾಲದಲ್ಲಿಯೂ ಜನ ಜೀವನಕ್ಕೆ ಸೂಕ್ತವೆಂದು ಭಾವಿಸಿದ್ದರು ಮೂಡಿಗೆರೆ ತಾಲ್ಲೂಕಿನ ಜನರು.
ಇಡೀ ಪ್ರಪಂಚದಲ್ಲಿಯೇ ಚಿಕ್ಕಮಗಳೂರು ಜಿಲ್ಲೆ ಜಗತ್ತಿನ ಎರಡನೆಯ ಸುರಕ್ಷಿತವಾದ ಸ್ಥಳವೆಂದು ಪ್ರಖ್ಯಾತಿ ಪಡೆದಿತ್ತು.
ಆದರೆ ಕಳೆದ 2019 ಜುಲೈ 29 ರಿಂದ ಪ್ರಾರಂಭವಾಗಿ 2019 ಆಗಸ್ಟ್ 9 ರ ಮುಂದುವರಿದ ಭಾಗವಾಗಿ ನಿರಂತರವಾಗಿ ಸುರಿದ ಮಹಾಮಳೆಗೆ ಮಲೆನಾಡಿಗರ ಬದುಕು ಅಕ್ಷರಸಹ ಕೊಚ್ಚಿ ಹೋಗಿದ್ದು ಇಂದು ಇತಿಹಾಸ.
ಅಪಾರ ಪ್ರಮಾಣದ ಪ್ರಾಣ ಮತ್ತು ಆಸ್ತಿಯನ್ನು ಕಳೆದು ಕೊಂಡು ಮಲೆನಾಡಿನ ನೆರೆ ಸಂತ್ರಸ್ತರು ಬೀದಿಗೆ ಬಿದ್ದು ಇಂದಿಗೆ ಸರಿಯಾಗಿ ಮೂರು ವರ್ಷಗಳಾಯಿತು.
ಮೂಡಿಗೆರೆ ತಾಲ್ಲೂಕಿನಲ್ಲಿ 2019ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಮಲೆಮನೆ, ದುರ್ಗದಹಳ್ಳಿ, ಮಧುಗುಂಡಿ, ಚನ್ನಡ್ಲು, ಅಲೇಖಾನ್ ಮುಂತಾದ ಗ್ರಾಮಸ್ಥರು ಎರಡು ವರ್ಷ ಕಳೆದರೂ ಇನ್ನೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
2019ರ ಆಗಸ್ಟ್ 9ರಂದು ಸುರಿದ ಮಹಾಮಳೆಗೆ ಜಾವಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೆಮನೆ ಗ್ರಾಮದಲ್ಲಿ 5 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿ ಸುಮಾರು 35 ಎಕರೆ ಜಮೀನಿಗೆ ಪ್ರವಾಹದ ಹಾನಿಯಾಗಿತ್ತು.
ಮಲೆಮನೆಯ ನೆರೆ ಸಂತ್ರಸ್ತರು ಸೇರಿದಂತೆ ವಿವಿಧ ಗ್ರಾಮಗಳ ನೆರೆ ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸುವವರೆಗೆ ಬಾಡಿಗೆ ಮನೆಯಲ್ಲಿ ಇರಲು ಸೂಚಿಸಿ ಬಾಡಿಗೆ ಹಣ ನೀಡುವುದಾಗಿ ತಿಳಿಸಿತ್ತು.
ಆದರೆ ಸರ್ಕಾರ 5 ತಿಂಗಳ ಬಾಡಿಗೆ ಹಣ ಮಾತ್ರ ನೀಡಿದ್ದು,
ಈವರೆಗೂ ಉಳಿದ ಬಾಡಿಗೆ ಹಣ ನೀಡಿಲ್ಲ.
ಎರಡು ವರ್ಷ ಕಳೆದರು ನೆರೆ ಸಂತ್ರಸ್ತರು ಇಂದಿಗೂ ಸಾವಿರಾರು ರೂ ಬಾಡಿಗೆ ಕಟ್ಟುತ್ತಾ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದಾರೆ.
ನೆರೆ ಸಂತ್ರಸ್ತರಿಗೆ ಪರ್ಯಾಯ ಜಾಗ ನೀಡಲು ಸರ್ಕಾರ ಎಲ್ಲಿಯೂ ಜಾಗ ಗುರುತಿಸದಿರುವುದು ಸಮಸ್ಯೆಯಾಗಿದೆ. ಇದರಿಂದ ನೆರೆ ಸಂತ್ರಸ್ತರು ಮೂಲ ಸ್ಥಳಕ್ಕೆ ಹೋಗಲಾರದೆ ಬಾಡಿಗೆ ಮನೆಯಲ್ಲೂ ಇರಲಾಗದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ.
ನೆರೆ ಸಂತ್ರಸ್ತರಿಗೆ ನೀಡಲು ಕಂದಾಯ ಭೂಮಿ ಇಲ್ಲ.
ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಸಂತ್ರಸ್ತರಿಗೆ ನೀಡಬೇಕು. ಇದು ವಿವಿಧ ಇಲಾಖೆಗಳ ಸಚಿವರ ಮಟ್ಟದಲ್ಲಿ ಆಗಬೇಕಾದ ಕಾರ್ಯವಾಗಿರುವುದರಿಂದ ಈವರೆಗೂ ಸರ್ಕಾರಕ್ಕೆ ಪರ್ಯಾಯ ಜಾಗ ಗುರುತಿಸಲು ಸಾಧ್ಯವಾಗಿಲ್ಲ.
ಮಲೆಮನೆ ಗ್ರಾಮಕ್ಕೆ ಮುಖ್ಯ ಮಂತ್ರಿಸೇರಿದಂತೆ ಅನೇಕ ಸಚಿವರು,ಜನಪ್ರತಿನಿಧಿಗಳು ಭೇಟಿ ನೀಡಿ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ.ಆದರೆ ಇದುವರೆಗೆ ಇಲ್ಲಿನ ನೆರೆ ಸಂತ್ರಸ್ತರಿಗೆ ನೆಲೆ ಸಿಕ್ಕಿಲ್ಲ. ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಅಂಗಾರ ಹಾಗೂ ಶಾಸಕ ಎಂ. ಪಿ.ಕುಮಾರಸ್ವಾಮಿ ಮಲೆಮನೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಸಚಿವರು ಹಾಗೂ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ನೆರೆ ಸಂತ್ರಸ್ತರನ್ನು ಭೇಟಿಯಾಗಲು ಬರುವ ಶಾಸಕರೆಲ್ಲ ಕೇವಲ ಭರವಸೆ ನೀಡಿ ಹೋಗುತ್ತಾರೆ. ಯಾರು ಪುನರ್ವಸತಿ ಕಲ್ಪಿಸುವುದಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವ ಎಸ್. ಅಂಗಾರ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ 15 ದಿನದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಈ ವರೆಗೆ ಈ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
“2019ರಲ್ಲಿ ಸಂಭವಿಸಿದ ಪ್ರವಾಹದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಜಾಗ ಗುರುತಿಸಿ ಸರ್ಕಾರದ ಅನುಮೋದನೆಗೆ ಕಳಿಸಿಕೊಡಲಾಗಿದೆ. ಅನುಮೋದನೆ ದೊರೆತ ಕೂಡಲೇ ನೆರೆ ಸಂತ್ರಸ್ತರಿಗೆ ಪರ್ಯಾಯ ಜಾಗ ನೀಡಲಾಗುವುದು ಎಂದು ಮೂಡಿಗೆರೆ ತಹಸೀಲ್ದಾರ್ ನಾಗರಾಜ್ ಹೇಳಿಕೆ ನೀಡುತ್ತಾರೆ.
ನೆರೆ ಸಂತ್ರಸ್ತರಿಗೆ ಮಧುಗುಂಡಿ, ಹಳಗಡಕ, ದುರ್ಗದಹಳ್ಳಿ, ಬಿದಿರುತಳ, ಗ್ರಾಮದ ನಿರಾಶ್ರಿತ 40ಕುಟುಂಬಗಳಿಗೆ ಬಿ.ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಣ್ಣದ ಗೂಡಿನ ಸಮೀಪ ಮನೆ ನಿರ್ಮಿಸಲು ವರ್ಷದ ಹಿಂದೆ ಪರ್ಯಾಯ ಜಾಗ ನೀಡಲಾಗಿದೆ. ಬಹುತೇಕ ನಿರಾಶ್ರಿತರು ಇಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ.
ಆದರೆ ಮೂಲ ಸೌಕರ್ಯ ಕಲ್ಪಿಸದಿರುವುದರಿಂದ ಮನೆ ನಿರ್ಮಾಣವಾದರೂ ನೆರೆ ಸಂತ್ರಸ್ತರು ಬಾಡಿಗೆ ಮನೆಯಲ್ಲಿಯೇ ವಾಸಿಸುವಂತಾಗಿದೆ.
ನಿರೀಕ್ಷೆಯಲ್ಲಿಯೇ ಸಂತ್ರಸ್ತರ ಬದುಕು ಸಾಗಿದೆ. ಬರಿ ಬಾಯಿ ಮಾತಿಗೆ ಸೀಮಿತವಾದ ಪುನರ್ವಸತಿಯ ಹೇಳಿಕೆಯು, ನೆರೆ ಹಾನಿಯಿಂದಾಗಿ ಬಸವಳಿದು ಬೀದಿಗೆ ಬಿದ್ದಿರುವ ನೆರೆ ಸಂತ್ರಸ್ತ ಗ್ರಾಮಸ್ಥರ ಗೋಳು ಕೇಳುವರೆ ಇಲ್ಲದಂತಾಗಿದೆ.
ಮೂಲ ಸೌಕರ್ಯಗಳು ಇವರ ಬದುಕಲ್ಲಿ ಮರೀಚಿಕೆಯಾಗಿ ಉಳಿದು ಬಿಟ್ಟಿವೆ.
ಬದ್ದತೆ ಮತ್ತು ಮಾನವೀಯತೆ ಇರದ ಜನಪ್ರತಿನಿಧಿಗಳು
ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ನಿರಂತರವಾಗಿ ಮಾಡುತಿದ್ದಾರೆ.
ಭ್ರಷ್ಟಾಚಾರದ ಭೂತ ಇವರ ಪ್ರತಿ ಆಲೋಚನೆಯಲ್ಲಿಯೂ ಕ್ರಿಯೆಯಲ್ಲಿಯೂ ಇದ್ದು, ಜನರಿಗಿರುವ ಬಡತನ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ನಿರಂತರವಾಗಿ ಜೀವಂತವಾಗಿ ಉಳಿಸಿಕೊಂಡು ಜನರ ಕೋಟಿ ಕೋಟಿ ತೆರಿಗೆಯನ್ನು ಕೊಳ್ಳೆಯೊಡೆಯುವ ಇಂತಹ ಭ್ರಷ್ಟಾಚಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗಗಳ ಸ್ವಾರ್ಥದ ಫಲವಾಗಿ, ಪ್ರವಾಹದ ಹಾನಿಯಿಂದಾಗಿ ಬದುಕು ಕಳೆದು ಕೊಂಡ ನೂರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದು ಇಂದಿಗೆ ಮೂರು ವರ್ಷಗಳಾಯಿತು ಎಂದು ಹೇಳಿಕೊಳ್ಳಲು ದುಃಖವಾಗುತ್ತದೆ.
“ಬದ್ಧತೆ,ಮಾನವೀಯತೆ, ಕಾಲಜ್ಞಾನದ ಅರಿವು ಇರದ ಜನನಾಯಕ ಸಕಲ ಸೌಖ್ಯ ಮತ್ತು ಸಮೃದ್ಧಿಯುಳ್ಳ ಸುಭದ್ರ ಸಾಮ್ರಾಜ್ಯವನ್ನು ಎಂದಿಗೂ ಕಟ್ಟಲಾರ.”
ಬರಹ ಕೃಪೆ :
ಹೆಸಗಲ್ ವೆಂಕಟೇಶ್.
ವರದಿ:ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.