**Accident ಎನ್ನುವುದೇ ಆಕಸ್ಮಿಕ ಅಪಘಾತ**ಸಂಚಾರಿ ವಿಜಯ್’ಗೆ ಭಾವಪೂರ್ಣ ಶ್ರದ್ಧಾಂಜಲಿ.#avintvcom
1 min read
Accident ಎನ್ನುವುದೇ ಆಕಸ್ಮಿಕ ಅಪಘಾತ*
ಯಾರ ತಪ್ಪಿಲ್ಲದಿದ್ದರೂ ಒಮ್ಮೊಮ್ಮೆ ಅಪಘಾತಗಳು ಆಗುತ್ತವೆ. ಹಾಗಾಗಿ ಪರಿಚಿತರಿಗೆ ಅಪಘಾತ ಆಯಿತು ಎಂದರೆ ನನಗೆ ಆಘಾತ, ಬೇಸರ, ನೋವು ಎಲ್ಲವೂ ಆಗುತ್ತದೆ. ಆದರೆ ಅಪಘಾತಕ್ಕೀಡಾದವರು ದ್ವಿಚಕ್ರ ವಾಹನದಲ್ಲಿ ಇದ್ದಾಗ ಹೆಲ್ಮೆಟ್ ಧರಿಸಿರಲಿಲ್ಲ ಅಥವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದಾಗ ಒಮ್ಮೆಲೆ ಕೋಪ, ಆಕ್ರೋಶ, ತಿರಸ್ಕಾರ ಎಲ್ಲವೂ ನನ್ನನ್ನು ಮುತ್ತುತ್ತವೆ.
ಹೆಲ್ಮೆಟ್ ಇಲ್ಲದೆ ಓಡಾಡುವ ಮತ್ತು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಕೂಡುವ ಜೊತೆಗಾರರು ನನ್ನಿಂದ ಅತಿ ಕೆಟ್ಟದಾಗಿ ಬೈಯ್ಯಿಸಿಕೊಂಡಿರುವ ಅಥವ ವ್ಯಂಗ್ಯವಾಗಿ ಅಪಹಾಸ್ಯಕ್ಕೆ ಈಡಾಗಿರುವ ವ್ಯಕ್ತಿಗಳ ಸಾಲಿನಲ್ಲಿ ಮೊದಲಿಗರು. ಎಷ್ಟೇ ಕಷ್ಟಪಟ್ಟರೂ ಆ ಅಸಹನೆಯನ್ನು ನಿಯಂತ್ರಿಸುವುದು ನನಗೆ ಅಸಾಧ್ಯ. I can’t help it.
ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ಗಳು ಮಾರಣಾಂತಿಕ ಅಪಘಾತಗಳಲ್ಲಿ ಸಾವಿನ ಪ್ರಮಾಣವನ್ನು ದೊಡ್ಡಮಟ್ಟದಲ್ಲಿ ಕಡಿಮೆ ಮಾಡುತ್ತವೆ ಎಂದು ಅಂಕಿಅಂಶಗಳು ಸಂಶಯಾತೀತವಾಗಿ ಸಾಬೀತುಪಡಿಸಿವೆ.
ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್’ರ ಅಕಾಲಿಕ ಸಾವು ತೀರಾ ದುರದೃಷ್ಟಕರ. ನನಗೆ ಅವರ ನೇರ ಪರಿಚಯ ಇರಲಿಲ್ಲ. ಆದರೆ ಮಾಧ್ಯಮಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಕೊಂಡಂತೆ ವಿಜಯ್ ಕಷ್ಟದಲ್ಲಿ ಇರುವವರಿಗೆ ಮರುಗುವ ಜೀವ, ಹಮ್ಮುಬಿಮ್ಮುಗಳಿಲ್ಲದ ಸೌಜನ್ಯಯುತ ನಡವಳಿಕೆಯ ಹೃದಯವಂತ ಎಂದು ಗೊತ್ತಿತ್ತು. ಹಾಗಾಗಿ ಮೊನ್ನೆ ಸುದ್ದಿ ಗೊತ್ತಾದಾಗಿನಿಂದ ಹಲವು ಸಲ ಮನಸ್ಸು ಚಡಪಡಿಸಿದೆ. ಅಪರಾತ್ರಿಯ ಓಡಾಟ ಮತ್ತು ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುತ್ತಿದ್ದ ವಿಚಾರ ಆ ಚಡಪಡಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು.
ಎಲ್ಲರಿಗೂ ಅಲ್ಲದಿದ್ದರೂ ಕೆಲವು ವ್ಯಕ್ತಿಗಳಿಗೆ ತಮ್ಮ Destiny ಖಂಡಿತ ಕಾಣಿಸುತ್ತದೆ. ಒಮ್ಮೊಮ್ಮೆ ಅದರಲ್ಲಿ ಸಮಾಜದ Destinyಯೂ ತಳಕು ಹಾಕಿಕೊಂಡಿರುತ್ತದೆ. ಅಂತಹವರು ಅದನ್ನು ಗೌರವಿಸಬೇಕು. ಯಾವ ಕ್ಷಣದಲ್ಲಿಯೂ ಎಚ್ಚರ ತಪ್ಪಬಾರದು. ಅಂತಹ Destiny ಇರುವ ಜನರಿಗೆ ಅಪಾಯ ಸಂಭವಿಸಿದರೆ ಅದು ಲಕ್ಷಲಕ್ಷ ಜನರ ದಿಕ್ಕುದೆಸೆಗಳನ್ನೆ ಬದಲಿಸುತ್ತದೆ. ತಡೆಯಬಹುದಾಗಿದ್ದ ಅಪಘಾತಗಳಿಂದಾದ ಕೆಲವು ಸಾವುಗಳು ದೇಶದ ದಿಕ್ಕನ್ನೇ ಬದಲಿಸಿದ್ದನ್ನು ನಾವು ನೋಡಿದ್ದೇವೆ.
ತಮ್ಮ ಪ್ರತಿಭೆ ಮತ್ತು ಮಾನವೀಯ ಕಾಳಜಿಯ ಮೂಲಕ ಪ್ರೀತಿ ಮತ್ತು ಅನುಭೂತಿಯನ್ನು ಅಪಾರವಾಗಿ ಮತ್ತು ಸುದೀರ್ಘಕಾಲ ಹರಡಬಹುದಾಗಿದ್ದ ಸಂಚಾರಿ ವಿಜಯ್ ಮಾರ್ಗ ಮಧ್ಯದಲ್ಲಿಯೇ ನಿಷ್ಕ್ರಮಿಸಿದ್ದು ದುರದೃಷ್ಟಕರ.
ಸಂಚಾರಿ ವಿಜಯ್’ಗೆ ಭಾವಪೂರ್ಣ ಶ್ರದ್ಧಾಂಜಲಿ.
ಓಂ ಶಾಂತಿ.
ರವಿಕೃಷ್ಣರೆಡ್ಡಿ.
ರಾಜ್ಯದ್ಯಕ್ಷರು.
ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ.
15-06-2021.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.