**ಸಹಾಯಕ್ಕಾಗಿ ಮೊರೆ**ಬದುಕಿದ್ದಾಗ ಪಾಸಿಟಿವ್. ಸತ್ತಾಗ ನೆಗೆಟಿವ್.ಬಡತನದ ಬೇಗೆಯಲ್ಲಿ ಕುಟುಂಬ**#avintvcom
1 min read
**ಬದುಕಿದ್ದಾಗ ಪಾಸಿಟಿವ್. ಸತ್ತಾಗ ನೆಗೆಟಿವ್.
ಬಡತನದ ಬೇಗೆಯಲ್ಲಿ ಕುಟುಂಬ**
*ಸಹಾಯಕ್ಕಾಗಿ ಮೊರೆ*
*ಮೂಡಿಗೆರೆ ತಾಲೂಕಿನ ಹೊಸಕೆರೆ*
ಹೆಚ್ಚೆನೂ ಬರೆಯಲಾರೆ.. ಆದ್ರೂ ಒಂದೈದು ನಿಮಿಷ ಸಮಯ ಮಾಡಿಕೊಂಡು ಈ ವಿಡಿಯೋ ನೋಡಿದ್ರೆ ಈ ಕುಟುಂಬದ ಕಣ್ಣೀರ ಕಥೆ ನಿಮಗೆ ತಿಳಿಯುತ್ತೆ. ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅಂತಾ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋದ ಜಗನ್ನಾಥ್ ರನ್ನ ಕೊರೊನಾ ಬಲಿ ತೆಗೆದುಕೊಂಡು ಬಿಟ್ಟಿದೆ. ಸಾಲ ಮಾಡಿ ಕಾರು ತೆಗೆದುಕೊಂಡು ಬೆಂಗಳೂರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಜಗನ್ನಾಥ್, ಮಗಳ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಂಡಿದ್ರು. ಆದ್ರೆ ಕ್ರೂರಿ ಕೊರೊನಾ ಆ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದವರಾದ ಜಗನ್ನಾಥ್ ಗೆ ತಂದೆ-ತಾಯಿ, ಅಣ್ಣ-ತಮ್ಮ ಯಾರೂ ಇಲ್ಲ. ಜೊತೆಗೆ ಊರಿನಲ್ಲೇ ನೆಲೆ ಕಂಡುಕೊಳ್ಳೊಣ ಅಂದ್ರೆ ಕಿತ್ತು ತಿನ್ನೋ ಬಡತನ. ಅಯ್ಯೋ ನನಗಂತೂ ಜೀವನದಲ್ಲಿ ಏನು ಮಾಡಲು ಆಗಲಿಲ್ಲ, ಮಗಳಿಗಾದ್ರೂ ಒಂದೊಳ್ಳೆ ಶಿಕ್ಷಣ ಕೊಡಿಸಬೇಕು ಅನ್ನೋ ಮಹದಾಸೆಯಿಂದ ಕೆಲ ವರ್ಷಗಳ ಹಿಂದೆಯೇ ಪತ್ನಿ-ಮಗಳನ್ನ ಕಟ್ಟಿಕೊಂಡು ರಾಜಧಾನಿ ಬೆಂಗಳೂರು ತಲುಪಿದ್ರು. ಮೊದಲು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಜಗನ್ನಾಥ್, ಮೂರು ವರ್ಷಗಳ ಹಿಂದೆಯಷ್ಟೇ ಕಾರು(ಬಾಡಿಗೆ ಓಡಿಸಲು) ತೆಗೆದುಕೊಂಡಿದ್ರು. ಆದಾದ ಒಂದು ವರ್ಷದ ಬಳಿಕ ಕೊರೊನಾ ಬಂತು, ಹಾಗಾಗೀ ಮತ್ತೆ ಊರಿಗೆ ಮರಳಬೇಕಾಯಿತು. ಆ ಬಳಿಕ ಕೊರೊನಾ ತಕ್ಕ ಮಟ್ಟಿಗೆ ಕಡಿಮೆಯಾಯ್ತು ಅಂತಾ ಇದೇ ಜನವರಿಯಲ್ಲಿ ಮತ್ತೆ ಬೆಂಗಳೂರಿನ ದಾರಿ ಹಿಡಿದ್ರು.. ಇನ್ನೇನು ಮತ್ತೆ ಬೆಂಗಳೂರಿನ ಜೀವನಕ್ಕೆ ತನ್ನನ್ನ ರೂಢಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ, ಮತ್ತೆ ಮಾರ್ಚ್ ಕೊನೆ ವಾರದಲ್ಲಿ ಕೊರೊನಾದ ಎರಡನೇ ಅಲೆ ಆಟ ಶುರುಮಾಡಿತು. ಕಳೆದ ವರ್ಷದಂತೆಯೇ ಈ ಬಾರಿಯೂ ಕೆಲಸ ವಿಲ್ಲದಂತಾಯ್ತು, ಬರೀ ಕೆಲಸವಿಲ್ಲದಿದ್ರೆ ಹೇಗಾದ್ರೂ ಚೇತರಿಸಿ ಕೊಳ್ಳಬಹುದಿತ್ತೇನೋ.? ಆದ್ರೆ ಈ ಬಾರಿ ಕೊರೊನಾ ಜಗನ್ನಾಥ್(38)ರನ್ನ ಬೆನ್ನು ಬಿಡದೇ ಕಾಡಿತ್ತು. ಆರೋಗ್ಯವಾಗಿದ್ದ ಜಗನ್ನಾಥ್, ಇದ್ದಕ್ಕಿದ್ದಂತೆ ಉಸಿರಾಟ ನಡೆಸೋದಕ್ಕೂ ಕೂಡ ಸಾಧ್ಯವಾಗದ ಸ್ಥಿತಿ ತಲುಪಿದ್ರು. ಕೊರೊನಾ ಪರೀಕ್ಷೆಗೆ ಕೂಡ ಹೋಗಿ ಬಂದಾಯ್ತು, ಆದ್ರೆ ವರದಿ ಬರಲು ತುಂಬಾ ತಡವಾಯ್ತು. ಒಂದ್ಕಡೆ ಕೆಲಸವಿಲ್ಲ, ಇನ್ನೊಂದೆಡೆ ಆಸ್ಪತ್ರೆಗೆ ಅಲೆಯಬೇಕಾದ ದುಸ್ಥಿತಿ. ಈ ಮಧ್ಯೆಯೂ ಒಂದು ವಾರ ಬೆಂಗಳೂರಿನ ಆಸ್ಪತ್ರೆ ಅಲೆದಿದ್ದಾಯ್ತು. ಎಲ್ಲೂ ಕೂಡ ಅಪ್ಪಿತಪ್ಪಿಯೂ ಒಳಗೆ ಬಿಟ್ಟಿಕೊಳ್ಳಲೇ ಇಲ್ಲ. ಕೊರನಾ ರಿಪೋರ್ಟ್ ಆಸ್ಪತ್ರೆಗೆ ತೋರಿಸೋಣ ಅಂದ್ರೆ ವರದಿ ಇವರ ಕೈ ತಲುಪಿರಲಿಲ್ಲ. ಎಪ್ರಿಲ್-ಮೇ ತಿಂಗಳಿನಲ್ಲಿ ಕೊರೊನಾ ತುಂಬಾ peak ಗೆ ಹೋಗಿದ್ದು ಎಲ್ಲರಿಗೂ ತಿಳಿದಿದೆ. ಕೊರೊನಾ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲು ಸಾಧ್ಯವಾಗಲ್ಲ ಅಂತಾ ಎಲ್ಲಾ ಆಸ್ಪತ್ರೆಗಳಲ್ಲಿ ಕಡ್ಡಿ ಮುರಿದ ಹಾಗೆ ಹೇಳಿ ಹೊರಕಳಿಸಿದ್ದಾರೆ. ತಂದೆಯ ಸ್ಥಿತಿಯನ್ನ ನೋಡಲಾರದೇ ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಜಗನ್ನಾಥ್ ಪತ್ನಿ, ತನ್ನ ಗಂಡನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲವಲ್ಲ ಅಂತಾ ಕಣ್ಣೀರಾಗಿದ್ದಾರೆ. ವಿಧಿಯಿಲ್ಲದೇ ಮನೆಗೆ ಕರೆದುಕೊಂಡು ಹೋದಾಗ ಕೊನೆಗೆ ಬೆಂಗಳೂರಿನ ಮನೆಯಲ್ಲೇ ಜಗನ್ನಾಥ್ ಜೀವ ಹೋಗಿದೆ. ಆ ಬಳಿಕ ಸೀದಾ ಜಗನ್ನಾಥ್ ಊರಾದ ಹೊಸಕೆರೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಜಗನ್ನಾಥ್ ಸಾವಿನ ಬಳಿಕ ಪತ್ನಿ ಅನಿತಾ, ಮಗಳು ಸೇರಿದಂತೆ ಮನೆಯವರಿಗೆಲ್ಲಾ ಕೊರೊನಾ ಬಂದು ಇದೀಗ ತಾನೇ ಎಲ್ಲರೂ ಗುಣಮುಖರಾಗಿದ್ದಾರೆ. ಆದ್ರೆ ವಿಪರ್ಯಾಸ ಅಂದ್ರೆ ಜಗನ್ನಾಥ್ ಸಾವಿನ ಬಳಿಕ ಕೊರೊನಾ ರಿಪೋರ್ಟ್ ಬಂದಿದ್ದು, ಅವರ ಲ್ಯಾಬ್ ವರದಿ ನೆಗೆಟಿವ್ ಅಂತಾ ಬಂದಿದೆ. ಅದೆಷ್ಟೋ ಜನರಿಗೆ ಪಾಸಿಟಿವ್ ಇದ್ರೂ ನೆಗೆಟಿವ್ ಅಂತಾ ವರದಿ ಬಂದು ಯಡವಟ್ಟುಗಳಾಗಿವೆ. ಆದ್ರೆ ಏನ್ ಮಾಡೋಕೆ ಆಗುತ್ತೆ ನಮ್ಮ ವ್ಯವಸ್ಥೆಯೇ ಇಷ್ಟು ಅಂತಾ ಅನೇಕರು ಸುಮ್ಮನಾಗಿದ್ದೀರಿ..! ಆದ್ರೆ ಈ ಕುಟುಂಬ ಅತ್ತ ಆಸ್ಪತ್ರೆಗೂ ಜಗನ್ನಾಥ್ ರನ್ನ ದಾಖಲಿಸಲಾಗದೇ, ಇತ್ತ ಯಡವಟ್ಟು ರಿಪೋರ್ಟ್ನ ಪರಿಣಾಮವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಪರಿತಪಿಸುವಂತಾಗಿದೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಒಂದು ಲಕ್ಷ ನೀಡುವ ಕನಿಷ್ಠ ಪರಿಹಾರವೂ ಈ ಕುಟುಂಬಕ್ಕೆ ದಕ್ಕದಂತಾಗಿದೆ.. ಒಂದ್ಕಡೆ ಕಾರಿನ ಸಾಲ, ಮತ್ತೊಂದೆಡೆ ಮಗಳಿಗೂ ಶಿಕ್ಷಣ ಕೊಡಿಸಲು ಮಾಡಿರೋ ಸಾಲ, ಇದರ ಜೊತೆಗೆ ಮಗಳ ಭವಿಷ್ಯ ಏನ್ ಮಾಡೋದು ಅನ್ನೋ ಚಿಂತೆ ಆ ತಾಯಿಯನ್ನ ಕಾಡ್ತಿದೆ.. ಗಂಡನ ಮನೆಯೂ ಈಗ್ಲೋ, ಆಗ್ಲೋ ಬೀಳೋ ಹಂತದಲ್ಲಿದ್ದು, ಜಗನ್ನಾಥ್ ಪತ್ನಿ ಅನಿತಾ, ಮಗಳೊಂದಿಗೆ ತವರು ಮನೆ ಸೇರಿಕೊಂಡಿದ್ದಾರೆ. ಆದ್ರೆ ಅಲ್ಲಿ ಆಕೆಯ ಅಣ್ಣನ ಕುಟುಂಬವಿದೆ, ಅವರಿಗೂ ಸಂಸಾರವಿದೆ. ಅಲ್ಲಿ ತಾನೇ ಅನಿತಾ ಹಾಗೂ ಅವರ ಮಗಳು ಎಷ್ಟು ದಿನ ಇರಲು ಸಾಧ್ಯ..?.. ಎಲ್ಲ ಮಕ್ಕಳು ಅವರ ಪೋಷಕರ ಜೊತೆ ಆಟವಾಡುವಾಗ ನನಗೂ ಅಪ್ಪನ ನೆನಪಾಗುತ್ತೆ..! ಅಪ್ಪನನ್ನ ತುಂಬಾ ಮಿಸ್ ಮಾಡಿಕೊಳ್ತೀನಿ ಅನ್ನೋ ಜಗನ್ನಾಥ್ ಅವರ ಮಗಳ ಮಾತನ್ನ ಕೇಳಿದ್ರೆ ನಿಜಕ್ಕೂ ಕರುಳು ಚುರುಕ್ ಅನ್ನುತ್ತೆ.. ನಮ್ಮ ವ್ಯವಸ್ಥೆ ಅವರ ನೆರವಿಗೆ ಬಾರದೇ ಇರಬಹುದು, ಆದ್ರೆ ನಮ್ಮ ನಡುವೆ ಇರುವ ಸಹೃದಯವಂತಿಕೆಯ ಜನರು , ಕಣ್ಣೀರಲ್ಲಿ ಕೈ ತೊಳೆಯುತ್ತಿರೋ ಈ ಕುಟುಂಬದ ಸಹಾಯಕ್ಕೆ ಧಾವಿಸುತ್ತೀರಿ ಅನ್ನೋ ಚಿಕ್ಕ ಆಸೆಯಂತೂ ನನಗಿದೆ..
(ಹನಿ ಹನಿಗೂಡಿದರೆ ಹಳ್ಳ ಎಂಬಂತೆ ನಿಮ್ಮ ಒಂದೊಂದು ರೂಪಾಯಿಯೂ ಈ ಕುಟುಂಬಕ್ಕೆ ಅತ್ಯಮೂಲ್ಯ.. ಕೈಲಾದಷ್ಟು ಸಹಕರಿಸಿ.. ನೆರವಿಗೆ ನಿಲ್ಲಿ🙏🙏🙏)
(ಸಹಾಯ ಮಾಡುವವರು ಅನಿತಾ, ಬ್ಯಾಂಕ್ ಆಫ್ ಬರೋಡ, ಅಕೌಂಟ್ ನಂಬರ್: 63750100011147, IFSC :BARB0VJMUDI, ಬ್ರಾಂಚ್: ಮೂಡಿಗೆರೆ, ಮೊಬೈಲ್ ಸಂಖ್ಯೆ 7676729902)
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/
http://nisargacare.com/navachaithanya-old-age-home/