AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕಸವನ್ನು ನೀವೆ ಹೊತ್ತುಕೊಂಡು ಹೋಗಿ*#avintvcom

1 min read
Featured Video Play Icon

*ಕಸವನ್ನು ನೀವೆ ಹೊತ್ತುಕೊಂಡು ಹೋಗಿ*

 

ಮಲೆನಾಡಿನ ಕಡೆ ಮುಖ ಮಾಡಿರುವ ಪ್ರವಾಸಿಗರೆ…..

ಸುಮಾರು ಹತ್ತು ದಿನಗಳ ಬಳಿಕ ಮಲೆನಾಡಿನಲ್ಲಿ ಇಂದು ಮಳೆ ಒಂದಿಷ್ಟು ಬಿಡುವು ತೆಗೆದುಕೊಂಡಿದೆ.

ಹಾಗಂತ ಪೇಟೆಯ ಮಂದಿ ಪ್ರವಾಸ, ಸೈಟ್ ಸೀಯಿಂಗ್, ಟ್ರೆಕ್ಕಿಂಗ್ ಅಂತ ಮಲೆನಾಡಿಗೆ ಲಗ್ಗೆ ಹಾಕಬೇಡಿ. ನಾವಿನ್ನೂ ಪ್ರವಾಹದಿಂದ ಕೊಚ್ಚಿಹೋದ ರಸ್ತೆ, ಸೇತುವೆ, ವಿದ್ಯುತ್ ಕಂಬಗಳನ್ನು ಹುಡುಕುತ್ತಿದ್ದೇವೆ. ಸ್ಥಳೀಯ ಆಡಳಿತ, ಮೆಸ್ಕಾಂ, ಪಂಚಾಯ್ತಿಗಳು ಇನ್ನೂ ದುರಸ್ತಿ, ಪರಿಹಾರ ಕಾರ್ಯದಲ್ಲಿ ಮುಳುಗಿವೆ.
ಯಾರಿಗೆ ಗೊತ್ತು ಸಂಜೆಯಿಂದಲೇ ಮತ್ತೆ ಮಳೆ ಶುರುವಾಗಬಹುದು.

ಈಗಾಗಲೇ ನೀವು ಬಿಸಾಕಿಹೋದ ಪ್ಲಾಸ್ಟಿಕ್ ಬಾಟಲಿ, ಕವರ್, ಸ್ಯಾಚೆಗಳು ಪೇಟೆ, ಪಟ್ಟಣ, ಹಳ್ಳಿಗಳ ಚರಂಡಿ ತೂಬುಗಳಲ್ಲಿ, ಒಳಚರಂಡಿಗಳಲ್ಲಿ, ಕೆರೆ, ಕಾಲುವೆ ಪೈಪುಗಳಲ್ಲಿ ಸಿಕ್ಕಿಕೊಂಡು ಸಾಕಷ್ಟು ಅನಾಹುತ ಸೃಷ್ಟಿಸಿವೆ. ಅದನ್ನೆಲ್ಲಾ ಸ್ವಚ್ಛ ಮಾಡಿ, ವಿಲೇಮಾಡಲು ಕನಿಷ್ಟ ಇನ್ನೊಂದು ವಾರವಾದರೂ ಹಿಡಿಯಲಿದೆ. ಸುರಿಯುವ ಮಳೆ, ಕೊರೆಯುವ ಚಳಿ, ಕೊಚ್ಚಿಕೊಂಡು ಹೋಗುವ ನೀರಿನ ರಭಸದ ನಡುವೆ ನಮ್ಮವರು ಜೀವ ಒತ್ತೆ ಇಟ್ಟು ನಿಮ್ಮ ಅನಾಗರಿಕತೆಯ ಅವಶೇಷಗಳನ್ನು ಬಳಿಯುತ್ತಿದ್ದಾರೆ.

ಹಾಗೇ, ಮಳೆಗಾಳಿಗೆ ಉರುಳಿದ ಕಂಬಗಳಿಂದಾಗಿ ವಿದ್ಯುತ್ ಇಲ್ಲದೆ, ಮನೆಯ ದೀಪ ಉರಿಯದೆ ಮಲೆನಾಡಿನ ಕುಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಮೊಬೈಲ್ ಬ್ಯಾಟರಿ ಚಾರ್ಜ್ ಆಗದೆ ಅವರಿಗೆ ಹೊರ ಜಗತ್ತಿನ ಸಂಪರ್ಕ ಕೂಡ ಕಡಿದುಹೋಗಿದೆ. ಕಾಡ ನಡುವಿನ ರಸ್ತೆಗಳಲ್ಲಿ ಮರಗಳು ಸಾಲುಸಾಲು ದಾರಿಗೆ ಅಡ್ಡಲಾಗಿ ಒರಗಿದ್ದರೆ, ಪೇಟೆಯಂಚಿನ ಹೆದ್ದಾರಿಗಳಲ್ಲಿ ಭೂಕುಸಿತದಿಂದಾಗಿ ದಾರಿಗಳು ಕಡಿದುಹೋಗಿವೆ.

ಹಾಗಾಗಿ ನೀವೀಗ ಅನಪೇಕ್ಷಿತ ಅತಿಥಿ. ಜೊತೆಗೆ ನೀವು ಕಂಡಕಂಡಲ್ಲಿ ಕಾರು ನಿಲ್ಲಿಸಿಕೊಂಡು ಕುಡಿದು ಬಿಸಾಕಿದ ಮದ್ಯದ ಬಾಟಲಿಗಳಂತೂ ಈ ರಣಮಳೆಗೆ ತೇಲಿಬಂದು ಕೆರೆಕಟ್ಟೆ, ಗದ್ದೆ-ಅಳಿವೆಗಳನ್ನು ಸೇರಿವೆ. ಅವು ಒಡೆದ ಒಂದೇ ಒಂದು ಚೂರು ಅನ್ನದಾತನ ಒಂದು ಪಾದಕ್ಕೆ ನಾಟಿದರೂ ಅವನು ಕನಿಷ್ಠ ಮೂರು ತಿಂಗಳು ಕೆಲಸಕೇಡು ಬಿಟ್ಟು ಅರೈಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೇ ಕಾಡಿನಂಚಿನಲ್ಲಿ ರಾಶಿಬಿದ್ದಿರುವ ಆ ಬಾಟಲಿಯ ಚೂರು ಜಿಂಕೆ, ಕಾಡುಕೋಣ, ಅನೆ ಮುಂತಾದ ವನ್ಯಪ್ರಾಣಿಗಳ ಕಾಲಿಗೆ ನಾಟಿದರಂತೂ ಬಹುತೇಕ ಅದು ಕೀವಾಗಿ, ಕೊಳೆತು, ಕೊನೆಗೆ ಅದರ ಜೀವವನ್ನೇ ಬಲಿತೆಗೆದುಕೊಳ್ಳಲಿದೆ.

ಮನುಷ್ಯ ಸಂಚಾರವೇ ದುಃಸಾಧ್ಯವಾದ ಕಾನೂರು ಕೋಟೆಯ ತಪ್ಪಲಿನಲ್ಲಿ ಕೂಡ ನಿಮ್ಮ ಇಂಥ ‘ನಾಗರಿಕ’ ಕೃತ್ಯಗಳ ಕುರುಹುಗಳು ಸಾಕ್ಷಿಬಿದ್ದಿವೆ.
ಇಡೀ ಮಲೆನಾಡು ಮಳೆಗಾಳಿ, ಪ್ರವಾಹ, ಭೂಕುಸಿತವಷ್ಟೇ ಅಲ್ಲದೆ ನಿಮ್ಮ ಇಂಥ ಘನ ಕೃತ್ಯಗಳ ಕಾರಣದಿಂದಾಗಿಯೂ ಸಾಕಷ್ಟು ಅನುಭವಿಸುತ್ತಿದೆ. ಹಾಗಾಗಿ ಕನಿಷ್ಟ ಇಂಥ ಸಂಕಷ್ಟದ ಹೊತ್ತಲ್ಲಾದರೂ ನಿಮ್ಮ ಪಾಡಿಗೆ ನೀವು, ತೆಪ್ಪಗೆ ನಿಮ್ಮ ಊರಲ್ಲೇ ಇದ್ದು ಉಪಕಾರ ಮಾಡಿ, ಹುಯ್ ಎಂದು ಲಗ್ಗೆ ಇಟ್ಟು ಮೊದಲೇ ಹೈರಾಣಾಗಿರುವ ಮಲೆನಾಡಿಗೆ ಇನ್ನಷ್ಟು ಕಂಟಕ ತರಬೇಡಿ..

ಮುಂದೆ ಬಂದರೂ; ಮಲೆನಾಡಿನ ಪ್ರತಿ ಬಯಲು, ಪ್ರತಿ ಬ್ಯಾಣ, ಬೆಟ್ಟ, ಗುಡ್ಡಗಳನ್ನೂ ಆಶ್ರಯಿಸಿದ ಜನ, ಪ್ರಾಣಿ, ಪಕ್ಷಿಗಳಿವೆ. ಅದು ನಿಮ್ಮ ಮೋಜುಮಸ್ತಿಯ ಉಂಬಳಿ ಜಾಗವಲ್ಲ ಎಂಬ ಎಚ್ಚರವಿರಲಿ. ಮತ್ತು ನಿಮ್ಮ ಕಸವನ್ನು ನೀವೇ ಹೊತ್ತುಕೊಂಡು ಹೋಗಿ..
ಅಷ್ಟರಮಟ್ಟಿಗೆ ಕನಿಷ್ಟ ಮನುಷ್ಯತ್ವ ತೋರಿಸಿ..

– ಮಲೆನಾಡಿಗ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Navachaitanya Old Age Home

Career | job

About Author