*ಅಭಿನಂದನೆಗಳು* ರವಿ ಕೃಷ್ಣಾರೆಡ್ಡಿ K.R.S. ಪಕ್ಷ….. #avintvcom
1 min read
ಅಭಿನಂದನೆಗಳು
ಪೊಲೀಸರು ಇನ್ನು ಮೇಲೆ
– ಠಾಣೆಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಲಿ,
– ಸಾರ್ವಜನಿಕರ ಹೆಸರಿನಲ್ಲಿ ಖದೀಮರಿಂದ ಅಲ್ಲಿಯೇ ಸನ್ಮಾನ ಮಾಡಿಸಿಕೊಳ್ಳುವುದಾಗಲಿ,
-ಖಾಸಗಿ ಕಾರ್ಯಕ್ರಮಗಳಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸುವುದಾಗಲಿ,
-ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ…
ನಿಷಿದ್ಧ.
ಕಳೆದ ಎರಡುಮೂರು ವರ್ಷಗಳಿಂದ ಈ ವಿಚಾರವಾಗಿ ನಾನು ಹಲವು ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಾ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಾ ಬಂದಿದ್ದೆ. ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದರ ಹಿನ್ನೆಲೆಯಲ್ಲಿ KRS ಪಕ್ಷದ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರವನ್ನೂ ಬರೆದು, ನಮ್ಮ ಪಕ್ಷದ ಮುಖಂಡರು ಅವರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿಯೂ ಬಂದಿದ್ದರು.
ಈ ವಿಚಾರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮೊನ್ನೆ ತಾನೇ ಒಂದು ಸುತ್ತೋಲೆಯನ್ನು ಹೊರಡಿಸಿದ್ದು ಅದು ಇಂದು ಬಿಡುಗಡೆ ಆಗಿದೆ. ಇದು ಅತ್ಯಂತ ತುರ್ತಿನ ಮತ್ತು ಮಹತ್ವದ ಸುತ್ತೋಲೆ. ನಮ್ಮ ಆಗ್ರಹವನ್ನು ಪರಿಗಣಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ “ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ” ಧನ್ಯವಾದಗಳನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿಂತ ದೊಡ್ಡವರು ಯಾರೂ ಇಲ್ಲ.
ಇನ್ನೊಂದೆರಡು ವಿಷಯಗಳು:
• ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗ ಅದನ್ನು ವಿಡಿಯೋ ಮಾಡುವ ಸಾರ್ವಜನಿಕರನ್ನು ತಡೆಯುವ, ಅವರ ಮೇಲೆ ದೌರ್ಜನ್ಯ ಎಸಗುವ, ಫೋನ್ ಕಿತ್ತುಕೊಳ್ಳುವ ಮತ್ತು ಅದರಲ್ಲಿಯ ಮಾಹಿತಿಯನ್ನು ಡಿಲೀಟ್ ಮಾಡುವ ಕಾನೂನುಬಾಹಿರ ಕೃತ್ಯಗಳನ್ನು ಪೊಲೀಸರು ಅವ್ಯಾಹತವಾಗಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿಯೂ ಆದಷ್ಟು ಬೇಗ ಸುತ್ತೋಲೆ ಹೊರಡಿಸಬೇಕೆಂದು KRS ಪಕ್ಷ ಆಗ್ರಹಿಸುತ್ತದೆ.
• ಹಾಗೆಯೇ, ಪೊಲೀಸ್ ಠಾಣೆಗಳಲ್ಲಿ ಇರುವ ಸಿಸಿಟಿವಿ’ಯ ಒಂದು ಟಿವಿ ಸ್ಕ್ರೀನ್ ಅನ್ನು ಠಾಣೆಯ ಬಾಗಿಲ ಬಳಿ ಸಾರ್ವಜನಿಕರು ನೋಡಲು ಆಸ್ಪದ ಇರುವಂತಹ ಸ್ಥಳದಲ್ಲಿ ಇಡಬೇಕೆಂದೂ ಮತ್ತು ಸಾರ್ವಜನಿಕರು ಅದನ್ನು ಚಿತ್ರೀಕರಿಸಿಕೊಳ್ಳಲೂ ಅವಕಾಶ ಕಲ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಆ ಮೂಲಕ ಠಾಣೆಗಳಲ್ಲಿ ನಡೆಯುವ ಹಲವು ಕಾನೂನುಬಾಹಿರ ಚಟುವಟಿಕೆಗಳು, ರಿಯಲ್ ಎಸ್ಟೇಟ್ ವ್ಯವಹಾರಗಳು, ದಲ್ಲಾಳಿ ಕೆಲಸಗಳು, ಅನಾಗರಿಕ ವರ್ತನೆಗಳು ಹತೋಟಿಗೆ ಬರುತ್ತವೆ ಎಂದು ನಾವು ನಂಬುತ್ತೇವೆ.
ಕರ್ನಾಟಕದಲ್ಲಿ ಜವಾಬ್ದಾರಿಯುತ, ದಕ್ಷ, ಪ್ರಾಮಾಣಿಕ ಪೊಲೀಸ್ ವ್ಯವಸ್ಥೆಯನ್ನು ಕಟ್ಟುವ ಮತ್ತು ಆ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ನಮ್ಮ ಪಕ್ಷದ ಹೋರಾಟ ಇನ್ನೂ ಬಲವಾಗಿ ಮುಂದುವರೆಯುತ್ತದೆ. ನಮ್ಮ ಹಲವು ಹೋರಾಟ ಮತ್ತು ಅಭಿಯಾನಗಳ ಕಾರಣಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಆಗಿವೆ. ಜನರನ್ನು ಸಬಲೀಕರಣ ಮಾಡಿದರೆ ಪ್ರಜಾಪ್ರಭುತ್ವವೂ ಸಬಲವಾಗುತ್ತದೆ. ಪ್ರಜೆಗಳಿಗೆ ಘನತೆಯ ಬದುಕೂ ಪ್ರಾಪ್ತವಾಗುತ್ತದೆ. ಅದೇ ಅಲ್ಲವೇ ರಾಜಕಾರಣ?
ಅಂತಹ ರಾಜಕಾರಣಕ್ಕೆ ಜನರ ಬೆಂಬಲದ ನಿರೀಕ್ಷೆಯಲ್ಲಿ…
🙏 ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
02-08-2021.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.