ಬಿ.ಎಲ್.ಸಂತೋಷ್ ರವರು ಲಘುವಾಗಿ ಮಾತನಾಡಿರುವುದು ಖಂಡನೀಯ #avintvcom
1 min read
*ಎಚ್ಚರಿಕೆ.ಎಚ್ಚರಿಕೆ*
ಇಂದು ಅನೇಕ ಮಠ
ಮಂದಿರಗಳು ಹಣ ತೆಗೆದುಕೊಂಡು ರಾಜಕಾರಣಿಗಳ ದಿನಾಂಕಕ್ಕೆ ಸೀಮಿತವಾಗಿವೆ ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರವರು ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಂಯೋಜಕ ತರೀಕೆರೆ ಉಸ್ತುವಾರಿ ಜಿ.ಬಿ.ಪವನ್ ತಿಳಿಸಿದ್ದಾರೆ
ಬಿ.ಎಲ್.ಸಂತೋಷ್ ರವರು ಈ ಬಗ್ಗೆ ಹೊಂದಿರುವ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದ್ದು ರಾಜ್ಯದ ಜನತೆ ಗುರು ಪರಂಪರೆಯ ಬಗ್ಗೆ ಇಟ್ಟಿರುವ ಗೌರವ ಭಾವನೆಗೆ ದಕ್ಕೆ ತಂದಿದೆ ಮತ್ತು ಬಿಜೆಪಿಯ ಸಂಕುಚಿತ ಮನೋಭಾವನೆಯನ್ನು ಎತ್ತಿತೋರಿದೆ ಎಂದಿದ್ದಾರೆ
ಅಕ್ಷರ,ಅನ್ನ,ಚಿಂತನೆಯ ದಾಸೋಹಗಳನ್ನು ನೀಡುತ್ತಾ ಅಪರಿಮಿತ ಆಸೆಗಳನ್ನಿಟ್ಟು ಪರಿಮಿತ ಸಂಪನ್ಮೂಲಗಳ ನಡುವೆ ಬದುಕುತ್ತಿರುವ ಮಾನವ ಸಮಾಜವನ್ನು ತಿದ್ದಿ ತೀಡುತ್ತಿರುವ ಮಠಮಂದಿರಗಳು ಉತ್ತಮ ಸಮಾಜ ಸೃಷ್ಟಿಸುವ ಬೃಹತ್ ಸಂಸ್ಥೆಗಳಾಗಿವೆ. ಇವುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಯಾರು ಎಂಬುದನ್ನು ಸಂತೋಷ್ ಅರ್ಥಮಾಡಿಕೊಂಡು ಮಾತನಾಡಬೇಕೆಂದು ಎಚ್ಚರಿಸಿದ್ದಾರೆ. ಸಂತೋಷ್ ರವರಿಗೆ ತಾಕತ್ತಿದ್ದರೆ ಅನೇಕ ಮಠಗಳು ಈ ಎಂದು ಉಲ್ಲೇಖಿಸಿರುವ ಅವರು ಯಾವ ಮಠಗಳು ಎಂದು ಸ್ಪಷ್ಟಪಡಿಸಲಿ ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿ ನಾಯಕರು ಮಠಮಂದಿರಗಳಿಗೆ ಹೋಗದಂತೆ ಕಟ್ಟಪ್ಪಣೆ ಹೊರಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.
ಅನಾದಿ ಕಾಲದಿಂದ ಸೃಷ್ಟಿಯಾಗಿರು ಜಾತಿಪದ್ದತಿ ಎಂಬ ವಿಷ ವರ್ತುಲದ ನಡುವೆ ಇಂದಿಗೂ ಸಮಾಜದಲ್ಲಿ ಸಾಮರಸ್ಯ ಬದುಕಿಗೆ ಎಡೆಮಾಡಿಕೊಟ್ಟಿದೆ ಎಂದರೆ ಅದು ಮಠಮಂದಿರಗಳು ಎಲ್ಲ ವರ್ಗದ ಜನರಿಗೆ ತೋರಿರುವ ಮಾನವ ಸಮಾಜದ ಬದುಕಿನ ದಾರಿಯಿಂದಲೇ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ಧಾರೆ. ಸದಾ ಕೋಮುವಾದದ ಮನಸ್ಸನ್ನು ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸುವ ಮನಸ್ಥಿತಿಯಿಂದ ಇರುವವರಿಂದ ನಾವು ಇನ್ನೇನನ್ನು ನೀರಿಕ್ಷೀಸಲಾಗದು ಎಂದು ಕುಟುಕಿದ್ದಾರೆ.ಇಂತಹ ಕೋಮುವಾದಿಗಳ ಮಾತಿಗೆ ಯುವಜನಾಂಗ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.
ಕೂಡಲೆ ಸಂತೋಷ್ ರವರು ಈ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮ ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.